2012ರಲ್ಲಿ ಕನ್ನಡದ ಶ್ರೇಷ್ಠ ಚಿತ್ರ ಯಾವುದು?
ಸುಮಾರು 90 ಕ್ಕೂ ಅಧಿಕ ಚಿತ್ರಗಳು ಈ ವರ್ಷದಲ್ಲಿ ತೆರೆಗೆ ಅಪ್ಪಳಿಸಿದೆ. ಡಿಸೆಂಬರ್ ಕೊನೆ ವೇಳೆಗೆ ಸಾಲು ಸಾಲು ಚಿತ್ರಗಳು ಥೇಟರ್ ಗೆ ನುಗ್ಗಿ ಬರಲಿದೆ. ಥೇಟರ್ ಸಮಸ್ಯೆ ನಡುವೆಯೂ 2012ರಲ್ಲಿ ಕನ್ನಡ ಚಿತ್ರರಂಗ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಕಂಡಿದೆ
ಕಳೆದ 6 ತಿಂಗಳಲ್ಲಿ ಸುಮಾರು 50ಕ್ಕೂ ಚಿತ್ರಗಳು ತೆರೆ ಕಂಡಿದ್ದು, ಪ್ರೇಕ್ಷಕರ ಮೆಚ್ಚುಗೆ ನಡುವೆ ಗಲ್ಲಾ ಪೆಟ್ಟಿಗೆಯನ್ನು ತುಂಬಿಸಿದೆ. ವಿಮರ್ಶಕರಿಂದ ಕಟು ಟೀಕೆಗೆ ಒಳಗಾದರೂ ಅಣ್ಣಾಬಾಂಡ್ ಕಠಾರಿವೀರ ಹಾಗೂ ಚಿಂಗಾರಿ ಸಕತ್ ದುಡ್ಡು ಮಾಡಿತು.
ನಂತರದ ತಿಂಗಳುಗಳಲ್ಲಿ ಪೂಜಾ ಗಾಂಧಿ ಇದ್ದ ದಂಡು ಪಾಳ್ಯ, ಹೊಸಬ ಧ್ರುವ ಸರ್ಜಾ ಅವರ ಅದ್ದೂರಿ ಅಚ್ಚರಿಯ ಫಲಿತಾಂಶ ನೀಡಿದ್ದು ಸುಳ್ಳಲ್ಲ. ಮುಂದೆ, ಬಹು ನಿರೀಕ್ಷಿತ ಚಿತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಖಾಡಕ್ಕೆ ಇಳಿದು ಬಾಕ್ಸಾಫೀಸ್ ನಲ್ಲಿ ದಾಖಲೆಗಳನ್ನು ಧೂಳಿಪಟ ಮಾಡಿಬಿಟ್ಟಿತು.
ಪ್ರೇಕ್ಷಕರ ಮೆಚ್ಚುಗೆ ವಿಷಯಕ್ಕೆ ಬಂದರೆ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡದ ಕಲ್ಪನ, ಶಿವ ಮುಂತಾದ ಚಿತ್ರಗಳು ಕೂಡಾ ಹಲವರ ಮೆಚ್ಚುಗೆ ಪಡೆಯಿತು. ಒಟ್ಟಾರೆ 2012ರ ಯಶಸ್ಸು ಕಂಡ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಆಯ್ಕೆಯ ಚಿತ್ರ ಯಾವುದು ಎಂದು ತಪ್ಪದೇ ತಿಳಿಸಿ..
ಸೂಚನೆ: ಈ ಪಟ್ಟಿಯಲ್ಲಿ ಯಾವುದೇ ರಿಮೇಕ್ ಚಿತ್ರಗಳನ್ನು ಸೇರಿಸಲಾಗಿಲ್ಲ. ಸ್ವಮೇಕ್ ಚಿತ್ರಗಳಿಗೆ ಆದ್ಯತೆ ನೀಡಲಾಗಿದೆ.

ಅದ್ದೂರಿ
ಅರ್ಜುನ್ ಸರ್ಜಾ ಅವರ ಅಳಿಯ ಧ್ರುವ ಸರ್ಜಾ ಭರ್ಜರಿ ಎಂಟ್ರಿ, ಫೈಟ್, ಸಾಂಗ್ಸ್ ಹಾಗೂ ರಾಧಿಕಾ ಪಂಡಿತ್ ಅಭಿನಯ. ಅರ್ಜುನ್ ಅವರ ನವಿರಾದ ನಿರೂಪಣೆ ಹದಿಹರೆಯದವರ ಮೆಚ್ಚುಗೆ ಪಡೆಯಿತು.

ಅಣ್ಣಾಬಾಂಡ್
ಪ್ರಚಾರ ಸಿಕ್ಕಷ್ಟು ಖುಷಿಕೊಡದಿದ್ದರೂ ಅಪ್ಪು ಪವರ್ ಫುಲ್ ಫೈಟಿಂಗ್, ಹಾಡುಗಳು, ಡ್ಯಾನ್ಸ್ , ಸೂರಿ ನಿರ್ದೇಶನಕ್ಕೆ ಪ್ರೇಕ್ಷಕ ಫುಲ್ ಮಾರ್ಕ್ಸ್ ಕೊಟ್ಟಿಬಿಟ್ಟ. ಪ್ರಿಯಾಮಣಿ, ನಿಧಿ ಸುಬ್ಬಯ್ಯ ಪಾತ್ರ ವೇಸ್ಟ್ ಆಗಿರಲಿಲ್ಲ.

ಚಿಂಗಾರಿ
ಸಾರಥಿ ಯಶಸ್ಸಿನೊಂದಿಗೆ ಕಮ್ ಬ್ಯಾಕ್ ಮಾಡಿದ ಚಾಲೆಂಜಿಂಗ್ ಸ್ಟಾರ್ ಅವರಿಗೆ ಬೋನಸ್ ಆಗಿ ಯಶಸ್ಸು ತಂದು ಕೊಟ್ಟ ಚಿತ್ರವಿದು. ಡ್ಯಾನ್ಸ್ ಮಾಸ್ಟರ್ ಹರ್ಷ ನಿರ್ದೇಶನ, ಫ್ರಾನ್ಸ್ ನಲ್ಲಿ ಚಿತ್ರೀಕರಣ, ವಿಭಿನ್ನ ಕಥೆ ಜನಮೆಚ್ಚುಗೆ ಗಳಿಸಿತು.

ದಂಡು ಪಾಳ್ಯ
ವಿವಾದದ ನಡುವೆಯೂ ಪೂಜಾಗಾಂಧಿ, ಮಕರಂದ್ ದೇಶಪಾಂಡೆ, ರವಿಶಂಕರ್, ರವಿಕಾಳೆ ಅಭಿನಯದ ಮೂಲಕ ನಿರ್ದೇಶಕ ಶ್ರೀನಿವಾಸ ರಾಜು ಅವರು ಪ್ರೇಕ್ಷಕರ ಮೆಚ್ಚುಗೆ ಗಿಟ್ಟಿಸಿಬಿಟ್ಟರು.

ಡ್ರಾಮಾ
ನನ್ನ ಚಿತ್ರದಲ್ಲಿ ಕಥೆ ಹುಡುಕಬೇಡಿ. ಸುಮ್ನೆ ಎಂಜಾಯ್ ಮಾಡಿ ಎಂದು ಯೋಗರಾಜ್ ಭಟ್ಟರು ಹೇಳಿದ ಮೇಲೆ, ಕಥೆ ಹುಡುಕದಿದ್ದರೆ ಕಾಸಿಗೆ ತಕ್ಕ ಕಜ್ಜಾಯವಾಗಿ ಯಶ್ ರಾಧಿಕಾ ಹಾಗೂ ನೀನಾಸಂ ಸತೀಶ್ ಸಿಂಧು ಜೋಡಿಯ ಚಿತ್ರ ನೋಡಲಡ್ಡಿಯಿಲ್ಲ

ಎದೆಗಾರಿಕೆ
ಸತ್ಯ ಕಥೆ ಆಧಾರಿಸಿದ ಚಿತ್ರಗಳನ್ನು ಸಮರ್ಪಕವಾಗಿ ತೆರೆಗೆ ತರುವಲ್ಲಿ ಮತ್ತೊಮ್ಮೆ ಅಗ್ನಿ ಶ್ರೀಧರ್ ತಂಡ ಯಶಸ್ವಿಯಾಗಿದೆ. ಆದಿತ್ಯಕ್ಕೆ ಉತ್ತಮ ಬ್ರೇಕ್ ನೀಡಿದ ಚಿತ್ರಕ್ಕೆ ಸಾಧು ಕೋಕಿಲ ಸಂಗೀತ ಲೇಪ ಸೇರಿದೆ. ಸುಮನಾ ಕಿತ್ತೂರು ನಿರ್ದೇಶನಕ್ಕೆ ಫುಲ್ ಮಾರ್ಕ್ಸ್

ಗೋವಿಂದಾಯ ನಮ:
ಕಡಿಮೆ ಬಜೆಟ್ ನಲ್ಲಿ ಚಿತ್ರ ತೆಗೆದು ಸಿಂಪಲ್ ಕಥೆ ಇಟ್ಟುಕೊಂಡು ಭರ್ಜರಿ ಯಶಸ್ಸು ಗಳಿಸಿದ ಚಿತ್ರವಿದು. ಕೋಮಲ್ ಅವರ ಹಾಸ್ಯ ಕಂಡ್ರ ಎಲ್ಲರೂ ಪ್ಯಾರ್ ಗೆ ಆಗ್ಬುಟ್ಟೈತೆ ಎನ್ನದೆ ಇರಲು ಸಾಧ್ಯವಿಲ್ಲ. ನಾಯಕಿಯರ ಪೈಕಿ ಪರುಲ್ ಕನ್ನಡಕ್ಕೆ ಸಿಕ್ಕ ಹೊಸ ಆಮದು ಬೆಡಗಿ

ಕಠಾರಿ ವೀರ ಸುರಸುಂದರಾಂಗಿ
ವಿಭಿನ್ನ ಬಗೆಯ ಚಿತ್ರ, 3ಡಿ ಚಿತ್ರ ಎನ್ನುವ ಹೆಗ್ಗಳಿಕೆ ಜೊತೆಗೆ ಉಪೇಂದ್ರ ಹಾಗೂ ರಮ್ಯ ಅಭಿನಯ ಜನರನ್ನು ಥೇಟರ್ ಕಡೆಗೆ ಆಕರ್ಷಿಸಿಬಿಟ್ಟಿತು.

ಸಂಗೊಳ್ಳಿ ರಾಯಣ್ಣ
ಕನ್ನಡ ಪ್ರೇಕ್ಷಕರಲ್ಲಿ ಅಭಿಮಾನದ ಕಿಚ್ಚು ಹಬ್ಬಿಸಿದ ಭಾರಿ ಬಜೆಟ್ ಚಿತ್ರ. ಹಾಡಿನ ವಿವಾದ ಬಿಟ್ಟರೆ, ಕನ್ನಡ ಮಟ್ಟಿಗೆ ಉತ್ತಮ ಪ್ರಯತ್ನ. ನಿರ್ಮಾಪಕ ಅನಂದ್ ಅಪ್ಪುಗೊಳ್ ಹಾಗೂ ನಾಗಣ್ಣ ಅವರ ಪರಿಶ್ರಮಕ್ಕೆ ಪ್ರೇಕ್ಷಕ ತುಂಬು ಮನಸ್ಸಿನಿಂದ ಹಾರೈಸಿದ.

ಸಿದ್ಲಿಂಗು
ಧಾರಾವಾಹಿಯಲ್ಲಿ ಪಂಚಿಂಗ್ ಡೈಲಾಗ್ ಮೂಲಕ ಮನೆ ಮಾತಾಗಿದ್ದ ವಿಜಯ್ ಪ್ರಸಾದ್ ಅವರ ಬೆಳ್ಳಿತೆರೆಗೆ ಭರ್ಜರಿ ಎಂಟ್ರಿ ಪಡೆದ ಚಿತ್ರ. ಯೋಗಿ ಹಾಗೂ ರಮ್ಯಾ ಅವರ ಬಾಯಲ್ಲಿ ಪಂಚಿಂಗ್ ಡೈಲಾಗ್ ಕೇಳಿ ಪ್ರೇಕ್ಷಕ ಮುಜುಗರದಿಂದಲೇ ಮೆಚ್ಚುಗೆ ಸೂಸಿಬಿಟ್ಟ.

ನಿಮ್ಮಷ್ಟ ಚಿತ್ರಕ್ಕೆ ಮತ ಹಾಕಿ
ಕೊನೆ ಸ್ಲೈಡ್ ನಲ್ಲಿ ಚಿತ್ರಗಳ ಪಟ್ಟಿ ನೋಡಿ ಮತ ಹಾಕಿ ಇಲ್ಲವೇ ಕೆಳಗಡೆ ಮತ ಪೆಟ್ಟಿಗೆಯಲ್ಲಿ ಗುಂಡಿ ಒತ್ತಿ


Click it and Unblock the Notifications