ಈ ಕನ್ನಡ ಸಿನಿಮಾ ನೋಡಿದ್ರೆ ನಿಮಗೆ ಸಿಗುತ್ತೆ 5 ಲಕ್ಷ ರೂಪಾಯಿ!
ಸಿನಿಮಾ ಮಾಡುವುದು ಸುಲಭ. ಅದನ್ನು ಜನರಿಗೆ ತಲುಪಿಸುವುದು ಕಷ್ಟ ಎನ್ನುವ ಅಭಿಪ್ರಾಯ ಸಿನಿಮಾ ಮೇಕರ್ ಗಳದ್ದಾಗಿದೆ. ಅದೇ ಕಾರಣದಿಂದ ಸಿನಿಮಾವನ್ನು ಪ್ರಚಾರ ಮಾಡಲು ಹೊಸ ಹೊಸ ಪ್ಲಾನ್ ಗಳ ಮೂಲಕ ಚಿತ್ರತಂಡಗಳು ಬರುತ್ತಿವೆ.
ಇದೀಗ ಒಂದು ಚಿತ್ರತಂಡ ಸಿನಿಮಾವನ್ನು ನೋಡುವವರಿಗೆ ಬಹುಮಾನವಾಗಿ ಹಣವನ್ನು ನೀಡುತ್ತಿದೆ. ಸಿನಿಮಾ ನೋಡಿದವವರಿಗಾಗಿ 1 ಕೋಟಿ ಹಣವನ್ನು ಮೀಸಲು ಇಟ್ಟಿದೆ. ಇತ್ತೀಚಿಗಷ್ಟೆ 'ಒಡೆಯ' ಸಿನಿಮಾ ನೋಡಿದ ಅದೃಷ್ಟಶಾಲಿಗೆ ಬೈಕ್ ನೀಡಿತ್ತು. ಇದೀಗ ಮತ್ತೊಂದು ತಂಡ ಅದೇ ರೀತಿಯ ಯೋಜನೆಯಲ್ಲಿ ಬಂದಿದೆ.
ಈ ರೀತಿ ಚಿತ್ರವನ್ನು ವಿಭಿನ್ನವಾಗಿ ಜನರಿಗೆ ತಲುಪಿಸುತ್ತಿರುವ ಈ ಸಿನಿಮಾ 'ಶ್ರೀ ಭರತ ಬಾಹುಬಲಿ'. ಈ ಸಿನಿಮಾ ನೋಡಿದರೆ 5 ಲಕ್ಷ ನೀಡುವುದಾಗಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡ ತಿಳಿಸಿದೆ.

20 ಅದೃಷ್ಟಶಾಲಿಗಳಿಗೆ ಅವಕಾಶ
'ಶ್ರೀ ಭರತ ಬಾಹುಬಲಿ' ಸಿನಿಮಾ ಇದೇ ತಿಂಗಳು ಬಿಡುಗಡೆ ಆಗುತ್ತಿದೆ. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡುವ 20 ಅದೃಷ್ಟಶಾಲಿಗಳಿಗೆ ತಲಾ 5 ಲಕ್ಷ ನೀಡಲಾಗುತ್ತದೆ. ಚಿತ್ರಮಂದಿರದಲ್ಲಿ ಟಿಕೆಟ್ ಜೊತೆಗೆ ಐಶ್ವರ್ಯ ಫಿಲ್ಮ್ಸ್ ಪ್ರೊಡಕ್ಷನ್ಸ್ ಕಡೆಯಿಂದ ಟೋಕನ್ ನೀಡಲಾಗುವುದು. ಅದರಲ್ಲಿ 20 ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗುವುದು.

ಒಬ್ಬರಿಗೆ 5 ಲಕ್ಷ ಬಹುಮಾನ
ಸಿನಿಮಾದ ಈ ಚಟುವಟಿಕೆಗೆ 1 ಕೋಟಿ ಹಣವನ್ನು ನಿರ್ಮಾಪಕ ಶಿವಪ್ರಕಾಶ್ ಮೀಸಲಿಟ್ಟಿದ್ದಾರಂತೆ. ಒಬ್ಬರಿಗೆ 5 ಲಕ್ಷದಂತೆ 1 ಕೋಟಿಯನ್ನು 20 ಜನರಿಗೆ ಹಂಚಲಾಗುವುದು. 10 ಕಾರ್ ಗಳು ಹಾಗೂ 10 ಬಂಗಾರದ ಒಡವೆಗಳನ್ನು ಅದೃಷ್ಟಶಾಲಿಗಳಿಗೆ ನೀಡಲಾಗುವುದು. ಸಿನಿಮಾದ ಪ್ರಮೋಷನ್ಸ್ ಹಣವನ್ನು ಮಿತಿಯಾಗಿ ಖರ್ಚು ಮಾಡಿ, ಅದೇ ಹಣವನ್ನು ಪ್ರೇಕ್ಷಕರಿಗೆ ನೀಡಲಾಗುತ್ತಿದೆ.

ಹೆಣ್ಣುಮಕ್ಕಳಿಗೆ ಬಂಗಾರ
ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಚಿತ್ರಮಂದಿರಕ್ಕೆ ಬರುವುದು ಕಡಿಮೆ. ಹೀಗಾಗಿ, ತಮ್ಮ ಸಿನಿಮಾವನ್ನು ಹೆಣ್ಣು ಮಕ್ಕಳು ನೋಡಬೇಕು ಎನ್ನುವುದು ಚಿತ್ರತಂಡದ ಆಸೆಯಾಗಿದೆ. ಅದೇ ಕಾರಣಕ್ಕೆ ಬಂಗಾರವನ್ನು ನೀಡುತ್ತಿದೆ. 5 ಲಕ್ಷ ಬೆಲೆಬಾಳುವ ಚಿನ್ನ 10 ಅದೃಷ್ಟಶಾಲಿಗಳಿಗೆ ಸಿಗಲಿದೆ. ತಮ್ಮ ಸಿನಿಮಾವನ್ನು ಈ ರೀತಿಯಲ್ಲಿ ಜನರಿಗೆ ಚಿತ್ರತಂಡ ತಲುಪಿಸುತ್ತಿದೆ.

ಜನವರಿ 17ಕ್ಕೆ ರಿಲೀಸ್
'ಶ್ರೀಭರತ ಬಾಹುಬಲಿ' ಸಿನಿಮಾ ಜನವರಿ 17ಕ್ಕೆ ರಿಲೀಸ್ ಆಗುತ್ತಿದೆ. ಮಂಜು ಮಾಂಡವ್ಯ ಈ ಸಿನಿಮಾದ ನಟನೆ ಹಾಗೂ ನಿರ್ದೇಶನ ಮಾಡಿದ್ದಾರೆ. ಚಿಕ್ಕಣ್ಣ ಚಿತ್ರದಲ್ಲಿ ಬಾಹುಬಲಿಯಾಗಿದ್ದಾರೆ. ಸರಾ ಹರೀಶ್ ಸಿನಿಮಾದ ನಾಯಕಿಯಾಗಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ.


Click it and Unblock the Notifications











