'ಭೈರತಿ ರಣಗಲ್' ಚಿತ್ರದ ಎಕ್ಸ್ಕ್ಲೂಸಿವ್ ಡೈಲಾಗ್ ಹೊಡೆದ ಶಿವಣ್ಣ
ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ನಟನೆಯ 'ಭೈರತಿ ರಣಗಲ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ನರ್ತನ್ ನಿರ್ದೇಶನದ ಈ ಆಕ್ಷನ್ ಎಂಟರ್ಟೈನರ್ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇತ್ತೀಚೆಗೆ ಸಣ್ಣ ಟೀಸರ್ ಬಂದು ಕುತೂಹಲ ಹೆಚ್ಚಿಸಿದೆ. ನವೆಂಬರ್ 15ಕ್ಕೆ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಲಿದೆ.
ಸೂಪರ್ ಹಿಟ್ 'ಮಫ್ತಿ' ಪ್ರೀಕ್ವೆಲ್ ಆಗಿರುವ 'ಭೈರತಿ ರಣಗಲ್' ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಶ್ರೀಮುರಳಿ- ಶಿವಣ್ಣ ನಟಿಸಿದ್ದ 'ಮಫ್ತಿ' ಸಿನಿಮಾ 5 ವರ್ಷಗಳ ಹಿಂದೆ ದಾಖಲೆ ಬರೆದಿತ್ತು. ಬಹಳ ದಿನಗಳಿಂದ ಪ್ರೀಕ್ವೆಲ್ಗಾಗಿ ಸಿನಿರಸಿಕರು ಕಾಯುತ್ತಿದ್ದರು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸೆಪ್ಟೆಂಬರ್ 27ಕ್ಕೆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಜೊತೆ ಕ್ಲ್ಯಾಶ್ ಬೇಡ ಎಂದು ಶಿವಣ್ಣ ತಮ್ಮ ಸಿನಿಮಾ ರಿಲೀಸ್ ಮುಂದೂಡಿದ್ದರು.

ಟೀಸರ್, ಸಾಂಗ್ಸ್ ರಿಲೀಸ್ ಮಾಡಿ 'ಭೈರತಿ ರಣಗಲ್' ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಮಾಡಲಾಗುತ್ತಿದೆ. 'ಮಫ್ತಿ' ಸಕ್ಸಸ್ ಈ ಚಿತ್ರಕ್ಕೆ ಪ್ಲಸ್ ಆಗಲಿದೆ. ನರ್ತನ್ ನಿರ್ದೇಶನದ ಮೇಲೆ ಭಾರೀ ನಂಬಿಕೆ ಅಭಿಮಾನಿಗಳಿಗೆ ಇದೆ. ಆ ಚಿತ್ರದಲ್ಲಿ ನಟಿಸಿದ್ದ ಕೆಲ ಪಾತ್ರಗಳು ಇಲ್ಲಿ ಮುಂದುವರೆಯಲಿದೆ. 'ಮಫ್ತಿ' ಚಿತ್ರದಲ್ಲಿ ಜಬರ್ದಸ್ತ್ ಡೈಲಾಗ್ಸ್ ಹೈಲೆಟ್ ಆಗಿತ್ತು.
'ಮಫ್ತಿ' ಚಿತ್ರದಲ್ಲಿ ಶಿವಣ್ಣನಿಗೆ ಡೈಲಾಗ್ಸ್ ಕಮ್ಮಿ ಇತ್ತು. ಆದರೆ ಹೇಳುವ ಒಂದೊಂದು ಡೈಲಾಗ್ ಇಂದಿಗೂ ಅಭಿಮಾನಿಗಳ ನೆನಪಿನಲ್ಲಿ ಉಳಿದಿದೆ. ಪ್ರೀಕ್ವೆಲ್ನಲ್ಲಿ ಕೂಡ ಅದೇ ರೀತಿ 'ಭೈರತಿ ರಣಗಲ್' ಮಾತು ಕಮ್ಮಿ. ಆದರೆ ಮಾತನಾಡುವ ಒಂದೊಂದು ಮಾತು ಕೇಳುಗರ ಮನಸ್ಸಿಗೆ ನಾಟುವಂತಿದೆ. ಇತ್ತೀಚೆಗೆ ಬಂದ ಟೀಸರ್ನಲ್ಲಿ ಯಾವುದೇ ಡೈಲಾಗ್ ಇರಲಿಲ್ಲ. ಬರೀ ಕಣ್ಣಲ್ಲೇ ಶಿವಣ್ಣ ಮೋಡಿ ಮಾಡಿದ್ದರು. ಆದರೆ ಇದೀಗ ಒಂದು ಡೈಲಾಗ್ ರಿವೀಲ್ ಆಗಿದೆ.
ಜೀ ಕನ್ನಡ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಶಿವರಾಜ್ಕುಮಾರ್ ಅತಿಥಿಯಾಗಿ ಹೋಗಿದ್ದರು. ಈ ವೇಳೆ ವೇದಿಕೆಯಲ್ಲಿ ಚಿತ್ರದ ಎಕ್ಸ್ಕ್ಲೂಸಿವ್ ಡೈಲಾಗ್ ಹೊಡೆದಿದ್ದಾರೆ. ಎದುರಾಳಿ ಕೈಯಲ್ಲಿ ಮಣ್ಣು ಹಿಡಿದು ಈ ರೋಣಾಪುರ ನಂದು, ಅಂತಾನೆ. ಆಗ "ಈ ಮಣ್ಣನ್ನು ಎರಡು ಸೆಕೆಂಡ್ ನಿನ್ನ ಕೈಯಲ್ಲಿ ಬಿಡಲಿಲ್ಲ, ಇನ್ನು ರೋಣಾಪುರ ಬಿಡ್ತೀನಾ? ನಿನಗೆ ಈ ಮಣ್ಣು ಹಣ, ಆದರೆ ನನಗೆ ಸಾವಿರ ಜನರ ಪ್ರಾಣ" ಎನ್ನುವ ಖಡಕ್ ಡೈಲಾಗ್ ಹೇಳಿದ್ದಾರೆ.
ಶಿವಣ್ಣನ ವಾಯ್ಸ್ನಲ್ಲಿ ಈ ಕ್ಲಾಸ್ ಅಂಡ್ ಮಾಸ್ ಡೈಲಾಗ್ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಸಿನಿಮಾ ನೋಡಬೇಕು ಎನ್ನುವ ತವಕ ಹೆಚ್ಚುವಂತೆ ಆಗಿದೆ. ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಸಹೋದರಿಯಾಗಿ ಛಾಯಾಸಿಂಗ್ ಮುಂದುವರೆದಿದ್ದಾರೆ. ಇನ್ನುಳಿದಂತೆ ಅವಿನಾಶ್, ದೇವರಾಜ್ ಸೇರಿದಂತೆ ಘಟಾನುಘಟಿ ಕಲಾವಿದರು ತಾರಾಬಳಗದಲ್ಲಿದ್ದಾರೆ. ರವಿ ಬಸ್ರೂರು ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣ 'ಭೈರತಿ ರಣಗಲ್' ಚಿತ್ರಕ್ಕಿದೆ.
'ಮಫ್ತಿ' ಸಕ್ಸಸ್ ಬೆನ್ನಲ್ಲೇ ಪ್ರೀಕ್ವೆಲ್ ಬಗ್ಗೆ ಶಿವಣ್ಣ ಮಾತನಾಡಿದ್ದರು. ತಮ್ಮ ಬ್ಯಾನರ್ನಲ್ಲಿ ಇದೇ ಮೊದಲ ಸಿನಿಮಾ ಆಗುತ್ತದೆ. ನನ್ನ 125ನೇ ಸಿನಿಮಾ 'ಭೈರತಿ ರಣಗಲ್' ಎಂದಿದ್ದರು. ಆದರೆ ಕೊಂಚ ತಡವಾಗಿ ಆದರೂ ಸಿನಿಮಾ ಸಿದ್ಧವಾಗಿದೆ. 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. 'ಮಫ್ತಿ' ಚಿತ್ರವನ್ನು ಕನ್ನಡದಲ್ಲೇ ನೋಡಿ ಪರಭಾಷಿಕರು ಮೆಚ್ಚಿಕೊಂಡಿದ್ದಾರೆ. ಹಾಗಾಗಿ ಈ ಚಿತ್ರವೂ ಇಷ್ಟವಾಗುತ್ತದೆ ಎನ್ನುವ ನಿರೀಕ್ಷೆ ಚಿತ್ರತಂಡಕ್ಕಿದೆ. ಈಗಾಗಲೇ ಚಿತ್ರದ ಪ್ರಮೋಷನ್ ಶುರುವಾಗಿದೆ. ಶ್ರೀಮುರಳಿ ನಟನೆಯ 'ಬಘೀರ' ಚಿತ್ರತಂಡದ ಜೊತೆ ಸೇರಿ ಶಿವಣ್ಣ 'ಭೈರತಿ ರಣಗಲ್' ಪ್ರಮೋಷನ್ ಆರಂಭಿಸಿದ್ದಾರೆ.


Click it and Unblock the Notifications











