ಕನ್ನಡ ಚಿತ್ರರಂಗವೆಂದರೆ, ಕನ್ನಡವೆಂದರೆ ನನಗೆ ಇವರೇ ಫಸ್ಟ್ ಎಂದ ತೆಲುಗಿನ ಜಾನಿ ಮಾಸ್ಟರ್!

ಈ ವರ್ಷದಲ್ಲಿ ಅತಿಹೆಚ್ಚು ನಿರೀಕ್ಷೆ ಹುಟ್ಟುಹಾಕಿರುವ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಆರ್ ಚಂದ್ರು ಹಾಗೂ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇನ್ನು ಮುಂದಿನ ತಿಂಗಳು ಕನ್ನಡದ ರಾಜರತ್ನ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ( ಮಾರ್ಚ್ 17 ) ಪ್ರಯುಕ್ತ ಬಿಡುಗಡೆಯಾಗಲಿರುವ ಕಬ್ಜ ಚಿತ್ರದ ಪ್ರಚಾರವನ್ನು ಆರಂಭಿಸಿರುವ ಚಿತ್ರತಂಡ ಚಿತ್ರದ ಒಂದೊಂದು ಹಾಡನ್ನು ದೇಶದ ಒಂದೊಂದು ಪ್ರಮುಖ ನಗರದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.
ಈ ಹಿಂದೆ ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನಿ ರಸಿಕರನ್ನು ಕೆರಳಿಸಿದ್ದ ಕಬ್ಜ ಚಿತ್ರತಂಡ ತನ್ನ ಮೇಕಿಂಗ್, ವಿಎಫ್ಎಕ್ಸ್, ರಿಷ್ ವಿಷ್ಯುಯಲ್ಸ್ನಿಂದ ನೋಡುಗರ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಇನ್ನು ಚಿತ್ರದ ಮೊದಲ ಹಾಡು ಬಿಡುಗಡೆ ಕಾರ್ಯಕ್ರಮ ಮೊನ್ನೆಯಷ್ಟೇ ( ಫೆಬ್ರವರಿ 4 ) ಹೈದರಾಬಾದ್ನಲ್ಲಿ ನಡೆಯಿತು.
ಮೊದಲಿಗೆ ಚಿತ್ರದ ಟೈಟಲ್ ಹಾಡನ್ನು ಬಿಡುಗಡೆ ಮಾಡಿದ ಕಬ್ಜ ಚಿತ್ರತಂಡ ಈ ಕಾರ್ಯಕ್ರಮಕ್ಕೆ ತೆಲುಗಿನ ನಟ ವಿಶ್ವಕ್ ಸೇನ್ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿತ್ತು. ವಿಶ್ವಕ್ ಸೇನ್ ಜತೆ ಹಲವು ತೆಲುಗು ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇನ್ನು ಚಿತ್ರದಲ್ಲಿ ಕೆಲಸ ಮಾಡಿರುವ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆ ಏರಿ ಚಿತ್ರದ ಕುರಿತು ಮಾತನಾಡಿದರು ಹಾಗೂ ಕನ್ನಡದ ಇಬ್ಬರು ಸ್ಟಾರ್ ನಟರನ್ನು ಇದೇ ವೇಳೆ ಜಾನಿ ಮಾಸ್ಟರ್ ಹೊಗಳಿದರು.
{document2}+

ಕನ್ನಡದ ಇಬ್ಬರು ಸ್ಟಾರ್ಗಳ ಬಗ್ಗೆ ಜಾನಿ ಮಾಸ್ಟರ್ ಮಾತು
ಕಾರ್ಯಕ್ರಮದಲ್ಲಿ ಚಿತ್ರದ ಮೇಕಿಂಗ್ ಹಾಗೂ ಹಾಡುಗಳ ಬಗ್ಗೆ ಮಾತನಾಡಿ ರಿಚ್ ಆಗಿ ಮೂಡಿಬರುವಂತೆ ಶ್ರಮವಹಿಸಿದ ಚಿತ್ರತಂಡವನ್ನು ಹೊಗಳಿದ ಜಾನಿ ಮಾಸ್ಟರ್ ಕನ್ನಡದ ಸ್ಟಾರ್ ನಟರಾದ ಪುನೀತ್ ರಾಜ್ಕುಮಾರ್ ಹಾಗೂ ಕಿಚ್ಚ ಸುದೀಪ್ ಕುರಿತು ಮಾತನಾಡಿದರು. ಮೊದಲಿಗೆ ಪುನೀತ್ ರಾಜ್ಕುಮಾರ್ ಅವರ ಕುರಿತು ಮಾತನಾಡಿದ ಜಾನಿ ಮಾಸ್ಟರ್ ಕನ್ನಡ ಚಿತ್ರರಂಗವೆಂದರೆ, ಕನ್ನಡ ಚಿತ್ರವೆಂದರೆ ನನಗೆ ಮೊದಲ ನೆನಪಾಗುವುದೇ ಪುನೀತ್ ಸರ್ ಎಂದ ಜಾನಿ ಮಾಸ್ಟರ್ ನೀವು ಎಲ್ಲೇ ಇದ್ದರೂ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಅಪ್ಪು ಅವರನ್ನು ಹೊಗಳಿದರು. ಬಳಿಕ ಕಿಚ್ಚ ಸುದೀಪ್ ಕುರಿತು ಮಾತನಾಡಿದ ಜಾನಿ ಮಾಸ್ಟರ್ ನನ್ನಣ್ಣ ಕಿಚ್ಚ ಸುದೀಪ್ ಸಹ ಚಿತ್ರದಲ್ಲಿ ನಟಿಸಿದ್ದಾರೆ, ಅವರು 100% ಅಬ್ಬರಿಸಿರುತ್ತಾರೆ ಎಂಬುದು ತಿಳಿದಿದೆ, ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.

ಇಬ್ಬರ ಜತೆಗೂ ಕೆಲಸ ಮಾಡಿದ್ದ ಜಾನಿ
ಇನ್ನು ಜಾನಿ ಮಾಸ್ಟರ್ಗೆ ಪುನೀತ್ ರಾಜ್ಕುಮಾರ್ ಹಾಗೂ ಕಿಚ್ಚ ಸುದೀಪ್ ಇಬ್ಬರ ಜತೆಗೂ ಸಮಯ ಕಳೆದ ಅನುಭವವಿದೆ. ತೆಲುಗಿನಲ್ಲಿ ಯಶಸ್ವಿ ನೃತ್ಯ ಸಂಯೋಜಕರಾಗಿದ್ದ ಜಾನಿ ಮಾಸ್ಟರ್ ಪುನೀತ್ ರಾಜ್ಕುಮಾರ್ ನಟನೆಯ ರಾಜ್ಕುಮಾರ ಚಿತ್ರದ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ಕಾಲಿಟ್ಟರು, ಬಳಿಕ ಅಪ್ಪು ನಟನೆಯ ನಟಸಾರ್ವಭೌಮ ಹಾಗೂ ಯುವರತ್ನ ಚಿತ್ರಗಳಲ್ಲೂ ಸಹ ಜಾನಿ ಮಾಸ್ಟರ್ ಪುನೀತ್ ರಾಜ್ಕುಮಾರ್ಗೆ ಸ್ಟೆಪ್ಸ್ ಪಾಠ ಮಾಡಿದ್ರು. ಇತ್ತ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರದ ಚಾರ್ಟ್ಬಸ್ಟರ್ ರಾರಾ ರಕ್ಕಮ್ಮ ಹಾಡಿಗೆ ಸಹ ಇದೇ ಜಾನಿ ಮಾಸ್ಟರ್ ನೃತ್ಯ ಸಂಯೋಜಿಸಿದ್ದರು.

ಕಬ್ಜ ಪುನೀತ್ ರಾಜ್ಕುಮಾರ್ಗೆ ಅರ್ಪಣೆ
ಪುನೀತ್ ರಾಜ್ಕುಮಾರ್ ನಿಧನ ಹೊಂದಿದ ಬಳಿಕ ಬಿಡುಗಡೆಗೊಂಡ ಬಹುತೇಕ ಎಲ್ಲಾ ಚಿತ್ರಗಳು ಸಹ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಆರಂಭಗೊಂಡಿವೆ. ಹಲವು ನಿರ್ದೇಶಕರು ತಮ್ಮ ಚಿತ್ರಗಳನ್ನು ಪುನೀತ್ ರಾಜ್ಕುಮಾರ್ ಅವರಿಗೆ ಅರ್ಪಿಸಿದ್ದಾರೆ. ಅದರಲ್ಲೂ ಕನ್ನಡ ಚಲಚಿತ್ರರಂಗದ ಕೀರ್ತಿ ಪತಾಕೆಯನ್ನು ಹಾರಿಸಿದ ಚಿತ್ರಗಳಾದ ಕೆಜಿಎಫ್ ಹಾಗೂ ಕಾಂತಾರ ಚಿತ್ರಗಳನ್ನೂ ಸಹ ಅವುಗಳ ನಿರ್ದೇಶಕರು ಪುನೀತ್ ರಾಜ್ಕುಮಾರ್ ಅವರಿಗೆ ಅರ್ಪಿಸಿದ್ದರು. ಈ ಸಾಲಿಗೆ ಇದೀಗ ನಿರ್ದೇಶಕ ಆರ್ ಚಂದ್ರು ಸಹ ಸೇರಿಕೊಂಡಿದ್ದು, ತಮ್ಮ ಕಬ್ಜ ಚಿತ್ರವನ್ನು ಪುನೀತ್ ರಾಜ್ಕುಮಾರ್ ಅವರಿಗೆ ಅರ್ಪಿಸುವುದಾಗಿ ಹೇಳಿಕೆ ನೀಡಿದ್ದಾರೆ.


Click it and Unblock the Notifications











