ಶಂಕರ್ ನಾಗ್ ಕೇಳ್ಕೊಂಡ್ ಬಂದಾಗ...
ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ನಟ ಶಂಕರ್ ನಾಗ್. ಕುಟುಂತ್ತಾ ಎಡವುತ್ತಾ ಸಾಗುತ್ತಿರುವ ಇಂದಿನ ಮೆಟ್ರೋ ಕಾಮಗಾರಿ ನೋಡಿದರೆ ಶಂಕ್ರಣ್ಣನ ನೆನಪು ಕಣ್ಮುಂದೆ ಹಾಗೆ ಹಾದು ಹೋಗುತ್ತದೆ. ಎಂದೋ ಕಂಡ ಅವರ ಕನಸು ಇಂದು ನನಸಾಗುತ್ತಿದೆಯಲ್ಲಾ ಎಂಬ ಸಮಾಧಾನವೂ ಆಗುತ್ತದೆ.
ಸಮಯವಲ್ಲದ ಸಮಯದಲ್ಲಿ ಶಂಕ್ರಣ್ಣನ ನೆನಯಲು ಕಾರಣ ಇಷ್ಟೇ. ಅವರ ಬಗ್ಗೆ ಈಗಾಗಲೇ ಎಷ್ಟೋ ಚಿತ್ರಗಳು ಬಂದಿವೆ, ಬರುತ್ತಿವೆ. ನೆನ್ನೆಯಷ್ಟೇ (ಜೂನ್ 21) ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಆಟೋರಾಜ' ಚಿತ್ರ ತೆರೆಕಂಡಿದೆ. ಶಂಕರ್ ನಾಗ್ ಇಂದು ನಮ್ಮೊಂದಿಗಿಲ್ಲದಿದ್ದರೂ ಎಷ್ಟೋ ಚಿತ್ರಗಳಲ್ಲಿ ಇನ್ನೂ ಜೀವಂತವಾಗಿದ್ದಾರೆ. (ಗಣೇಶ್ 'ಆಟೋರಾಜ' ಚಿತ್ರ ವಿಮರ್ಶೆ)

ಈಗ ಶಂಕರ್ ನಾಗ್ ಅವರ ಬಗ್ಗೆ ಒಂದು ಅಪೂರ್ವ ಸಾಕ್ಷ್ಯ ಚಿತ್ರವನ್ನು ಮಾಡಿದ್ದಾರೆ ಮುಂಬೈನ ಸುಷ್ಮಾ ವೀರಪ್ಪ. ಈ ಸಾಕ್ಷ್ಯಚಿತ್ರದ ಹೆಸರು 'ಶಂಕರ್ ನಾಗ್ ಕೇಳ್ಕೊಂಡ್ ಬಂದಾಗ'. ಇಂಗ್ಲಿಷ್ ಶೀರ್ಷಿಕೆ 'When Shankar Nag Comes Asking'. ಸುಮಾರು 67 ನಿಮಿಷಗಳ ಕಾಲಾವಧಿಯ ಈ ಸಾಕ್ಷ್ಯಚಿತ್ರದಲ್ಲಿ ಅಂತಹದ್ದೇನಿದೆ?
ಬೆಂಗಳೂರು ಒಂದು ಸಮುದ್ರ ಇದ್ದಂಗೆ. ಎಂಥಹ ಬಡವ, ಬಲ್ಲಿದನಾಗಲಿ ಬದುಕುವಷ್ಟು ವಿಶಾಲವಾಗಿದೆ ಎಂಬ ಉಕ್ತಿಯೊಂದಿಗೆ ಈ ಸಾಕ್ಷ್ಯಚಿತ್ರ ಆರಂಭವಾಗುತ್ತದೆ. ಆಟೋ ಡ್ರೈವರ್ ಒಬ್ಬ ತನ್ನ ದಿನನಿತ್ಯದ ವ್ಯವಹಾರ ಹೇಗೆ ಸಾಗುತ್ತಿದೆ ಎಂದು ಪ್ರಯಾಣಿಕನ ಜೊತೆ ಹೇಳಿಕೊಳ್ಳುತ್ತಾ ಸಾಗುತ್ತಾನೆ.
ಇಲ್ಲಿನ ಕತೆಗಿರುವ ಒಂದೇ ಒಂದು ತಿರುವೆಂದರೆ ಆಟೋ ಚಾಲಕರ ಜೊತೆ ಶಂಕರ್ ನಾಗ್ ತಳುಕು ಹಾಕಿಕೊಂಡಿರುವ ರೀತಿ. ಇಪ್ಪತ್ತು ವರ್ಷಗಳ ಹಿಂದೆ ನಮ್ಮಿಂದ ದೂರವಾದ ಶಂಕರ್ ಇಂದೂ ಆಟೊರಿಕ್ಷಾಗಳ ಗಾಜಿನ ಮೇಲೆ ಮೈದುಂಬಿಕೊಂಡಿರುವ ಪರಿ ಅನನ್ಯ.


Click it and Unblock the Notifications











