ನಟ ವಿವೇಕ್ ನಿಧನ: ಕನ್ನಡ ಸಿನಿ ತಾರೆಯರು ಸಂತಾಪ ಸೂಚಿಸಿದ್ದು ಹೀಗೆ
ತಮಿಳಿನ ಖ್ಯಾತ ಹಾಸ್ಯ ನಟ, ಸಮಾಜ ಸೇವಕ ವಿವೇಕ್ ಅವರು ಇಂದು ಮುಂಜಾನೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಪದ್ಮಶ್ರೀ ಗೌರವ ಪಡೆದಿರುವ ಖ್ಯಾತ ನಟನ ಅಗಲಿಕೆಗೆ ತಮಿಳು ಚಿತ್ರರಂಗ ಮಮ್ಮಲ ಮರುಗಿದೆ. ತೆಲುಗು, ಹಿಂದಿ, ಮಲಯಾಳಂ ಹಾಗೂ ಕನ್ನಡ ಸಿನಿಮಾ ನಟ-ನಟಿಯರು ಸಹ ಉದ್ಯಮದ ಪ್ರತಿಭಾವಂತ, ಹಿರಿ ನಟನ ಅಗಲಿಕೆಗೆ ಕಣ್ಣೀರಾಗಿದ್ದಾರೆ.
ಕನ್ನಡದಲ್ಲಿಯೂ ಒಂದು ಸಿನಿಮಾದಲ್ಲಿ ನಟ ವಿವೇಕ್ ನಟಿಸಿದ್ದರು. ಕನ್ನಡದ ಕೆಲವು ನಟ-ನಟಿಯರೊಂದಿಗೆ ಗೆಳೆತನವನ್ನು ವಿವೇಕ್ ಹೊಂದಿದ್ದರು ಎನ್ನಲಾಗಿದೆ. ಕನ್ನಡದ ಯಾವ ನಟ-ನಟಿಯರು ವಿವೇಕ್ ಅವರಿಗೆ ಹೇಗೆ ಸಂತಾಪ ಸೂಚಿಸಿದ್ದಾರೆ. ಇಲ್ಲಿದೆ ನೋಡಿ.

ನಟ ಪುನೀತ್ ರಾಜ್ಕುಮಾರ್ ಸಂತಾಪ
ಹಾಸ್ಯನಟರ ಬಗ್ಗೆ ವಿಶೇಷ ಗೌರವವುಳ್ಳ ನಟ ಪುನೀತ್ ರಾಜ್ಕುಮಾರ್ ಅವರು ನಟ ವಿವೇಕ್ ಅಗಲಿಕೆಗೆ ಟ್ವಿಟ್ಟರ್ನಲ್ಲಿ ಸಂತಾಪ ಸೂಚಿಸಿದ್ದಾರೆ. 'ನಟ ವಿವೇಕ್ ನಿಧನ, ಸಿನಿಮಾ ಕುಟುಂಬಕ್ಕೆ ದೊಡ್ಡ ನಷ್ಟ. ಅಪಾರ ಗೌರವ, ಪ್ರೀತಿ ಪಡೆದ ನಮ್ಮ ಕಾಲದ ದೊಡ್ಡ ಹಾಸ್ಯನಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಕೋರಿದ್ದಾರೆ ಪುನೀತ್ ರಾಜ್ಕುಮಾರ್.

ನಾನು ನಿಮ್ಮ ಅಭಿಮಾನಿಯಾಗಿದ್ದೆ: ಶಿವಣ್ಣ
ನಟ ಶಿವರಾಜ್ಕುಮಾರ್ ಅವರೂ ಸಹ ವಿವೇಕ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. 'ನಿಮ್ಮ ಅಗಲಿಕೆ ಬಹಳ ದುಃಖ ತಂದಿದೆ. ನಿಮ್ಮ ಕೆಲಸದ ದೊಡ್ಡ ಅಭಿಮಾನಿಯಾಗಿದ್ದೆ ನಾನು' ಎಂದಿದ್ದಾರೆ. ವಿವೇಕ್ ಅವರ ಜೊತೆಗೆ ತೆರೆ ಹಂಚಿಕೊಂಡಿರುವ ಬಹುಭಾಷಾ ನಟ ಪ್ರಕಾಶ್ ರೈ ಸಹ ವಿವೇಕ್ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ನಟಿ ಮಾಲಾಶ್ರೀ ಸಂತಾಪ ಸೂಚಿಸಿರುವುದು ಹೀಗೆ
ತಮಿಳಿನ ಕೆಲವು ಸಿನಿಮಾಗಳಲ್ಲಿ ಸಹ ನಟಿಸಿರುವ ಕನ್ನಡದ ನಟಿ ಮಾಲಾಶ್ರಿ ಸಹ ವಿವೇಕ್ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. 'ಹೃದಯ ಒಡೆಯುವಂಥ ಈ ಸುದ್ದಿ ಕೇಳಿ ಬಹಳ ಬೇಸರವಾಯಿತು. ವಿವೇಕ್ ಕುಟುಂಬಕ್ಕೆ ಹಾಗೂ ಗೆಳೆಯರಿಗೆ ನನ್ನ ಸಂತಾಪಗಳು' ಎಂದಿದ್ದಾರೆ ಮಾಲಾಶ್ರೀ.

ನಮ್ಮ ಕಾಲದ ಅತ್ಯುತ್ತಮ ಹಾಸ್ಯನಟ ವಿವೇಕ್: ರಾಜೇಶ್ ಕೃಷ್ಣನ್
'ಖಂಡಿತವಾಗಿಯೂ ನಟ ವಿವೇಕ್ ನಮ್ಮ ಕಾಲದ ಅತ್ಯುತ್ತಮ ಹಾಸ್ಯನಟ. ಅವರೊಬ್ಬ ದಂತಕತೆ. ಅವರು ನಮ್ಮನ್ನೆಲ್ಲಾ ನಗಿಸಿದರು ಹಾಗು ಅಷ್ಟೇ ಬೇಗ ಹೊರಟು ಹೋದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದಿದ್ದಾರೆ ಗಾಯಕ, ನಟ ರಾಜೇಶ್ ಕೃಷ್ಣನ್. ನಟ ಧನಂಜಯ್ ಸಹ ವಿವೇಕ್ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.
Recommended Video

ನಟಿ ಸಂಜನಾ ಗಲ್ರಾನಿ ಹೇಳಿದ್ದು ಹೀಗೆ
ನಾವಿಲ್ಲಿ ಕ್ಷಣಿಕ ಮಾತ್ರ, ನಮಗೆ ಇರುವ ಸಮಯವೇ ಕಡಿಮೆ. ಈ ನಡುವೆ ಸ್ವಂತ ಜನಗಳೊಂದಿಗೆ ಜಗಳ ಮಾಡಿ ಪ್ರಯೋಜನವೇನು? ಸಮಯದ ವಿರುದ್ಧ ಹೋಗುವುದರ ಉಪಯೋಗವೇನು? ಸಮಯ ಇರುವುದೇ ಅತ್ಯಲ್ಪ. ಪರಸ್ಪರ ಪ್ರೀತಿಗಷ್ಟೆ ಇಲ್ಲಿ ಸಮಯವಿದೆ ಎಂದಿರುವ ನಟಿ ಸಂಜನಾ ಗಲ್ರಾನಿ, ವಿವೇಕ್ ಅಗಲಿಕೆ ಕುರಿತಂತೆ, 'ವಿವೇಕ್ ಸರ್, ನಿಮ್ಮ ಪ್ರತಿ ಪಾತ್ರಗಳು, ಪ್ರತಿ ಸಿನಿಮಾಗಳು ನಮ್ಮ ಮನದಲ್ಲಿದೆ. ನಮ್ಮನ್ನೆಲ್ಲಾ ನಗಿಸಲು ದೇವರಿಂದ ವಿಶೇಷ ಆಶೀರ್ವಾದ ಪಡೆದು ಬಂದಿದ್ದಿರಿ ನೀವು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ' ಎಂದಿದ್ದಾರೆ.


Click it and Unblock the Notifications











