ವಿಷ್ಣು ಸ್ಮಾರಕ ಲೋಕಾರ್ಪಣೆ: ಎರಡು ಕಿಲೋಮೀಟರ್ ಸಾಲು ಸಾಲು ವಾಹನದಲ್ಲಿ ವಿಷ್ಣು ಫ್ಯಾನ್ಸ್ ಜಾಥಾ
ಇಂದು ( ಜನವರಿ 29 ) ವಿಷ್ಣುವರ್ಧನ್ ಅಭಿಮಾನಿಗಳ ಪಾಲಿಗೆ ಹಬ್ಬದ ದಿನ ಎಂದೇ ಹೇಳಬಹುದು. ಏಕೆಂದರೆ ವಿಷ್ಣು ಅಭಿಮಾನಿಗಳ ಬಹುದಿನಗಳ ಕನಸಾದ ವಿಷ್ಣು ಸ್ಮಾರಕ ಇಂದು ಲೋಕಾರ್ಪಣೆಗೊಂಡಿದೆ. ಹೌದು, ವಿಷ್ಣುವರ್ಧನ್ ಅವರು ಇಹಲೋಕ ತ್ಯಜಿಸಿದ ನಂತರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸ್ಮಾರಕಕ್ಕಾಗಿ ಬೇಡಿಕೆ ಇಟ್ಟಿದ್ದರು, ವರ್ಷಗಳು ಉರುಳಿದರೂ ಸ್ಮಾರಕವಾಗದಿದ್ದ ಕಾರಣ ಪ್ರತಿಭಟನೆಯನ್ನೂ ಸಹ ನಡೆಸಿದ್ದರು. ಆದರೆ ಅಭಿಮಾನ್ ಸ್ಟುಡಿಯೊದಲ್ಲಿ ಸ್ಮಾರಕ ನಿರ್ಮಿಸಲು ಅವಕಾಶ ಸಿಗಲೇ ಇಲ್ಲ. ಹೀಗಾಗಿ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಮೈಸೂರಿನಲ್ಲಿ ಈಗ ನಿರ್ಮಿಸಲಾಗಿದೆ.
ಹೀಗೆ ಬರೋಬ್ಬರಿ ಹದಿಮೂರು ವರ್ಷಗಳ ಬಳಿಕ ವಿಷ್ಣುವರ್ಧನ್ ಅಭಿಮಾನಿಗಳ ಬಯಕೆ ಈಡೇರಿದ್ದು, ಅಭಿಮಾನಿಗಳು ತಮ್ಮ ಖುಷಿಯನ್ನು ಭಿನ್ನ ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ವಿಷ್ಣುವರ್ಧನ್ ಕುರಿತು ಪೋಸ್ಟ್ ಹಂಚಿಕೊಂಡು ಸಂಭ್ರಮಿಸುತ್ತಿದ್ದರೆ, ಇನ್ನೂ ಹಲವರು ರಾಜ್ಯದ ಮೂಲೆ ಮೂಲೆಗಳಿಂದ ಮೈಸೂರಿಗೆ ಆಗಮಿಸಿ ರಸ್ತೆಯುದ್ದಕ್ಕೂ ವಿಷ್ಣುವರ್ಧನ್ ಭಾವಚಿತ್ರ ಹಾಗೂ ಬಾವುಟಗಳನ್ನು ಹಾರಿಸಿ ಸಂಭ್ರಮಿಸಿದ್ದಾರೆ.
ಅದರಲ್ಲಿಯೂ ಬೆಂಗಳೂರಿನಿಂದ ಮೈಸೂರಿನವರೆಗೆ ವಿಷ್ಣು ಅಭಿಮಾನಿಗಳು ವಾಹನ ಜಾಥಾ ಮಾಡಿದ್ದು, ಬೈಕು, ಆಟೊ, ಕಾರು, ಟೆಂಪೊ, ಬಸ್ಸುಗಳಲ್ಲಿ ಗುಂಪು ಗುಂಪಾಗಿ ಮೈಸೂರಿಗೆ ಬಂದಿಳಿದರು. ಈ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು ಎರಡು ಕಿಲೋಮೀಟರ್ ಸಾಲು ಸಾಲಾಗಿ ಬೆಂಗಳೂರಿನಿಂದ ಮೈಸೂರಿಗೆ ವಾಹನಗಳ ಹಿಂಡು ಜಾಥಾ ಮಾಡಿದೆ.

ಇನ್ನು ಅಭಿಮಾನಿಗಳು ಈ ರೀತಿ ಜಾಥಾ ಮಾಡುವ ಮೂಲಕ ಖುಷಿಯನ್ನು ಹೊರಹಾಕಿದರೆ, ಕನ್ನಡ ಚಿತ್ರರಂಗದ ನಟರಾದ ಶಿವ ರಾಜ್ಕುಮಾರ್, ಕಿಚ್ಚ ಸುದೀಪ್ ಹಾಗೂ ದುನಿಯಾ ವಿಜಯ್ ಸಾಮಾಜಿಕ ಜಾಲತಾಣದಲ್ಲಿ ವಿಷ್ಣುವರ್ಧನ್ ಸ್ಮಾರಕದ ಕುರಿತು ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.


Click it and Unblock the Notifications











