ಬರೀ 99 ರೂಪಾಯಿಗೆ ಈ ಹೊಚ್ಚ ಹೊಸ ಕನ್ನಡ ಸಿನಿಮಾ ಚಿತ್ರಮಂದಿರಗಳಲ್ಲಿ ನೋಡಿ
ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಸಿನಿಮಾ ಟಿಕೆಟ್ ದರ ಹೆಚ್ಚಿದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕುತ್ತಿಲ್ಲ. ಪರಭಾಷೆಯ ದೊಡ್ಡ ಸಿನಿಮಾಗಳು ಬಂದಾಗ ನಾಲ್ಕು- ಐದು ಪಟ್ಟು ಟಿಕೆಟ್ ದರ ಹೆಚ್ಚಿಸಿ ಹಗಲು ದರೋಡೆ ಮಾಡಲಾಗುತ್ತದೆ. ಹೊರ ರಾಜ್ಯದಲ್ಲಿ 10 ರೂ. ಟಿಕೆಟ್ ದರ ಹೆಚ್ಚಿಸಲು ಸರ್ಕಾರ ಅನುಮತಿ ಬೇಕು. ಆದರೆ ಕರ್ನಾಟಕದಲ್ಲಿ ಹೇಳುವವರು, ಕೇಳುವವರು ಇಲ್ಲ ಎನ್ನುವಂತಾಗಿದೆ.
ರಾಜ್ಯದಲ್ಲಿ ಹೆಚ್ಚಾಗಿರುವ ಸಿನಿಮಾ ಟಿಕೆಟ್ ದರದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಕರ್ನಾಟಕ ಫಿಲ್ಮ್ ಚೇಂಬರ್ ಸಹ ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗುತ್ತಿಲ್ಲ. ಮೊದಲೇ ಪರಭಾಷಾ ಸಿನಿಮಾ ಹಾವಳಿಯಿಂದ ಕಂಗೆಟ್ಟ ಚಿತ್ರರಂಗಕ್ಕೆ ಇದು ಮತ್ತೊಂದು ಸಮಸ್ಯೆ ಆಗಿದೆ. ಸಿನಿಮಾ ನೋಡಲು ಜನ ಬರದೇ ಸಾಕಷ್ಟು ಚಿತ್ರಮಂದಿರಗಳು ನೆಲಸಮವಾಗಿವೆ. ಕೊನೆ ಪಕ್ಷ ಟಿಕೆಟ್ ದರ ಕಮ್ಮಿ ಮಾಡಿದರೆ ಜನ ಚಿತ್ರಮಂದಿರಗಳಿಗೆ ಬರುತ್ತಾರೆ ಎನ್ನುವ ಆಶಾಭಾವನೆ ಕೆಲವರದ್ದು.

ಒಂದು ಕುಟುಂಬದ ನಾಲ್ಕು ಜನ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಬರಬೇಕು ಅಂದ್ರೆ 1500 ರೂಪಾಯಿಯಿಂದ 2000 ರೂಪಾಯಿ ಖರ್ಚು ಮಾಡಬೇಕು ಎನ್ನುವಂತಾಗಿದೆ. ಇದೇ ಕಾರಣಕ್ಕೆ ಚಿಕ್ಕ ಚಿತ್ರಗಳನ್ನು ನೋಡಲು ಜನ ಚಿತ್ರಮಂದಿರಗಳಿಗೆ ಬರ್ತಿಲ್ಲ. ದೊಡ್ಡ ಚಿತ್ರಗಳು ಬಂದಾಗ ಮಾತ್ರ ನೋಡ್ತೀವಿ ಎನ್ನುಚ ಮನಸ್ಥಿತಿ ಬೆಳೆಸಿಕೊಂಡಿದ್ದಾರೆ. ಸದ್ಯ ಕನ್ನಡದ ಹೊಚ್ಚ ಹೊಸ ಕನ್ನಡ ಚಿತ್ರವನ್ನು ಬರೀ 99 ರೂಪಾಯಿಗೆ ನೋಡುವ ಅವಕಾಶ ಸಿಗುತ್ತಿದೆ.
ಹೌದು ಅನೀಶ್ ನಟನೆಯ 'ಆರಾಮ್ ಅರವಿಂದ್ ಸ್ವಾಮಿ' ಸಿನಿಮಾ ನವೆಂಬರ್ 22ಕ್ಕೆ ತೆರೆಗೆ ಬರಲಿದೆ. ಈ ಚಿತ್ರವನ್ನು 99 ರೂಪಾಯಿ ಕೊಟ್ಟು ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ನೋಡಬಹುದು ಎಂದು ಚಿತ್ರತಂಡ ಘೋಷಿಸಿದೆ. ಈ ಆಫರ್ ಮೊದಲ 3 ದಿನಗಳ ಕಾಲ ಮಾತ್ರ ಇರುತ್ತದೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ಇಂಥಾದೊಂದು ಪ್ರಯತ್ನ ಮಾಡುತ್ತಿದೆ ಚಿತ್ರತಂಡ.
'ನಮ್ ಗಣಿ ಬಿಕಾಂ ಪಾಸ್', 'ಗಜಾನನ ಅಂಡ್ ಗ್ಯಾಂಗ್ ' ರೀತಿಯ ಇಂಟ್ರೆಸ್ಟಿಂಗ್ ಚಿತ್ರಗಳನ್ನು ಕಟ್ಟಿಕೊಟ್ಟಿದ್ದ ಅಭಿಷೇಕ್ ಶೆಟ್ಟಿ ಇದೀಗ 'ಆರಾಮ್ ಅರವಿಂದ್ ಸ್ವಾಮಿ' ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದಾರೆ. ಈ ರೊಮ್ಯಾಂಟಿಕ್ ಕಾಮಿಡಿ ಎಂಟರ್ಟೈನರ್ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ವೈವಿಬಿ ಶಿವಸಾಗರ್ ಛಾಯಾಗ್ರಹಣ ಚಿತ್ರಕ್ಕಿದ್ದು ಶ್ರೀಕಾಂತ್ ಪ್ರಸನ್ನ ಹಾಗೂ ಪ್ರಶಾಂತ್ ರೆಡ್ಡಿ ಹಣ ಹೂಡಿದ್ದಾರೆ.

ಅನೀಶ್ ತೇಜೇಶ್ವರ್ ನಟನೆಯ ಯಾವುದೇ ಸಿನಿಮಾ ಕೈ ಹಿಡಿಯುತ್ತಿಲ್ಲ. ಅರವಿಂದ ಸ್ವಾಮಿ ಆಗಿ ಈ ಬಾರಿ ಗೆಲ್ಲುವ ಲೆಕ್ಕಾಚಾರದಲ್ಲಿದ್ದಾರೆ. ಚಿತ್ರದಲ್ಲಿ ಮಿಲನ ನಾಗರಾಜ್ ಹಾಗೂ ಹೃತಿಕಾ ಶ್ರೀನಿವಾಸ್ ನಾಯಕಿಯರಾಗಿ ಮಿಂಚಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದ್ದು ಶೀಘ್ರದಲ್ಲೇ ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀತಿದೆ.
ಕೆಲ ದಿನಗಳ ಹಿಂದೆ ಬಿಡುಗಡೆ ಆಗಿದ್ದ 'ಮುಂದೆ ಏನೋ ಹೇಗೋ' ಎಂಬ ಹಾಡಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಚಿತ್ರದಲ್ಲಿ ಮಿಲನಾ ಮಲಯಾಳಿ ಟೀಚರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ಪೊಲೀಸ್ ಕ್ವಾಟರ್ಸ್' ಚಿತ್ರದ ಮೂಲಕ ಅನೀಶ್ ಚಿತ್ರರಂಗಕ್ಕೆ ಬಂದರು. ಮುಂದೆ 'ನಮ್ ಏರಿಯಾಲ್ ಒಂದ್ ದಿನ', 'ಕಾಫಿ ವಿತ್ ಮೈ ವೈಫ್', 'ಅಕಿರಾ', 'ವಾಸು- ನಾನ್ ಪಕ್ಕಾ ಲೋಕಲ್', 'ರಾಮಾರ್ಜುನ' ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದರು. 'ರಾಮಾರ್ಜುನ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದರೂ ಪ್ರಯೋಜನವಾಗಲಿಲ್ಲ. ಈ ಬಾರಿ ಪ್ರೇಕ್ಷಕರು ಕೈ ಹಿಡಿಯುತ್ತಾರಾ? ಕಾದು ನೋಡಬೇಕಿದೆ.


Click it and Unblock the Notifications











