'ಸಂಗೊಳ್ಳಿ ರಾಯಣ್ಣ' ರಿಲೀಸ್ ವೇಳೆ ದರ್ಶನ್ ಬೌನ್ಸರ್ಸ್, ಸಹೋದರ ದಿನಕರ್ ದಾದಾಗಿರಿ ಆರೋಪ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತವನ ಗ್ಯಾಂಗ್ ಬಂಧನವಾಗಿದೆ. ಆರೋಪ ಸಾಬೀತಾದರೆ ಕಠಿಣ ಶಿಕ್ಷೆ ಕಾದಿದೆ ಎನ್ನುವ ಚರ್ಚೆ ನಡೆಯುತ್ತಿದೆ. ಇದೆಲ್ಲದರ ನಡುವೆ ದರ್ಶನ್ ಹಾಗೂ ಆತನ ಆಪ್ತರ ಕರಾಳ ಮುಖದ ಅನಾವರಣ ಆಗುತ್ತಿದೆ. ಈ ಹಿಂದೆ ದರ್ಶನ್, ಮತ್ತವನ ಪಟಾಲಂನಿಂದ ತೊಂದರೆ ಅನುಭವಿಸಿದವರು ಹೊರಬಂದು ಮಾತನಾಡುತ್ತಿದ್ದಾರೆ.
ಮೈಸೂರಿನಲ್ಲಿರುವ ತೂಗುದೀಪ ಫಾರ್ಮ್ಹೌಸ್ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಮಹೇಶ್ ಕುಟುಂಬ ತಮ್ಮ ಅಳಲು ತೋಡಿಕೊಂಡಿತ್ತು. ಫಾರ್ಮ್ಹೌಸ್ನಲ್ಲಿದ್ದ ಎತ್ತು ಮಹೇಶ್ ಮುಖಕ್ಕೆ ತಿವಿದು ಗಂಭೀರವಾಗಿ ಪೆಟ್ಟಾಗಿತ್ತು. ಆದರೆ ಕುಟುಂಬಕ್ಕೆ ದರ್ಶನ್ ಯಾವುದೇ ಪರಿಹಾರ ನೀಡಲಿಲ್ಲ. ಹಣ ಕೇಳಿದರೆ ನಾಯಿಗಳನ್ನು ಛೂ ಬಿಟ್ಟರು ಎಂದು ಆರೋಪಿಸಿದ್ದರು.

ಇತ್ತೀಚೆಗೆ 'ಶ್ರೀಕೃಷ್ಣ ಪರಮಾತ್ಮ' ಸಿನಿಮಾ ನಿರ್ಮಾಪಕ ಭರತ್ ಕೂಡ ಗಂಭೀರ ಆರೋಪ ಮಾಡಿದ್ದರು. ನಟ ದರ್ಶನ್ ನನಗೆ ಕೊಲೆ ಬೆದರಿಕೆ ಹಾಕಿದ್ದರು ಎಂದಿದ್ದಾರೆ. ಇದೀಗ ಹಾವೇರಿಯ ಚಿತ್ರಮಂದಿರದ ಮಾಲೀಕರೊಬ್ಬರು ದರ್ಶನ್ ಹಾಗೂ ಆತನ ಆಪ್ತರ ವಿರುದ್ಧ ಹಲ್ಲೆ ಆರೋಪ ಮಾಡಿದ್ದಾರೆ. 'ಕ್ರಾಂತಿವೀರ ಸಂಗೊಳ್ಳಿ' ಸಿನಿಮಾ ಬಿಡುಗಡೆ ಸಮಯದಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವಾಹಿನಿಗೆ ಪ್ರತಿಕ್ರಿಯಿಸಿದ್ದಾರೆ.
ನಾಗಣ್ಣ ನಿರ್ದೇಶನದಲ್ಲಿ ದರ್ಶನ್ ನಟಿಸಿದ 'ಕ್ರಾಂತಿವೀರ ಸಂಗೊಳ್ಳಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಹಾವೇರಿಯ ತಮ್ಮ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲೇಬೇಕೆಂದು ಮಾಲೀಕ ನಾಗನಗೌಡ ಪ್ರಯತ್ನಿಸಿದ್ದಾರೆ. ಅದಕ್ಕಾಗಿ ಪ್ರಿಂಟ್ ಕೇಳಿಕೊಂಡು ಗಾಂಧಿನಗರಕ್ಕೆ ಬಂದಿದ್ದರಂತೆ. ನಿಮ್ಮದು ಹಳೆಯ ಸಣ್ಣ ಥಿಯೇಟರ್. 50 ದಿನಗಳ ಬಳಿಕ ಪ್ರಿಂಟ್ ಕೊಡ್ತೀವಿ ಎಂದಿದ್ದರಂತೆ. ಬೇಕೇಬೇಕು ಎಂದು ನಿರ್ಮಾಪಕರ ಗಟ್ಟಿಯಾಗಿ ಮಾತನಾಡುತ್ತಿದ್ದಾಗ ದಿನಕರ್ ನನ್ನ ಮೂಗಿಗೆ ಗುದ್ದಿ ಹಲ್ಲೆ ಮಾಡಿದ್ದರು ಎಂದು ನಾಗನಗೌಡ ನೆನಪಿಸಿಕೊಂಡಿದ್ದಾರೆ.
ದಿನಕರ್ ತಮ್ಮ ಮೇಲೆ ಹಲ್ಲೆ ಮಾಡಿದರೂ ಪಟ್ಟುಬಿಡದೇ ಪ್ರಿಂಟ್ ಬೇಕು ಎಂದು ಕೇಳಿದೆ. 30 ಲಕ್ಷ ಕೊಡು, 50 ಲಕ್ಷ ಕೊಡು ಎಂದು ಕೇಳಿದ್ದರು. ನನ್ನ ಬಳಿ ಇಲ್ಲ ಎಂದಾಗ ಥಿಯೇಟರ್ ಅಡವಿಟ್ಟು ಪ್ರಿಂಟ್ ತೆಗೆದುಕೊಂಡಿದ್ದೆ. ಪ್ರಿಂಟ್ ಮಾಡಿಸಲು ಮತ್ತೆ 2 ಲಕ್ಷ ಕೇಳಿದರು. ಸಾಲ ಮಾಡಿ ಅದನ್ನು ಕೊಟ್ಟಿದ್ದೆ. ವಾರದ ಬಳಿಕ ನನಗೆ ಪ್ರಿಂಟ್ ಸಿಕ್ತು. ನನ್ನ ಥಿಯೇಟರ್ನಲ್ಲಿ 50 ದಿನಗಳ ಕಾಲ ಸಿನಿಮಾ ಪ್ರದರ್ಶನ ಕಂಡಿತ್ತು. ಬಳಿಕ ದರ್ಶನ್ ಚಿತ್ರಮಂದಿರಕ್ಕೆ ಭೇಟಿ ಕೊಡುವುದಾಗಿ ಹೇಳಿದರು.

50 ದಿನಗಳ ಸಂಭ್ರಮಾಚರಣೆಗೆ ಮಧ್ಯಾಹ್ನ 12 ಗಂಟೆಗೆ ಬರಬೇಕಿದ್ದ ದರ್ಶನ್ ರಾತ್ರಿ 12ರ ಸುಮಾರಿಗೆ ಬಂದರು. ಅಭಿಮಾನಿಗಳನ್ನು ಮಾತನಾಡಿಸಿ ಹೋದರು. ಅಷ್ಟು ಹೊತ್ತು ರಾತ್ರಿಯಲ್ಲಿ ದರ್ಶನ್ ಅಭಿಮಾನಿಗಳು ಅವರನ್ನು ಮಾತನಾಡಿಸಬೇಕು, ಫೋಟೊ ತೆಗೆಸಿಕೊಳ್ಳಬೇಕು ಎಂದು ಹೋಗಿದ್ದರು. ಆದರೆ ದರ್ಶನ್ ಬೌನ್ಸರ್ಸ್, ಅಭಿಮಾನಿಗಳ ಮೇಲೆ ಹಲ್ಲೆ ಮಾಡಿದ್ದರು. ಬಳಿಕ ಅಭಿಮಾನಿಗಳು ಸಿನಿಮಾ ಪೋಸ್ಟರ್ ಹರಿದು ಬೇಸರ ಹೊರ ಹಾಕಿದ್ದರು ಎಂದು ನಾಗನಗೌಡ ವಿವರಿಸಿದ್ದಾರೆ.
ಆನಂದ್ ಅಪ್ಪುಗೋಳ್ ನಿರ್ಮಾಣದ 'ಕ್ರಾಂತಿವೀರ ಸಂಗೊಳ್ಳಿ' ಚಿತ್ರದಲ್ಲಿ ಜಯಪ್ರದ, ನಿಖಿತಾ ತುಕ್ರಾಲ್, ಶಶಿಕುಮಾರ್, ಅವಿನಾಶ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದರು. ಸಂಗೊಳ್ಳಿ ರಾಯಣ್ಣನ ಜೀವನಾಧರಿತ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿತ್ತು. ಸಿನಿಮಾ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿತ್ತು. ಯಶೋವರ್ಧನ್, ಹರಿಕೃಷ್ಣ ಸಂಗೀತ, ರಮೇಶ್ ಬಾಬು ಛಾಯಾಗ್ರಹಣ ಚಿತ್ರಕ್ಕಿತ್ತು.


Click it and Unblock the Notifications











