ಶುರುವಾಯಿತು ಐಪಿಎಲ್; ಬೆಟ್ಟಿಂಗ್ ಪ್ರಿಯರಿಗೆ ಬುದ್ದಿ ಮಾತು ಹೇಳಿದ ನಟ ದರ್ಶನ್!
ನಿನ್ನೆ ( ಮಾರ್ಚ್ 31 ) ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಉದ್ಘಾಟನೆ ಅದ್ದೂರಿಯಾಗಿ ನಡೆಯಿತು. ಗುಜರಾತ್ನ ಅಹಮದಾಬಾದ್ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯರ್ ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಪಂದ್ಯ ಜರುಗಿತು.
ಈ ಪಂದ್ಯಕ್ಕೂ ಮುನ್ನ ನಡೆದ ಈ ಬಾರಿಯ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿನಿಮಾ ನಟಿಯರಾದ ರಶ್ಮಿಕಾ ಮಂದಣ್ಣ ಹಾಗೂ ತಮನ್ನಾ ಭಾಟಿಯಾ ವಿವಿಧ ಹಾಡುಗಳಿಗೆ ಹೆಜ್ಜೆ ಹಾಕುವುದರ ಮೂಲಕ ಮನರಂಜನೆ ನೀಡಿದರು. ಗಾಯಕ ಹಾಗೂ ಸಂಯೋಜಕ ಅರಿಜಿತ್ ಸಿಂಗ್ ಲೈವ್ನಲ್ಲಿ ಹಾಡುಗಳನ್ನು ಹಾಡಿ ನೆರೆದಿದ್ದ ಕ್ರೀಡಾಭಿಮಾನಿಗಳನ್ನು ತಲೆದೂಗುವಂತೆ ಮಾಡಿದರು.

ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳನ್ನು ಇಷ್ಟರ ಮಟ್ಟಿಗೆ ಅದ್ದೂರಿಯಾಗಿ ಉದ್ಘಾಟಿಸಲು ಕಾರಣ ಆ ಟೂರ್ನಿಯಿಂದ ಬರುವ ಹಣದ ಹೊಳೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಹೌದು, ಕ್ರಿಕೆಟ್ ಆಟದ ಹಿಂದೆ ವ್ಯವಹಾರವಿದೆ, ಲಾಭದ ದೂರಾಲೋಚನೆ ಇದೆ ಎಂಬುದು ಹಿಂದಿನಿಂದಲೂ ಇರುವ ಅಂಶವೇ. ಆದರೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾದ ಬಳಿಕ ಕ್ರಿಕೆಟ್ ಸಂಪೂರ್ಣ ಕಮರ್ಷಿಯಲ್ ಆಗಿಬಿಟ್ಟಿದೆ.
ಆಟಗಾರರರನ್ನು ಖರೀದಿಸಲು ವಿವಿಧ ಫ್ರಾಂಚೈಸಿಗಳು ಕೋಟಿ ಕೋಟಿ ರೂಪಾಯಿಗಳನ್ನು ಸುರಿದು ಬಿಡ್ಡಿಂಗ್ ನಡೆಸಿ ಖರೀದಿಸಿದರೆ, ಈ ಆಟಗಾರರ ಆಟವನ್ನು ನಂಬಿ ಕ್ರಿಕೆಟ್ ಪ್ರೇಮಿಗಳು ಬೆಟಿಂಗ್ ಕಟ್ಟಿ ಹಣ ಸಂಪಾದಿಸಲು ಯತ್ನಿಸುತ್ತಾರೆ. ಇನ್ನು ಬೆಟ್ಟಿಂಗ್ ಭಾರತದಲ್ಲಿ ಬ್ಯಾನ್ ಎಂಬ ಕಾನೂನು ಇದ್ದರೂ ಸಹ ಇದಕ್ಕಿಂತ ಸುಲಭವಾಗಿ ಬೆಟ್ಟಿಂಗ್ ಕಟ್ಟಬಹುದಾದಂತಹ ಅಪ್ಲಿಕೇಶನ್ಗಳು ಮೊಬೈಲ್ನಲ್ಲಿಯೇ ಲಭ್ಯವಿವೆ.

ಹೀಗೆ ಆನ್ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ಗಳಿರುವುದರಿಂದ ಬೆಟ್ಟಿಂಗ್ ಪ್ರಿಯರಿಗೆ ಕೆಲಸ ಇನ್ನೂ ಸುಲಭವಾಗಿಬಿಟ್ಟಿದೆ. ಅದರಲ್ಲೂ ಐಪಿಎಲ್ ಶುರುವಾದರೆ ಸಾಕು ಬೆಟ್ಟಿಂಗ್ ಕಟ್ಟುವವರ ಸಂಖ್ಯೆ ಹೆಚ್ಚೇ ಇರಲಿದೆ. ಈ ಬಾರಿಯೂ ಸಹ ಈ ಬೆಟ್ಟಿಂಗ್ ರಾಜರ ಹಾವಳಿ ಹೆಚ್ಚೇ ಇದ್ದು, ಹಲವರು ಬೆಟ್ಟಿಂಗ್ ವ್ಯಸನಕ್ಕೆ ಒಳಗಾಗಿ ಹಣ ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇನ್ನು ಕೆಲ ಸಿನಿಮಾ ತಾರೆಯರು ಸಂಭಾವನೆ ಪಡೆದು ಬೆಟ್ಟಿಂಗ್ ಅಪ್ಲಿಕೇಶನ್ಗಳ ಜಾಹೀರಾತಿನಲ್ಲಿ ಅಭಿನಯಿಸಿ ಬೆಟ್ಟಿಂಗ್ ಆಡಲು ಪ್ರೇರೇಪಿಸಿದರೆ, ಇನ್ನೂ ಕೆಲ ಸೆಲೆಬ್ರಿಟಿಗಳು ಬೆಟ್ಟಿಂಗ್ ಒಳ್ಳೆಯದಲ್ಲ, ಬೆಟ್ಟಿಂಗ ಆಡಬೇಡಿ ಎಂದು ಸಂದೇಶ ನೀಡಿದ್ದಾರೆ.
ಈ ಸಾಲಿನಲ್ಲಿ ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಇದ್ದಾರೆ. ಸದ್ಯ ನಿನ್ನೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಶುರುವಾದ ಬೆನ್ನಲ್ಲೇ ದರ್ಶನ್ ಮಾತನಾಡಿರುವ ಹಳೆ ವಿಡಿಯೊವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ದರ್ಶನ್ ಬೆಟ್ಟಿಂಗ್ ಆಡಬೇಡಿ ಎಂದು ಈ ವಿಡಿಯೊದಲ್ಲಿ ಮನವಿ ಮಾಡಿಕೊಂಡಿದ್ದಾರೆ. "ಐಪಿಎಲ್ ಶುರುವಾಗ್ತಾ ಇದ್ದಂತೆ ಎಲ್ಲರೂ ಬೆಟ್ಟಿಂಗ್ ಮೇಲೆ ಕೂತಿರುತ್ತಾರೆ. ಮ್ಯಾಚ್ ನೋಡೋದಕ್ಕಿಂತ ಹೆಚ್ಚಾಗಿ ಬೆಟ್ಟಿಂಗ್ ಕಟ್ತಾ ಇರುತ್ತಾರೆ. ಸಾಲ ಸೋಲ ಮಾಡ್ತಾರೆ. ಇವತ್ತು ಒಬ್ಬನ ಬಳಿ ಸಾಲ ಮಾಡಿ ನಾಳೆ ಅದನ್ನು ತೀರಿಸಿಬಿಡಬೇಕು ಎಂದೆಲ್ಲಾ ಯೋಜನೆ ಇರುತ್ತವೆ. ಹಾಗಾಗಿ ಐಪಿಎಲ್ನ ಒಂದು ಮ್ಯಾಚ್ ನೋಡಿ, ಎಂಜಾಯ್ ಮಾಡಿ. ಆಟಗಾರರು ಕಷ್ಟಪಟ್ಟು ತಮ್ಮ ತಂಡ ಗೆಲ್ಲಬೇಕು ಅಂತ ಕಷ್ಟಪಟ್ಟು ಆಡ್ತಾ ಇರುತ್ತಾರೆ. ನೀವು ನಿಮ್ಮ ಲೈಫ್ನ ಹಾಳು ಮಾಡಿಕೊಳ್ಳಬೇಡಿ" ಎಂದು ದರ್ಶನ್ ಹೇಳಿಕೆ ನೀಡಿದ್ದರು.


Click it and Unblock the Notifications











