ಸೆಪ್ಟೆಂಬರ್ 18 ರಿಂದ 'ಡಾ ವಿಷ್ಣುವರ್ಧನ್ ನಾಟಕೋತ್ಸವ' ಆರಂಭ
ಸಾಹಸ ಸಿಂಹ, ಕನ್ನಡ ಚಿತ್ರರಂಗದ ಯಜಮಾನ ಡಾ ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನ 'ಡಾ ವಿಷ್ಣು ಸೇನಾ ಸಮಿತಿ'ಯ ಅಭಿಮಾನಿಗಳು ವರ್ಷದಿಂದ ವರ್ಷಕ್ಕೆ ವಿಭಿನ್ನವಾಗಿ, ವಿಶೇಷವಾಗಿ ಆಚರಿಸುತ್ತಾರೆ.
ಸೆಪ್ಟೆಂಬರ್ 18 ರಂದು ವಿಷ್ಣುದಾದ ಜನ್ಮದಿನವಿದ್ದು, ಈ ವಿಶೇಷ ದಿನದ ಅಂಗವಾಗಿ 'ಡಾ ವಿಷ್ಣುವರ್ಧನ್ ನಾಟಕೋತ್ಸವ' ಆಯೋಜನೆ ಮಾಡಲಾಗಿದೆ. ಸೆಪ್ಟೆಂಬರ್ 18, 19 ಮತ್ತು 20 ರಂದು ಮೂರು ದಿನಗಳ ಕಾಲ ಪ್ರತಿ ದಿನ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ನಾಟಕಗಳು ಪ್ರದರ್ಶನವಾಗಲಿದೆ.
ಮೈಸೂರು ಕರ್ನಾಟಕ, ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಿಂದ ತಲಾ ಒಂದೊಂದು ರಂಗಭೂಮಿ ತಂಡಗಳು ಭಾಗವಹಿಸಲಿದೆ. ಈ ಮೂಲಕ ಇಡೀ ಕರ್ನಾಟಕವನ್ನು ಪ್ರತಿನಿಧಿಸುವ ಪ್ರಪ್ರಥಮ ನಾಟಕೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ.

ಉಳಿದಂತೆ ಯಾವೆಲ್ಲಾ ಕಾರ್ಯಕ್ರಮಗಳು ಇರಲಿದೆ ಎಂದು ನೋಡುವುದಾದರೇ.....
* ನಾಟಕದ ಜೊತೆ, ಪ್ರತಿದಿನ ಯಜಮಾನರ ಗೀತೆಗಳ ಸಂಗೀತ ಸಂಜೆ
* ಡಾ ವಿಷ್ಣುವರ್ಧನ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ
* ಕನ್ನಡ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ
* ಯಜಮಾನರ ಛಾಯಾಚಿತ್ರ ಪ್ರದರ್ಶನ
ಇದರ ಜೊತೆ ಮತ್ತಷ್ಟು ಕಾರ್ಯಕ್ರಮಗಳು ನಡೆಯುವ ಸಾಧ್ಯತೆ ಇದೆ.

ಇಂತಹ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಶುಭ ಕೋರಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸುದೀಪ್ ''ಯಜಮಾನ್ರಿಗೊಂದು ರಂಗನಮನ".. ಡಾ.ವಿಷ್ಣು ಅವರ ಹೆಸರನ್ನು ಕನ್ನಡಿಗರ ಮನದಾಳದಲ್ಲಿ ಹಚ್ಚ ಹಸಿರಾಗಿರಿಸಲು ಅವರ ಅಭಿಮಾನಿಗಳಿಂದ "ಡಾ.ವಿಷ್ಣುವರ್ಧನ ನಾಟಕೋತ್ಸವ" ಎಂಬ ಅರ್ಥಪೂರ್ಣ ಕಾರ್ಯಕ್ರಮ ಸೆಪ್ಟೆಂಬರ್ 18 ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಈ ರಂಗೋತ್ಸವ ಯಶಸ್ವಿಯಾಗಲಿ. #ಯಜಮಾನ್ರ ಹೆಸರು ಅಜರಾಮರವಾಗಲಿ'' ಎಂದಿದ್ದಾರೆ.


Click it and Unblock the Notifications











