ವಿಷ್ಣು ಸ್ಮಾರಕದ ಬಗ್ಗೆ ಸುದೀಪ್ ಹೇಳಿದ್ದರಲ್ಲಿ ತಪ್ಪೇನಿದೆ?
ಕಿಚ್ಚ ಸುದೀಪ್ ಅವರು ಡಾ.ವಿಷ್ಣು ಸ್ಮಾರಕದ ಬಗ್ಗೆ ಮಾತನಾಡಿದ್ದಾರೆ. ಕನ್ನಡ ಭಾಷೆ ಮತ್ತು ಚಿತ್ರರಂಗಕ್ಕೆ ಡಾ.ವಿಷ್ಣು ಅವರ ಕೊಡುಗೆ ಅಪಾರ. ಅವರು ಸಕಲ ಗೌರವಗಳಿಗೂ ಅರ್ಹರು. ಡಾ.ವಿಷ್ಣುವಿನಂತಹ ದಂತಕಥೆಯ ಸ್ಮಾರಕದ ವಿಷಯದಲ್ಲಾಗುತ್ತಿರುವ ಲೋಪಗಳನ್ನು ಸರಿಪಡಿಸಿ ಆದಷ್ಟು ಬೇಗ ಸ್ಮಾರಕ ಸಿದ್ದಗೊಳ್ಳಬೇಕಿದೆ. ಸರ್ಕಾರದ ಕಾನೂನು ಕಂಟಕಗಳು ನಮಗೆ ಅರ್ಥವಾಗುತ್ತವೆಯಾದರೂ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಬಾರದಂತೆ ಸ್ಮಾರಕ ಶೀಘ್ರ ನಿರ್ಮಾಣಗೊಳ್ಳಬೇಕಿದೆ ಎಂಬರ್ಥದಲ್ಲಿ ಅವರು ಟ್ವೀಟಿಸಿದ್ದಾರೆ.
ಆದ್ರೆ ಈ ವಿಷಯ ಈಗ ವಿವಾದಕ್ಕೆ ಕಾರಣವಾಗಿದೆ. ಡಾ.ರಾಜ್ ಅವರ ಸ್ಮಾರಕಕ್ಕೆ ಇದನ್ನು ತಳುಕುಹಾಕಿ ನೋಡಲಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ರಾಜ್ ಸ್ಮಾರಕ ಲೋಕಾರ್ಪಣೆಯಾಗುತ್ತಿರುವ ಹೊತ್ತಿನಲ್ಲಿ ಡಾ.ವಿಷ್ಣು ಅಭಿಮಾನಿಗಳ ಮನಗೆಲ್ಲಲು ಸುದೀಪ್ ಹೀಗೆ ಟ್ವೀಟಿಸಿದ್ದಾರೆ ಎಂದು ಗುಲ್ಲೆಬ್ಬಿಸುತ್ತಿದ್ದಾರೆ. ರಾಜ್ ಸ್ಮಾರಕ ಲೋಕಾರ್ಪಣೆ ಆದ್ರೆ ಸುದೀಪ್ಗೂ ಸಹ ಸಂತೋಷದ ವಿಷಯವೇ ಆಗಿದೆ. ರಾಜ್ ಅವರನ್ನು ಅನೇಕ ಸಂದರ್ಶನಗಳಲ್ಲಿ ಸುದೀಪ್ ಅವರು ಹೊಗಳಿದ್ದಾರೆ. [ರಾಜ್ ಸ್ಮಾರಕ ಲೋಕಾರ್ಪಣೆಗೆ ಬಿಗ್ ಬಿ, ರಜನಿ, ಚಿರು]

ಈ ವಿಷಯ ಹಾಗಿರಲಿ, ಡಾ.ವಿಷ್ಣು ಸ್ಮಾರಕದ ಗುದ್ದಲಿ ಪೂಜೆ ನವೆಂಬರ್ 6ಕ್ಕೆ ಎಂದು ನಿಗದಿಯಾದ ದಿನದಿಂದ ಡಾ.ವಿಷ್ಣು ಅಭಿಮಾನಿಗಳು "ಗುದ್ದಲಿ ಪೂಜೆ ಆಗಲಿ ಆದರೆ ಡಾ.ವಿಷ್ಣು ಅವರ ಈಗಿರುವ ಜಾಗವನ್ನು ಸ್ಥಳಾಂತರಿಸಬಾರದು" ಎಂದು ಟ್ವೀಟರ್, ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ದುಃಖ ಮತ್ತು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರು. ಈ ವಿಷಯದಲ್ಲಿ ಸುದೀಪ್ ಅವರ ನಿಲುವೇನು ಎಂಬುದನ್ನು ಪ್ರಶ್ನಿಸುತ್ತಿದ್ದರು..? ಇದರ ಸಂಬಂಧವಾಗಿ ಅಭಿಮಾನಿಗಳ ನಡುವೆ ಅನೇಕ ಟ್ವೀಟ್ ಮತ್ತು ಫೇಸ್ ಬುಕ್ ಸಮರಗಳಾಗಿದ್ದವು.

ಡಾ.ವಿಷ್ಣು ಅವರು ಕನ್ನಡ ಭಾಷೆ ಮತ್ತು ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಚಿತ್ರರಂಗದಿಂದ ಡಾ.ವಿಷ್ಣು ಅವರ ಸ್ಮಾರಕದ ¨ಗ್ಗೆ ಯಾರೊಬ್ಬರೂ ಧ್ವನಿಯೆತ್ತದಿರುವುದು ಆಶ್ಛರ್ಯವೇ ಸರಿ. ಪರಿಸ್ಥಿತಿ ಹೀಗಿರಬೇಕಾದರೆ ಕನಿಷ್ಠ ಪಕ್ಷ ಸುದೀಪ್ ಆದ್ರೂ ಸ್ಮಾರಕದ ಬಗ್ಗೆ ಧ್ವನಿ ಎತ್ತಿದರಲ್ಲ ಎನ್ನುವ ಖುಷಿ ನಮ್ಮದಾಗಬೇಕಿತ್ತು.
ಇಡೀ ಕನ್ನಡ ಚಿತ್ರರಂಗವೇ ಈ ವಿಷಯವನ್ನು ಮರೆತು ನಿದ್ರಿಸುವಾಗ ಸುದೀಪ್ಅವರು ಡಾ.ವಿಷ್ಣು ಅವರ ಸ್ಮಾರಕದ ಬಗ್ಗೆ ಧ್ವನಿ ಎತ್ತುವುದರಲ್ಲಿ ತಪ್ಪೇನಿದೆ.? ತನ್ನ ಕುಟುಂಬದ ಒಬ್ಬ ಕಲಾವಿದನ ಬಗ್ಗೆ ಮತ್ತೊಬ್ಬ ಕಲಾವಿದ ಧ್ವನಿ ಎತ್ತುವುದು ತಪ್ಪೇ..? ತಪ್ಪು ಎನ್ನುವ ಹಾಗಿದ್ದರೆ ಡಾ.ವಿಷ್ಣು ಅವರ ಅಭಿಮಾನಿಗಳ್ಯಾಕೆ ಸುದೀಪ್ರ ನಿಲುವೇನು ಎಂದು ಪ್ರಶ್ನಿಸಬೇಕಿತ್ತು..?
ಯಾರೆಲ್ಲಾ ಪ್ರಶ್ನಿಸಿದರೋ ಅವರಿಗೆ ಮಾತ್ರ ಸುದೀಪ್ಅವರು ತನ್ನ ನಿಲುವನ್ನು ವ್ಯಕ್ತಪಡಿಸಿದ್ದಾರೆಯೇ ವಿನಃ, ವಿವಾದವನ್ನಾಗಿಸಲೋ ಅಥವಾ ಯಾರನ್ನೋ ನೋಯಿಸಲು ಅಲ್ಲ ಎಂಬುದನ್ನು ಎಲ್ಲರೂ ತಿಳಿಯಬೇಕು. ವಿರೋಧಕ್ಕೋಸ್ಕರ ವಿರೋಧಿಸುವುದನ್ನು ಬಿಡಬೇಕಿದೆ.
ದ್ವೇಷವನ್ನು ಪ್ರೀತಿಸಿದಾಗ ಗಲಬೆಗಳಾಗುತ್ತವೆ, ದ್ವೇಷವನ್ನು ದ್ವೇಷಿಸಿದಾಗ ಸಾಧನೆಗಳಾಗುತ್ತವೆ. ನಾವೆಲ್ಲರೂ ನಮ್ಮ ಕಲಾವಿದರನ್ನು ಪ್ರೀತಿಸುವ ಕನ್ನಡಿಗರಾಗಬೇಕಿದೆ. ಡಾ.ವಿಷ್ಣು ಅಭಿಮಾನಿಗಳು ಸುದೀಪ್ರನ್ನು ಪ್ರಶ್ನಿಸಿರುವ ಲಿಂಕ್ ಇಲ್ಲಿದೆ ದಯಮಾಡಿ ಕ್ಲಿಕ್ಕಿಸಿ. ನಿಜ ಸಂಗತಿ ತಿಳಿಯಿರಿ.


Click it and Unblock the Notifications











