ವಿಧಿ ವಿಪರೀತ, ವಿಧಿಯಾಘಾತ, ವಿಧಿವಿಲಾಸವೆನೆ ಇದೇನಹಾ?
'ಲಾಲಿ ಸಿನಿಮಾ ಅಭಿನಯಕ್ಕೆ ನಿಮಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ", ವರ್ಷಗಳ ಹಿಂದೆ ವಿಷ್ಣುವರ್ಧನ್ಗೆ ಫೋನ್ ಬಂದಿತ್ತು. ಮುಖದಲ್ಲಿ ಸಾರ್ಥ್ಯಕ್ಯ ನಗು. ಕೆಲವೇ ಕ್ಷಣಗಳ ನಂತರ ಇನ್ನೊಂದು ಫೋನು. ವಿಷ್ಣು ಮುಖ ಪೆಚ್ಚಾಯಿತು. ಆ ಫೋನು ಹೇಳಿದ್ದು- 'ನಿಮ್ಮ ತಾಯಿ ತೀರಿಕೊಂಡಿದ್ದಾರೆ". ಮೊನ್ನೆ ಭಾನುವಾರ (ಫೆ.17) ಇದೇ ರೀತಿಯ ಪರಿಸ್ಥಿತಿ. ಬಾಯಿಯ ಸಿಹಿ ಹಸಿಯಾಗಿರುವಾಗಲೇ ಕಹಿ ಹನಿ. ವಿಷ್ಣು ದೊಡ್ಡ ಅಕ್ಕ ಜಯಕ್ಕ ಇನ್ನಿಲ್ಲ !
ಮಗಳು ಕೀರ್ತಿ ಮದುವೆಯ ಸಂತೋಷದಲ್ಲಿ ಕಳೆದುಹೋಗಿದ್ದ ವಿಷ್ಣು ನಂತರ ಅತ್ತದ್ದು ಮಗಳ ಅಗಲಿಕೆಗೋ ಅಕ್ಕನ ಕಳಕೊಂಡಿದ್ದಕ್ಕೋ- ಎಷ್ಟೋ ಜನರಿಗೆ ಗೊತ್ತೇ ಆಗಲಿಲ್ಲ. ವಿಷ್ಣು ಮನೆಯ ಹಿರಿಯರು ಮನಸ್ಸು ಮಾಡದಿದ್ದರೆ ಕೀರ್ತಿ- ಅನಿರುದ್ಧ್ ಮದುವೆ ನಿಂತೇ ಹೋಗುತ್ತಿತ್ತೇನೋ. ಅಂದು ಬೆಳಗ್ಗೆ ಕಾಫಿ ಕುಡಿಯುವ ಮುನ್ನವೇ ಜಯಕ್ಕ ಕಣ್ಮುಚ್ಚಿದ ಸುದ್ದಿ ಬನ್ನೇರುಘಟ್ಟ ರಸ್ತೆಯ ಚಂದ್ರೋದಯ ಕಲ್ಯಾಣ ಮಂಟಪದಲ್ಲಿದ್ದ ವಿಷ್ಣು ಕಿವಿಗೆ ಬೀಳುವ ಹೊತ್ತಿಗೆ ಮಗಳ ಮದುವೆ ಮುಗಿದಿತ್ತು. ವಿಷ್ಣು ಮುಷ್ಟಿ ಬಿಗಿಯಾಯಿತು.
ತಮ್ಮವರ ಕಳಕೊಂಡ ಕ್ರಿಕೆಟಿಗರು ದೇಶಕ್ಕಾಗಿ ಆಡಿ, ಅದೂ ಚೆನ್ನಾಗಿ ಆಡಿ ನಂತರ ಮಡುಗಟ್ಟಿದ ದುಃಖ ತೋಡಿಕೊಂಡ ಉದಾಹರಣೆಗಳಿವೆ. ಯಾವುದೋ ದೂರ ದೇಶದ ಹೆಮ್ಮೆಯ ಪ್ರಶಸ್ತಿ ಪಡೆಯಲು ಹೋದವರು ಬರುವ ಹೊತ್ತಿಗೆ ತಮ್ಮವರ ಮುಖ ಕೂಡ ಸಿಗದ ಪ್ರಸಂಗಗಳಿವೆ. ಆದರೆ, ಸಾವಿನ ಸುದ್ದಿ ತಿಳಿದ ನಂತರ ನಡೆಯಬೇಕಿರುವ ಸಮಾರಂಭ ಮೊಟಕಾಗುವುದೇ ನಮ್ಮ ಸಂಪ್ರದಾಯವಲ್ಲವೇ? ವಿಷ್ಣು ಅವತ್ತು ಮನಸ್ಸು ಗಟ್ಟಿ ಮಾಡಿಕೊಂಡರು. ಸಂಪ್ರದಾಯಕ್ಕೆ ಕಟ್ಟುಬೀಳಲಿಲ್ಲ. ಆಮಂತ್ರಣಕ್ಕೆ ಓಗೊಟ್ಟವರಿಗೆ ಕಂಡಿದ್ದು ಮದುವೆ ಮಾತ್ರ. ರಿಸಪ್ಷನ್ ಕೂಡ ಟೈಟಾಗಿ ಇತ್ತು. ಬಂದವರಿಗೆಲ್ಲಾ ವಿಷ್ಣು ನಗೆಯ ಸ್ವಾಗತ. ಅದರ ಹಿಂದೆ ವಿಷಾದದ ಛಾಯೆ; ಜಯಕ್ಕನ ನೆನಪುಗಳು !


Click it and Unblock the Notifications