ವಿಷ್ಣುವರ್ಧನ್ ಸ್ಮಾರಕ ಸ್ಥಳಾಂತರದ ಬಗ್ಗೆ ವದಂತಿ ನಂಬಬೇಡಿ
ಅಭಿಮಾನ್ ಸ್ಟುಡಿಯೋದಲ್ಲಿರುವ ದಿವಂಗತ ನಟ ಡಾ ವಿಷ್ಣುವರ್ಧನ್ ಅವರ ಸ್ಮಾರಕ ಸ್ಥಳಾಂತರವಾಗುತ್ತಿದೆ ಎಂದು ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಆದರೆ ಈ ಸುದ್ದಿ ಸುಳ್ಳು ಎಂದು ಸ್ವತಃ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ. ವಿಷ್ಣು ಸ್ಮಾರಕದ ಮೇಲ್ಛಾವಣಿ ಸೋರುತ್ತಿದೆ. ಅದರ ದುರಸ್ಥಿ ಕೆಲಸ ನಡೆಯುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳು ಹಬ್ಬಿದೆ. ಅದನ್ನ ನಂಬಬೇಡಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಗುತ್ತಿಗೆದಾರರು ಸ್ಮಾರಕ ಮೇಲ್ಛಾವಣಿ ಕಾಮಗಾರಿ ಕೆಲಸ ಮಾಡುತ್ತಿದ್ದಾರೆ. ಸೆಪ್ಟೆಂಬರ್ 18 ರಂದು ವಿಷ್ಣುವರ್ಧನ್ ಅವರ ಹುಟ್ಟುಹಬ್ಬವಿದೆ. ಅಷ್ಟರೊಳಗೆ ಸ್ಮಾರಕ ಮೇಲ್ಛಾವಣಿ ಕೆಲಸ ಪೂರ್ಣವಾಗಲಿದೆ ಎಂದು ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ಮೈಸೂರಿನಲ್ಲಿ ಡಾ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಲಿದೆ ಎಂದು ಭಾರತಿ ವಿಷ್ಣುವರ್ಧನ್ ಮತ್ತು ಕುಟುಂಬಸ್ಥರು ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ. ಆದರೆ ಅಭಿಮಾನ್ ಸ್ಟುಡಿಯೋದಲ್ಲಿರುವ ಯಜಮಾನರ ಪುಣ್ಯಭೂಮಿಯನ್ನ ಯಾವುದೇ ಕಾರಣಕ್ಕೂ ಸ್ಥಳಾಂತರವಾಗಲ್ಲ. ಅದು ಅಲ್ಲಿಯೇ ಉಳಿಯಲಿದೆ ಎಂಬುದು ಅಭಿಮಾನಿಗಳ ನಿಲುವು.
ಇನ್ನು ವಿಷ್ಣುವರ್ಧನ್ ಜನುಮದಿನದ ಪ್ರಯುಕ್ತ ಡಾ ವಿಷ್ಣು ಸೇನಾ ಸಮಿತಿ 'ಡಾ ವಿಷ್ಣುವರ್ಧನ್ ನಾಟಕೋತ್ಸವ' ಆಯೋಜನೆ ಮಾಡಿದೆ. ಸೆಪ್ಟೆಂಬರ್ 18, 19 ಮತ್ತು 20 ರಂದು ಮೂರು ದಿನಗಳ ಕಾಲ ಪ್ರತಿ ದಿನ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ನಾಟಕಗಳು ಪ್ರದರ್ಶನವಾಗಲಿದೆ. ಮೈಸೂರು ಕರ್ನಾಟಕ, ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಿಂದ ತಲಾ ಒಂದೊಂದು ರಂಗಭೂಮಿ ತಂಡಗಳು ಭಾಗವಹಿಸಲಿದೆ. ಈ ಮೂಲಕ ಇಡೀ ಕರ್ನಾಟಕವನ್ನು ಪ್ರತಿನಿಧಿಸುವ ಪ್ರಪ್ರಥಮ ನಾಟಕೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ.


Click it and Unblock the Notifications











