ವಿಷ್ಣು ಸಮಾಧಿ ತೆರವಿಗೂ ಅಣ್ಣಾವ್ರಿಗೂ ಏನು ಸಂಬಂಧ? ದೊಡ್ಮನೆ ವಿರುದ್ದ ನಾಲಿಗೆ ಹರಿಬಿಟ್ಟ ವ್ಯಕ್ತಿ
ಸಾಹಸಸಿಂಹ ವಿಷ್ಣುವರ್ಧನ್ ಸಮಾಧಿ ತೆರವು ಘಟನೆ ರಾಜ್ಯದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಆದರೆ ಈ ವಿಚಾರ ಈಗ ಬೇರೆ ಬೇರೆ ಸ್ವರೂಪ ಪಡೆಯುತ್ತಿರುವುದು ವಿಪರ್ಯಾಸ. ಕೆಲವರು ಪಬ್ಲಿಸಿಟಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅಭಿಮಾನದ ಹೆಸರಿನಲ್ಲಿ ಕೆಲವರು ಅದನ್ನು ವಿಜೃಂಭಿಸುತ್ತಿದ್ದಾರೆ. ಇಲ್ಲೊಬ್ಬ ವ್ಯಕ್ತಿ ಅಣ್ಣಾವ್ರ ಕುಟುಂಬದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾನೆ.
ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿ ತೆರವಿಗೂ ಅಣ್ಣಾವ್ರ ಕುಟುಂಬಕ್ಕೂ ಎತ್ತಣಿಂದೆತ್ತ ಸಂಬಂಧ. ಆದರೆ ಇದಕ್ಕೆಲ್ಲಾ ಡಾ. ರಾಜ್ಕುಮಾರ್ ಕುಟುಂಬವೇ ಕಾರಣ ಎನ್ನುವಂತೆ ವಿಷ್ಣುವರ್ಧನ್ ಅಭಿಮಾನಿ ಹೆಸರಿನಲ್ಲಿ ವ್ಯಕ್ತಿಯೊಬ್ಬ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಅದು ವೈರಲ್ ಆಗುತ್ತಿದೆ. ಡಾ. ರಾಜ್ಕುಮಾರ್, ಶಿವಣ್ಣ, ಅಪ್ಪು, ರಾಘಣ್ಣ ಹೀಗೆ ಎಲ್ಲರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಿ ಆತ ಮಾತನಾಡಿದ್ದಾನೆ.

ಸ್ಟಾರ್ ನಟರ ನಡುವೆ ಒಳ್ಳೆ ಬಾಂಧವ್ಯ ಇರುತ್ತದೆ. ಆದರೆ ಅಭಿಮಾನಿಗಳು ತಮ್ಮ ನಟನೆ ಹೆಚ್ಚು ಎಂದು ಬಡಾಯಿ ಕೊಚ್ಚಿಕೊಳ್ಳುವ ಭರದಲ್ಲಿ ಮತ್ತೊಬ್ಬ ನಟನನ್ನು ಹಿಯ್ಯಾಳಿಸುವುದು, ಕೆಟ್ಟದಾಗಿ ಟ್ರೋಲ್ ಮಾಡುವುದು ಮೊದಲಿನಿಂದಲೂ ಇದೆ. ಸೋಶಿಯಲ್ ಮೀಡಿಯಾ ಬಂದು ಅದು ಹೆಚ್ಚಾಗುತ್ತಿದೆ. ಅಣ್ಣಾವ್ರು ಹಾಗೂ ವಿಷ್ಣು ನಡುವೆ ಪೈಪೋಟಿ ಇತ್ತು ಎನ್ನುವ ಮಾತುಗಳು ಆಗಾಗ್ಗೆ ಕೇಳಿಬರ್ತಿತ್ತು. ಆದರೆ ಇಬ್ಬರ ನಡುವೆ ಉತ್ತಮ ಒಡನಾಟವಿತ್ತು. ಡಾ. ರಾಜ್ ಅಭಿಮಾನಿ ಆಗಿದ್ದರು ವಿಷ್ಣುವರ್ಧನ್. ಅದೆಲ್ಲಾ ಗೊತ್ತಿಲ್ಲದೇ ಕೆಲವರು ಊಹಾಪೋಹ ಸುದ್ದಿಗಳನ್ನೇ ನಂಬಿ ಸುಳ್ಳು ಪ್ರಚಾರ ಮಾಡಿದ್ದರು.
ಸುಳ್ಳನ್ನೇ ಕೆಲವರು ನಿಜ ಎಂದು ನಂಬಿ ಅಣ್ಣಾವ್ರ ಕುಟುಂಬದ ಬಗ್ಗೆ ಕೆಲವರು ಇಲ್ಲ ಸಲ್ಲದ ಆರೋಪ ಮಾಡುತ್ತಾ ಬರ್ತಿದ್ದಾರೆ. ವಿಷ್ಣುವರ್ಧನ್ ಸಮಾಧಿ ತೆರವು ಘಟನೆ ಹಿನ್ನೆಲೆಯಲ್ಲಿ ಈ ವ್ಯಕ್ತಿ ಕೂಡ ಅದೇ ರೀತಿ ಮಾತನಾಡಿದ್ದಾನೆ. ಇದು ಅಣ್ಣಾವ್ರ ಅಭಿಮಾನಿಗಳನ್ನು ಕೆರಳಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ವ್ಯಕ್ತಿಯ ಮಾತುಗಳನ್ನು ವಿಷ್ಣುವರ್ಧನ್ ಅಭಿಮಾನಿಗಳು ಕೂಡ ಖಂಡಿಸುತ್ತಿದ್ದಾರೆ. ದಾದಾ ಸಮಾಧಿ ತೆರವು ವಿಚಾರ ನೋವು ತಂದಿದೆ ನಿಜ. ಆದರೆ ಅದಕ್ಕಾಗಿ ಅಣ್ಣಾವ್ರ ಕುಟುಂಬದವರನ್ನು ಬೈಯ್ಯುವುದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 4 ದಿನಗಳ ಹಿಂದೆ ರಾತ್ರೋರಾತ್ರಿ ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮ ಮಾಡಲಾಗಿತ್ತು. ಮತ್ತೆ ಅದೇ ಸ್ಥಳದಲ್ಲಿ ಸ್ಮಾರಕ ನಿರ್ಮಾಣವಾಗಬೇಕು ಎಂದು ಸಾಹಸಸಿಂಹನ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಅದಕ್ಕಾಗಿ ಪ್ರತಿಭಟನೆ ನಡೆಸಿದ್ದರು.
ಕಿಚ್ಚ ಸುದೀಪ್, ವಸಿಷ್ಟ ಸಿಂಹ, ರಿಷಬ್ ಶೆಟ್ಟಿ ಸೇರಿದಂತೆ ಹಲವು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದೀಗ ರಾಘವೇಂದ್ರ ರಾಜ್ಕುಮಾರ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. "ನಡೆದಿರುವ ಘಟನೆ ಕೇಳಿ ಮನಸ್ಸಿಗೆ ತುಂಬಾ ಬೇಸರವಾಗಿದೆ. ಡಾ. ವಿಷ್ಣುವರ್ಧನ್ ಸರ್ ಅವರಿಗೆ ಸರಿಯಾದ ಗೌರವ ಸಿಗಲೇಬೇಕು" ಎಂದು ಬರೆದುಕೊಂಡಿದ್ದಾರೆ. ಡಾ. ರಾಜ್ ಹಾಗೂ ವಿಷ್ಣು 'ಗಂಧದಗುಡಿ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಚಿತ್ರದ ಚಿತ್ರೀಕರಣದ ವೇಳೆ ನಡೆದ ಅಚಾತುರ್ಯ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿತು. ಈ ಬಗ್ಗೆ ರಾಜ್- ವಿಷ್ಣು ಇಬ್ಬರೂ ಮಾತನಾಡದೇ ಇದ್ದಿದ್ದು ಮತ್ತಷ್ಟಯ ಚರ್ಚೆಗೆ ನಾಂದಿ ಹಾಡಿತ್ತು. ಮುಂದೆ ಅದು ಬೇರೆ ಬೇರೆ ಸ್ವರೂಪ ಪಡೆಯಿತು.
ಮಾಲ್ ಕಟ್ಟಲು ವಿಷ್ಣು ಸಮಾಧಿ ನೆಲಸಮ ಮಾಡಿದ್ದಾರೆ ಎನ್ನಲಾಗ್ತಿದೆ. ಮುಂದೆ ಇದು ಯಾವ ಸ್ವರೂಪ ಪಡೆಯುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಈಗಾಗಲೈ ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದೆ. ಆದರೂ ಅವರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶವಾದ ಜಾಗದಲ್ಲಿ ಅಂದರೆ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣವಾಗಬೇಕು ಎನ್ನುವುದು ಅಭಿಮಾನಿಗಳ ಕನಸಾಗಿದೆ.


Click it and Unblock the Notifications











