ಇದು ಹಂಸಲೇಖರ ಸಣ್ಣತನ ತೋರಿಸುತ್ತದೆ: ಪೇಜಾವರ ಶ್ರೀ ಅಸಮಾಧಾನ
ದಲಿತ ಕೇರಿಗೆ ಹೋಗಿದ್ದ ವಿಶ್ವೇಶತೀರ್ಥ ಪೇಜಾವರ ಶ್ರೀಗಳು ಅಲ್ಲಿ ಅವರಿಗೆ ಚಿಕನ್ ತಿನ್ನಲು ಕೊಟ್ಟಿದ್ದರೆ ತಿನ್ನುತ್ತಿದ್ದರೆ, ಕುರಿಯ ರಕ್ತ ಫ್ರೈ ಮಾಡಿ ಕೊಟ್ಟಿದ್ದರೆ ತಿನ್ನುತ್ತಿದ್ದರೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಪ್ರಶ್ನೆ ಮಾಡಿದ್ದರು. ಇದು ವಿವಾದ ಎಬ್ಬಿಸಿತ್ತು. ಹಂಸಲೇಖರ ಹೇಳಿಕೆ ಸಂಬಂಧ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.
''ನಮ್ಮ ಗುರುಗಳಿಗೆ ಪದ್ಮವಿಭೂಷಣ ಪ್ರಶಸ್ತಿ ಬಂದಿದೆ. ಹಾಗಾಗಿ ಹಂಸಲೇಖ ಅವರು ನನ್ನ ಗುರುಗಳನ್ನು ಟೀಕಿಸಿರಬೇಕು, ಸಮಾಜ ಹಂಸಲೇಖ ಅವರನ್ನು ಎತ್ತರದ ಸ್ಥಾನದಲ್ಲಿರಿಸಿದೆ ಅಂಥಹವರ ಬಾಯಿಂದ ಇಂಥಹಾ ಮಾತುಗಳು ಬರಬಾರದಿತ್ತು. ಇದರಿಂದ ಸಮಾಜ ಬಹಳ ನೊಂದಿದೆ'' ಎಂದಿದ್ದಾರೆ.
''ಗುರುಗಳು ಇಂಥಹವರನ್ನು ಓಲೈಸಲು ಸಮಾಜಮುಖಿ ಕೆಲಗಳನ್ನೂ ಮಾಡುತ್ತಿರಲಿಲ್ಲ. ಹಾಗಾಗಿ ಇನ್ಯಾರೋ ತೆಗಳುತ್ತಾರೆ ಎನ್ನುವ ಕಾರಣಕ್ಕೆ ಅದರಿಂದ ಹಿಂದೆ ಸರಿದವರೂ ಅಲ್ಲ. ಗುರುಗಳ ಗುರಿ ನೇರವಾಗಿತ್ತು. ಸಮಾಜದಲ್ಲಿ ಯಾರೂ ಸಹ ನಾವು ಬಹಿಷ್ಕೃತರು ಎಂದುಕೊಳ್ಳಬಾರದು, ಎಲ್ಲರೂ ಒಂದಾಗಿ ಸಮಾಜದಲ್ಲಿ ಸಾಗಬೇಕು ಎಂಬುದು ಗುರುಗಳ ಉದ್ದೇಶವಾಗಿತ್ತು'' ಎಂದಿದ್ದಾರೆ.

''ಆಹಾರದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ಒಬ್ಬರ ಆಹಾರವನ್ನು ಮತ್ತೊಬ್ಬರ ಮೇಲೆ ಹೇರುವುದು ಅದನ್ನು ಯಾರು ಯಾರ ಮೇಲೂ ಮಾಡಬಾರದು. ಎಲ್ಲರಿಗೂ ಆಹಾರದ ಸ್ವಾತಂತ್ರ್ಯವಿದೆ. ಒಬ್ಬರ ಆಹಾರವನ್ನು ಮತ್ತೊಬ್ಬರು ತಿನ್ನುವುದರಿಂದಲೇ ಮತ್ತೊಬ್ಬರ ಉದ್ಧಾರವಾಗುತ್ತೆ ಅನ್ನುವುದು ತಪ್ಪು. ಹಾಗಾಗಿ ಹಂಸಲೇಖರ ಆ ಮಾತು ಅವರ ಸಣ್ಣತನವನ್ನು ಜಗತ್ತಿಗೆ ತೋರಿಸಿದೆ, ಇಂಥಹದು ನಡೆಯಬಾರದಿತ್ತು'' ಎಂದಿದ್ದಾರೆ.
''ಶ್ರೀ ಕೃಷ್ಣನಿಗೆ ಅಗ್ರಪೂಜೆ ನೀಡುವಾಗ ಶಿಶುಪಾಲನೂ ಇದೇ ರೀತಿ ವಿರೋಧಿಸಿದ್ದ. ಶಿಶುಪಾಲನಿಗೆ ಕೃಷ್ಣನೇ ತಕ್ಕಶಾಸ್ತಿ ಮಾಡಿದ್ದ. ನನ್ನ ಗುರುಗಳು ಸಮಾಜದ ಎಲ್ಲರ ಹೃದಯದಲ್ಲಿ ಕಷ್ಣನನ್ನು ಕಂಡವರು. ಆದ್ದರಿಂದಲೇ ಅವರು ದಲಿತರ ಕೇರಿಗೂ ಹೋಗುತ್ತಿದ್ದರು, ನೆರೆಹಾವಳಿ ಭೂಕಂಪ ಆದಾಗಲೂ ಭೇಟಿ ನೀಡುತ್ತಿದ್ದರು. ಸಮಾಜದ ಎಲ್ಲರ ಉದ್ಧಾರವನ್ನು ವಿಶ್ವೇಶತೀರ್ಥರು ಬಯಸಿದ್ದರು. ಗುರುಗಳು ಜನರ ಹೃದಯದಲ್ಲಿ ಯಾವ ಕೃಷ್ಣನನ್ನು ಕಂಡಿದ್ದರೋ ಆ ಕೃಷ್ಣನೇ ಅದಕ್ಕೆ ಬೇಕಾದ ಪ್ರತಿಕಾರ ಮಾಡುತ್ತಾನೆ'' ಎಂದರು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ.
''ನಮ್ಮ ಉದ್ದೇಶ ಪ್ರಾಮಾಣಿಕವಾಗಿದೆ. ಯಾರೋ ಏನೋ ಅಂದ ಮಾತ್ರಕ್ಕೆ ನಮ್ಮ ಕೆಲಸ ನಿಲ್ಲಿಸುವುದಿಲ್ಲ. ಯಾರ ಹೊಗಳಿಕೆಗೂ ನಾವು ಈ ಕೆಲಸವನ್ನು ಮಾಡಿದ್ದಲ್ಲ. ದಲಿತರ ಜೊತೆ ನಾವು ಇದ್ದೇವೆ, ದಲಿತರು ನಮ್ಮಿಂದ ಹೊರತಲ್ಲ. ಈ ಐಕ್ಯ ಸಂದೇಶ ನೀಡುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಗುರುಗಳ ಅಭಿಮಾನದಿಂದ ಯಾರಾದರೂ ಪ್ರತಿಭಟಿಸಿದರೆ ಅದು ಅವರವರ ವೈಯಕ್ತಿಕ ವಿಚಾರ. ನಾವಂತೂ ಯಾವುದೇ ಪ್ರತಿಭಟನೆ ನಡೆಸುವುದಿಲ್ಲ'' ಎಂದಿದ್ದಾರೆ.


Click it and Unblock the Notifications











