ಮತ್ತೆ ತೆರೆಮೇಲೆ ಬರ್ತಿದೆ ವಿಷ್ಣುವರ್ಧನ್-ರಜನಿಕಾಂತ್ ಜೋಡಿ
ಬಹಳ ವರ್ಷದ ನಂತರ ಡಾ ವಿಷ್ಣುವರ್ಧನ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ತೆರೆಮೇಲೆ ಒಟ್ಟಿಗೆ ಬರ್ತಿದ್ದಾರೆ. ಸೆಪ್ಟೆಂಬರ್ 18, ಸಾಹಸ ಸಿಂಹ ವಿಷ್ಣುದಾದ ಹುಟ್ಟುಹಬ್ಬ. ಈ ವಿಶೇಷ ದಿನದಂದು ದಾದ ಮತ್ತು ರಜನಿ ನಟಿಸಿರುವ ಸೂಪರ್ ಹಿಟ್ ಚಿತ್ರ 'ಸಹೋದರರ ಸವಾಲ್' ಮರುಬಿಡುಗಡೆಯಾಗುತ್ತಿದೆ.
ಸೆಪ್ಟೆಂಬರ್ 17 ರಂದು ರಾಜ್ಯದ ಹಲವು ಚಿತ್ರಗಳಲ್ಲಿ ಸಹೋದರರ ಸವಾಲ್ ಸಿನಿಮಾ ರಿ-ರಿಲೀಸ್ ಆಗುತ್ತಿದ್ದು, ಸೆಪ್ಟೆಂಬರ್ 15 ರಿಂದ ಮುಂಗಡ ಟಿಕೆಟ್ ಬುಕ್ಕಿಂಗ್ಗೆ ಅವಕಾಶ ಮಾಡಲಾಗಿದೆ. ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಭೂಮಿಕಾ, ಅಭಿನಯ ಚಿತ್ರಮಂದಿರಗಳು ಸೇರಿದಂತೆ ಜೆಪಿ ನಗರದ ಸಿದ್ದೇಶ್ವರ, ಯಶವಂತಪುರದ ಉಲ್ಲಾಸ, ಗೊಟ್ಟಿಗೆರೆಯ ಲಕ್ಷ್ಮಿ, ಉಲ್ಲಾಳದ ವಜ್ರೇಶ್ವರಿ ಚಿತ್ರಗಳಲ್ಲಿ ಸಹೋದರರ ಸವಾಲ್ ಚಿತ್ರಮಂದಿರಕ್ಕೆ ಬರ್ತಿದೆ.
1977ರಲ್ಲಿ ಕೆ.ಎಸ್.ಆರ್.ದಾಸ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ವಿಷ್ಣುವರ್ಧನ್, ರಜನಿಕಾಂತ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಇವರಿಬ್ಬರು ಸಹೋದರರ ಪಾತ್ರದಲ್ಲಿ ಅಭಿನಯಿಸಿದ್ದರು. ನಾಯಕಿಯರಾಗಿ ಪದ್ಮಪ್ರಿಯಾ, ಕವಿತಾ, ಜಯಮಾಲಿನಿ ಕಾಣಿಸಿಕೊಂಡಿದ್ದರು. ಎಆರ್ ರಾಜು ನಿರ್ಮಾಣ ಮಾಡಿದ್ದು, ಚಿತ್ರಕ್ಕೆ ಚೆಲ್ಲಪಿಲ್ಲ ಸತ್ಯಂ ಸಂಗೀತ ನೀಡಿದ್ದರು. ಎಂಡಿ ಸುಂದರ್ ಚಿತ್ರಕಥೆ ರಚಿಸಿದ್ದರು. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಎಲ್ಲಾ ಹಾಡನ್ನು ಎಸ್ಪಿಬಿ ಅವರೇ ಹಾಡಿದ್ದರು.

'ಸಹೋದರರ ಸವಾಲ್' ಚಿತ್ರದ ಕಥೆ
ಬಾಲ್ಯದಲ್ಲಿ ಬೇರೆಯಾದ ಇಬ್ಬರು ಸಹೋದರರು ಬೇರೆ ವಾತಾವರಣದಲ್ಲಿ ಬೆಳೆದು ಪರಸ್ಪರ ವಿರುದ್ಧವಾಗಿ ಹೋರಾಡಲು ನಿಲ್ಲುತ್ತಾರೆ. ನಂತರ ತಾವು ಪರಸ್ಪರ ಸಹೋದರರೆಂದು ಅರಿತು ಬಾಲ್ಯದಲ್ಲಿ ತಮ್ಮ ಕುಟುಂಬಕ್ಕೆ ಅನ್ಯಾಯ ಮಾಡಿದ್ದವರ ವಿರುದ್ದ ಸಿಡಿದೇಳುತ್ತಾರೆ.
ಡಾ.ವಿಷ್ಣುರ್ವಧನ್ ಕುರಿತಾದ ಪುಸ್ತಕ ಬಿಡುಗಡೆ ಮಾಡಿದ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್
ಡಾ. ವಿಷ್ಣುವರ್ಧನ್ ಅವರ 71ನೇ ಜನ್ಮದಿನದ ಅಂಗವಾಗಿ ಡಾ.ವಿಷ್ಣುಸೇನಾ ಸಮಿತಿಯು ಕರುನಾಡ ಯಜಮಾನ ಡಾ.ವಿಷ್ಣುವರ್ಧನ್' ಎಂಬ ಕಿರುಹೊತ್ತಿಗೆಯನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸುವ ದೃಷ್ಠಿಯಿಂದ ಹೊರತಂದಿದೆ. ಸದರಿ ಕೃತಿಯನ್ನು ಕನಿಷ್ಠ ಒಂದು ಲಕ್ಷ ಮಕ್ಕಳಿಗೆ ವಿತರಿಸುವ ಗುರಿಯನ್ನು ಹೊಂದಿದೆ. ಡಾ.ಶರಣು ಹುಲ್ಲೂರ್ ಅವರು ಬರೆದ ಕರುನಾಡ ಯಜಮಾನ ಡಾ.ವಿಷ್ಣುವರ್ಧನ ಎಂಬ ಕೃತಿಯನ್ನು ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ತಮ್ಮ ಕಛೇರಿಯಲ್ಲಿ ಬಿಡುಗಡೆಗೊಳಿಸಿದರು.

''ಸಿನಿಮಾ, ಜನಪರ ಕಾರ್ಯಗಳ ಮೂಲಕ ಡಾ.ವಿಷ್ಣುವರ್ಧನ್ ಅವರು ಯಾವತ್ತಿಗೂ ನಮ್ಮೊಂದಿಗೆ ಇರುತ್ತಾರೆ. ಅವರ ಆದರ್ಶ ಬದುಕು, ನಾಡು, ನುಡಿಯ ಬಗೆಗಿನ ಅಭಿಮಾನ ಮತ್ತು ಜೀವಪರ ಕಾಳಜಿ ನಮಗೆಲ್ಲ ಮಾದರಿಯಾಗಿದೆ. ಅವರು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದರೂ, ಕೊನೆಗೂ ಗೆದ್ದದ್ದು ಅವರ ಶ್ರಮ. ಹಾಗಾಗಿ ಮಕ್ಕಳಿಗೆ ಡಾ.ವಿಷ್ಣು ಬದುಕಿನ ಕುರಿತು ಪರಿಚಯ ಆಗಬೇಕಿದೆ. ಆ ಕಾರಣದಿಂದ ಡಾ.ವಿಷ್ಣು ಅವರ ಬದುಕು ಸಾಧನೆಗಳನ್ನು ಪಠ್ಯದಲ್ಲಿ ಸೇರಿಸಲು ಡಾ.ವಿಷ್ಣು ಸೇನಾ ಸಮಿತಿ ಮನವಿ ಮಾಡಿತು.'' ಎಂದು ಡಾ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು "ಪಠ್ಯಪುಸ್ತಕ ಸಮಿತಿ"ಗೆ ನಿಮ್ಮ ಮನವಿಯನ್ನು ಶಿಫಾರಸ್ಸುಗೊಳಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಲೇಖಕರಾದ ಡಾ. ಶರಣು ಹುಲ್ಲೂರು, ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ, ಎಬಿವಿಪಿ ಮುಖಂಡರಾದ ಗುರುನಾಥ ರಾಜಗೀರ ಹಾಜರಿದ್ದರು.


Click it and Unblock the Notifications











