'ಯುಐ' ಸಿನಿಮಾ ಬಜೆಟ್ ಹಾಗೂ ಕಲೆಕ್ಷನ್ ಬಗ್ಗೆ ಉಪೇಂದ್ರ ಏನಂದ್ರು?
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸುತ್ತಿರುವ 'ಯುಐ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಪ್ರಮೋಷನ್ ಕೂಡ ಶುರುವಾಗಿದೆ. ಇತ್ತೀಚೆಗೆ ಚಿತ್ರದ ವಾರ್ನರ್ ಟೀಸರ್ ರಿಲೀಸ್ ಆಗಿ ಹಿಟ್ ಆಗಿತ್ತು. ಉಪ್ಪಿ ವಿಭಿನ್ನ ಆಲೋಚನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ನೋಡಲು ಕಾಯುತ್ತಿದ್ದಾರೆ.
ಇತ್ತೀಚೆಗೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ 'ಯುಐ' ಚಿತ್ರತಂಡ ಭೇಟಿ ನೀಡಿ ಪೂಜೆ ಸಲ್ಲಿಸಿದೆ. ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೂ ಉಪ್ಪಿ ಭೇಟಿ ನೀಡಿದ್ದರು. ಅಲ್ಲಿ ಮಾಧ್ಯಮಗಳ ಜೊತೆ ಚಿತ್ರತಂಡ ಸಿನಿಮಾ ಬಗ್ಗೆ ಮಾತನಾಡಿದೆ. ಈ ವೇಳೆ ಸಿನಿಮಾ ಬಜೆಟ್ ಬಗ್ಗೆ ಕೇಳಿದ ಪ್ರಶ್ನೆಗೆ ಉಪೇಂದ್ರ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

'ಬಜೆಟ್, ಬ್ಯುಸಿನೆಸ್ ಏನು ಆಗುತ್ತದೆ. ಅದು ಪರ್ಸನಲ್. ಈಗ 500 ಕೋಟಿ ಆಯ್ತು, ಅಷ್ಟು ಕೋಟಿ ಆಯ್ತು ಎನ್ನುವುದು ಟ್ರೆಂಡ್ ಆಗಿದೆ. ಕೆಲವರು ಅಂತಹ ಟ್ರೆಂಡ್ ಮಾಡ್ತಾರೆ. ಅದು ಅವರಿಗೆ ಬಿಟ್ಟದ್ದು. ಆದರೆ ನಾವು ಅದರ ಬಗ್ಗೆ ಮಾತನಾಡುವುದು ಬೇಡ ಎಂದು ಮಾತನಾಡಿಕೊಂಡಿದ್ದೇವೆ. ಜನರಿಗೆ ಸಿನಿಮಾ ಇಷ್ಟ ಆಯ್ತಾ? ಇಲ್ವಾ? ಎನ್ನುವುದು ಮಾತ್ರ ಮುಖ್ಯ. ಸಬ್ಜೆಕ್ಟ್ಗೆ ತಕ್ಕ ಬಜೆಟ್ ಇರುತ್ತೆ. ಬಜೆಟ್ಗೆ ಸಬ್ಜೆಕ್ಟ್ ಮಾಡೋಕೆ ಆಗಲ್ಲ" ಎಂದು ಉಪ್ಪಿ ಹೇಳಿದ್ದಾರೆ.
"ನಾನು ಯಾವ ಟ್ರೆಂಡ್ ಫಾಲೋ ಮಾಡಲ್ಲ, ಇದನ್ನು ಅಹಂಕಾರದಿಂದ ಹೇಳ್ತಿಲ್ಲ. ಸಿನಿಮಾ ಬಜೆಟ್, ಕಲೆಕ್ಷನ್ ಬಗ್ಗೆ ಮಾತನಾಡಲ್ಲ" ಎಂದು ಉಪೇಂದ್ರ ಸ್ಪಷ್ಟಪಡಿಸಿದ್ದಾರೆ. ಜಿ. ಮನೋಹರ್ ಹಾಗೂ ಕೆ. ಪಿ ಶ್ರೀಕಾಂತ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಚಿತ್ರದಲ್ಲಿ 2040ಎ ಪ್ರಪಂಚದ ಚಿತ್ರಣ ಬಿಚ್ಚಿಡಲು ರಿಯಲ್ ಸ್ಟಾರ್ ಸಿದ್ಧರಾಗಿದ್ದಾರೆ.
ಇದೆಲ್ಲದರ ನಡುವೆ ಉಪೇಂದ್ರ 9 ವರ್ಷಗಳ ಹಿಂದೆ ಮಾಡಿದ್ದ 'ಉಪ್ಪಿ-2' ಸಿನಿಮಾ ಕಲೆಕ್ಷನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಸ್ವತಃ ಉಪೇಂದ್ರ ಆ ಚಿತ್ರದ ಕಲೆಕ್ಷನ್ ಬಗ್ಗೆ ಅಂದು ಮಾತನಾಡಿದ್ದರು. ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದರು. ಫಸ್ಟ್ ವೀಕೆಂಡ್ ಸಿನಿಮಾ 40 ಕೋಟಿ ರೂ. ಕಲೆಕ್ಷನ್ ಮಾಡಿದ್ಯಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ್ದರು. ಆ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ತೇಲಿ ಬಿಡಲಾಗಿದೆ.
"ಉಪ್ಪಿ-2' ಸಿನಿಮಾ ಎರಡು ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಅಮೇರಿಕಾದಲ್ಲಿ ಕೂಡ ಏಕಕಾಲಕ್ಕೆ ತೆರೆಗಪ್ಪಳಿಸಿತ್ತು. ಫಸ್ಟ್ ದಿನೇ 3 ಕೋಟಿ ರೂ.ಗೂ ಅಧಿಕ ಶೇರ್ ಬಂತು. ಬೆಳ್ಳಂ ಬೆಳಗ್ಗೆ 6 ಗಂಟೆಗೆ ಸಿನಿಮಾ ಪ್ರದರ್ಶನ ಆರಂಭವಾಗಿತ್ತು. ಆ ಲೆಕ್ಕಾಚಾರದಲ್ಲಿ ಅಷ್ಟು ಅಂದ್ರು. ಆ ರೀತಿ ಲೆಕ್ಕ ಹಾಕಿದರೆ ಇನ್ನು ಜಾಸ್ತಿ ಆಗುತ್ತದೆ. ಹೌದು ದೊಡ್ಡದಾಗಿ ಕನಸು ಕಾಣಬೇಕು ಅಲ್ಲವೇ" ಎಂದು ಉಪೇಂದ್ರ ಹೇಳಿದ್ದರು.
ಸದ್ಯ 'ಯುಐ' ಚಿತ್ರದ ಜೊತೆಗೆ ಸುದೀಪ್ ನಟನೆಯ 'ಮ್ಯಾಕ್ಸ್' ಕೂಡ ತೆರೆಗೆ ಬರ್ತಿದೆ. 4 ದಿನಗಳ ಅಂತರದಲ್ಲಿ 2 ಚಿತ್ರಗಳು ಬರುತ್ತಿರುವುದು ಬಾಕ್ಸಾಫೀಸ್ ಕ್ಲ್ಯಾಶ್ಗೆ ಕಾರಣವಾಗುತ್ತಾ ಎನ್ನುವ ಚರ್ಚೆ ನಡೀತಿದೆ. ಆದರೆ ಸುದೀಪ್ ಹಾಗೂ ಉಪೇಂದ್ರ ಇದನ್ನು ಒಪ್ಪಲು ಸಿದ್ಧರಿಲ್ಲ. ಸುದೀಪ್ ಕೂಡ ಈ ಬಗ್ಗೆ ಇತ್ತೀಚೆಗೆ ಮಾತನಾಡಿದ್ದರು.
ಉಪೇಂದ್ರ ಅವರಿಗೆ ಇಲ್ಲದ ತಲೆನೋವು ನಮಗೆ ನಿಮಗೆ ಯಾಕೆ? ಎಂದು ಸುದೀಪ್ ಮಾಧ್ಯಮದವರನ್ನು ಪ್ರಶ್ನಿಸಿದ್ದರು. ಉಪ್ಪಿ ಸರ್ಗೆ ಕಾಂಪಿಟೇಷನ್ ಕೊಡಲು ಸಾಧ್ಯವಿಲ್ಲ. ಅವರನ್ನು ನೋಡಿ ಕಲಿತವರು ನಾವು. ಉಪ್ಪಿ ಸರ್ಗೆ ಕೂಡ ಎಲ್ಲವೂ ಗೊತ್ತು. ರಜೆ ಇರುವುದರಿಂದ ಎರಡು ಸಿನಿಮಾ ಒಟ್ಟಿಗೆ ರಿಲೀಸ್ ಮಾಡುತ್ತಿದ್ದೇವೆ. ಅವರು ಗುರು, ಅವರ ಬಂದ ಬಳಿಕ ಶಿಷ್ಯ ನಾನು ಬರ್ತೀನಿ ಎಂದು ಸುದೀಪ್ ಸ್ಪಷ್ಟನೆ ನೀಡಿದ್ದರು.


Click it and Unblock the Notifications











