ಆ ನಾಲ್ಕು ಜನರ ಮಾತು ಕೇಳಿ ಬಾರ್ಬಿ ಡಾಲ್ ನಿವೇದಿತಾ ಅವರಿಂದ ದೂರವಾದ್ರಾ ಚಂದನ್ ಶೆಟ್ಟಿ..?
ಸಿನಿಮಾ ತಾರೆಯರ ಡೇಟಿಂಗು .. ಬ್ರೇಕಪ್ಪು .. ಲವ್ವು- ಡವ್ವುಗಳಿಗೇನೂ ಕಡಿಮೆ ಇಲ್ಲ. ನಿನ್ನೆ ಮೊನ್ನೆ ಜೊತೆ ಜೊತೆಯಲ್ಲಿ ಓಡಾಡಿದರೂ, ಅವಾರ್ಡ್ ಫಂಕ್ಷನ್ ಗಳಲ್ಲಿ ಕಾಣಿಸಿಕೊಂಡವರೂ ಮೂರನೇ ದಿನ ಮದುವೆಯ ಸುದ್ದಿಯನ್ನು ಹರಿಬಿಡುತ್ತಾರೆ. ಇನ್ನೂ ಆದರ್ಶ ದಂಪತಿಗಳಂತೆ ಫೋಸು ಕೊಟ್ಟವರು ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ. ಇವೆಲ್ಲವೂ ಸೆಲೆಬ್ರೆಟಿಗಳ ಪರ್ಸನಲ್ ಜೀವನದಲ್ಲಿ ಕಾಮನ್ನು. ಇದಕ್ಕೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸದ್ಯದ ತಾಜಾ ಉದಾಹರಣೆ.
ಹೌದು. ಹೆಚ್ಚು ಕಡಿಮೆ ಐದು ವರ್ಷದ ಹಿಂದೆ ಸರ್ಕಾರಿ ಪ್ರಾಯೋಜಿತ ವೇದಿಕೆ ಮೈಸೂರಿನ ಯುವ ದಸರಾದಲ್ಲಿ ಅತ್ಯಂತ ಹುರುಪಿನಿಂದ, ನಿವೇದಿತಾ ಎದುರು ಮಂಡಿಯೂರಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಚಂದನ್ ಶೆಟ್ಟಿ,ಆ ನಂತರ ತಮ್ಮ ಕನಸಿನ ಕನ್ಯೆ ನಿವೇದಿತಾ ಅವರ ಜೊತೆ ಫೆಬ್ರವರಿ 26- 2020ರಲ್ಲಿ ಮದುವೆಯಾದರು. ಸಂಭ್ರಮ-ಸಡಗರದಿಂದ ತಮ್ಮ ಮನದ ಮಾತನ್ನೂ ಹಂಚಿಕೊಂಡಿದ್ದರು. ಮದುವೆ ಆಗಿದ್ದು ನನ್ನ ಜೀವನದಲ್ಲೇ ಸಂತಸದ ದಿನ. ನಾನು ಇಷ್ಟಪಟ್ಟ ಹುಡುಗನ ಜೊತೆ ಮದುವೆ ಆಗಿದ್ದೇನೆ. ಇದು ತುಂಬ ಖುಷಿ ಕೊಟ್ಟಿದೆ ಎಂದಿದ್ದ ನಿವೇದಿತಾ ಆ ನಂತರ ನನ್ನ ಕನಸು ನನಸಾಗಿದೆ. ಸಣ್ಣ ಸಣ್ಣ ವಿಷಯಗಳು ನನಗೆ ತುಂಬಾ ದೊಡ್ಡದು. ಜೀವನಪೂರ್ತಿ ಹೀಗೆ ಇರುತ್ತೇವೆ ಎಂಬ ವಿಶ್ವಾಸವನ್ನೂ ಕೂಡ ನಿವೇದಿತಾ ಗೌಡ ವ್ಯಕ್ತಪಡಿಸಿದ್ದರು.

ಆದರೆ ಈಗ ಮದುವೆಯಾಗಿ ನಾಲ್ಕೇ ವರ್ಷಕ್ಕೆ ದಾಂಪತ್ಯ ಮುರಿದು ಬಿದ್ದಿದೆ. ನಾನೊಂದು ತೀರ ನೀನೊಂದು ತೀರ,ಮನಸು ಮನಸು ದೂರಾ ಪ್ರೀತಿ ಹೃದಯ ಭಾರ ಎಂಬ ಹಾಡು ಹಿನ್ನೆಲೆಯಲ್ಲಿ ಕೇಳಿ ಬರುತ್ತಿದೆ.ಇವರಿಬ್ಬರ ವಿಚ್ಛೇದನವನ್ನ ಮೊದಲೇ ಊಹಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಒಂದು ವರ್ಗ ತುಂಬಾ ಗಂಭೀರವಾಗಿ ಚರ್ಚೆಯನ್ನೂ ಮಾಡುತ್ತಿದೆ. ನಿವೇದಿತಾ ಗೌಡ ಅವರಿಗೆ ರೀಲ್ಸ್ ಮೇಲಿರುವ ವ್ಯಾಮೋಹವೇ ಸಂಸಾರ ಮುರಿದು ಬೀಳಲು ಪ್ರಮುಖ ಕಾರಣ ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದೆ.
ಹೌದು, ಚಂದನ್ ಶೆಟ್ಟಿ ಅವರಿಗಿಂತ ಸಾಮಾಜಿಕ ಜಾಲತಾಣದಲ್ಲಿ ತುಸು ಹೆಚ್ಚೇ ಸಕ್ರಿಯವಾಗಿರುವ ನಿವೇದಿತಾ, ಕಳೆದ ಕೆಲ ದಿನಗಳಿಂದ ಒಂದಾದ ಮೇಲೊಂದು ರೀಲ್ಸ್ಗಳನ್ನ ಹಂಚಿಕೊಳ್ಳುತ್ತಾನೇ ಬರ್ತಾ ಇದ್ದರು. ಹೀಗೆ ನಿವೇದಿತಾ ಗೌಡ ರೀಲ್ಸ್ ಮಾಡಿದಾಗೆಲ್ಲ, ಅನೇಕರು ಇವರ ಬಟ್ಟೆಯ ಬಗ್ಗೆ ಅಪಸ್ವರ ತೆಗೆಯುತ್ತಿದ್ದರು. ತುಂಡುಡುಗೆ ಧರಿಸಿ ಹೀಗೆಲ್ಲ ರೀಲ್ಸ್ ಮಾಡಬೇಡಿ ಎಂಬ ಮನವಿಯನ್ನೂ ಮಾಡಿಕೊಳ್ಳುತ್ತಿದ್ದರು.

ಇನ್ನೂ ನಿವೇದಿತಾ ಗೌಡ ಅಂದರೆ ಸಾಕು ಟ್ರೋಲಿಗರಿಗೆ ಹಬ್ಬವೋ ಹಬ್ಬ. ಸೋಶಿಯಲ್ ಮೀಡಿಯಾದಲ್ಲಿ ಚಿಕ್ಕ ತುಣುಕನ್ನೂ ಬಿಟ್ಟು ಬಿಡದೇ ಹರಡಿ ಮಜಾ ತೆಗೆದುಕೊಳ್ಳುತ್ತಿದ್ದ ಇವರು ನಿವೇದಿತಾ ಗೌಡ ಅವರನ್ನ ಯದ್ವಾ-ತದ್ವಾ ಟ್ರೋಲ್ ಮಾಡುತ್ತಿದ್ದರು. ಇದು ಸಾಲದು ಎಂಬಂತೆ ನಿವೇದಿತಾ ಗೌಡ ಅವರ ವೇಷಭೂಷಣ- ಹಾವ-ಭಾವಗಳನ್ನ ನೋಡಿ ಚಂದನ್ ಶೆಟ್ಟಿ ಕಾಲೆಳೆಯಲು ಶುರು ಮಾಡಿದ್ದರು. ನಿವೇದಿತಾ ರೀಲ್ಸ್ ಹಂಚಿಕೊಂಡಾಗೆಲ್ಲ ಚಂದನ್ ಎಲ್ಲಿದ್ದಿಯಪ್ಪಾ ಎಂಬ ಪ್ರಶ್ನೆಯನ್ನ ಕೇಳಲು ಆರಂಭ ಮಾಡಿದ್ದರು.
ಇದೆಲ್ಲದರಿಂದ ಬೇಸತ್ತು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದೂರವಾಗುವ ನಿರ್ಧಾರಕ್ಕೆ ಬಂದ್ರಾ ಗೊತ್ತಿಲ್ಲ. ಆದರೆ ಈ ಅನುಮಾನ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅನೇಕರನ್ನ ಕಾಡುತ್ತಿದೆ. ಆಗ್ಲೇ ಹೇಳಿದಂತೆ ಈ ಕುರಿತು ತುಂಬಾ ಗಂಭೀರವಾದ ಚರ್ಚೆ ಕೂಡ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಇನ್ನೂ ಇದೆಲ್ಲದರ ನಡುವೆ ಪೋಷಕರಾಗೋ ವಿಚಾರಕ್ಕೆ ನಿವೇದಿತಾ ಗೌಡ ಮತ್ತು ಚಂದನ್ ಮಧ್ಯೆ ಬಿರುಕು ಮೂಡಿರಬಹುದು ಎಂಬ ಅನುಮಾನವನ್ನೂ ಕೂಡ ವ್ಯಕ್ತಪಡಿಸುತ್ತಿದ್ದಾರೆ.

ನಿಜಕ್ಕೂ ಸಾಮಾಜಿಕ ಜಾಲತಾಣದಲ್ಲಿಅವರು ಯಾರು ಎಂದು ಗೊತ್ತಿರದ, ಮುಂದೆಯೂ ಗೊತ್ತಾಗದ ಮತ್ತು ನಮ್ಮ ಸುತ್ತ-ಮುತ್ತ ಕುಂತರೂ ನಿಂತರೂ ತಪ್ಪೆನ್ನುವ ಆ ನಾಲ್ಕು ಜನರ ಮಾತು ಕೇಳಿ ನಿವೇದಿತಾ ಗೌಡ ಅವರಿಗೆ ಚಂದನ್ ಶೆಟ್ಟಿ ವಿಚ್ಛೇದನ ನೀಡಿದ್ರಾ..? ಗೊತ್ತಿಲ್ಲ.
ಒಟ್ನಲ್ಲಿ ಪರಸ್ಪರ ಒಪ್ಪಿಗೆಯ ಮೇರೆಗೆ ದೂರವಾಗಲು ನಿಜವಾದ ಕಾರಣವೇನು ಎನ್ನುವುದು ಖುದ್ದು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರಿಗೆ ಗೊತ್ತು. ಆದರೆ ಆ ಕಾರಣವನ್ನ ಇಬ್ಬರು ಹೇಳುವವರೆಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಬಗ್ಗೆ ಹಿಂದೆಯೂ ಮಾತನಾಡಿದ್ದ ಜನ, ಮುಂದೆಯೂ ಮಾತನಾಡ್ತಾನೇ ಇರುತ್ತಾರೆ ಅನ್ನುವುದು ಮಾತ್ರ ಸತ್ಯ


Click it and Unblock the Notifications











