ಕನ್ನಡ ನಟ, ನಿರ್ಮಾಪಕ ಕಡ್ಡಿಪುಡಿ ಚಂದ್ರು ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ
ಸಿನಿಮಾ ಅಂದ್ರೇನೇ ಮಾಯಾ ಲೋಕ. ಇದಕ್ಕೆ ಎಲ್ಲರೂ ಮಾರಿ ಹೋದವರೇ. ಇಲ್ಲಿ ಅನೇಕರು ಮುಖವಾಡದ ಬದುಕನ್ನು ಬದುಕುತ್ತಿರುತ್ತಾರೆ. ಬಣ್ಣ ಬಣ್ಣದ ಮಾತುಗಳಿಂದ ನಂಬಿಸುತ್ತಾರೆ. ಚೂರು ಯಾಮಾರಿದರೂ ತಲೆಗೆ ಮಕ್ಮಲ್ ಟೋಪಿ ಹಾಕಿ ಹಣೆಗೆ ತುಪ್ಪ ಸವರುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಈಗೀಗ ಚಿತ್ರರಂಗದವರ ಮೇಲೆ ವಂಚನೆ, ನಂಬಿಕೆ ದ್ರೋಹ, ಚೆಕ್ ಬೌನ್ಸ್, ಸೇರಿ ಹಲವರು ಆರೋಪಗಳು...
ದಿನದಿಂದ ದಿನಕ್ಕೆ ಹೆಚ್ಚೆಚ್ಚು ಕೇಳಿ ಬರುತ್ತಲೇ ಇವೆ. ಹೆಜ್ಜೆ ಹೆಜ್ಜೆಗೂ ಮಹಾಮೋಸ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಕನ್ನಡದ ಖ್ಯಾತ ನಿರ್ಮಾಪಕ ಮತ್ತು ನಟ ಕಡ್ಡಿಪುಡಿ ಚಂದ್ರು ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.

ಹೌದು, ಶಿವರಾಜ್ ಕುಮಾರ್ ಅಭಿನಯದ ''ಕಡ್ಡಿಪುಡಿ'' ಚಿತ್ರವನ್ನು ನಿರ್ಮಾಣ ಮಾಡುವ ಮೂಲಕ ಕಡ್ಡಿಪುಡಿ ಚಂದ್ರು ಎಂದೇ ಖ್ಯಾತರಾದ ಕಡ್ಡಿಪುಡಿ ಚಂದ್ರು 2023ರಲ್ಲಿ ಚಿತ್ರವೊಂದನ್ನು ನಿರ್ಮಾಣ ಮಾಡಿದ್ದರು. ಆ ಚಿತ್ರದ ಹೆಸರು ''ಲವ್ ಬರ್ಡ್ಸ್''.
ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅಭಿನಯದ ಈ ಚಿತ್ರವನ್ನು ''ರೋಮಿಯೋ''.. ''ಸ್ಟೈಲ್ ಕಿಂಗ್''.. ಚಿತ್ರಗಳ ನಿರ್ದೇಶಕ ಪಿ.ಸಿ.ಶೇಖರ್ ನಿರ್ದೇಶನ ಮಾಡಿದ್ದರು. ಆದರೆ. ಇವರಿಗೆ ಕೊಡಬೇಕಾದ ಸಂಭಾವನೆಯನ್ನು ನಿರ್ಮಾಪಕ ಕಡ್ಡಿ ಪುಡಿ ಚಂದ್ರು ನೀಡಿಲ್ಲ ಎನ್ನುವುದೇ ಸದ್ಯದ ಆರೋಪ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದ ನಿರ್ದೇಶಕ ಪಿ.ಸಿ.ಶೇಖರ್ ಮತ್ತು ಕಡ್ಡಿ ಪುಡಿ ಚಂದ್ರು ನಡುವೆ ಹಗ್ಗ ಜಗ್ಗಾಟ ನಡೆಯುತ್ತಲೇ ಇತ್ತು. ಆರೋಪ-ಪ್ರತ್ಯಾರೋಪದ ಸರಣಿ ಮುಂದುವರೆದು ಪ್ರಕರಣ ನ್ಯಾಯಾಲಯದವರೆಗೆ ತಲುಪಿತ್ತು.
ನಿರ್ದೇಶಕ ಪಿ.ಸಿ.ಶೇಖರ್ ಅವರ ದೂರಿನ ಅನ್ವಯ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ಕಡ್ಡಿಪುಡಿ ಚಂದ್ರು ಅವರಿಗೆ ಸೂಚನೆ ನೀಡಿತ್ತು. ಆದರೆ.. ಕಡ್ಡಿಪುಡಿ ಚಂದ್ರು ಮಾತ್ರ ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ.

ಈ ಹಿನ್ನೆಲೆ ಮ್ಯಾಜಿಸ್ಟ್ರೇಟ್ ಕೋರ್ಟ್ ಕಡ್ಡಿಪುಡಿ ಚಂದ್ರು ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ಮುಂದೂಡಿದೆ. ಮುಂಬರುವ ದಿನಗಳಲ್ಲಿ ಕಡ್ಡಿಪುಡಿ ಚಂದ್ರು ನ್ಯಾಯಾಲಯಕ್ಕೆ ಹಾಜರಾಗುತ್ತಾರಾ..? ಅಥವಾ ಪೊಲೀಸರು ಕಡ್ಡಿಪುಡಿ ಚಂದ್ರು ಅವರನ್ನು ಬಂಧಿಸುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.
ಅಂದ್ಹಾಗೇ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ವರ್ಷದ ಹಿಂದೆ ಕಡ್ಡಿಪುಡಿ ಚಂದ್ರು ಅವರ ವಿರುದ್ಧ ಕೆಂಡ ಕಾರಿದ್ದ ನಿರ್ದೇಶಕ ಪಿ.ಸಿ.ಶೇಖರ್, ''ಲವ್ ಬರ್ಡ್ಸ್'' ಸಿನಿಮಾ ನಿರ್ದೇಶನದ ಜೊತೆ ಎಡಿಟಿಂಗ್ ಮಾಡಲು ಮಾತುಕಥೆ ಮಾಡಲಾಗಿತ್ತು. ನಿರ್ದೇಶಕನಕ್ಕೆ 20 ಲಕ್ಷ ರೂ. ಹಾಗೂ ಎಡಿಟಿಂಗ್ಗೆ 5 ಲಕ್ಷ ರೂ. ಎಂದಾಗಿತ್ತು. ಆದರೆ, ಬಂದಿದ್ದು ಕೇವಲ 6.5 ಲಕ್ಷ ರೂ. ಮಾತ್ರ ಎಂದು ಆರೋಪ ಮಾಡಿದ್ದರು. ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅವರಿಗೆ ವಿಷಯ ಗೊತ್ತಾದ ನಂತರ ಎರಡು ಲಕ್ಷ ಹಣ ನೀಡಿದರು ಎಂದು ಹೇಳಿದ್ದರು. 18.5 ಲಕ್ಷ ಇನ್ನೂ ಕೊಡಬೇಕು ಎಂದು ಹೇಳಿದ್ದ ಪಿ.ಸಿ.ಶೇಖರ್ ಹಾರ್ಡ್ ಡಿಸ್ಕ್ ತೆಗೆದುಕೊಳ್ಳುವವರೆಗೂ ಒಂದು ಮಾತು ಇತ್ತು. ಹಾರ್ಡ್ ಡಿಸ್ಕ್ ಕೊಟ್ಟಾದ್ಮೇಲೆ ಮಾತುಗಳೆಲ್ಲಾ ಬದಲಾಗುವುದಕ್ಕೆ ಶುರುವಾಯ್ತು ಎಂದು ತಮ್ಮ ಬೇಸರ ವ್ಯಕ್ತಪಡಿಸಿದ್ದರು. ನನ್ನ ಸಹಿಯನ್ನು ಫೋರ್ಜರಿ ಮಾಡಿ ಚಿತ್ರವನ್ನು ''ಅಮೆಜಾನ್''ನವರಿಗೆ ಮಾರಿದ್ದಾರೆ ಎನ್ನುವ ಗಂಭೀರ ಆರೋಪವನ್ನು ಕೂಡ ಪಿ.ಸಿ.ಶೇಖರ್ ಮಾಡಿದ್ದರು.
ನಿರ್ದೇಶಕರ ಈ ಆರೋಪಕ್ಕೆ ಅವತ್ತು ಉತ್ತರ ನೀಡಿದ್ದ ಕಡ್ಡಿಪುಡಿ ಚಂದ್ರು, ನಿರ್ದೇಶಕರಿಗೆ ಕೊಡಬೇಕಾದ ಸಂಭಾವನೆಯನ್ನು ಕೊಟ್ಟಿದ್ದೇನೆ. ಅವರ ಧರ್ಮ ಪತ್ನಿ ಹಾಗೂ ಅಣ್ಣನಿಗೂ ಸಂಭಾವನೆ ಕೇಳುತ್ತಿದ್ದಾರೆ. ನಿರ್ಮಾಪಕನಿಗೆ ಕಷ್ಟ ಆಗುತ್ತಿದೆ. ನನಗೆ ಪ್ರಿಂಟು, ಪಬ್ಲಿಸಿಟಿ ಹಣ ಕೂಡ ಬಂದಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದರು. ಈಗ ಕಡ್ಡಿಪುಡಿ ಚಂದ್ರು ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಯಾಗಿದೆ.


Click it and Unblock the Notifications











