'ಬೆಳಕು ಹೋದ ಮೇಲೆ ಕತ್ತಲು ಬರಲೇ ಬೇಕು ಅದುವೇ ಜೀವನ' ಅಂದಿದ್ದ ಅಪ್ಪು
ನಟ ಪುನೀತ್ ರಾಜ್ಕುಮಾರ್ ಇನ್ನು ದಿವಂಗತ. ಎಷ್ಟು ಬಾರಿ ಅವರ ಬಗ್ಗೆ ಹೇಳಿದರು, ಅವರ ಬಗ್ಗೆ ಮಾತನಾಡಿದರು ಸಾಲದು. ಪ್ರತಿಯೊಬ್ಬರೂ ಕ್ಷಣ ಕ್ಷಣಕ್ಕೂ ಅಪ್ಪು ಬಗ್ಗೆ ತಮ್ಮ ಮನಸ್ಸು ಬಿಚ್ಚಿ ಮಾತನಾಡುತ್ತಿದ್ದಾರೆ. ನಟ ರಮೇಶ್ ಅರವಿಂದ್ ಮತ್ತೆ ಪುನೀತ್ ರಾಜ್ಕುಮಾರ್ ಬಗ್ಗೆ ಮಾತು ಆಡಿದ್ದಾರೆ. 100 ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಕಾರ್ಯಕ್ರಮವನ್ನು ಮಾಡಿದ್ದಾರೆ. ಇನ್ನು ಇದೇ ವೇಳೆ ನಟ ರಮೇಶ್ ಅರವಿಂದ್ ಅಪ್ಪು ಸಾವಿನ ಹಿಂದಿನ ದಿನ ಅವರ ಜೊತೆ ಕಳೆದ ಕ್ಷಣಗಳನ್ನು ಮತ್ತೆ ಮೆಲುಕು ಹಾಕಿದ್ದಾರೆ. ಆ ದಿನ ಅಪ್ಪು ಹೇಳಿದ್ದನ್ನು ನೆನಪಿಸಿಕೊಂಡು ರಮೇಶ್ ಅರವಿಂದ್ ಭಾವುಕ ಆಗಿದ್ದಾರೆ. ಅಂದು ಅಪ್ಪು ಆಡಿದ ಮಾತುಗಳು ಮುಂದಿನ ದಿನದ ಘಟನೆಯ ಆಧಾರ ಆಗಿತ್ತು ಎನಿಸುತ್ತಿದೆ. ಇದು ಕಾಕತಾಳೀಯವೋ ಅಥವಾ ನನ್ನ ಕಲ್ಪನೆಯೋ ಗೊತ್ತಾಗುತ್ತಾ ಇಲ್ಲ ಎಂದಿದ್ದಾರೆ ರಮೇಶ್ ಅರವಿಂದ್.

ಗುರುಕಿರಣ್ ಮನೆ ಪಾರ್ಟಿಯಲ್ಲಿ ಅಪ್ಪು ಹೇಳಿದ್ದೇನು?
ಆ ದಿನ ರಾತ್ರಿ ನಡೆದ ಘಟನೆಯನ್ನು ರಮೇಶ್ ಅರವಿಂದ್ ಹೀಗೆ ವಿವರಿಸಿದ್ದಾರೆ. 'ಒಂದು ದಿನಕ್ಕೆ ಮೊದಲು ಗುರುಕಿರಣ್ ಅವರ ಮನೆಗೆ ಊಟಕ್ಕೆ ಕರೆದಿದ್ದರು. ನಾನು ನನ್ನ ಹೆಂಡತಿ, ಅಪ್ಪು ಮತ್ತು ಅಶ್ವಿನಿ ಒಂದು ಮೂಲೆಯಲ್ಲಿ ಕುಳಿತುಕೊಂಡು ಮಾತು ಆಡುತ್ತಿದೆವು. ಎರಡು ಗಂಟೆಗಳ ಕಾಲ ನಮ್ಮ ಜೊತೆಗೆ ಆ ದಿನ ಅಪ್ಪು ಮಾತನಾಡಿದ್ದ. ಆದರೆ ಅವತ್ತು ಎರಡು ಗಂಟೆಗಳ ಕಾಲ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿದ್ದ. ಮರುದಿನವೇ ಆ ಕಣ್ಣಗಳನ್ನು ದಾನ ಕೊಡುತ್ತಾರೆ ಎಂಬುದನ್ನು ಹೇಗೆ ನಂಬುವುದು. ಅಚಾನಕ್ ಆಗಿ ಆದ ಘಟನೆ ಇದು. ನಿನ್ನೆ ರಾತ್ರಿ ನೋಡಿದ್ದೆ, ಮಾತನಾಡಿದ್ದೆ. ಅಪ್ಪು ಮಾತಾಡಿದ ವಿಚಾರಗಳನ್ನು ನೆನಪಿಸಿಕೊಂಡರೆ ಇದು ಕಾಕತಾಳಿಯ ಇರಬಹುದು ಎನಿಸುತ್ತೆ. ಅಥವಾ ನಾನೆ ಹಾಗೆ ಕಲ್ಪಿಸಿಕೊಳ್ಳುತ್ತಿದ್ದೇನೋ ಗೊತ್ತಿಲ್ಲ.
ಊಟಕ್ಕೆ ಕೂತಾಗ ಸಿನಿಮಾ, ಐಪಿಎಲ್ ಸೆರಿದಂತೆ ಸಾಕಷ್ಟು ಬೇರೆ ಬೇರೆ ವಿಚಾರಗಳ ಬಗ್ಗೆ ಮಾತನಾಡಿದೆವು. ನಮ್ಮ ಜೊತೆಗೆ ಅನಿರುದ್ಧ್ ಕೂಡ ಇದ್ದ. ನಾನು ಬುದ್ಧನ ಬಗ್ಗೆ ಹೇಳಿದೆ. "ಬುದ್ಧ ಒಂದು ಕಡೆ ಹೇಳುತ್ತಾನೆ. ನಾವು ನಮ್ಮ ಜೀವನದಲ್ಲಿ ತುಂಬಾ ಇಷ್ಟಪಡುವ ಎಲ್ಲಾ ವಿಚಾರವನ್ನು ಒಂದು ದಿನ ಕಳೆದುಕೊಳ್ಳಲೇ ಬೇಕು. ನನ್ನ ಕೂದಲು ತುಂಬಾ ಇಷ್ಟ ಅಲ್ಲವಾ ಅದು ಒಂದು ದಿನ ಉದುರುತ್ತದೆ. ಹಲ್ಲು ಇಷ್ಟ ಅಲ್ಲವಾ ಅದು ಬಿದ್ದು ಹೋಗುತ್ತದೆ. ಯೌವನ ಅಂದರೆ ನಾವೆಲ್ಲ ಸಂಭ್ರಮ ಪಡುತ್ತೇವೆ. ಆದರೆ ಮುಪ್ಪು ಕಾಲಿಂಗ್ ಒತ್ತುವುದಕ್ಕೆ ಕಾಯುತ್ತಾ ಇರುತ್ತದೆ" ಎಂದು ಹೇಳಿದೆ. ಆಗ ಅಪ್ಪು ಒಂದು ಮಾತು ಹೇಳಿದ. "ಬೆಳಕು ಹೋದ ಮೇಲೆ ರಾತ್ರಿ ಬರಲೇಬೇಕಲ್ಲವಾ ಅದೇ ಜೀವನ. ಅದೇ ಅಲ್ವಾ ಸರ್ ವೈರಾಗ್ಯ" ಅಂತ ಹೇಳಿದ್ದ. ಅದು ಈಗ ಕನೆಕ್ಟ್ ಆಗ್ತಿದೆ.

ಅಪ್ಪುಗೆ ಎಲ್ಲರೂ ಮನ ಸೋತರು. ಅದಕ್ಕೆ ಕಾರಣ ಅಪ್ಪು ವ್ಯಕ್ತಿತ್ವ ಎಂದು ರಮೇಶ ಅರವಿಂದ್ ಹೇಳುತ್ತಾರೆ. ಅಪ್ಪು ಅವರಲ್ಲಿ ಇದ್ದ ಹಲವು ಗುಣಗಳೇ ಅದಕ್ಕೆ ಕಾರಣ ಎನ್ನುತ್ತಾರೆ. ಒಂದು ಕಡೆ ಅವರ ಡಾನ್ಸ್, ಒಂದು ಕಡೆ ಅವರ ಫೈಟ್, ಒಂದು ಕಡೆ ಅವರ ಫ್ಯಾಮಿಲಿ ಸೆಂಟಿಮೆಂಟ್, ಮತ್ತೊಂದು ಕಡೆ ಅವರ ವಿನಯ, ಮತ್ತೊಂದು ಕಡೆ ಅವರ ಸರಳತೆ ಎಲ್ಲರೂ ಸೇರಿ ಅಪ್ಪು ಆಗಿದೆ. ನಾಳೆ ಒಬ್ಬ ಫೈಟರ್ ಬರಬಹುದು, ಒಬ್ಬ ಡಾನ್ಸರ್ ಬರಬಹುದು, ಆದರೆ ಎಲ್ಲವೂ ಒಬ್ಬನಲ್ಲಿ ಸಿಗುವುದು ಬಹಳ ಕಷ್ಟ. ಎಲ್ಲವೂ ಸೇರಿ ಅಪ್ಪು ಆಗಿದ್ದ ಅದು ಪರಿಪೂರ್ಣ ಶೂನ್ಯ. ಆ ಪರಿ ಪೂರ್ಣ ಶೂನ್ಯಕ್ಕೆ ಪರ್ಯಾಯ ಇಲ್ಲ ಎಂದು ರಮೇಶ್ ಅರವಿಂದ್ ಹೇಳುತ್ತಾರೆ. ಜೊತೆಗೆ ಈಗ ನಮಗೆ ಉಳಿದಿರುವುದು ಅಪ್ಪು ಸವಿ ನೆನಪುಗಳು ಮಾತ್ರ. ಆ ನೆನಪುಗಳನ್ನು ಸಂಭ್ರಮಿಸಬೇಕು ಅಷ್ಟೇ ಎಂದು ರಮೇಶ್ ಅರವಿಂದ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.


Click it and Unblock the Notifications











