ಸುದೀಪ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ 'ಅಹೋರಾತ್ರ' ಯಾರು?
ಫೇಸ್ಬುಕ್ ಬಳಕೆದಾರರಿಗೆ ಈ ಅಹೋರಾತ್ರ ಎಂಬ ವ್ಯಕ್ತಿಯ ಬಗ್ಗೆ ಕೊಂಚ ಮಟ್ಟಿಗಾದರೂ ಪರಿಚಯವಿರಬಹುದು. ಬರಹಗಾರರು, ಸಾಮಾಜಿಕ ಚಿಂತಕರೂ ಆಗಿರುವ ಅಹೋರಾತ್ರ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ. ಒಳಗನ್ನಡಿ, ತೃಣಮೂಲ, ಆಯತನ, ಏಳು, ತಿರುಳು, ಮೂರ್ಖನ ಮಾತುಗಳು, ಗಗನಗೋಚರೀ ವಸುಂಧರಾ, ಹತ್ತು ಸಾಕು ಮೆಟ್ಟಿಲು ಹೀಗೆ ಹಲವು ಕೃತಿಗಳನ್ನು ರಚಿಸಿ ಓದುಗರನ್ನು ಸಂಪಾದಿಸಿದ್ದಾರೆ.
ಅಹೋರಾತ್ರ ಆಧ್ಯಾತ್ಮ ಚಿಂತಕರು ಹೌದು. ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಅನುಭವವುಳ್ಳವರು. ಹಲವು ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಸಮಾಜದ ಬಗ್ಗೆ ಹೆಚ್ಚಿನ ಕಾಳಜಿ ತೋರಿರುವ ಅಹೋರಾತ್ರ ''ವೃಕ್ಷ ರಕ್ಷ'' ಎಂಬ ಸಂಸ್ಥೆಯ ಮೂಲಕ ಮರಗಡಿಗಳನ್ನು ರಕ್ಷಿಸುವ ಕೆಲಸದಲ್ಲೂ ತೊಡಗಿಕೊಂಡಿದ್ದಾರೆ.
ಫೇಸ್ಬುಕ್ನಲ್ಲಿ ಅಹೋರಾತ್ರ ಎಂಬ ಕಾವ್ಯನಾಮದಿಂದ ಗುರುತಿಸಿಕೊಂಡಿರುವ ಇವರ ಮೂಲ ಹೆಸರು ನಟೇಶ್. ನಿಮಗೆ ನೆನಪಿರಬಹುದು ಉಪೇಂದ್ರ ಅವರು ಪ್ರಜಾಕೀಯ ಪಕ್ಷದ ಕಾರ್ಯಕರ್ತರು ಆಗಿದ್ದಾರೆ. ಪ್ರಜಾಕೀಯ ಪರಿಕಲ್ಪನೆ ಬಗ್ಗೆ ಹೆಚ್ಚು ನಂಬಿಕೆ ಹೊಂದಿದ್ದ ಅಹೋರಾತ್ರ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧೆ ಮಾಡಿದ್ದರು ಎನ್ನಲಾಗಿದೆ.
ಇಷ್ಟೆಲ್ಲಾ ಹಿನ್ನೆಲೆ ಹೊಂದಿರುವ ಅಹೋರಾತ್ರ ಕಿಚ್ಚ ಸುದೀಪ್ ವಿಚಾರದಲ್ಲಿ ಖಳನಾಯಕರಾಗಿದ್ದಾರೆ. ಕಳೆದ ವರ್ಷದ ಆರಂಭದಲ್ಲಿ ಸುದೀಪ್ ಭಾರತದ ಅತಿದೊಡ್ಡ ಸ್ಕೀಲ್ ಗೇಮಿಂಗ್ ರಮ್ಮಿ ಸರ್ಕಲ್.ಕಾಮ್ಗೆ ರಾಯಭಾರಿಯಾಗಿ ನೇಮಕಗೊಂಡರು. ಈ ವೇಳೆ ಸುದೀಪ್ ಅವರ ವಿರುದ್ಧ ಹಲವು ಸಂಘಟನೆಗಳು ಪ್ರತಿಭಟಿಸಿದವು. ಈ ವಿಚಾರದಲ್ಲಿ ಸುದೀಪ್ ಅವರನ್ನು ಖಂಡಿಸಿದ ಪೈಕಿ ಅಹೋರಾತ್ರ ಸಹ ಒಬ್ಬರು. ಮುಂದೆ ಓದಿ....

ಸುದೀಪ್ ಅಭಿಮಾನಿಗಳಿಂದ ಬೆದರಿಕೆ ಕರೆ
ಅಹೋರಾತ್ರ ಸಹಜವಾಗಿ ಪ್ರತಿಭಟಿಸಿದ್ದರೆ ಎಲ್ಲವೂ ಸಮಾಧಾನವಾಗಿ ಇರುತ್ತಿತ್ತೋ ಏನೋ. ಆದರೆ, ಅಹೋರಾತ್ರ ಅವರ ಪ್ರತಿಭಟನೆ ಸ್ವಲ್ಪ ವಿಪರೀತವಾಗಿತ್ತು. ಸುದೀಪ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತೆ ನಿಂದಿಸಿ ಮಾತನಾಡಿದರು. ಸ್ಟಾರ್ ನಟನನ್ನು ವೈಯಕ್ತಿಕವಾಗಿ ಅಪಮಾನಿಸುವಂತೆ ಮಾತನಾಡಿದ್ದರು. ಇದು ಸುದೀಪ್ ಅನುಯಾಯಿಗಳನ್ನು ಕೆರಳಿಸಿತು. ಇಲ್ಲಿಂದ ಕಿಚ್ಚನ ಅಭಿಮಾನಿಗಳು ಹಾಗೂ ಅಹೋರಾತ್ರ ನಡುವೆ ನೇರಾನೇರ ವಾದ-ವಿವಾದಗಳು ಹುಟ್ಟಿಕೊಂಡವು.
ಸುದೀಪ್ ಅಭಿಮಾನಿಗಳಿಂದ ಬೆದರಿಕೆ ಕರೆ ಬರುತ್ತಿವೆ, ವಿದೇಶದಿಂದ ಬೆದರಿಕೆ ಹಾಕುತ್ತಿದ್ದಾರೆ ಎಂದು ಅಹೋರಾತ್ರ ಆರೋಪಿಸಿದರು. ಕೆಲವು ಅಭಿಮಾನಿಗಳ ಜೊತೆ ಫೋನ್ನಲ್ಲಿ ಮಾತನಾಡುತ್ತಿರುವ ಸಂಭಾಷಣೆಯನ್ನು ಫೇಸ್ಬುಕ್, ಯೂಟ್ಯೂಬ್ನಲ್ಲಿ ಹರಿಯಬಿಟ್ಟರು.

ಮಾತುಕತೆ ಫಲ ಕೊಡಲಿಲ್ಲ
ಈ ವಿಚಾರದಲ್ಲಿ ಕಿಚ್ಚ ಸುದೀಪ್ ಖುದ್ದು ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ. ಮಧ್ಯಪ್ರವೇಶ ಮಾಡಲೇ ಇಲ್ಲ. ಆದರೆ, ಸುದೀಪ್ ಆಪ್ತರು, ಸಂಘದ ಅಧ್ಯಕ್ಷರುಗಳು ಅಹೋರಾತ್ರ ಜೊತೆ ಫೋನ್ ಮೂಲಕ ಮಾತನಾಡಿ ವಿವಾದ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿದರು ವ್ಯರ್ಥವಾಯಿತು. ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜು ಅವರೇ ಖುದ್ದು ಅಹೋರಾತ್ರ ಜೊತೆ ಫೋನ್ನಲ್ಲಿ ಮಾತನಾಡಿದ್ದನ್ನು ಸಹ ಯ್ಯೂಟ್ಯೂಬ್ನಲ್ಲಿ ಅಪ್ ಲೌಡ್ ಮಾಡಲಾಗಿತ್ತು.
ರಮ್ಮಿ ಕಂಪನಿ ಜೊತೆ ಒಂದು ವರ್ಷದ ಒಪ್ಪಂದ ಆಗಿದೆ. ಒಪ್ಪಂದವನ್ನು ಅರ್ಧದಲ್ಲಿ ಮುರಿಯಲು ಸಾಧ್ಯವಿಲ್ಲ. ಮುಂದಿನ ಸಲ ಸುದೀಪ್ ಈ ಒಪ್ಪಂದದಿಂದ ಹಿಂದೆ ಸರಿಯಲಿದ್ದಾರೆ ಎಂಬ ಭರವಸೆ ಕೊಟ್ಟರು. ಇದು ಸಹ ವ್ಯರ್ಥವಾಯಿತು. ಹೀಗೆ, ಕಳೆದ ಒಂದೂವರೆ ವರ್ಷದಿಂದ ಅಹೋರಾತ್ರ ಮತ್ತು ಸುದೀಪ್ ಅಭಿಮಾನಿಗಳ ನಡುವಿನ ಕಿತ್ತಾಟ ಅತಿರೇಕಕ್ಕೆ ಹೋಗುತ್ತಲೇ ಇದೆ.

ಅಹೋರಾತ್ರ ಮೇಲೆ ಹಲ್ಲೆ ಮಾಡಿದ್ರಾ?
ಇದರ ಮುಂದುವರಿದ ಭಾಗವೆಂಬಂತೆ ಇಂದು ಘಟನೆಯೊಂದು ನಡೆದು ಹೋಗಿದೆ. ಅಹೋರಾತ್ರ ಅವರ ಮನೆ ಬಳಿ ಭೇಟಿ ನೀಡಿದ್ದ ಸುದೀಪ್ ಅಭಿಮಾನಿಗಳು ಹಾಗೂ ಅಹೋರಾತ್ರ ಆಪ್ತರ ನಡುವೆ ಗಲಾಟೆ ನಡೆದಿದೆ. ಈ ಮಾತುಕತೆ ಜೋರಾದ ಪರಿಣಾಮ ಕೈ ಕೈ ಮೀಲಾಯಿಸುವ ಹಂತಕ್ಕೆ ಹೋಗಿದೆ. ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಅಹೋರಾತ್ರ ಮನೆಗೆ ನುಗ್ಗಿ ಸುದೀಪ್ ಅಭಿಮಾನಿಗಳು ದಾಂಧಲೆ ನಡೆಸಿದ್ದಾರೆ ಎಂದು ಫೇಸ್ಬುಕ್ ಲೈವ್ ಮಾಡಿದರು.
ಫೇಸ್ಬುಕ್ ಲೈವ್ ವೇಳೆ ಸುದೀಪ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ನವೀನ್ ಗೌಡ ಇದ್ದಿದ್ದು ಕಂಡು ಬಂದಿದೆ. ನವೀನ್ ಗೌಡ ಮತ್ತು ಬೆಂಬಲಿಗರು ಅಹೋರಾತ್ರ ಮನೆಗೆ ಭೇಟಿ ನೀಡಿದ್ದ ನಿಜ. ಆದರೆ, ಅವರು ಗಲಾಟೆ ಮಾಡಲು ಬಂದಿರಲಿಲ್ಲ ಎಂದು ಫಿಲ್ಮಿಬೀಟ್ಗೆ ಮಾಹಿತಿ ಸಿಕ್ಕಿದೆ.

ಗಲಾಟೆ ಮಾಡಲು ಹೋಗಿಲ್ಲ
''ಸುದೀಪ್ ಅಭಿಮಾನಿಗಳು ಅಹೋರಾತ್ರ ಮೇಲೆ ಹಲ್ಲೆ ಮಾಡಲು ಹೋಗಿರಲಿಲ್ಲ. ಕಿಚ್ಚನ ವಿರುದ್ಧ ಬಹಳ ಕೀಳಾಗಿ ಮಾತನಾಡುತ್ತಲೇ ಇದ್ದರು. ಆ ಬಗ್ಗೆ ಅವರಿಗೆ ಸಮಾಧಾನವಾಗಿ ತಿಳಿ ಹೇಳಲು ಹೋಗಿದ್ದರು. ಆದರೆ, ಅಹೋರಾತ್ರ ಜೊತೆಯಲ್ಲಿದ್ದ ಕೆಲವು ಹುಡುಗರು ಅಲ್ಲಿ ಮಾತು ಜೋರು ಮಾಡಿದರು. ಸುದೀಪ್ ಅವರನ್ನು ನಿಂದಿಸಿದರು. ಇದು ಸಹಜವಾಗಿ ಅಭಿಮಾನಿಗಳನ್ನು ಕೆರಳಿಸಿತು. ಯಾರ ಮೇಲೆಯೂ ಹಲ್ಲೆ ಮಾಡಿಲ್ಲ, ಹೆಣ್ಣು ಮಕ್ಕಳ ಮೇಲೆ ಕೈ ಮಾಡಿಲ್ಲ'' ಎಂದು ಸುದೀಪ್ ಆಪ್ತರೊಬ್ಬರು ಮಾಹಿತಿ ನೀಡಿದ್ದಾರೆ.
Recommended Video

ಕೊಲ್ಲಲು ಬಂದರು ಎಂದ ಆಹೋರಾತ್ರ
ಅಹೋರಾತ್ರ ಅವರು ಫೇಸ್ಬುಕ್ ಲೈವ್ನಲ್ಲಿ ಹೇಳಿದಂತೆ 'ಸುದೀಪ್ ಅಭಿಮಾನಿಗಳು ನನ್ನನ್ನು ಕೊಲ್ಲಲು ಬಂದಿದ್ದರು. ನಮ್ಮ ಮನೆ ಹೆಣ್ಣು ಮಕ್ಕಳ ಮೇಲೆ ಕೈ ಮಾಡಿದ್ದಾರೆ. ನಮ್ಮ ಹುಡುಗರನ್ನು ಹೊಡೆದಿದ್ದಾರೆ. ಸುದೀಪ್ ಅವರನ್ನು ಬಂಧಿಸಬೇಕು'' ಎಂದು ಆಗ್ರಹಿಸಿದ್ದಾರೆ.
ಸದ್ಯ, ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಸ್ಥಳಕ್ಕೆ ಧಾವಿಸಿ ಕೆಲವು ಅಭಿಮಾನಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಪ್ರಕರಣದಲ್ಲಿ ನಿಜಕ್ಕೂ ತಪ್ಪು ಯಾರದು? ಸುದೀಪ್ ಅಭಿಮಾನಿಗಳು ನಿಜವಾಗಲೂ ಅಹೋರಾತ್ರ ಮೇಲೆ ಹಾಗೂ ಅವರ ಮನೆಯವರ ಮೇಲೆ ಹಲ್ಲೆ ಮಾಡಿದ್ರಾ? ಅಥವಾ ಅಹೋರಾತ್ರ ಅವರದ್ದು ತಪ್ಪು ಇದೆಯೇ ಎನ್ನುವುದನ್ನು ಪೊಲೀಸರು ಸ್ಪಷ್ಟಪಡಿಸಬೇಕಿದೆ.


Click it and Unblock the Notifications











