ಈ ಬಾರಿ ಅಭಿಮಾನಿಗಳ ಜೊತೆ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು 75ನೇ ಜಯಂತಿ ಆಚರಿಸುತ್ತಾರಾ ಅನಿರುದ್ಧ್?ಉತ್ತರ ಇಲ್ಲಿದೆ
ಸಾಹಸ ಸಿಂಹ ವಿಷ್ಣುವರ್ಧನ್. ಕನ್ನಡ ಚಿತ್ರರಂಗದ ಯಜಮಾನ. ಸಾಂಸ್ಕ್ರತಿಕ ರಾಯಭಾರಿ. ಬದುಕಿದ್ದಷ್ಟು ದಿನ ಯಾರಿಗೂ ನೋವನ್ನ ನೀಡದ ಕರುಣಾಮಯಿ. ರೂಪ, ಅಭಿನಯ, ಸಂಸ್ಕಾರ, ಸಹನೆ, ಸರಳತೆ, ಸಹಿಸುವಿಕೆ, ಕ್ಷಮಿಸುವಿಕೆ ಎಲ್ಲದಕ್ಕೂ ಅತ್ಯುತ್ತಮ ಉದಾಹರಣೆಯೆನ್ನುವಂತಿದ್ದ ವಿಷ್ಣು ಆದರ್ಶಕ್ಕೆ ಮತ್ತೊಂದು ಹೆಸರು. ಇಂಥಾ ವಿಷ್ಣುವರ್ಧನ್ ದೈಹಿಕವಾಗಿ ನಮ್ಮ ಜೊತೆ ಇಲ್ಲ. ಆದರೆ ಮಾನಸಿಕವಾಗಿ ಅವರು ಸದಾ ಜೀವಂತವಾಗಿ ಇದ್ದೇ ಇರುತ್ತಾರೆ.
ಇದಕ್ಕೆ ಪುರಾವೆ ಎನ್ನುವಂತೆ ಈ ಬಾರಿ ವಿಷ್ಣುವರ್ಧನ್ ಅವರ 75ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ವಿಷ್ಣು ಸೈನ್ಯ ಮುಂದಾಗಿದೆ. ಇನ್ನು ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ.ಈ ಹಿನ್ನೆಲೆ ಅಭಿಮಾನಿಗಳ ಸಂಭ್ರಮ ಇನ್ನೂ ಹೆಚ್ಚಾಗಿದೆ.

ನಿಜಾ.. ''ಅಭಿಮಾನ''ದ ಪ್ರತೀಕದಂತೆ ''ಅಭಿಮಾನ್ ಸ್ಟುಡಿಯೋ''ದಲ್ಲಿದ್ದ ವಿಷ್ಣುವರ್ಧನ್ ಸಮಾಧಿಯನ್ನು ನೆಲ ಸಮ ಮಾಡಲಾಗಿದೆ. ಅಭಿಮಾನಿಗಳ ಭಾವನೆಗಳ ಜೊತೆ ಚೆಲ್ಲಾಟವನ್ನು ಕೂಡ ಆಡಲಾಗಿದೆ. ಈ ಹಿನ್ನೆಲೆ ಅಭಿಮಾನಿಗಳಲ್ಲಿ ನೋವು ಕೂಡ ಇದೆ. ವಿಷ್ಣುವರ್ಧನ್ ಜಯಂತಿಯನ್ನು ಎಲ್ಲಿ ಮಾಡಬೇಕೆನ್ನುವ ಗೊಂದಲವೂ ಇದೆ.
ಈ ಗೊಂದಲವನ್ನು ದೂರ ಮಾಡುವ ಪ್ರಯತ್ನವನ್ನು ವೀರಕಪುತ್ರ ಶ್ರೀನಿವಾಸ್ ಮಾಡಿದ್ದಾರೆ. ಆದರೆ ಇದೇ ವೇಳೆ ಈ ಬಾರಿ ವಿಷ್ಣುವರ್ಧನ್ ಅವರ ಮನೆಯ ಸದಸ್ಯರು ಅಭಿಮಾನ್ ಸ್ಟುಡಿಯೋದತ್ತ ಬರುತ್ತಾರೆ. ಅಲ್ಲಿ ಸೇರುವ ಅಭಿಮಾನಿಗಳ ಜೊತೆ ತಮ್ಮ ಮನೆಯ ಯಜಮಾನನನ್ನು ನೆನೆಯುತ್ತಾರಾ..? ಎನ್ನುವ ಪ್ರಶ್ನೆ ಕೂಡ ಹಲವರಲ್ಲಿದೆ.
ಯಾಕೆಂದರೆ ಎಲ್ಲರಿಗೆ ಗೊತ್ತಿರುವಂತೆ 2016ರಿಂದ ಭಾರತಿ ವಿಷ್ಣುವರ್ಧನ್ ಅವರಾಗಲಿ ಅನಿರುದ್ಧ್ ಅವರಾಗಲಿ ಅಭಿಮಾನ್ ಸ್ಟುಡಿಯೋಗೆ ಕಾಲಿಟ್ಟಿಲ್ಲ. ಆದರೆ ಈಗ ಅಲ್ಲಿ ಸಮಾಧಿ ಕೂಡ ಇಲ್ಲ. ಈ ಹಿನ್ನೆಲೆ ಅವತ್ತು ಅಂದರೆ ಸೆಪ್ಟೆಂಬರ್ 18ರ ಒಂದು ದಿನ ಅಭಿಮಾನಿಗಳಿಗಾಗಿ ಕುಟುಂಬದ ಕಡೆಯಿಂದ ಏನಾದರು ವ್ಯವಸ್ಥೆ ಮಾಡಲಾಗಿರುತ್ತಾ..? ಎಂಬ ಪ್ರಶ್ನೆ ಇದ್ದೇ ಇದೆ. ಇದಕ್ಕೆ ''ಫಿಲ್ಮಿಬೀಟ್ ಕನ್ನಡ'' ಮೂಲಕ ಅನಿರುದ್ಧ್ ಉತ್ತರವನ್ನು ನೀಡಿದ್ದಾರೆ.
ಈ ಕುರಿತು ''ಫಿಲ್ಮಿಬೀಟ್ ಕನ್ನಡ'' ಜೊತೆ ಮಾತನಾಡಿರುವ ಅನಿರುದ್ಧ್ ಎಂದಿನಂತೆ ನಾವು ಮೈಸೂರಿನಲ್ಲಿಯೇ ಅಪ್ಪಾವ್ರ ಜಯಂತಿಯನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಅವತ್ತು ಅಲ್ಲಿ ಕೂಡ ಅನೇಕ ಅಭಿಮಾನಿಗಳು ಬರಲಿದ್ದಾರೆ. ಅವರ ಜೊತೆ ನಾವು ಹುಟ್ಟುಹಬ್ಬವನ್ನು ಆಚರಿಸಲಿದ್ದೇವೆ ಎಂದು ಹೇಳಿರುವ ಅನಿರುದ್ಧ್ ಅಪ್ಪಾವ್ರ ಪುತ್ಥಳಿಗೆ ಹಾರ ಹಾಕುತ್ತೇವೆ ಆ ನಂತರ ಅಲ್ಲಿ ಪೂಜೆ ಕೂಡ ಮಾಡಲಿದ್ದೇವೆ ಎಂದಿದ್ದಾರೆ.

''ಅಭಿಮಾನ್ ಸ್ಟುಡಿಯೋ''ಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರವನ್ನು ನೀಡಿರುವ ಅನಿರುದ್ದ್ ಅಭಿಮಾನ್ ಸ್ಟುಡಿಯೋದ ಜಾಗ ಇನ್ನು ಆಗಬೇಕು. ಅದಕ್ಕೆ ಪ್ರಯತ್ನ ಪಡ್ತಿದ್ದೀವಿ, ಅಭಿಮಾನಿಗಳಿಗೋಸ್ಕರ ಹತ್ತು ಗುಂಟೆ ಜಾಗ ಸಿಗಬೇಕು ಎನ್ನುವುದು ನಮ್ಮ ಉದ್ದೇಶ ಆ ಹಿನ್ನೆಲೆಯಲ್ಲಿ ನಿರಂತರವಾದ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನೂ ಈ ಬಾರಿ ವಿಷ್ಣುವರ್ಧನ್ ಅವರದ್ದು 75ನೇ ಜಯಂತಿ. ಈ ಹಿನ್ನೆಲೆ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮದಿನೋತ್ಸವವನ್ನು 'ಯಜಮಾನರ ಅಮೃತ ಮಹೋತ್ಸವ'ವೆಂದು ಆಚರಿಸಲು ಡಾ. ವಿಷ್ಣು ಸೇನಾ ಸಮಿತಿ ನಿರ್ಧಾರ ಮಾಡಿತ್ತು. ವೀರಕಪುತ್ರ ಶ್ರೀನಿವಾಸ್ ಅವರ ಜೊತೆ ಎಸ್.ನಾರಾಯಣ್, ರಾಜೇಂದ್ರ ಸಿಂಗ್ ಬಾಬು ಅವರು ಕೂಡ ಮುಂದಾಳತ್ವ ವಹಿಸಿಕೊಂಡಿದ್ದರು. ಅದ್ಧೂರಿಯಾದ ಕಾರ್ಯಕ್ರಮಕ್ಕೆ ವಿಷ್ಣುಸೈನ್ಯ ಕೂಡ ಸರ್ವ ಸನ್ನದ್ದವಾಗಿತ್ತು. ಆದರೆ ಅಷ್ಟರಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಮಾಧಿ ನೆಲ ಸಮ ಮಾಡಿದ ಸುದ್ದಿ ವಿಷ್ಣುವರ್ಧನ್ ಅಭಿಮಾನಿಗಳಿಗೆ ಬರ ಸಿಡಿಲಿನಂತೆ ಬಡೆದಿತ್ತು.
ಹಾಗಂಥ ಪ್ರಯತ್ನಗಳು ನಿಂತು ಹೋದವು ಎಂದಲ್ಲ.ವೀರಕಪುತ್ರ ಶ್ರೀನಿವಾಸ್ ಅವರ ತಲೆಯಲ್ಲಿ ಮತ್ತು ಹೃದಯದಲ್ಲಿ ಈ ಆಲೋಚನೆ ಇನ್ನೂ ಜೀವಂತವಾಗಿದೆ. ಮತ್ತೊಂದು ಕಡೆ ವಿಷ್ಣುವರ್ಧನ್ ಅವರ ಕುಟುಂಬ ಕೂಡ 75ನೇ ಜಯಂತಿಯನ್ನು ಸಂಭ್ರಮದಿಂದ ಆಚರಿಸಬೇಕೆಂದುಕೊಂಡಿತ್ತು. ಖುದ್ದು ಅನಿರುದ್ಧ್ ಸಮಯ ಬಂದಾಗ ಎಲ್ಲವನ್ನೂ ಸವಿಸ್ತಾರವಾಗಿ ಹೇಳುವುದಾಗಿ ಹೇಳಿದ್ದರು ಕೂಡ.
ಈ ಕುರಿತು ಕೂಡ ಮಾತನಾಡಿರುವ ಅನಿರುದ್ದ್ ವಿಶೇಷವಾಗಿ ಮಾಡಬೇಕೆನ್ನುವ ಆಲೋಚನೆ ನಮಗೆ ಇದೆ. ಏನೇನೋ ಅಂದುಕೊಂಡಿದೀವಿ ಆದನ್ನ ಅಪ್ಪಾವ್ರೇ ಆಶೀರ್ವಾದ ಮಾಡಿ ಮಾಡಿಸಬೇಕು ಎಂದು ಹೇಳಿದ್ದಾರೆ. ನೋಡೋಣ ಮುಂಬರುವ ದಿನಗಳಲ್ಲಿ ಈ ವಿಚಾರದ ಕುರಿತು ಮತ್ತೆ ಮಾತನಾಡೋಣ ಎಂದು ಹೇಳಿದ್ದಾರೆ.
ಇನ್ನುಳಿದಂತೆ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದಂದು ಪ್ರತಿ ವರ್ಷದಂತೆ ಅನೇಕ ಸಾಮಾಜಿಕ ಕೆಲಸಗಳು ನಡೆಯಲಿವೆ. ಮೈಸೂರಿನಲ್ಲಿ ಮತ್ತು ಅಭಿಮಾನ್ ಸ್ಟುಡಿಯೋದ ಆಸು ಪಾಸು ಅನ್ನದಾನ-ರಕ್ತದಾನ ಸೇರಿ ಹಲವು ಸಮಾಜಮುಖಿ ಕೆಲಸಗಳು ನಡೆಯಲಿವೆ. ಇನ್ನು ಸುದೀಪ್ ಅವರ ಮುಂದಾಳತ್ವದಲ್ಲಿ ಕೆಂಗೇರಿ ಬಳಿ ವಿಷ್ಣುವರ್ಧನ್ ಅವರ ದರ್ಶನ ಕೇಂದ್ರ ನಿರ್ಮಾಣವಾಗಲಿದೆ. 25 ಅಡಿ ಎತ್ತರದ ಪ್ರತಿಮೆ ಎದ್ದು ನಿಲ್ಲಲಿದೆ. ಸೆಪ್ಟೆಂಬರ್ 18ರಂದು ಈ ಕೆಲಸಕ್ಕೆ ಚಾಲನೆ ಸಿಗುವ ನಿರೀಕ್ಷೆ ಇದೆ.


Click it and Unblock the Notifications











