ಬೇಡಿಕೆ ಈಡೇರದಿದ್ದರೆ ಚಿತ್ರಮಂದಿರ ತೆರೆಯುವುದಿಲ್ಲ: ಚಿತ್ರಮಂದಿರ ಮಾಲೀಕರ ಮಹಾಮಂಡಳ
ಪಕ್ಕದ ಕೆಲವು ರಾಜ್ಯಗಳಲ್ಲಿರುವಂತೆ ಚಿತ್ರಮಂದಿರ ಮಾಲೀಕರು ಹಾಗೂ ನಿರ್ಮಾಪಕರ ನಡುವೆ ಸರಾಸರಿ ಲಾಭ ಹಂಚಿಕೆ ವ್ಯವಸ್ಥೆಯನ್ನು ರಾಜ್ಯದಲ್ಲೂ ಜಾರಿಗೆ ತರದಿದ್ದರೆ ಚಿತ್ರ ಪ್ರದರ್ಶನ ಆರಂಭಿಸುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಅಧ್ಯಕ್ಷ ಆರ್.ಆರ್.ಓದುಗೌಡರ ಹೇಳಿದರು.
ಮಂಗಳವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಂಗಲ್ ಸ್ಕ್ರೀನ್ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನಕ್ಕೆ ನಿಗಧಿತ ದರವನ್ನು (ಸಿನಿಮಾ ಪ್ರದರ್ಶನ ಬಾಡಿಗೆ) ನಿಮಾರ್ಪಕರು ಅಥವಾ ವಿತರಕರು ನೀಡುತ್ತಾರೆ. ಇದು ನಾವು ಮೊದಲೇ ಮುಂಗಡವಾಗಿ ನೀಡುವ ಹಣಕ್ಕಿಂತ ಕಡಿಮೆಯಾಗಿರುತ್ತದೆ. ಇದರಿಂದ ನಿರೀಕ್ಷಿತ ಆದಾಯ ಬರುತ್ತಿಲ್ಲ. ನಿರ್ವಹಣೆ ಸಹ ಕಷ್ಟ. ಇದರಿಂದಾಗಿ ಚಿತ್ರ ಮಂದಿರಗಳು ನಷ್ಟದಲ್ಲಿವೆ ಎಂದರು.
ಈ ಬಗ್ಗೆ ನಿಮಾರ್ಪಕರೊಂದಿಗೆ ಹಲವು ಭಾರಿ ಸಭೆ ನಡೆಸಿ, ಚರ್ಚಿಸಲಾಗಿದೆ. ಸಮೀಪದ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕೇರಳದಲ್ಲಿ ನೀಡಲಾಗುತ್ತಿರುವ ಮಾದರಿಯಲ್ಲಿ ಪ್ರೇಕ್ಷಕರ ಆಧಾರದ ಮೇಲೆ ಹಣ ಹಂಚಿಕೆ ಮಾಡಬೇಕೆಂದು ಮನವಿ ಮಾಡಿದ್ದೇವೆ. ನಮ್ಮ ಬೇಡಿಕೆ ಈಡೇರಿಸುವವರಿಗೂ ಚಿತ್ರ ಪ್ರದರ್ಶನ ಆರಂಭಿಸುವುದಿಲ್ಲ ಎಂದು ತಿಳಿಸಿದರು.

ಮಲ್ಟಿಪ್ಲೆಕ್ಸ್ನಲ್ಲಿ ಶೇ.50 ಅನುಪಾತದಲ್ಲಿ ಹಣ ಹಂಚಿಕೆಯಾಗುತ್ತಿದೆ. ನಮಗೆ ಇಷ್ಟು ಬೇಡ, ನಟ ಮತ್ತು ಚಿತ್ರಕ್ಕೆ ಅನುಗುಣವಾಗಿ ಟಿಕೆಟ್ ಸಂಗ್ರಹದಲ್ಲಿನ ಹಣ ಹಂಚಿಕೆಯಾಗಬೇಕೆಂಬುದು ನಮ್ಮ ಬೇಡಿಕೆ ಎಂದು ತಿಳಿಸಿದರು.
2004ಕ್ಕೂ ಮುನ್ನ ರಾಜ್ಯದಲ್ಲಿ 1800 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿದ್ದವು. ಈಗ 589ಕ್ಕೆ ಇಳಿಕೆಯಾಗಿದೆ. ತಮಿಳುನಾಡಿನಲ್ಲಿ 2100, ಆಂಧ್ರ ಮತ್ತು ತೆಲಂಗಾಣದಲ್ಲಿ 2150 ಮತ್ತು ಕೇರಳದಲ್ಲಿ 1950 ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಇದೆ. ಅಲ್ಲಿ ಚಿತ್ರ ಮಂದಿರಗಳು ಉಳಿದುಕೊಳ್ಳಲು ಪ್ರೇಕ್ಷಕರ ಆಧಾರದ ಮೇಲೆ ಹಣ ಹಂಚಿಕೆಯಾಗುತ್ತಿರುವುದು ಕಾರಣ. ಅಲ್ಲಿ ಹೊಸ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳ ನಿರ್ಮಾಣ ನಡೆಯುತ್ತಿದ್ದರೆ, ರಾಜ್ಯದಲ್ಲಿ ಚಿತ್ರ ಮಂದಿರಗಳು ಕಣ್ಮರೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕಮರ್ಷಿಲ್ ಕಾಂಪ್ಲೆಕ್ಸ್ಗೆ ಚಿಂತನೆ: ಉಪಾಧ್ಯಕ್ಷ ಎಂ.ಆರ್.ರಾಜರಾಮ್ ಮಾತನಾಡಿ, ನಮ್ಮ ತಾತ, ತಂದೆ ಆರಂಭಿಸಿದ ಚಿತ್ರ ಮಂದಿರ ಎಂದು ಭಾವನಾತ್ಮಕವಾಗಿ ಉಳಿಸಿಕೊಂಡಿವೆ. ಇದಕ್ಕಾಗಿ ಸಾಲ ಮಾಡಿ ಥಿಯೇಟರ್ಗಳನ್ನು ನಡೆಸುತ್ತಿದ್ದೇವೆ. ಇನ್ಮುಂದೆ ಸಾಲ ಮಾಡಿ ನಷ್ಟ ಅನುಭವಿಸಲು ಸಾಧ್ಯವಿಲ್ಲ. ಮೈಸೂರಿನಲ್ಲಿ ಮೂರು ಚಿತ್ರ ಮಂದಿರಗಳು ಮುಚ್ಚಿ, ಅದನ್ನು ವಾಣಿಜ್ಯ ಬಳಕೆಗೆ ಬಳಸಲು ಸಿದ್ಧರಿದ್ದಾರೆ. ಆದರೆ ನಾವು ಅವರನ್ನು ತಡೆದು, ನಿಮಾರ್ಪಕರ ನಿರ್ಧಾರಕ್ಕೆ ಕಾಯುತ್ತಿವೆ. ಅದಷ್ಟು ಬೇಗ ನಿಮಾರ್ಪಕರು ಒಳ್ಳೆಯ ತೀರ್ಮಾನ ತೆಗದುಕೊಳ್ಳಲಿ ಎಂದು ಹೇಳಿದರು.
ಈಗಾಗಲೇ ಕೊಳ್ಳೇಗಾಲದಲ್ಲಿ ಮುಚ್ಚಿದ ಚಿತ್ರ ಮಂದಿರವನ್ನು ವಾಣಿಜ್ಯ ಕಾಂಪ್ಲೆಕ್ಸ್ ಆಗಿ ರೂಪಾಂತರ ಮಾಡಿದ ಫಲವಾಗಿ ಮಾಲೀಕರಿಗೆ ಮಾಸಿಕ 3.50 ಲಕ್ಷ ಆದಾಯ ಬರುತ್ತಿದೆ. ಇದು ಇತರೆ ಚಿತ್ರಮಂದಿರ ಮಾಲೀಕರಿಗೆ ಮನವರಿಕೆಯಾಗಿದೆ. ಇದೇ ಮಾರ್ಗ ಅನುಸರಿಸುವ ತವಕದಲ್ಲಿದ್ದಾರೆ ಎಂದು ತಿಳಿಸಿದರು.


Click it and Unblock the Notifications











