ಡಾ. ವಿಷ್ಣು ಹೆಸರಲ್ಲೇ ಅತಿ ಉದ್ದದ ರಸ್ತೆ
ಕರ್ನಾಟಕದ ಕರ್ಣ, ಬಂಗಾರದ ಕಳಸ, ಸಿಂಹಾದ್ರಿಯ ಸಿಂಹ, ಸಾಹಸ ಸಿಂಹ, ಕರುನಾಡ ಜಮೀನ್ದಾರ್ರು, ಅಭಿನಯ ಭಾರ್ಗವ ಬಿರುದಾಂಕಿತ ಡಾ. ವಿಷ್ಣುವರ್ಧನ್ ಅವರ ಹೆಸರನ್ನು ಬೆಂಗಳೂರಿನ ಪ್ರಮುಖ ರಸ್ತೆಗೆ ಇಡುವ ಮೂಲಕ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಗೌರವ ಸೂಚಿಸುತ್ತಿದೆ.
ಬೆಂಗಳೂರಿನ ಬನಶಂಕರಿಯಿಂದ ಕೆಂಗೇರಿ ತನಕ ಇರುವ ರಸ್ತೆಗೆ 'ಡಾ. ವಿಷ್ಣುವರ್ಧನ ರಸ್ತೆ' ಎಂದು ನಾಮಕರಣ ಮಾಡಲಾಗಿದೆ. ದಿನಾಂಕ 2-2-2014ರಂದು ಭಾನುವಾರ ನಡೆಯುವ ಸಮಾರಂಭದಲ್ಲಿ ಅಧಿಕೃತವಾಗಿ ಘೋಷಣೆಯಾಗಲಿದೆ.
ಸುಮಾರು 12.3 ಕಿ.ಮೀ ಉದ್ದದ ರಸ್ತೆಗೆ ವಿಷ್ಣುವರ್ಧನ ಅವರ ಹೆಸರಿಡುತ್ತಿದ್ದಂತೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ದೇಶದಲ್ಲೇ ಅತಿ ಉದ್ದದ ರಸ್ತೆಗೆ ತನ್ನ ಹೆಸರನ್ನು ಹೊಂದಿದ ಏಕೈಕ ಕಲಾವಿದ ಎಂಬ ಕೀರ್ತಿ ವಿಷ್ಣು ಅಣ್ಣ ಅವರಿಗೆ ಸಲ್ಲುತ್ತದೆ ಎಂದು ಡಾ. ವಿಷ್ಣುವರ್ಧನ ಸೇನಾ ಸಮಿತಿ ಹೇಳಿದೆ.
ಫೆ.2 ರಂದು ಬೆಳಗ್ಗೆ ಬನಶಂಕರಿ ದೇವಸ್ಥಾನದ ಬಳಿಯಿಂದ ಅಭಿಮಾನ್ ಸ್ಟುಡಿಯೋದಲ್ಲಿರುವ ಡಾ. ವಿಷ್ಣು ಸಮಾಧಿ ಸ್ಥಳದವರೆಗೂ ಮೆರವಣಿಗೆ ನಡೆಸಲಾಗುತ್ತದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ವಿಷ್ಣು ಅಭಿಮಾನಿಗಳು ಆಗಮಿಸುತ್ತಿದ್ದಾರೆ ಎಂದು ವಿಷ್ಣು ಸೇನಾ ಸಮಿತಿ ಪ್ರಕಟಿಸಿದೆ. ಡಾ. ವಿಷ್ಣುವರ್ಧನ್ ಅವರನ್ನು ಅಭಿಮಾನಿಗಳು ಇಂದಿಗೂ ವಿವಿಧ ರೀತಿಯಲ್ಲಿ ಸ್ಮರಿಸಿಕೊಳ್ಳುತ್ತಿದ್ದಾರೆ. ವಿಷ್ಣು ನೆನಪಿನ ಸ್ಮಾರಕ, ಪ್ರತಿಮೆ, ರಸ್ತೆ, ಪಾರ್ಕ್ ವಿವರಗಳು ಇಲ್ಲಿದೆ...

ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಹೆಸರು ಚಿರಸ್ಥಾಯಿ
'ಡಿಟೆಕ್ಟೀವ್ ಸಾಹಸಸಿಂಹ' ಎಂಬ ಹೆಸರಿನಲ್ಲಿ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರು ಕಾಮಿಕ್ ಸ್ಟ್ರಿಪ್ ಸರಣಿಯನ್ನು ಹೊರತಂದಿದ್ದರು. ಆಪ್ತಮಿತ್ರ ಗೆಟೆಪ್ ನಲ್ಲಿ ಕಾಮಿಕ್ ಹೀರೋ ಆಗಿ ವಿಷ್ಣುವರ್ಧನ್ ಅವರನ್ನು ಪರಿಚಯಿಸಲಾಗಿದೆ.

ಪ್ರತಿ ಬಾರಿ ವಿಷ್ಣು ಹುಟ್ಟುಹಬ್ಬ ಆಚರಣೆ ವಿಶೇಷ
ಪ್ರತಿ ವರ್ಷ ಸೆ.18 ರಂದು ಡಾ. ವಿಷ್ಣು ಅವರ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಅಭಿಮಾನ್ ಸ್ಟುಡಿಯೋದಲ್ಲಿ ಅನೇಕ ಅಭಿಮಾನಿಗಳು ಪೂಜೆ ಸಲ್ಲಿಸಿದರೆ, ರೋಟರಿ ಇಂಟರ್ ನ್ಯಾಶನಲ್, ನಾರಾಯಣ ಹೆಲ್ತ್, ಪ್ರಾಜೆಕ್ಟ್ ದೃಷ್ಟಿ, ರಾಷ್ಟ್ರೋತ್ಥಾನ ಪರಿಷತ್ ನಂತಹ ಸರ್ಕಾರೇತರ ಸಂಘ ಸಂಸ್ಥೆಗಳು ಪ್ರತಿ ಹುಟ್ಟುಹಬ್ಬದ ದಿನದಂದು ರಕ್ತದಾನ, ನೇತ್ರದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ರಾಜ್ಯದ ವಿವಿಧೆಡೆ ಅನ್ನದಾನ, ಅನಾಥ ಮಕ್ಕಳಿಗೆ ಹಣ್ಣು ಹಂಪಲು ಹಂಚಿಕೆ ಕಾರ್ಯ ಕೂಡಾ ನಡೆಸಲಾಗುತ್ತದೆ.

ಡಾ. ವಿಷ್ಣು ಸಮಾಧಿ ಸ್ಥಳ ಸ್ಮಾರಕಕ್ಕಾಗಿ ಭೂಮಿ
ಖ್ಯಾತ ಚಿತ್ರನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕಾಗಿ ಈಗಾಗಲೇ ಸ್ವಾಧೀನಪಡಿಸಿಕೊಂಡಿದ್ದ ಎರಡು ಎಕರೆ ಜಮೀನನ್ನು ವಿಷ್ಣು ಸ್ಮಾರಕ ಟ್ರಸ್ಟ್ ವಶಕ್ಕೆ ಸಿಎಂ ಸಿದ್ದರಾಮಯ್ಯ ಅವರು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಹಸ್ತಾಂತರ ಮಾಡಿದ್ದರು. ಅಲ್ಲಿ ತನಕ ಸ್ಮಾರಕ ನಿರ್ಮಾಣಕ್ಕೆ ಸರಿಯಾದ ಭೂಮಿ ಸಿಗದೆ ವಿಷ್ಣು ಅವರ ಕುಟುಂಬ ಹಾಗೂ ಅಭಿಮಾನಿಗಳು ಗೊಂದಲದಲ್ಲಿದ್ದರು.
ಈ ನಡುವೆ ಸಂಖ್ಯಾಶಾಸ್ತ್ರಜ್ಞ ಆದಿತ್ಯನಾರಾಯಣ ಶಾಸ್ತ್ರಿ ಅವರ ಸೂಚನೆ ಮೇರೆಗೆ ವಿಷ್ಣುವರ್ಧನ್ ಅವರ ಊರು ಮೈಸೂರಿನಲ್ಲೇ ಸ್ಮಾರಕ ನಿರ್ಮಾಣವಾಗಲಿ ಎಂಬ ಆಗ್ರಹವೂ ಕೇಳಿ ಬಂದಿತ್ತು. ಆದರೆ, ವಿಷ್ಣು ಅಭಿಮಾನಿಗಳು ತಾಳ್ಮೆಯಿಂದ ಸರ್ಕಾರದ ವಿಳಂಬ ನೀತಿಯನ್ನು ಸಹಿಸಿಕೊಂಡಿದ್ದಾರೆ.

ಡಾ.ವಿಷ್ಣುವರ್ಧನ್ ಅವರ ಕಂಚಿನ ಪುತ್ಥಳಿ
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 7 ಅಡಿಗಳ ಕಂಚಿನ ಪುತ್ಥಳಿ ಮಾರ್ಚ್ 1, 2012ರಂದು ಬೆಂಗಳೂರಿನ ಗೌರಿಪಾಳ್ಯದಲ್ಲಿ ಅನಾವರಣ ಮಾಡಲಾಗಿದೆ.

ಬಿಬಿಎಂಪಿ ವತಿಯಿಂದ ವಿಷ್ಣು ಹೆಸರಲ್ಲಿ ರಸ್ತೆ, ಪಾರ್ಕ್
ಬಿಬಿಎಂಪಿ ವ್ಯಾಪ್ತಿಯ ಸರ್ಜಾಪುರದಿಂದ ಕೆಂಗೇರಿ ಮಾರ್ಗಕ್ಕೆ 'ಡಾ. ವಿಷ್ಣುವರ್ಧನ್ ರಸ್ತೆ' ಎಂದು ನಾಮಕರಣ ಮಾಡಲು ಪಾಲಿಕೆ ಸಭೆಯಲ್ಲಿ(ಫೆ.1, 2011) ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ರಾಜಕೀಯ ಒತ್ತಡ, ರಸ್ತೆ ಉದ್ದ ಅಗಲ ಪರಿಮಿತಿ ದೃಷ್ಟಿಯಿಂದ ಇದು ಸಾಧ್ಯವಾಗದೆ ಬನಶಂಕರಿಯಿಂದ ಕೆಂಗೇರಿ ತನಕದ ರಸ್ತೆಗೆ ಈಗ ವಿಷ್ಣು ಹೆಸರಿಡಲಾಗಿದೆ.
ಪಾರ್ಕ್: ಪಟ್ಟಾಭಿರಾಮನಗರ ವ್ಯಾಪ್ತಿಯ ಜಯನಗರ 4ನೇ "ಟಿ" ಬ್ಲಾಕ್ ಬಡಾವಣೆಯ 28ನೇ ಮುಖ್ಯರಸ್ತೆ ಹಾಗೂ 35ನೇ ಅಡ್ಡರಸ್ತೆ ನಡುವಿರುವ ವಿಶ್ರಾಂತಿ ವನಕ್ಕೆ 'ಡಾ. ವಿಷ್ಣುವರ್ಧನ್ ವಿಶ್ರಾಂತಿ ವನ' ಎಂದು ನಾಮಕರಣ ಮಾಡಲಾಗಿದೆ.
ಇದಲ್ಲದೆ ಬಳ್ಳಾರಿಯಲ್ಲಿ ಕನ್ನಡ ಚಿತ್ರರಂಗದ ಮೇರುನಟ ಡಾ.ವಿಷ್ಣು ಹೆಸರಿನಲ್ಲಿ ಜಿಂದಾಲ್ ಅವರು ನಿರ್ಮಿಸಿರುವ ಪಾರ್ಕ್ ಅನ್ನು ಸಾರ್ವಜನಿಕರಿಗೆ ಮಕ್ತಗೊಂಡು ಮೂರು ವರ್ಷಗಳು ಕಳೆದಿವೆ.


Click it and Unblock the Notifications











