Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೆಳೆಯ ಓಂ ಪುರಿ ನೆನೆದು ಕಂಬನಿ ಮಿಡಿದ ನಾಗಾಭರಣ
ಇದೇ ತಿಂಗಳ 13ರಂದು ಮೈಸೂರಿನಲ್ಲಿ ಉದ್ಘಾಟನೆಗೊಳ್ಳಲಿರುವ ಬಹುರೂಪಿ ನಾಟಕೋತ್ಸವದ ಉದ್ಘಾಟನೆಗೆ ಅವರು ಬರಬೇಕಿತ್ತು. ಆದರೆ, ಅಷ್ಟರಲ್ಲಿ ವಿಧಿ ಅವರನ್ನು ತನ್ನತ್ತ ಸೆಳೆದುಕೊಂಡು ಹೋಗಿದೆ ಎನ್ನುತ್ತಲೇ ಮಾತಿಗೆ ಕುಳಿತರು ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ. ಒನ್ ಇಂಡಿಯಾದೊಂದಿಗೆ ತಮ್ಮ ಹಾಗೂ ಅಗಲಿದ ಹಿರಿಯ ನಟನೊಂದಿಗೆ ಹಲವಾರು ನೆನಪುಗಳನ್ನು ಬಿಚ್ಚಿಟ್ಟರು. ಒಬ್ಬ ಸಹೃದಯಿ ವ್ಯಕ್ತಿಯನ್ನು ಕಳೆದುಕೊಂಡಿದ್ದಾಗಿ ಬೇಸರ ಮಾಡಿಕೊಂಡರು.
ಕನ್ನಡದಲ್ಲಿ ಅವರು ತಬ್ಬಲಿಯು ನೀನಾದೆ ಮಗನೆ, ಗೋಧೂಳಿ, ಎ.ಕೆ. 47, ಧೃವ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರಿಗೆ ಅವರ ಪ್ರತಿಭೆಯ ಪರಿಚಯ ಮಾಡಿಕೊಟ್ಟಿದ್ದಾರೆ ಎಂದರು. ಓಂ ಪುರಿ ಬಗ್ಗೆ ನಾಗಾಭರಣ ನೀಡಿದ ವಿವರಗಳು ಅವರದೇ ಮಾತುಗಳಲ್ಲಿ...
ದಶಕಗಳ ನಂಟು
1970ನಿಂದ ಗೊತ್ತು, ಕಾರಂತರ ಜತೆ ಕೆಲಸ ಮಾಡುತ್ತಿದ್ದಾಗಿನಿಂದ ನನಗೆ ಓಂ ಪುರಿ ಪರಿಚಯ. ಪುಣೆ ಇನ್ಸಿಟಿಟ್ಯೂಟ್ ನಲ್ಲಿ ಕಾರಂತರಿದ್ದಾಗ ನಾನು ಅವರನ್ನು ಭೇಟಿ ಮಾಡುತ್ತಿದ್ದೆ. ಎಲ್ಲಕ್ಕಿಂತ ಮಿಗಿಲಾಗಿ ಕಾರಂತ್, ಕಾರ್ನಾಡ್ ನಿರ್ದೇಶನದ ತಬ್ಬಲಿಯು ನೀನಾದೆ ಮಗನೆ ಚಿತ್ರದಲ್ಲಿ, ಗೋಧೂಳಿ, ಚೋರ್ ಚೋರ್ ಚುಪ್ ಚುಪ್ ಜಾಯೇ ಎಂಬ ಹಿಂದಿ ಮಕ್ಕಳ ಸಿನಿಮಾದಲ್ಲಿ ನಾವು ಒಟ್ಟಿಗೆ ಕೆಲಸ ಮಾಡಿದ್ದೆವು. ನನ್ನ ಅತ್ಯುತ್ತಮ ಸ್ನೇಹಿತರಲ್ಲೊಬ್ಬ ಓಂಪುರಿ.
ಅಭಿಯನದಲ್ಲಿ ಶ್ರದ್ಧೆ
ತಬ್ಬಲಿಯು ನೀನಾದೆ ಮಗನೆ ಹಾಗೂ ಗೋಧೂಳಿಗೆ ನಾನೇ ಸಹಾಯಕ ನಿರ್ದೇಶಕ. ಕನ್ನಡ ಬಾರದಿದ್ದರೂ ತನ್ನ ಪಾತ್ರಗಳಿಗೆ ಆತ ಸಿದ್ಧಗೊಳ್ಳುತ್ತಿದ್ದ ಬಗೆಯೇ ಅನುಕರಣೀಯವಾಗಿರುತ್ತಿತ್ತು. ರಾತ್ರಿಯಿಡೀ ಕನ್ನಡ ಸಂಭಾಷಣೆಗಳನ್ನು ಬಾಯಿಪಾಠ ಮಾಡಿಕೊಳ್ಳುತ್ತಿದ್ದ, ಪಾತ್ರಕ್ಕೆ ತಕ್ಕಂತೆ ಬಾಡಿ ಲ್ಯಾಂಗ್ವೇಜ್ ಗಳನ್ನು ರಿಹರ್ಸಲ್ ಮೂಲಕ ಕರಗತ ಮಾಡಿಕೊಳ್ಳುತ್ತಿದ್ದ.
ಶಿಸ್ತು ಮೈಗೂಡಿಸಿಕೊಂಡಿದ್ದ
ಪ್ರತಿಯೊಬ್ಬ ನಟನಿಗೂ, ಆತ ಎಷ್ಟೇ ಟ್ಯಾಲೆಂಟೆಡ್ ಆಗಿದ್ದರೂ, ತನ್ನ ಪಾತ್ರಗಳ ತಯಾರಿಗಾಗಿ ಒಂದು ಮಾಡೆಲ್ ಅವಶ್ಯಕತೆಯಿರುತ್ತದೆ. ಹಾಗೆಯೇ ಓಂಪುರಿಯದ್ದು ಪಾತ್ರಗಳಿಗೆ ಸಿದ್ಧಗೊಳ್ಳುತ್ತಿದ್ದ ಬಗೆಯೇ ಒಂದು ವಿಶೇಷವಾದದ್ದು. ಆತ ಆ ಸಿದ್ಧತೆಯಲ್ಲಿ ಎದ್ದು ಕಾಣುತ್ತಿದ್ದುದು ಶಿಸ್ತು. ಅದು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಹಾಗೂ ಪುಣೆಯ ಸಿನಿಮಾ ಹಾಗೂ ಟೆಲಿವಿಷನ್ ಸಂಸ್ಥೆಗಳಲ್ಲಿ ಕಲಿತ ಶಿಸ್ತು. ಆ ಶಿಸ್ತಿನಿಂದಲೇ ಆತ ಎಂಥಾ ಪಾತ್ರಗಳಿಗೂ ಸುಲಭವಾಗಿ ಪರಕಾಯ ಪ್ರವೇಶ ಮಾಡಲು ಸಾಧ್ಯವಾಗುತ್ತಿತ್ತು.
ಚಿರಂತನ ರಂಗಪ್ರೇಮಿ ಆತ
ತುಂಬಾ ಡೌನ್ ಟು ಅರ್ತ್ ಎನ್ನುವಂಥ ಮನುಷ್ಯ. ಬೆಂಗಳೂರಿಗೆ ಬಂದಾಗಲೆಲ್ಲಾ ನನಗೆ ಫೋನ್ ಮಾಡುತ್ತಿದ್ದ. ನಮ್ಮ ಬೆನಕ ತಂಡದ ರಿಹರ್ಸಲ್ ಇರೋ ಕಡೆಗೆ ಬಂದು ನೋಡುತ್ತಾ ಕುಳಿತುಬಿಡೋನು. ಅಕಸ್ಮಾತೇ ಕುರ್ಚಿ ಸಿಗದಿದ್ದಲೇ ನೆಲದ ಮೇಲೇ ತಾಸುಗಟ್ಟಲೇ ಕುಳಿತು ರಿಹರ್ಸಲ್ ನೋಡುತ್ತಾ ಎಂಜಾಯ್ ಮಾಡುತ್ತಿದ್ದ.
ಮರೆಯಲಾಗದ ಪ್ರಸಂಗ
ಆತ ಎಂಥಾ ಸಹೃದಯಿ ಎಂಬುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಚೋರ್ ಚೋರ್ ಚುಪ್ ಚುಪ್ ಜಾಯೇ ಎಂಬ ಮಕ್ಕಳ ಚಿತ್ರದಲ್ಲ ಓಂಪುರಿ, ಒಂದು ಕೋತಿಯೊಂದಿಗೆ ಸ್ನೇಹ ಹೊಂದಿರುವ ವ್ಯಕ್ತಿಯ ಪಾತ್ರ ಮಾಡಬೇಕಿತ್ತು. ಅದಕ್ಕಾಗಿ ಒಂದು ಕೋತಿಯನ್ನು ತಂದು ಆತನ ಜತೆ ಬಿಟ್ಟು ಇದನ್ನು ಗೆಳೆತನ ಮಾಡಿಕೋ ಎಂದು ಬಿಟ್ಟಿದ್ದೆವು. ಮೈಸೂರಿನಲ್ಲಿ ಶೂಟಿಂಗ್ ಸಾಗಿತ್ತು.
ಕೋತಿ ಜತೆ ಸ್ನೇಹ ಮಾಡಲು ಚಾಲೆಂಜ್
ಕೆಲವಾರು ದಿನಗಳ ಒಡನಾಟ ಹಾಗೂ ಶೂಟಿಂಗ್ ಜತೆಜತೆಗೇ ಸಾಗಿತ್ತು. ಓಂಪುರಿಯಂತೂ ಅದರೊಂದಿಗೆ ಅಪ್ಪಟ ಸ್ನೇಹಿತನಂತೇ ವರ್ತಿಸುತ್ತಿದ್ದ. ಅದೊಂದು ದಿನ ಕೋತಿಗೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿದ ಕೂಡಲೇ ಅದು ದೂರ ಓಡಿಹೋಗಿಬಿಟ್ಟಿತು. ದಿನವೆಲ್ಲಾ ಹುಡುಕಿದರೂ, ಕಾದರೂ ಅದು ಬರಲಿಲ್ಲ. ಹಾಗಾಗಿ, ಶೂಟಿಂಗ್ ಕ್ಯಾನ್ಸಲ್ ಮಾಡಲು ನಿರ್ಧರಿಸಿ ಮರುದಿನ ಹೊರಡಲು ನಿರ್ಧರಿಸಿದೆವು.
ಮತ್ತೆ ಬಂದ ಕಪಿರಾಯ
ಕಾರಂತರಂತೂ ರಾತ್ರಿಯೆಲ್ಲಾ ಓಂಪುರಿಯನ್ನು ರೇಗಿಸಿದ್ದರು. ಒಂದು ಕೋತಿಯ ಗೆಳೆತನವನ್ನೂ ಸಂಪಾದಿಸಲಾರೆಯಾ ಎಂದಂದು ಛೇಡಿಸಿದರು. ಓಂಪುರಿಯೂ ನಸುನಗುತ್ತಿದ್ದರು. ಆದರೆ, ಮರುದಿನ ಬೆಳಗ್ಗೆ ನಾವಿದ್ದ ಕೊಠಡಿ ಬಾಗಿಲು ತೆರೆದಾಗ ಓಡಿ ಹೋಗಿದ್ದ ಕೋತಿ ಮತ್ತೆ ಬಂದು ಬಾಗಿಲಲ್ಲಿ ಕೂತಿತ್ತು. ಓಂಪುರಿಯನ್ನು ನೋಡುತ್ತಲೇ ಆತನ ಬಳಿಗೆ ಓಡಿಹೋಗಿ ಆತನ ಪಕ್ಕದಲ್ಲೇ ನಿಂತಿತು. ಇದು ನಿಜಕ್ಕೂ ಅಚ್ಚರಿ ತಂದ ವಿಚಾರ. ಹೀಗೆ, ಪ್ರತಿಯೊಂದು ಜೀವಿಯ ಮೇಲೂ ಗಾಢವಾದ ಪರಿಣಾಮ ಬೀರುವಂಥ ಸಹೃದಯಿ ಆತ.