ನಟಿ ಶರ್ಮಿಳಾ ಮಾಂಡ್ರೆ ಮತ್ತು ಸ್ನೇಹಿತರ ಕಾರು ಅಪಘಾತ ಪ್ರಕರಣದ ಕಥೆ ಏನಾಯ್ತು?
ಇಡೀ ದೇಶವೇ ಲಾಕ್ ಡೌನ್ನಲ್ಲಿರುವಾಗ ಏಪ್ರಿಲ್ 4ರ ನಸುಕಿನಲ್ಲಿ ನಟಿ ಶರ್ಮಿಳಾ ಮಾಂಡ್ರೆ ಮತ್ತು ಅವರ ಸ್ನೇಹಿತರಿದ್ದ ಕಾರು ಅಪಘಾತಕ್ಕೀಡಾಗಿದ್ದು, ದೇಶದಾದ್ಯಂತ ಸುದ್ದಿಯಾಗಿತ್ತು.
Recommended Video
ಅವಶ್ಯಕ ಸೇವೆಗಳ ಪಾಸ್ ಉಳ್ಳವರ ಹೊರತು ಬೇರೆ ಯಾರೂ ವಾಹನದಲ್ಲಿ ಓಡಾಡುವಂತಿಲ್ಲ, ಅನಗತ್ಯವಾಗಿ ಹೊರಗೆ ತಿರುಗಾಡುವಂತಿಲ್ಲ ಎಂದು ಸರ್ಕಾರ ಸೂಚನೆ ನೀಡಿದ್ದರೂ, ರಾತ್ರಿ 2 ಗಂಟೆ ವೇಳೆ ಶರ್ಮಿಳಾ ಮಾಂಡ್ರೆ ಮತ್ತು ಅವರ ಸ್ನೇಹಿತರು ಮನೆಯಿಂದ ಹೊರಗೆ ಬಂದಿದ್ದು, ಕಾರು ಅಪಘಾತಕ್ಕೀಡಾಗಿದ್ದು, ತೀವ್ರ ಚರ್ಚೆಗೆ ಒಳಗಾಗಿತ್ತು. ಹಾಗೆಯೇ ಈ ಅಪಘಾತದ ಪ್ರಕರಣದ ಸುತ್ತ ಅನೇಕ ಪ್ರಶ್ನೆಗಳು ಅನುಮಾನಗಳು ಹುಟ್ಟಿಕೊಂಡಿದ್ದವು.
ಈ ಪ್ರಕರಣದಲ್ಲಿ ನಟಿ ಶರ್ಮಿಳಾ ಮಾತ್ರವಲ್ಲದೆ, ಪ್ರಭಾವಿ ಉದ್ಯಮಿಗಳು ಹಾಗೂ ರಾಜಕಾರಣಗಳ ಮಕ್ಕಳೂ ಇದ್ದಾರೆ ಎನ್ನಲಾಗಿತ್ತು. ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದರು. ಆದರೆ ಪ್ರಕರಣದ ಕಥೆ ಮುಂದೇನಾಯ್ತು?

ಉತ್ತರ ಸಿಗದ ಪ್ರಕರಣ
ಶರ್ಮಿಳಾ ಮಾಂಡ್ರೆ ಮತ್ತು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಪ್ರಕರಣ ಸಂಭವಿಸಿ ಸುಮಾರು 40 ದಿನಗಳಾಗಿವೆ. ಆದರೆ ಈ ಪ್ರಕರಣದ ಕಥೆ ಏನಾಯ್ತು? ಶರ್ಮಿಳಾ ಮಾಂಡ್ರೆ ಎಲ್ಲಿದ್ದಾರೆ? ಅವರ ಹಾಗೂ ಅವರ ಸ್ನೇಹಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಂಡಿದ್ದಾರೆಯೇ? ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.

ಪಾರ್ಟಿಯಲ್ಲಿ ಭಾಗಿಯಾಗಿದ್ದರೇ?
ಲೋಕೇಶ್ ಎಂಬುವವರಿಗೆ ಸೇರಿದ್ದ ಜಾಗ್ವಾರ್ ಕಾರ್ನಲ್ಲಿ ಶರ್ಮಿಳಾ, ಥಾಮಸ್ ಹಾಗೂ ಅವರ ಇತರೆ ಸ್ನೇಹಿತರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇದು ಜಾಲಿರೈಡ್ಗೆ ಹೋಗಿದ್ದು ಎಂದು ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗಿತ್ತು. ಬಳಿಕ, ಇವರೆಲ್ಲರೂ ಲಾಕ್ಡೌನ್ ನಡುವೆಯೂ ತಡ ರಾತ್ರಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದು, ಕುಡಿದ ಮತ್ತಿನಲ್ಲಿ ಮನೆಗೆ ಮರಳುವಾಗ ಅಪಘಾತ ಉಂಟಾಗಿದೆ ಎನ್ನಲಾಗಿತ್ತು.

ಹೊಟ್ಟೆ ನೋವಿನ ಕಾರಣ ನೀಡಿದ್ದ ಶರ್ಮಿಳಾ
ಶರ್ಮಿಳಾ ಮಾಂಡ್ರೆ, ಹೊಟ್ಟೆ ನೋವಿಗೆ ಔಷಧ ತರುವ ಸಲುವಾಗಿ ಹೊರಗೆ ಹೋಗಿದ್ದೆ. ನನ್ನ ಬಳಿ ಪಾಸ್ ಇಲ್ಲದ ಕಾರಣ ಪಾಸ್ ಇರುವ ಥಾಮಸ್ ಹಾಗೂ ಲೋಕೇಶ್ ಅವರನ್ನು ಸಹಾಯಕ್ಕಾಗಿ ಕರೆದಿದ್ದೆ. ನಾನು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದೆ ಎಂದು ಶರ್ಮಿಳಾ ಹೇಳಿದ್ದರು.

ಪ್ರಕರಣ ದಾಖಲಿಸುವುದಾಗಿ ಹೇಳಿದ್ದ ಪೊಲೀಸರು
ಶರ್ಮಿಳಾ ಅವರ ಮುಖಕ್ಕೆ ಗಾಯವಾಗಿದ್ದರಿಂದ ಸರ್ಜರಿಯ ಅವಶ್ಯಕತೆ ಇದೆ ಎಂದು ಹೇಳಲಾಗಿತ್ತು. ಚಿಕಿತ್ಸೆ ನಂತರ ಅವರು ಖುದ್ದು ಠಾಣೆಗೆ ಹಾಜರಾಗಿ ಹೇಳಿಕೆ ನೀಡಬೇಕು. ಅವರ ವಿರುದ್ಧ ಲಾಕ್ ಡೌನ್ ಉಲ್ಲಂಘನೆ ಸೇರಿದಂತೆ ವಿವಿಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದರು.

ಮಾಹಿತಿ ನೀಡದ ಪೊಲೀಸರು
ಆದರೆ ತಿಂಗಳು ಉರುಳಿದರೂ ಶರ್ಮಿಳಾ ಅವರ ಪ್ರಕರಣ ಏನಾಗಿದೆ ಎಂಬ ಮಾಹಿತಿ ಇಲ್ಲ. ಕಾರ್ ಅಪಘಾತ, ಲಾಕ್ ಡೌನ್ ಉಲ್ಲಂಘನೆ ಮೀರಿ ಹೊರ ಬಂದಿದ್ದು, ಪಾರ್ಟಿ ಮಾಡಿದ್ದು ಮುಂತಾದ ಪ್ರಕರಣಗಳ ಅಡಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಲಾಗಿತ್ತು. ಆದರೆ ನಂತರದ ಬೆಳವಣಿಗೆಗಳಲ್ಲಿ ಪೊಲೀಸರಿಂದ ಈ ಪ್ರಕರಣದ ಕುರಿತು ಯಾವುದೇ ಮಾಹಿತಿ ಹೊರಬಂದಿಲ್ಲ.

ರಹಸ್ಯವಾಗಿಯೇ ಉಳಿದ ಪ್ರಕರಣ
ಕಾರ್ನಲ್ಲಿದ್ದವರು ಪ್ರಭಾವಿಗಳಾಗಿದ್ದು, ಪ್ರಕರಣವನ್ನು ಮುಚ್ಚಿ ಹಾಕಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಅದೀಗ ನಿಜವಾಗಿದೆಯೇ ಎಂಬ ಅನುಮಾನ ದಟ್ಟವಾಗಿದೆ. ಪೊಲೀಸರ ಹೇಳಿಕೆಯಂತೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕಿತ್ತು. ಇದುವರೆಗೂ ಇವು ರಹಸ್ಯವಾಗಿಯೇ ಉಳಿದಿದೆ. ಶರ್ಮಿಳಾ ಅವರು ಚೇತರಿಸಿಕೊಂಡಿದ್ದಾರಾ? ಅವರನ್ನು ವಿಚಾರಣೆ ಮಾಡಲಾಗಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ದೊರಕಿಲ್ಲ.

ಮತ್ತೆ ಕಾಣಿಸಿಕೊಳ್ಳದ ಶರ್ಮಿಳಾ
ಘಟನೆ ನಡೆಯುವ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ಶರ್ಮಿಳಾ, ಮನೆಯಲ್ಲಿಯೇ ಸುರಕ್ಷಿತರಾಗಿರಿ ಎಂದು ಸಲಹೆ ನೀಡಿದ್ದರು. ಆದರೆ ಅವರೇ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಹೊರಗೆ ಹೋಗಿ ಅಪಘಾತಕ್ಕೆ ಒಳಗಾಗಿದ್ದಾರೆ ಎಂದು ಅನೇಕರು ಕಿಡಿಕಾರಿದ್ದರು. ಈ ಘಟನೆ ಬಳಿಕ ಅವರು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಕಾಣಿಸಿಕೊಂಡಿಲ್ಲ.
ಹೀಗಾಗಿ ಶರ್ಮಿಳಾ ಮಾಂಡ್ರೆ ಮತ್ತು ಅವರ ಸ್ನೇಹಿತರ ಕಾರು ಅಪಘಾತ ಪ್ರಕರಣ ಇನ್ನೂ ರಹಸ್ಯವಾಗಿಯೇ ಉಳಿದಿದೆ.


Click it and Unblock the Notifications











