ಹೆಚ್ಚಾಗುತ್ತಿದೆ ಗಂಗಮ್ಮನ ಡಿಮ್ಯಾಂಡ್ : ಮತ್ತೊಂದು ಚಿತ್ರಕ್ಕೆ ಧ್ವನಿಯಾದ ಕೋಗಿಲೆ
ಕೊಪ್ಪಳದ ಹಳ್ಳಿಯ ಮಹಿಳೆ ಗಂಗಮ್ಮ ಇದ್ದಕ್ಕಿದ್ದ ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾದರು. ಅವರ ಸುಮಧುರ ಗಾಯನಕ್ಕೆ ಈಗ ಎಲ್ಲರೂ ಮಾರು ಹೋಗಿದ್ದಾರೆ. ಎಷ್ಟೊಂದು ಚೆನ್ನಾಗಿ ಹಾಡುತ್ತಾರೆ ಇವರು ಅಂತ ಅನೇಕರು ಅವರ ಧ್ವನಿಯನ್ನು ಇಷ್ಟ ಪಟ್ಟಿದ್ದಾರೆ.
ಸೋಷಿಯಲ್ ಮೀಡಿಯದಲ್ಲಿ ಗಂಗಮ್ಮನ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದರ ಬಳಿಕ ವಾಹಿನಿಗಳಲ್ಲಿ ಗಂಗಮ್ಮ ಅವರನ್ನು ಕರೆಸಿ ಸಂದರ್ಶನ ಸಹ ಮಾಡಿದರು. ಇಷ್ಟೆಲ್ಲ ಹೊಗಳಿಕೆಯ ನಂತರ ಈಗ ಗಂಗಮ್ಮನಿಗೆ ಸಿನಿಮಾ ಅವಕಾಶಗಳು ಹೆಚ್ಚಾಗುತ್ತಿವೆ. ಕೆಲ ದಿನಗಳ ಹಿಂದೆ 'ಪರದೇಸಿ ಕೇರ್ ಆಫ್ ಲಂಡನ್' ಎಂಬ ಚಿತ್ರದಲ್ಲಿ ಹಾಡು ಹಾಡಿದ್ದ ಗಂಗಮ್ಮನಿಗೆ ಈಗ ಇನ್ನೊಂದು ಸಿನಿಮಾ ಆಫರ್ ಬಂದಿದೆ.
'ಪದ್ಮಾವತಿ' ಎಂಬ ಹೊಸ ಚಿತ್ರದಲ್ಲಿ ಈಗ ಗಂಗಮ್ಮ ತಮ್ಮ ಗಾಯನ ಮುಂದುವರೆಸಿದ್ದಾರೆ. ವಿಶೇಷ ಅಂದರೆ, ಈ ಚಿತ್ರದಲ್ಲಿ ಮೂರು ಹಾಡನ್ನು ಅವರೇ ಹಾಡಿದ್ದಾರೆ. ಈ ಹಿಂದೆ 'ತಲೆ ಬಾಚ್ಕೊಳಿ ಪೌಡರ್ ಹಾಕ್ಕೊಳಿ' ಎಂಬ ಸಿನಿಮಾ ಮಾಡಿದ್ದ ವಿಕ್ರಂ ಆರ್ಯ ಅವರ ಎರಡನೇ ಸಿನಿಮಾ ಇದಾಗಿದೆ.

ಈ ಚಿತ್ರದ ಹಾಡುಗಳಿಗೆ ಗ್ರಾಮೀಣ ಧ್ವನಿಯ ಅಗತ್ಯ ಇದ್ದು, ಅದಕ್ಕೆ ತಕ್ಕಂತೆ ಗಂಗಮ್ಮ ಅವರಿಂದ ಹಾಡನ್ನು ಹಾಡಿಸಲಾಗಿದೆಯಂತೆ. 'ಪದ್ಮಾವತಿ' ಚಿತ್ರಕ್ಕೆ ದಿನೇಶ್ ಕುಮಾರ್ ಸಂಗೀತ ನೀಡಿದ್ದು, ಮಿಥುನ್ ಚಂದ್ರಶೇಖರ್ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











