ಸುದೀಪ್ ಅವರಿಗೆ ಆಸ್ಕರ್ ಸಿಗಬೇಕು ಎಂದಿದ್ದ ವಿಷ್ಣು
'ಶಂಕರ್ನಾಗ್ ಅವರನ್ನು ನಾನು ಉಪೇಂದ್ರ ಅವರಲ್ಲಿ ಕಾಣುತ್ತಿದ್ದೇನೆ".
ವಿಷ್ಣುವರ್ಧನ್ ಒಮ್ಮೆಗೇ ಉಪೇಂದ್ರ ಅವರನ್ನು ಹೊಗಳಲಿಕ್ಕೆ ಶುರುವಿಟ್ಟುಕೊಂಡರು. ಮಾತಿನ ನಡುವೆ ಶಂಕರ್ನಾಗ್ ಹಾಗೂ ರಮೇಶ್ ತೇಲಿಬಂದರು. ಸಂದರ್ಭ: ಜಮೀನ್ದಾರ್ರು ಸಿನಿಮಾದ ಚಿತ್ರೀಕರಣ. ಸ್ಥಳ: ಸಿಕಂದರಾಬಾದ್ನಲ್ಲಿನ ಫಿಲ್ಮ್ ಸಿಟಿ.
'ತನ್ನದೇ ಆದ ವಿಶಿಷ್ಟತೆಯಿಂದ, ಅಪಾರ ಆತ್ಮವಿಶ್ವಾಸದಿಂದ, ಏಕಾಗ್ರತೆ ಹಾಗೂ ಉತ್ಸಾಹದಿಂದ ಅಂದುಕೊಂಡದ್ದನ್ನು ಕೃತಿಗಿಳಿಸುತ್ತಿದ್ದ ಶಂಕರ್ನಾಗ್ ಕನ್ನಡ ಚಿತ್ರೋದ್ಯಮ ಕಂಡ ಬುದ್ಧಿವಂತ. ಉಪೇಂದ್ರ ಅವರಲ್ಲಿ ಕೂಡ ನಾನು ಶಂಕರ್ನಾಗ್ ಗುಣಗಳನ್ನು ಕಾಣುತ್ತಿದ್ದೇನೆ. ಉಪೇಂದ್ರ ಅವರ ಕ್ರಿಯಾಶೀಲತೆ ಕಂಡಾಗಲೆಲ್ಲ ನನಗೆ ಶಂಕರ್ನಾಗ್ ನೆನಪಾಗುತ್ತಾರೆ" ಎಂದರು ವಿಷ್ಣುವರ್ಧನ್.
ಈ ಮುನ್ನ ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ತಾವು ನಟಿಸಿದ ನಾಗರಹಾವು ಚಿತ್ರದ ಶೀರ್ಷಿಕೆಯನ್ನೇ ಉಪೇಂದ್ರ ಅವರ ಹೊಸಚಿತ್ರಕ್ಕೂ ಇಟ್ಟಿರುವ ಕುರಿತು ವಿಷ್ಣು ನೆನಪಿಸಿಕೊಂಡರು. 'ಈ ಕುರಿತು ಉಪೇಂದ್ರ ನನಗೆ ದೂರವಾಣಿ ಮೂಲಕ ತಿಳಿಸಿದರು. ನಾನು ಶುಭ ಹಾರೈಸಿದೆ. ಒಂದೇ ಹೆಸರನ್ನು ಮತ್ತೊಂದು ಚಿತ್ರಕ್ಕೆ ಇಡುವುದು ತಪ್ಪೇನಲ್ಲ " ಎಂದರು.
ಉಪೇಂದ್ರ ಅವರಿಂದ ರಮೇಶ್ ಅವರತ್ತ ವಿಷ್ಣು ಹೊರಳಿದರು. 'ರಮೇಶ್ ಅದ್ಭುತ ನಟ. ಅವರ ಹಾವಭಾವ, ದೇಹಭಾಷೆ, ಕಣ್ಣುಗಳ ಚಲನೆ, ಭಾವುಕತೆ ಯಾರಿಗೆ ಸಾಧ್ಯ ? ಅವರ ಟೈಮಿಂಗ್ ಅಂತೂ ಅದ್ಭುತ. ಯಾವುದೇ ಪಾತ್ರವಿರಲಿ, ರಮೇಶ್ ಸಮಕ್ಕೆ ನಟಿಸುವುದು ಕಷ್ಟ ಕಷ್ಟ . ಸದ್ಯಕ್ಕೆ ಆತನ ಟೈಂ ಸರಿ ಇಲ್ಲದಿರಬಹುದು. ಆದರೆ, ರಮೇಶ್ ಮುಟ್ಟಿದ್ದೆಲ್ಲ ಚಿನ್ನವಾಗುವ ದಿನಗಳೂ ಬರಲಿವೆ. ಆತ ಸತತವಾಗಿ 12 ಹಿಟ್ ಚಿತ್ರಗಳನ್ನು ಕೊಟ್ಟವ ಎನ್ನುವುದನ್ನು ನಾವು ನೆನಪಿನಲ್ಲಿಡಬೇಕು. ಇಂಥ ಸಾಧನೆಯನ್ನು ಇನ್ನಾವ ನಟನೂ ಮಾಡಿಲ್ಲ .."
ವಿಷ್ಣು ಹೊಗಳುತ್ತಲೇ ಇದ್ದರು. ಸದ್ಯಕ್ಕೆ ರಮೇಶ್ ಹಾಗೂ ಉಪೇಂದ್ರ ಅಲ್ಲಿರಲಿಲ್ಲ . ಅಂದಹಾಗೆ, ಉಪೇಂದ್ರ ಅಭಿನಯದ 'ಎ" ಹಾಗೂ 'ಉಪೇಂದ್ರ" ಚಿತ್ರಗಳನ್ನು ವಿಷ್ಣುವರ್ಧನ್ ನೋಡಿಲ್ಲವಂತೆ.


Click it and Unblock the Notifications