Don't Miss!
- Automobiles Google Maps: ಇವಿ ಮಾಲೀಕರೇ ಆತಂಕ ಬಿಡಿ... ಗೂಗಲ್ ಮ್ಯಾಪ್ಸ್ ಭರ್ಜರಿ ಅಪ್ಡೇಟ್!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- News Bengaluru Suburban Rail Project: ಹಳ್ಳ ಹಿಡಿದ ₹15,767 ಕೋಟಿ ವೆಚ್ಚದ ಕಾಮಗಾರಿ, ಜನಸಾಮಾನ್ಯರು ಹೇಳೋದೇನು ಗೊತ್ತಾ?
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವಶರಣೆ ಶಂಕಮ್ಮ, ಮಲೆ ಮಾದಪ್ಪನಿಗೆ ಅಪಚಾರ: ಚಂದನ್ ಶೆಟ್ಟಿ ತಪ್ಪು ಮಾಡಿದ್ದು ಎಲ್ಲಿ?
ಚಂದನ್ ಶೆಟ್ಟಿ ಈಗ ಮತ್ತೆ ವಿವಾದದ ಕೇಂದ್ರಬಿಂದು. ಚಂದನ್ ಶೆಟ್ಟಿ ಹಾಡಿರುವ 'ಕೋಲುಮಂಡೆ' ಹಾಡು ವಿವಾದ ಎಬ್ಬಿಸಿದೆ. ಮಲೆ ಮಾದಪ್ಪನ ಕತೆಯನ್ನು ತಿರುಚಲಾಗಿದೆ ಎಂಬ ಆರೋಪ ಚಂದನ್ ಶೆಟ್ಟಿ ಮೇಲೆ ಮಾಡಲಾಗಿದೆ.
Recommended Video
ಮಲೆಯ ಜನ ತಮ್ಮ ದೇವರನ್ನು ಸ್ತುತಿಸಲು, ಅವನ ಮಹಿಮೆ ಸಾರಲು ತಮ್ಮದೇ ಭಾಷೆಯಲ್ಲಿ ಕಟ್ಟಿಕೊಂಡ ಹಾಡು 'ಕೋಲುಮಂಡೆ ಜಂಗಮದೇವ'. ಇದನ್ನು ಕಂಸಾಳೆ ಹಾಡುಗಳೆಂದು, ಹಾಡುವವರನ್ನು ಕಂಸಾಳೆ ಕಲಾವಿದರೆಂದು ಗುರುತಿಸುವ ರೂಢಿ ಇದೆ. ಕನ್ನಡ ಜನಪದ ಪ್ರಪಂಚದ ಸಂಪತ್ತಾದ ಮಾದಪ್ಪನ ಕಾವ್ಯವನ್ನು ಮನೊರಂಜನೆ ಉದ್ದೇಶಕ್ಕೆ ತಮಗೆ ತೋಚಿದಂತೆ ದೃಶ್ಯರೂಪಕ್ಕೆ ತರುವುದರಲ್ಲಿಯೇ ಚಂದನ್ ಶೆಟ್ಟಿ ಅವರ ಅಸೂಕ್ಷ್ಮತನ ಜಾಹೀರಾಗುತ್ತದೆ.
ವಿವಾದಕ್ಕೆ ಕಿಡಿ ಹಚ್ಚಿದ 'ಕೋಲುಮಂಡೆ': ಚಂದನ್ ಶೆಟ್ಟಿ ವಿರುದ್ಧ ಸಿಡಿದೆದ್ದ ಮಹದೇಶ್ವರನ ಭಕ್ತರು
ಮಲೆ ಮಾದಪ್ಪ, ಶಿವಶರಣೆ ಶಂಕಮ್ಮನ ಕತೆ ಗೊತ್ತಿರುವ, ಕೇಳಿರುವ ಯಾರೇ ಆಗಲಿ ಚಂದನ್ ಶೆಟ್ಟಿಯ 'ಕೋಲುಮಂಡೆ' ಹಾಡು ನೋಡಿದರೆ ಸಿಟ್ಟಿಗೇಳದೇ ಇರರು. ಹಾಗಿದ್ದರೆ, ಚಂದನ್ ಶೆಟ್ಟಿ ಹಾಡಿನಲ್ಲಿ ಇರುವುದೇನು, ಮಾದಪ್ಪ-ಶಿವರಣೆ ಶಂಕಮ್ಮನ ಕತೆ ಏನು ತಿಳಿಯೋಣ ಬನ್ನಿ...
ಶಂಕಮ್ಮನ ಸಾಲಿನಿಂದ ಆಯ್ದುಕೊಳ್ಳಲಾದ ಕತೆ
ಬೃಹತ್ ಜನಪದ ಕಾವ್ಯವಾದ ಮಾದಪ್ಪನ ಕಾವ್ಯವನ್ನು ಕೆಲವು ವಿಭಾಗಗಳಾಗಿ ವಿಗಂಡಿಸಲಾಗಿದೆ. ಇವುಗಳನ್ನು ಸಾಲು ಅಥವಾ ಗ್ರಾಮ್ಯಕನ್ನಡದಲ್ಲಿ ಸೋಲುಗಳು ಎಂದು ಸಹ ಕರೆಯಲಾಗುತ್ತದೆ. ತಾಳುಗತೆ, ಶ್ರವಣದೊರೆ ಸಾಲು, ಜುಂಜೇಗೌಡನ ಸಾಲು, ಶಂಕಮ್ಮನಸಾಲು , ಇಕ್ಕೇರಿ ದೇವಮ್ಮನ ಸಾಲು , ಸರಗೂರಯ್ಯನ ಸಾಲು ಬೇವಿನಹಟ್ಟಿ ಕಾಳಿಯ ಸಾಲು ಇನ್ನೂ ಕೆಲವಿವೆ. ಚಂದನ್ ಶೆಟ್ಟಿಯ 'ಕೋಲುಮಂಡೆ' ಶಂಕಮ್ಮನ ಸಾಲಿನಿಂದ ಆಯ್ದುಕೊಳ್ಳಲಾಗಿದೆ.
ಶಿಭಕ್ತೆ ಶಂಕಮ್ಮ-ನೀಲಯ್ಯ ವಿವಾಹ
ಶಿವಭಕ್ತೆ ಶಂಕಮ್ಮ, ನೀಲಯ್ಯನನ್ನು ವಿವಾಹವಾಗುತ್ತಾಳೆ. ಒಮ್ಮೆ ನೀಲಪ್ಪ ಹೆಜ್ಜೇನು ಕಾಡಿಗೆ ಭೇಟೆಗೆ ಬರಲೆಂದು ಆಹ್ವಾನ ಬಂದಾಗ, ಶಂಕಮ್ಮನನ್ನು ಒಬ್ಬಳನ್ನೇ ಮನೆಯಲ್ಲಿ ಬಿಟ್ಟು ಒಂಬತ್ತು ತಿಂಗಳಾನುಗಟ್ಟಲೆ ಕಾಡಿಗೆ ಹೋಗಲು ಅನುಮಾನಗೊಳ್ಳುತ್ತಾನೆ ನೀಲಯ್ಯ.
ಬಲಗೈ ಭಾಷೆ ಕೇಳುವ ನೀಲಯ್ಯ
ನಾನು ಮನೆಯಲ್ಲಿಲ್ಲದಾಗ ಯಾರಾದರೂ ಬಳೆಗಾರ ಶೆಟ್ರು ಬರುತ್ತಾರೆ, ಬಳೆ ತೊಡಿಸಿ, ಬಣ್ಣದ ಮಾತುಗಳನ್ನಾಡಿ ನಿನ್ನನ್ನು ಮರುಳು ಮಾಡಿ ಕೊಂಡೊಯ್ಯುತ್ತಾರೆ ಎಂದು ಅನುಮಾನಪಟ್ಟು ಬಲಗೈ ಭಾಷೆ ಕೇಳುತ್ತಾನೆ. ಶಂಕಮ್ಮ ತನ್ನನ್ನು ಪತಿ ಅನುಮಾನಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಾಳೆ.
ಮಾದಪ್ಪನ ಕೃಪೆಗೆ ಪಾತ್ರಳಾಗುವ ಶಂಕಮ್ಮ
ಆಗ ನೀಲಯ್ಯನು ತನ್ನ ಮನೆಯ ಮುಂದೆ 22 ಮಂಡಲ ಮಾಡಿ, ಚೀಟಿ ಬರೆದಿಟ್ಟು, ರಾಕ್ಷಸ ಬೊಂಬೆ ಮಾಡಿ, ಶಂಕಮ್ಮನ ಬಟ್ಟೆ ಕಳಚಿ, ಸೊಪ್ಪಿನ ಬಟ್ಟೆ ತೊಡಿಸಿ, ಆಕೆಯ ಕೈಕಾಲು ಕಟ್ಟಿ ಹಾಕಿ ಭೇಟೆಗೆ ಹೊರಟು ಹೋಗುತ್ತಾನೆ. ಆಗ ಶಿವಶರಣೆ ಶಂಕಮ್ಮ ಮಾದಪ್ಪನನ್ನು ನೆನೆಸಿದಾಗ ಮಾದಪ್ಪನು ಬಂದು ಆಕೆಯನ್ನು ಕಷ್ಟದಿಂದ ಕಾಪಾಡುತ್ತಾನೆ. ಆಕೆಗೆ ಮಕ್ಕಳಾಗುವಂತೆ ವರವನ್ನೂ ಕೊಟ್ಟು, ಗುಡಿಸಲನ್ನು ಉಪ್ಪರಿಗೆ ಮನೆ ಮಾಡಿ, ಶಂಕಮ್ಮನಿಗೆ ಪಟ್ಟೆ ಸೀರೆ, ಆಭರಣಗಳನ್ನು ಕರುಣಿಸುತ್ತಾನೆ. ಕತೆ ಹೀಗೆಯೇ ಮುಂದೆ ಸಾಗುತ್ತದೆ.
ತಿರುಚಿ ತೋರಿಸಲಾಗಿರುವ ದೃಶ್ಯಗಳು
ಚಂದನ್ ಶೆಟ್ಟಿ ಯ 'ಕೋಲುಮಂಡೆ'ಯಲ್ಲಿನ ಮುಖ್ಯ ಸಮಸ್ಯೆಯೆಂದರೆ ಶಿವಶರಣೆ ಶಂಕಮ್ಮನನ್ನು ತೋರಿಸಿರುವ ರೀತಿ. ಅರೆ-ಬರೆ ಬಟ್ಟೆ ತೊಡಿಸಿ ಗ್ಲಾಮರ್ ಗೊಂಬೆಯಂತೆ ತೋರಿಸಲಾಗಿದೆ. ಅಷ್ಟೆ ಅಲ್ಲದೆ ಶಂಕಮ್ಮನು, ಬಳೆಗಾರ ಶೆಟ್ರೊಂದಿಗೆ ಸರಸಕ್ಕೆ ಮುಂದಾಗುತ್ತಿರುವಂತೆಯೂ ತೋರಿಸಲಾಗಿದೆ. ಮುಖ್ಯ ಅಪಚಾರ ಆಗಿರುವುದು ಇಲ್ಲಿಯೇ ಎಂಬುದು ಆರೋಪ.
ಯೂಟ್ಯೂಬ್ನಿಂದ ಹಾಡು ಹಿಂಪಡೆಯುತ್ತಾರಾ?
ಇದೀಗ ಚಂದನ್ ಶೆಟ್ಟಿ ತಾವು ಮಾಡಿರುವ ತಪ್ಪಿಗೆ ಕ್ಷಮಾಪಣೆ ಕೇಳಿದ್ದಾರೆ. ಹಾಡಿನಲ್ಲಿ ತಿದ್ದುಪಡಿ ಮಾಡುವುದಾಗಿ ಹೇಳಿದ್ದಾರೆ. ಇದೇ ಹಾಡಿನ ಮುಂದಿನ ಭಾಗ ಬರಲಿದೆ ಎಂದು ಹೇಳಿರುವ ಚಂದನ್ ಶೆಟ್ಟಿ ಅದರಲ್ಲಿಯಾದರೂ ತಪ್ಪುಗಳನ್ನು ಸರಿ ಮಾಡಿಕೊಳ್ಳುತ್ತಾರೆಯೇ ನೋಡಬೇಕಿದೆ.