ಪರಭಾಷಾ ನಟರ ಬಾಯಲ್ಲಿ ಕನ್ನಡ ಬರುವುದು ಯಾವಾಗ?
ಇತ್ತೀಚಿಗಷ್ಟೆ 'ಸೈರಾ ನರಸಿಂಹ ರೆಡ್ಡಿ' ತೆಲುಗು ಸಿನಿಮಾದ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಕನ್ನಡ ನೆಲದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತೆಲುಗು ಮಾತುಗಳೇ ಜೋರಾಗಿ ಕೇಳಿಸಿತು.
ಇದೊಂದು ತೆಲುಗು ಚಿತ್ರದ ಕಾರ್ಯಕ್ರಮ ಆಗಿದ್ದರೂ, ಅದು ನಡೆಯುತ್ತಿರುವುದು ಕರ್ನಾಟಕದಲ್ಲಿ. ಆದರೆ, ಅದರ ಪರಿಜ್ಞಾನವೇ ಇಲ್ಲದ ಹಾಗೆ ವೇದಿಕೆ ಮೇಲೆ ನಟರಾದ ಚಿರಂಜೀವಿ, ರಾಮ್ ಚರಣ್, ನಟಿ ತಮನ್ನಾ ಹೀಗೆ ಎಲ್ಲರೂ ತೆಲುಗಿನಲ್ಲಿ ಮಾತನಾಡಿದರು.
ಕನ್ನಡದ ಬಹುತೇಕ ನಟರು ಬೇರೆ ರಾಜ್ಯಕ್ಕೆ ಹೋದರೆ, ಅಲ್ಲಿನ ಭಾಷೆಯಲ್ಲಿ ಮಾತನಾಡುತ್ತಾರೆ. ಅಥವಾ ಎಲ್ಲರಿಗೂ ಅರ್ಥ ಆಗಬೇಕು ಎಂದು ಇಂಗ್ಲೀಷ್ ನಲ್ಲಿ ಮಾತನಾಡುತ್ತಾರೆ. ಆದರೆ, ಕರ್ನಾಟಕಕ್ಕೆ ಬರುವ ಪರಭಾಷ ಸ್ಟಾರ್ ಕನ್ನಡದ ಶಬ್ದವನ್ನು ಆಡುವುದಿಲ್ಲ.
ಇದು ಇತ್ತೀಚಿಗಿನ 'ಸೈರಾ', 'ಡಿಯರ್ ಕಾಮ್ರೆಡ್', 'ಸಾಹೋ' ಸಿನಿಮಾ ದಿಂದ ಶುರು ಆಗಿಲ್ಲ. ಈ ಹಿಂದಿನಿಂದ ಪದೇ ಪದೇ ಈ ರೀತಿಯ ಘಟನೆಗಳು ಪುನರಾವರ್ತನೆ ಆಗುತ್ತಲೇ ಇವೆ. ಹಾಗಾದ್ರೆ, ಬೇರೆ ಸ್ಟಾರ್ ಗಳು ನಮ್ಮ ಭಾಷೆ ಮಾತನಾಡುವುದು ಯಾವಾಗ?

ಒಂದು ಸಿನಿಮಾದಿಂದ, ನಾಲ್ಕೈದು ಭಾಷೆ ಕಲಿತ ಯಶ್
ನಟ ಯಶ್ 'ಕೆಜಿಎಫ್' ಸಿನಿಮಾವನ್ನು ಐದು ಭಾಷೆಗಳಲ್ಲಿ ಬಿಡುಗಡೆ ಮಾಡಿದರು. ಈ ಸಿನಿಮಾ ಪ್ರಚಾರ ಕಾರ್ಯಕ್ರಮಕ್ಕೆ ಹೋದಾಗ ಆಯಾ ರಾಜ್ಯಗಳಲ್ಲಿ ಆಯಾ ಭಾಷೆಯಲ್ಲಿಯೇ ಮಾತನಾಡುತ್ತಿದರು. ಅವರ ಭಾಷೆಯನ್ನು ಮಾತನಾಡುವ ಮೂಲಕ, ಅಲ್ಲಿನ ಸಂಸ್ಕೃತಿಯನ್ನು ಗೌರವಿಸಿದರು. ಹೀಗೆ ಮಾಡಲು ಪರಭಾಷಾ ನಟರಿಗೆ ಏಕೆ ಸಾಧ್ಯವಿಲ್ಲ.

ಚಿರಂಜೀವಿರಂತಹ ನಟರೂ ಕನ್ನಡವನ್ನು ತಡವರಿಸುತ್ತಾರೆ
ಯಶ್ ಒಂದೇ ಒಂದು ಸಿನಿಮಾ ಮಾಡಿ ತೆಲುಗು ಕಲಿತರು. ಆದರೆ, ಚಿರಂಜೀವಿ ಇಷ್ಟು ವರ್ಷಗಳ ಕರ್ನಾಟಕದ ಒಡನಾಟ ಹೊಂದಿದ್ದರೂ ಕನ್ನಡದ ಕಲಿತಿಲ್ಲ. ಈಗಲೂ ಅವರು ಕನ್ನಡ ಒಂದೆರಡು ಪದ ಹೇಳಲು ತಡವರಿಸುತ್ತಾರೆ. ಕರ್ನಾಟಕದಲ್ಲಿ ಅಪಾರ ಅಭಿಮಾನಿಗಳನ್ನು, ಸ್ನೇಹಿತರನ್ನು, ಹೊಂದಿರುವ ಚಿರು ಕನ್ನಡ ನುಡಿಯುವುದು ಯಾವಾಗ?

ಎಲ್ಲ ಪರಭಾಷಾ ಸ್ಟಾರ್ ಗಳದ್ದೂ ಇದೇ ಕಥೆ
ನಟ ಅಲ್ಲು ಅರ್ಜುನ್, ವಿಜಯ ದೇವರಕೊಂಡ, ಮಹೇಶ್ ಬಾಬು, ಪ್ರಭಾಸ್, ಸೂರ್ಯ, ಧನುಷ್, ವಿಜಯ್, ವಿಕ್ರಂ ಹೀಗೆ ಸಾಕಷ್ಟು ಸೌತ್ ಸ್ಟಾರ್ ಗಳು ಆಗಾಗ ಕರ್ನಾಟಕಕ್ಕೆ ಬರುತ್ತಾರೆ. ತಮ್ಮ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಯಾಗುತ್ತಾರೆ. ಆದರೆ, ಯಾರೂ ಕೂಡ ಕನ್ನಡ ಕಲಿಯುವ ಮನಸ್ಸು ಮಾಡಿಲ್ಲ. ಕನ್ನಡದ ಪ್ರೆಸ್ ಮೀಟ್ ಕಾರ್ಯಕ್ರಮಗಳು ಕೂಡ ಕೆಲವು ಭಾರಿ ತೆಲುಗು, ತಮಿಳಿನಿಂದ ಆವರಸಿಕೊಂಡು ಬಿಡುತ್ತದೆ.

ಕರ್ನಾಟಕ ವ್ಯಾಪಾರಕ್ಕೆ ಮಾತ್ರ ಸೀಮಿತನಾ?
ಉಪೇಂದ್ರ, ದರ್ಶನ್, ಶಿವರಾಜ್ ಕುಮಾರ್ ಸೇರಿದಂತೆ ಸಾಕಷ್ಟು ಕನ್ನಡ ನಟರು ಬೇರೆ ರಾಜ್ಯದಲ್ಲಿ ಅಲ್ಲಿನ ಭಾಷೆ ಮಾತನಾಡುತ್ತಾರೆ. ಆದರೆ, ಅಲ್ಲಿನ ಸ್ಟಾರ್ ಗಳು ಇಲ್ಲಿಗೆ ಬಂದಾಗ ಕನ್ನಡ ಮಾತನಾಡುವುದಿಲ್ಲ. ಇತ್ತ ಕನ್ನಡ ಸಿನಿಮಾಗಳನ್ನೂ ನೋಡುವುದಿಲ್ಲ. ಹಾಗಿದ್ದರೆ, ಕರ್ನಾಟಕ ಅವರಿಗೆ ವ್ಯಾಪಾರಕ್ಕೆ ಮಾತ್ರ ಸೀಮಿತನಾ? ಎನ್ನುವ ಪ್ರಶ್ನೆ ಮೂಡುತ್ತದೆ.

ಇದು ಕನ್ನಡಿಗರ ಕರ್ತವ್ಯ
ಯಾವುದೇ ಭಾಷೆ ಆಗಲಿ, ಅದನ್ನು ಬಳಸಿದಷ್ಟು ಬೆಳೆಯುತ್ತದೆ. ಕನ್ನಡ ಮಾತನಾಡಬೇಕು ಎನ್ನುವುದು ಬರೀ ಸ್ಟಾರ್ ಗಳಿಗೆ ಸಂಬಂಧಪಡುವ ವಿಷಯವಲ್ಲ. ಕರ್ನಾಟಕದ ಪ್ರತಿಯೊಬ್ಬರು ಅದನ್ನು ಮಾಡಬೇಕು ಕನ್ನಡಕ್ಕಾಗಿ ನಾವೇನು ಮಾಡುವುದು ಬೇಡ, ನಾವು ನಮ್ಮ ಜೊತೆಗೆ ಇರುವ ಇತರ ಭಾಷೆಯ ಜನರ ಜೊತೆಗೂ ಕನ್ನಡ ಮಾತನಾಡಿದರೆ ಸಾಕು. ಅದೇ ನಾವು ಕನ್ನಡಕ್ಕೆ ನೀಡುವ ದೊಡ್ಡ ಕೊಡುಗೆ.


Click it and Unblock the Notifications











