ಕನ್ನಡ ಸಿನಿಮಾ ಅಂದರೆ ಯಶ್ಗೆ ಯಾಕೆ ಬೇಸರ ?
'ಮೊಗ್ಗಿನ ಮನಸು' ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದು,'ಕೆ.ಜಿ.ಎಫ್' ಚಿತ್ರದ ಮೂಲಕ ಭಾರತದ ಅಸಂಖ್ಯಾತ ಜನರನ್ನು ಬೆರಗಾಗಿಸಿದವರು ಯಶ್.ಇಂಥಾ ಯಶ್ ಈಗ ಕೇವಲ ರಾಕಿಂಗ್ ಸ್ಟಾರ್ ಅಲ್ಲ ಬದಲಿಗೆ ನ್ಯಾಷನಲ್ ಸ್ಟಾರ್. ಗೊತ್ತಿಲ್ಲ, ಮುಂದೊಂದು ದಿನ ಇಂಟರ್ ನ್ಯಾಷನಲ್ ಸ್ಟಾರ್ ಆದರೂ ಆಗಬಹುದು.
ಯಾಕೆಂದರೆ ಯಶ್ ಯೋಚನೆ-ಯೋಜನೆ ಎರಡು ದೊಡ್ಡದು. ಇದಕ್ಕೆ ಕೈಗನ್ನಡಿ ಎಂಬಂತೆ ಯಶ್ ಅವರ ಮುಂದಿನ ಸಿನಿಮಾ 'ಟಾಕ್ಸಿಕ್' ಮೇಲೆ ಎಲ್ಲರ ಕಣ್ಣಿದೆ. ಜಗತ್ತು ಯಶ್ ಬಗ್ಗೆ ಮಾತನಾಡುತ್ತಿದೆ. ಕನ್ನಡದಲ್ಲಿ ಮಾತ್ರವಲ್ಲ ಏಕಕಾಲದಲ್ಲಿ ಈ ಚಿತ್ರದ ಚಿತ್ರೀಕರಣ ಇಂಗ್ಲೀಷ್ ಭಾಷೆಯಲ್ಲಿ ಕೂಡ ನಡೆಯುತ್ತಿದೆ. ಇದರ ನಡುವೆ ಬಿಡುವು ಮಾಡಿಕೊಂಡು ಯಶ್ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ. ಕನ್ನಡ ಚಿತ್ರರಂಗ ಅಂದರೆ ಬೇಜಾರಾಗುವ ವಿಚಾರವನ್ನು ಹೇಳಿದ್ದಾರೆ.

ಹೌದು, ಯಶ್ ನಿನ್ನೆ ಮನದ ಕಡಲು ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಬಂದಿದ್ದರು. ಬಹುದಿನಗಳ ನಂತರ ಕನ್ನಡದ ತಂತ್ರಜ್ಞರನ್ನು ಮತ್ತು ಕಲಾವಿದರನ್ನು ಭೇಟಿಯಾದರು. ಇದೇ ಸಮಯದಲ್ಲಿ ತಮ್ಮ ಹಳೆಯ ದಿನಗಳನ್ನು ಕೂಡ ನೆನಪು ಮಾಡಿಕೊಂಡ ಯಶ್ ಆ ನಂತರ ಕನ್ನಡ ಚಿತ್ರಗಳನ್ನು ನೋಡಲು ಜನ ಚಿತ್ರಮಂದಿರಕ್ಕೆ ಯಾಕೆ ಬರುತ್ತಿಲ್ಲ ಎಂಬ ಪ್ರಶ್ನೆಗೆ ತಮ್ಮ ಉತ್ತರ ನೀಡಿದರು. ಗೋಳಾಡಿದರೆ ಪ್ರಯೋಜನ ಇಲ್ಲ ಎಂದು ಹೇಳಿದರು.
ಈ ಕುರಿತು ಮಾತನಾಡಿರುವ ಯಶ್ ನಾನು ಈ ಹಿಂದೆ ಕನ್ನಡದ ಪ್ರೇಕ್ಷಕರ ಮೇಲೆ ಗೂಬೆ ಕೂರಿಸುತ್ತಿದ್ದೆ, ಕನ್ನಡದ ಪ್ರೇಕ್ಷಕರು ಕನ್ನಡ ಚಿತ್ರ ಹೊರತು ಪಡಿಸಿ ಬೇರೆ ಎಲ್ಲ ಭಾಷೆಯ ಚಿತ್ರಗಳನ್ನು ನೋಡುತ್ತಾರೆ ಎಂದುಕೊಂಡಿದ್ದೆ, ಈ ಕುರಿತು ಒಂದು ಸಂದರ್ಶನದಲ್ಲಿ ಕೂಡ ಮಾತನಾಡಿದ್ದೆ ಎಂದಿದ್ದಾರೆ. ಆದರೆ ಆ ನಂತರ ಒಮ್ಮೆ ಕುಂತು ಯೋಚನೆ ಮಾಡುತ್ತಿದ್ದಾಗ ನನಗೆ ಜ್ಞಾನೋದಯವಾಯ್ತು ಎಂದು ಹೇಳಿರುವ ಯಶ್ ನಮ್ಮ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡಿ ಒಳ್ಳೆಯ ಚಿತ್ರಗಳನ್ನು ನೀಡಿದರೆ ಕನ್ನಡಿಗರು ಯಾವತ್ತು ಕೈ ಬಿಡುವುದಿಲ್ಲ ಎನ್ನುವ ಸತ್ಯದ ಅರಿವು ನನಗಾಯ್ತು ಎಂದು ಹೇಳಿದ್ದಾರೆ. ಕನ್ನಡದ ಕಲಾಭಿಮಾನಿಗಳು ಯಾವತ್ತಿದ್ದರೂ ಒಳ್ಳೆಯ ಚಿತ್ರಗಳನ್ನು ಹರಸಿ ಹಾರೈಸುತ್ತಾರೆ ಎಂದಿದ್ದಾರೆ.
ಇನ್ನು, ಇದೇ ಸಮಯದಲ್ಲಿ ತಮ್ಮ ಕನ್ನಡ ಚಿತ್ರರಂಗದ ಸಹೋದ್ಯೋಗಿಗಳಿಗೆ ಕರೆಯನ್ನು ಕೂಡ ನೀಡಿರುವ ಯಶ್ ನಾವೆಲ್ಲ ಕೆಲಸ ಕಲಿಯೋಣ, ಅಪ್ಗ್ರೇಡ್ ಆಗೋಣ, ದೊಡ್ಡ ಗುರಿಯನ್ನು ಇಟ್ಟುಕೊಳ್ಳೋಣ, ಸ್ವಾಭಿಮಾನ ಬೆಳೆಸಿಕೊಳ್ಳೋಣ, ಯಾರ ಮುಂದೆಯೂ ನಾವು ಕಡಿಮೆ ಎಂದು ಯೋಚನೆ ಮಾಡಬೇಡಿ, ತಲೆ ತಗ್ಗಿಸಬೇಡಿ, ಬೇಡೋದು ಬೇಡ, ಕಷ್ಟ ಪಟ್ಟು ಕೆಲಸ ಮಾಡೋಣ, ಬೇರೆ ಅವರೆಲ್ಲರೂ ನಮಗೆ ಗೌರವ ಕೊಡುವಂತೆ ದುಡಿಯೋಣ, ಧೈರ್ಯವಾಗಿ ಬನ್ನಿ ಎಂದು ಹೇಳಿದ್ದಾರೆ.
ಚಿತ್ರರಂಗಕ್ಕೆ ಹೊಸಬರು ಬರಬೇಕು, ಕೇವಲ ನಟನೆ ಮಾತ್ರ ಸಿನಿಮಾ ಅಲ್ಲ ಶಿಸ್ತು, ಕಲಿಕೆಯ ಗುಣ ಮತ್ತು ಗುರಿಯನ್ನು ಕೂಡ ಹೊಂದಿರಬೇಕು ಎಂದಿರುವ ಯಶ್ ನಿಮ್ಮ ಜವಾಬ್ಧಾರಿಗಳನ್ನು ನೀವು ಸರಿಯಾಗಿ ತಿಳಿದುಕೊಂಡಿರಬೇಕು ಎಂದು ಹೊಸಬರಿಗೆ ಕಿವಿ ಮಾತನ್ನು ಕೂಡ ಹೇಳಿದ್ದಾರೆ. ಸಾಕಷ್ಟು ಜನ ಹೊಸಬರು ಬಂದು ನನ್ನಲ್ಲಿ ಟ್ರೇಲರ್ ಲಾಂಚ್ ಮಾಡಿ ನಮ್ಮ ಚಿತ್ರದ ಕಾರ್ಯಕ್ರಮಕ್ಕೆ ಬನ್ನಿ ಎಂದು ಕೇಳಿಕೊಳ್ಳುತ್ತಾರೆ ಆದರೆ ನಾನು ಬಂದರೆ ಸಿನಿಮಾ ಗೆಲ್ಲಲ್ಲ ನಿಜವಾದ ಗೆಲುವು ಸಿಗುವುದು ನೀವು ಮಾಡುವ ಕೆಲಸದಿಂದ ಎನ್ನುವುದನ್ನು ನೆನಪಿನಲ್ಲಿಡಿ ಎಂದು ಕೂಡ ಯಶ್ ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ತಮ್ಮನ್ನು ನೋಡಲು ಮುಗಿ ಬಿದ್ದಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ಕೂಡ ಮಾತನಾಡಿರುವ ಯಶ್, ನಿಮ್ಮ ಋಣ ಹೇಗೆ ತೀರಿಸಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ, ನಿಮ್ಮ ಈ ಅಭಿಮಾನದ ಕೂಗು, ನಿಮ್ಮ ಈ ಧ್ವನಿ ನನಗೆ ದೊಡ್ಡಸ್ತಿಕೆ ತಂದುಕೊಡಲ್ಲ, ಜವಾಬ್ಧಾರಿಯನ್ನು ತಂದು ಕೊಡುತ್ತೆ ಎಂದು ಹೇಳಿದ್ದಾರೆ. ಅಭಿಮಾನ ಕುಗ್ಗುವಂತೆ ನಾನು ಮಾಡಲ್ಲ ಬದಲಿಗೆ ಇನ್ನು ಹೆಚ್ಚಾಗುವಂತೆ ನಡೆದುಕೊಳ್ಳುತ್ತೇನೆ ಎಂದು ಭರವಸೆಯನ್ನು ಕೂಡ ನೀಡಿದ್ದಾರೆ.
ಹೀಗೆ ಮನದ ಕಡಲು ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ತಮ್ಮ ಮನದ ಮಾತುಗಳನ್ನು ಹಂಚಿಕೊಂಡ ಯಶ್ ತಮ್ಮ ಆರಂಭದ ದಿನಗಳಲ್ಲಿ ಕನ್ನಡ ಚಿತ್ರರಂಗ ತಮ್ಮನ್ನು ಹೇಗೆ ನೋಡುತ್ತಿತ್ತು ಎನ್ನುವುದನ್ನು ಕೂಡ ಹೇಳಿದ್ಧಾರೆ. ಇವತ್ತು ನನ್ನನ್ನು ಹೊಗಳುತ್ತಿದ್ದಾರೆ. ನಾನು ಇಲ್ಲಿ ಬಂದಿದ್ದಕ್ಕೆ ಧನ್ಯವಾದ ಹೇಳುತ್ತಿದ್ದಾರೆ. ಆದರೆ ಮೊದಲು ನಾನು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾಗ ನನಗೆ ಸುಮಾರು ಸಿನಿಮಾ ಆಫರ್ ಬರ್ತಿತ್ತು, ಆದರೆ ನಾನು ಕಥೆ ಏನು ಎಂದು ಕೇಳುತ್ತಿದ್ದೇ ಅದಕ್ಕೆ ಎಲ್ಲರು ಕೊಬ್ಬು ಎನ್ನುತ್ತಿದ್ದರು ಎಂದು ಹೇಳಿದ್ಧಾರೆ. ಇನ್ನು ತಮಗಾದ ಅವಮಾನವನ್ನು ಕೂಡ ನೆನಪು ಮಾಡಿಕೊಂಡಿರುವ ಯಶ್ ಅವತ್ತೊಂದು ದಿನ ಯಾವುದೋ ಚಿತ್ರದ ಅವಕಾಶ ಬಂತು. ಮ್ಯಾನೇಜರ್ ಹೇಳಿದರು ಅಂತ ನಾನು ಅಲ್ಲಿ ಹೋಗಿದ್ದೇ, ಆಗ ಕೆಳಗೆ ಇದ್ದ ಮ್ಯಾನೇಜರ್ ನಿರ್ದೇಶಕರು ನಿರ್ಮಾಪಕರು ಎಲ್ಲ ನಿಮಗಾಗಿ ಕಾಯುತ್ತಾ ಕುಳಿತಿದ್ದಾರೆ ಬೇಗ ಹೋಗಿ ಎಂದರು, ನಾನು ಹೌದಾ ಸರಿ ಎಂದು ಮೇಲೆ ಹತ್ತಿ ರೂಮ್ ಒಳಗೆ ಹೋದ ತಕ್ಷಣ ಅವರು ಯಾರು ಏನಾಗಬೇಕಿತ್ತು ಎಂದು ಪ್ರಶ್ನೆಯನ್ನು ಕೇಳಿದರು ಎಂದು ಹೇಳಿದ್ದಾರೆ.
ನನಗಾಗಿ ಕಾಯುತ್ತಿದ್ದವರಿಗೆ ನಾನು ಯಾರು ಎನ್ನುವುದೇ ಗೊತ್ತಿರಲಿಲ್ಲ ಎಂದು ಹೇಳಿರುವ ಯಶ್ ಆಗ ಫೋಟೊ ಇದೆಯಾ ಎಂದು ಕೇಳಿದರು. ನಾನು ಇಲ್ಲ ಅಂದೆ, ಅದಕ್ಕೆ ಅವರು ಹೀರೋ ಆಗಬೇಕು ಅಂತೀಯಾ ಫೋಟೊ ಇಲ್ವಾ ಎಂದು ಹೇಳಿದರು, ಆಗ ನಾನು ಸರ್ ನಾನು ಫೋಟೊ ತಗೊಂಡು ಎಲ್ಲಿಯೂ ಹೋಗಲ್ಲ ಯಾರು ಕರೆದು ನನಗೆ ಕೆಲಸ ಕೊಡ್ತಾರೋ ಆ ಕೆಲಸ ನಾನು ಭಕ್ತಿಯಿಂದ ಮಾಡ್ತೀನಿ ಎಂದೆ, ಅದಾದ ಮೇಲೆ ನಾನು ಕಥೆ ಕೇಳಿದೆ ಆದರೆ ಅವರು ಕಥೆ ಹೇಳಲಿಲ್ಲ ಎಂದು ಹೇಳಿದ್ಧಾರೆ. ಕಥೆ ಕೇಳದೇ ಹೇಗೆ ಕೆಲಸ ಮಾಡೋದು ಅದಕ್ಕೆ ಬಿಟ್ಟು ಬಂದೆ ಎಂದಿದ್ದಾರೆ.
ಇನ್ನು ಇದೇ ಸಮಯದಲ್ಲಿ ನಾನು ಹೊಸಬನಾಗಿದ್ದಾಗ ನೀವೆಲ್ಲ ಸಣ್ಣ ಪ್ರೋತ್ಸಾಹ ಕೊಟ್ಟಿದ್ದಕ್ಕೆ ಇವತ್ತು ನಾನು ಇಲ್ಲಿ ನಿಲ್ಲೋಕೆ ಸಾಧ್ಯವಾಗಿದ್ದು, ಈ ಹೊಸ ನಾಯಕ ಮತ್ತು ನಾಯಕಿಯರಿಗೂ ಕೂಡ ನಿಮ್ಮ ಪ್ರೋತ್ಸಾಹ ಮತ್ತು ಬೆಂಬಲ ಇರಲಿ ಎಂದು ಮನವಿಯನ್ನು ಮಾಡಿಕೊಂಡಿರುವ ಯಶ್, ಟಾಕ್ಸಿಕ್ ಚಿತ್ರದ ಕುರಿತು ಮುಂಬರುವ ದಿನಗಳಲ್ಲಿ ಮಾಹಿತಿಯನ್ನು ನೀಡುತ್ತೇನೆ, ಕೆಲಸ ಮಾಡ್ತಿದ್ದೀನಿ ನಂಬಿಕೆ ಇಟ್ಟುಕೊಳ್ಳಿ, ದೊಡ್ಡದಾಗಿ ಏನೋ ಮಾಡ್ತಿದ್ದೀವಿ ಎಂದು ಹೇಳಿದ್ದಾರೆ.
ತಮ್ಮ ಮನದ ಕಡಲು ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ ಯಶ್ ಅವರಿಗೆ ಧನ್ಯವಾದ ಹೇಳಿದ ಯೋಗರಾಜ್ ಭಟ್ ನಮ್ಮ ಮನದ ಕಡಲು ಜನರ ಕಡಲಾಗಬೇಕು ಎನ್ನುವುದು ನನ್ನ ಆಶಯ, ಕಾರ್ಯಕ್ರಮಕ್ಕೆ ಬಂದ ಸ್ನೇಹ ಜೀವಿ, ಪ್ರೇಮ ಜೀವಿ, ರಾಕಿಂಗ್ ಸ್ಟಾರ್ ಯಶ್ ಅವರನ್ನು ಮನದ ಕಡಲು ಚಿತ್ರತಂಡ ಕೊನೆವರೆಗೆ ನೆನಪಿನಲ್ಲಿ ಇಟ್ಟುಕೊಳ್ಳುತ್ತೆ ಎಂದು ಹೇಳಿದ್ದಾರೆ. ಇನ್ನುಳಿದಂತೆ ಈ ಮಾರ್ಚ್ 28ರಂದು ಬಿಡುಗಡೆಯಾಗಲಿರುವ ಈ ಮನದ ಕಡಲು ಚಿತ್ರದಲ್ಲಿ ಸುಮುಖ ನಾಯಕನ ಪಾತ್ರವನ್ನು ನಿರ್ವಹಿಸಿದ್ದರೆ, ರಾಶಿಕಾ ಶೆಟ್ಟಿ ಮತ್ತು ಅಂಜಲಿ ಶಾ ನಾಯಕಿಯರ ಪಾತ್ರವನ್ನು ನಿರ್ವಹಿಸಿದ್ಧಾರೆ. ಮುಂಗಾರು ಮಳೆ ಚಿತ್ರವನ್ನು ನಿರ್ಮಾಣ ಮಾಡಿದ್ದ ಇ. ಕೃಷ್ಣಪ್ಪ ಅವರು ಈ ಚಿತ್ರಕ್ಕೂ ಬಂಡವಾಳ ಹೂಡಿರುವುದು ವಿಶೇಷ.


Click it and Unblock the Notifications











