ಚಿತ್ರಮಂದಿರ ತೆರೆದಾಗ ಹಳೆಯ ಹಿಟ್ ಸಿನಿಮಾಗಳ ಮರುಬಿಡುಗಡೆ: ಸಾ.ರಾ.ಗೋವಿಂದು
ಅಕ್ಟೋಬರ್ 15 ರಿಂದ ಚಿತ್ರಮಂದಿರಗಳನ್ನು ಪುನರ್ ತೆರೆಯಬಹುದು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಚಿತ್ರಮಂದಿರಗಳನ್ನು ತೆರೆಯಲು ಭರದ ಸಿದ್ಧತೆ ನಡೆಯುತ್ತಿವೆ.
ಆದರೆ ಚಿತ್ರಮಂದಿರಗಳನ್ನು ಪುನಃ ತೆರೆಯುವುದು ಸುಲಭದ ಕಾರ್ಯದಂತೆ ಕಾಣುತ್ತಿಲ್ಲ. ಹಲವು ಅಡ್ಡಿ-ಆತಂಕಗಳು ಚಿತ್ರಮಂದಿರ ಮಾಲೀಕರು, ಸಿನಿಮಾ ನಿರ್ಮಾಪಕರ ನಡುವೆ ಇವೆ.
ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿ ಅನ್ವಯ ಕೇವಲ 50% ಪ್ರೇಕ್ಷಕರಿಗೆ ಮಾತ್ರವೇ ಒಮ್ಮೆ ಚಿತ್ರಮಂದಿರ ಪ್ರವೇಶಿಸಲು ಅವಕಾಶವಿದೆ. ಚಿತ್ರಮಂದಿರದ ಒಟ್ಟು ಆಸನ ವ್ಯವಸ್ಥೆಯ ಅರ್ಧದಷ್ಟು ಮಾತ್ರವೇ ತುಂಬಿಸಲು ಅವಕಾಶ. ಅಲ್ಲಿಗೆ ಚಿತ್ರಮಂದಿರ ಮಾಲೀಕರಿಗೆ ಅರ್ಧ ಹಣವಷ್ಟೆ ಟಿಕೆಟ್ ರೂಪದಲ್ಲಿ ಬರಲಿದೆ.
ಅರ್ಧ ಚಿತ್ರಮಂದಿರ ತುಂಬುವುದರಿಂದ ಚಿತ್ರಮಂದಿರ ಮಾಲೀಕರಿಗೆ ಹಾಗೂ ನಿರ್ಮಾಪಕರು ಇಬ್ಬರಿಗೂ ನಿರೀಕ್ಷೆಯಷ್ಟು ಲಾಭ ಗಳಿಸಲಾಗದು, ಹಾಗಾಗಿ ಚಿತ್ರಮಂದಿರ ಪುನರ್ ಪ್ರಾರಂಭ ಆದಾಗ ಹೊಸ ಸಿನಿಮಾಗಳು ಬಿಡುಗಡೆ ಆಗುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.

ಹಳೆಯ ಹಿಟ್ ಸಿನಿಮಾಗಳ ಮರುಬಿಡುಗಡೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ನಿರ್ಮಾಪಕ ಸಾ.ರಾ.ಗೋವಿಂದು ಈ ಬಗ್ಗೆ ಮಾತನಾಡಿದ್ದು, 'ಚಿತ್ರಮಂದಿರ ಪುನರ್ ಪ್ರಾರಂಭ ಆದ ಮೊದಲಿಗೆ ಹಳೆಯ ಹಿಟ್ ಸಿನಿಮಾಗಳನ್ನೇ ಮತ್ತೆ ಬಿಡುಗಡೆ ಮಾಡಲಾಗುತ್ತದೆ' ಎಂದಿದ್ದಾರೆ.

ಯುಎಫ್ಓ-ಕ್ಯೂಬ್ ಜೊತೆ ಮಾತುಕತೆ: ಗೋವಿಂದು
ಯುಎಫ್ಓ ಹಾಗೂ ಕ್ಯೂಬ್ ಬಳಿ ಇರುವ ಹಿಟ್ ಸಿನಿಮಾಗಳನ್ನೇ ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ಬಗ್ಗೆ ಯುಎಫ್ಓ ಹಾಗೂ ಕ್ಯೂಬ್ ಜೊತೆಗೆ ಚರ್ಚೆ ಮಾಡಲಾಗುತ್ತದೆ ಎಂದಿದ್ದಾರೆ ಸಾರಾ ಗೋವಿಂದು.

ಟಿಕೆಟ್ ಬೆಲೆ ಹೆಚ್ಚಳ ಸರಿಯಲ್ಲ: ಗೋವಿಂದು
ಟಿಕೆಟ್ ಬೆಲೆ ಹೆಚ್ಚಳದ ಬಗ್ಗೆ ಎದ್ದಿದ್ದ ಊಹಾಪೋಹದ ಬಗ್ಗೆಯೂ ಮಾತನಾಡಿದ್ದು, ಕೊರೊನಾ ಕಾರಣದಿಂದ ಎಲ್ಲರೂ ನಷ್ಟದಲ್ಲಿದ್ದಾರೆ, ಹಾಗಾಗಿ ಸಿನಿಮಾ ಟಿಕೆಟ್ ದರ ಹೆಚ್ಚಿಸಿ ಜನರ ಮೇಲೆ ಹೊರೆ ಹಾಕುವುದು ಸರಿಯಲ್ಲ ಎಂದಿದ್ದಾರೆ ಸಾ.ರಾ.ಗೋವಿಂದು.
Recommended Video

ಸ್ಟಾರ್ ನಟರ ಸಿನಿಮಾಗಳ ಬಿಡುಗಡೆ ಇಲ್ಲ
ಸಿನಿಮಾ ಮಂದಿರಗಳು ಪುನಃ ಪ್ರಾರಂಭವಾದರೂ ಸಹ ಬಿಗ್ ಬಜೆಟ್ ಅಥವಾ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗುವುದಿಲ್ಲ ಎಂಬುದು ಬಹುತೇಕ ಖಾತ್ರಿಯಾಗಿದೆ. ಸಲಗ ಸಿನಿಮಾ ನಿರ್ಮಾಪಕ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ರಾಬರ್ಟ್ ನಿರ್ಮಾಪಕರೂ ಸಹ ಸಿನಿಮಾ ಬಿಡುಗಡೆಗೆ ತಯಾರಿಲ್ಲ ಎನ್ನಲಾಗಿದೆ.


Click it and Unblock the Notifications











