ಸುಮಲತಾ ಪರ ಪ್ರಚಾರ ಮಾಡೋದ್ರಿಂದ 'ಜೋಡೆತ್ತು'ಗಳಿಗಾಗುವ ನಷ್ಟವೇನು?
Recommended Video

ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸುಮಲತಾ ಮತ್ತು ನಿಖಿಲ್ ಕುಮಾರ್ ಸ್ಪರ್ಧೆ ಮಾಡುತ್ತಿದ್ದಾರೆ ಎಂದಾಗಲೇ ಒಂದು ಸೂಚನೆ ಸಿಕ್ಕಿತ್ತು. ಇವರಿಬ್ಬರ ಮುಖಾಮುಖಿ ಆದ್ರೆ, ಮಂಡ್ಯ ಅಖಾಡಕ್ಕೆ ತಾರೆಯರು ಎಂಟ್ರಿ ಕೊಡ್ತಾರೆ. ಇದರಿಂದ ಮಂಡ್ಯ ಕ್ಷೇತ್ರ ರಣರಂಗ ಆಗುತ್ತೆ ಅಂತ.
ಅದರಂತೆ ಈಗ ಮಂಡ್ಯದಲ್ಲಿ ರಾಕಿಂಗ್ ಸ್ಟಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ಇಬ್ಬರು ಸುಮಲತಾ ಪರ ಪ್ರಚಾರಕ್ಕೆ ಇಳಿದಿದ್ದಾರೆ. ಅದ್ಯಾವಾಗ ದರ್ಶನ್ ಮತ್ತು ಯಶ್ ಮಂಡ್ಯದಲ್ಲಿ ಅಂಬಿ ಪತ್ನಿ ಜೊತೆಯಲ್ಲಿದ್ದಾರೆ ಎಂದು ಪಕ್ಕಾ ಆಯ್ತೋ, ಅಲ್ಲಿಂದ ಯಶ್ ಮತ್ತು ದಚ್ಚು ರಾಜಕೀಯವಾಗಿ ಟಾರ್ಗೆಟ್ ಆದರು.
ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ಮೇಲೆ ಪರ್ಸನಲ್ ಅಟ್ಯಾಕ್ ಶುರುವಾಯಿತು. ಸಿನಿಮಾ ನಟರು ಚಿತ್ರರಂಗದಲ್ಲೇ ಇದ್ರೆ ಒಳ್ಳೆಯದು, ರಾಜಕೀಯವಾಗಿ ಗುರುತಿಸಿಕೊಂಡಾಗ ಅದು ಹೇಗೆ ಅವರಿಗೆ ಕಷ್ಟವಾಗುತ್ತೆ ಎಂಬುದಕ್ಕೆ ಯಶ್ ಮತ್ತು ದರ್ಶನ್ ಇಬ್ಬರ ಸದ್ಯದ ಸ್ಥಿತಿ ಉದಾಹರಣೆಯಾಗಿದೆ. ಅಷ್ಟಕ್ಕೂ, ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡೋದ್ರಿಂದ ಇವರಿಬ್ಬರು ಕಳೆದುಕೊಳ್ಳುವುದೇನು? ಮುಂದೆ ಓದಿ.....

ಅಭಿಮಾನ ಕಮ್ಮಿ ಆಗಬಹುದು
ಮಂಡ್ಯದಲ್ಲಿ ದರ್ಶನ್ ಮತ್ತು ಯಶ್ ಇಬ್ಬರಿಗೂ ಹೆಚ್ಚು ಅಭಿಮಾನಿಗಳಿದ್ದಾರೆ. ದಚ್ಚು-ಯಶ್ ಸಿನಿಮಾ ಅಂದ್ರೆ ತಾವು ಯಾವ ಪಕ್ಷ ಎನ್ನುವುದನ್ನ ಬಿಟ್ಟು ಸಿನಿಮಾ ನೋಡುವ ಜನ ಇದ್ದಾರೆ. ಅಲ್ಲಿ ಜೆಡಿಎಸ್ ಪಕ್ಷದವರು ಇರ್ತಾರೆ, ಕಾಂಗ್ರೆಸ್ ಪಕ್ಷದವರು ಇರ್ತಾರೆ, ಬಿಜೆಪಿ ಪಕ್ಷದವರು ಇರ್ತಾರೆ. ಆದ್ರೆ, ದರ್ಶನ್-ಯಶ್ ಸಿನಿಮಾಗಳನ್ನ ನೋಡೋಕೆ ಯಾವುದೇ ಪಕ್ಷ ಬೇಕಾಗಿಲ್ಲ. ಆದ್ರೆ, ಈಗ ನಿರ್ಮಾಣವಾಗಿರುವ ಸ್ಥಿತಿ ನೋಡಿದ್ರೆ, ಮಂಡ್ಯದಲ್ಲಿ ಇವರಿಬ್ಬರ ಮೇಲಿನ ಅಭಿಮಾನ (ಪಕ್ಷಕ್ಕೆ ನಿಷ್ಠೆಯಲ್ಲಿರುವ ಕಾರ್ಯಕರ್ತರು) ಸ್ವಲ್ಪ ಕಮ್ಮಿಯಾಗಬಹುದು. ಇವರಿಬ್ಬರು ನಮ್ಮ ಪಕ್ಷದ ವಿರುದ್ದ ಇದ್ದಾರೆ ಎಂಬ ಕಾರಣಕ್ಕೆ ದ್ವೇಷ ಸಾಧಿಸಬಹುದು. ಇದು ಮಂಡ್ಯ ಮಾತ್ರವಲ್ಲ, ರಾಜ್ಯದ ಬೇರೆ ಕಡೆಯೂ ಪ್ರಭಾವ ಬೀರಬಹುದು.

ಬೇಡವಾದ ಟೀಕೆಗಳು ಎದುರಾಗುತ್ತೆ
ಸಿನಿಮಾ ವಿಚಾರದಲ್ಲಿ ಅಭಿಮಾನ ಮೆರೆಯುವ ಅಭಿಮಾನಿಗಳು ಅಥವಾ ಸಾಮಾನ್ಯ ಜನರು, ರಾಜಕೀಯಕ್ಕೆ ಬಂದ ಸಿನಿಮಾ ನಟರನ್ನ ನೋಡುವ ದೃಷ್ಟಿಯೇ ಬೇರೆ. ಈಗ ದರ್ಶನ್ ಮತ್ತು ಯಶ್ ವಿಚಾರದಲ್ಲೂ ಅದೇ ಆಗ್ತಿದೆ. ಇವರಿಬ್ಬರ ಕೆಲವು ವೈಯಕ್ತಿಕ ಘಟನೆಗಳನ್ನ ಕೆಣಕಿ, ಅದರ ಬಗ್ಗೆ ಟೀಕೆ ಮಾಡುವ ಮೂಲಕ ಮಾನಸಿಕವಾಗಿ ಟಾರ್ಗೆಟ್ ಮಾಡ್ತಾರೆ. ಇದನ್ನ ಗಮನಿಸಿದಾ, ಬೇಡವಾದ ಸಂದರ್ಭದಲ್ಲಿ ಬೇಡವಾದ ಟೀಕೆಗಳಿಗೆ ಗುರಿಯಾಗ್ತಾರಲ್ಲಾ ಎಂಬ ಬೇಸರವೂ ಕಾಡುತ್ತೆ.

ಚಿತ್ರರಂಗದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ.!
ಇದು ಚಿತ್ರರಂಗದ ಮೇಲೆ ಪ್ರಭಾವ ಬೀರುವುದು ಸಹಜ. ಸದ್ಯಕ್ಕೆ ಸುಮಲತಾ ಅವರಿಗೆ ಚಿತ್ರರಂಗ ಸಂಪೂರ್ಣ ಬೆಂಬಲ ನೀಡಿದೆ ಎಂಬ ಮಾತುಗಳನ್ನ ಹೇಳಲಾಗ್ತಿದೆ. ಆದ್ರೆ, ಮತ್ತೊಂದೆಡೆ ಚಿತ್ರರಂಗ ಸಂಪೂರ್ಣ ಬೆಂಬಲ ನೀಡಿಲ್ಲ ಎಂಬ ಘಟನೆಗಳು ಕೂಡ ನಡೆದಿವೆ. ಸುಮಲತಾ ಪರ ಏಕಪಕ್ಷೀಯವಾಗಿ ಬೆಂಬಲ ಘೋಷಣೆ ಮಾಡಿರುವುದನ್ನ ವಿರೋಧಿಸಿ ರಾಕ್ ಲೈನ್ ವೆಂಕಟೇಶ್ ವಿರುದ್ದ ಟೇಶಿ ವೆಂಕಟೇಶ್ ಫಿಲಂ ಚೇಂಬರ್ ಗೆ ದೂರು ನೀಡಿದ್ದಾರೆ. ಸುದೀಪ್ ಪ್ರಚಾರದಿಂದ ದೂರ ಉಳಿದಿದ್ದಾರೆ. ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದು ಪುನೀತ್ ಹೇಳಿದ್ದಾರೆ. ಇದೆಲ್ಲವೂ ಚಿತ್ರರಂಗದಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಸೋತರೆ ಗೌರವಕ್ಕೇ ಧಕ್ಕೆ
ಇನ್ನೂ ಇದನ್ನೆಲ್ಲಾ ಮೀರಿ ತಾವು ಪ್ರಚಾರ ಮಾಡಿದ ಅಭ್ಯರ್ಥಿ ಗೆದ್ದರೇ ಅತಿ ದೊಡ್ಡ ಗೆಲುವು ಸ್ಟಾರ್ ನಟರಿಗೆ. ಒಂದು ವೇಳೆ ಆ ಅಭ್ಯರ್ಥಿ ಸೋತರೇ, ಆ ಸೋಲಿನಲ್ಲಿ ತಮ್ಮದು ಪಾಲು ಇರುತ್ತೆ. ಇದು ಸಹಜವಾಗಿ ಸ್ಟಾರ್ ಗೌರವಕ್ಕೆ ಧಕ್ಕೆ ತರುತ್ತೆ. ಈಗ ದರ್ಶನ್ ಮತ್ತು ಯಶ್ ಅವರಿಗೂ ಸುಮಲತಾ ಅವರನ್ನ ಗೆಲ್ಲಿಸಲೇ ಬೇಕಾದ ಒತ್ತಡದಲ್ಲಿದ್ದಾರೆ. ಇಲ್ಲವಾದಲ್ಲಿ, ಟೀಕೆಗಳು ಎದುರಿಸಲೇ ಸಿದ್ಧವಾಗಬೇಕಿದೆ.

ನಾವು ಕಲಾವಿದರಾಗಿ ಬಂದಿಲ್ಲ
ಯಾರು ಏನೇ ಹೇಳಿದ್ರು ನಟ ದರ್ಶನ್ ಮತ್ತು ಯಶ್ ಒಂದಂತೂ ಸ್ಪಷ್ಟಪಡಿಸಿದ್ದಾರೆ. ನಾವು ಕಲಾವಿದರಾಗಿ ಇಲ್ಲಿಗೆ ಬಂದಿಲ್ಲ. ಅಂಬರೀಶ್ ಅವರ ಮನೆ ಕುಟುಂಬದ ಸದಸ್ಯರಾಗಿ, ಮನೆ ಮಕ್ಕಳಾಗಿ ಬಂದಿದ್ದೀವಿ. ಅಭಿಮಾನಿಗಳಿಗೆ ಮತ ಹಾಕಿ ಎಂದು ಕೇಳಿಕೊಳ್ಳಬಹುದೇ ಹೊರತು ಅಧಿಕಾರ ಮಾಡುವ ಹಕ್ಕು ನಮಗಿಲ್ಲ. ಸುಮಲತಾ ಅಮ್ಮನಿಗಾಗಿ ನಾವು ಪ್ರಚಾರ ಮಾಡುವುದು ನಮ್ಮ ಕರ್ತವ್ಯ. ಇದರಿಂದ ಆಗುವ ಪರಿಣಾಮಗಳಿಗೆ ನಾವು ತಲೆಕೆಡಿಸಿಕೊಳ್ಳಲ್ಲ ಎಂದು ಬಹಿರಂಗವಾಗಿ ಹೇಳಿದ್ದಾರೆ.


Click it and Unblock the Notifications











