ಎಲ್ಲಿದ್ದೀರಪ್ಪಾ ಯಶ್-ಸುದೀಪ್: ಕನ್ನಡಿಗರ ಪ್ರಶ್ನೆ?
ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟ ವಿಚಾರ ಎಲ್ಲೆಡೆ ಹೆಚ್ಚಾಗಿ ಸದ್ದು ಮಾಡುತ್ತಿದೆ. ಈ ಬಗ್ಗೆ ಕರುನಾಡಿನಲ್ಲಿ ಆಕ್ರೋಶದ ಕೂಗು ಕೇಳಿ ಬರುತ್ತಿದೆ. ಎಂಇಎಸ್ನ ಈ ನಡೆಯನ್ನು ಕನ್ನಡಿಗರು ಖಂಡಿಸುತ್ತಿದ್ದಾರೆ. ಅವರುಗಳಿಗೆ ತಕ್ಕ ಶಿಕ್ಷೆ ಆಗಬೇಕು ನಮ್ಮ ನಾಡಿನ ಬಾವುಟ ಸುಟ್ಟರೆ ಸುಮ್ಮನೆ ಇರುವುದಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕನ್ನಡ ಚಿತ್ರರಂಗದಲ್ಲೂ ಕೂಡ ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಕನ್ನಡಕ್ಕಾಗಿ ಹೋರಾಡಲು ಹಲವು ತಾರೆಯರು, ನಟ , ನಟಿಯರು ಸಜ್ಜಾಗಿದ್ದಾರೆ. ಬಹುತೇಕ ಸ್ಟಾರ್ ನಟರು ಈ ನಡೆಯನ್ನು ಖಂಡಿಸಿ, ಕನ್ನಡ ತಾಯಿಗೆ ಅವಮಾನ ಮಾಡಿದವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಮುಖ್ಯ ಮಂತ್ರಿಗಳಿಗೆ ಬಹಿರಂಗವಾಗಿ ಸೋಷಿಯಲ್ ಮೀಡಿಯಾದ ಮೂಲಕ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ ಈ ವಿಚಾರವಾಗಿ ಕನ್ನಡ ಪರ ಸಂಘಟನೆಗಳು ಬಂದ್ಗೆ ಮುಂದಾಗಿದ್ದು, ಚಿತ್ರರಂಗ ಕೂಡ ಬೆಂಬಲ ನೀಡಿದೆ.
ಈ ವಿಚಾರದಲ್ಲಿ ನಟ ಸುದೀಪ್ ಮತ್ತು ಯಶ್ ಅವರ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ಅವರು ಈ ಬಗ್ಗೆ ಮಾತನಾಡಿಲ್ಲ. ಹಾಗಾಗಿ ಕನ್ನಡಿಗರು ಯಶ್ ಮತ್ತು ಸುದೀಪ್ಗೆ ನೀವು ಎಲ್ಲಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಬಾವುಟ ಸುಟ್ಟ ಬಗ್ಗೆ ಯಶ್, ಸುದೀಪ್ ಮೌನ: ಪ್ರಶ್ನೆ ಮಾಡುತ್ತಿದ್ದಾರೆ ಕನ್ನಡಿಗರು!
ಕನ್ನಡದ ವಿಚಾರದಲ್ಲಿ ಎದ್ದಿರುವ ಈ ವಿವಾದ ಸದ್ಯಕ್ಕೆ ತಣ್ಣಗೆ ಆಗುವಂತೆ ಕಾಣುತ್ತಿಲ್ಲ. ಎಂಇಎಸ್ ನಡೆಯನ್ನು ಖಂಡಿಸಿ ಕನ್ನಡದ ಪರವಾಗಿ ಸಾಕಷ್ಟು ಜನ ಧ್ವನಿ ಎತ್ತಿದ್ದಾರೆ. ಆದರೆ ಸ್ಯಾಂಡಲ್ವುಡ್ನ ಟಾಪ್ ಸ್ಟಾರ್ ನಟರಾದ ಯಶ್ ಮತ್ತು ಸುದೀಪ್ ಮಾತ್ರ ಮೌನ ವಹಿಸಿದ್ದಾರೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಯಶ್, ಸುದೀಪ್ ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ನಾಡು, ನುಡಿಗೆ ಸಮಸ್ಯೆ ಆದಾಗ ನೀವು ಎಲ್ಲಿ ಹೋಗಿದ್ದೀರಿ? ಬಾವುಟ ಸುಟ್ಟಿದ್ದರ ಬಗ್ಗೆ ನೀವು ಯಾಕೆ ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸುತ್ತಿದ್ದಾರೆ.

ಯಶ್, ಸುದೀಪ್ ನಡೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ!
ಈ ವಿಚಾರ ಸುಮಾರು ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿದೆ. ಹಲವು ಮಂದಿ ಟ್ವಿಟ್ಟರ್ನಲ್ಲಿ ಯಶ್ ಮತ್ತು ಸುದೀಪ್ ಅವರಿಗೆ ಟ್ಯಾಗ್ ಮಾಡಿ ಈ ಪ್ರಶ್ನೆ ಮಾಡುತ್ತಿದ್ದಾರೆ. ಅವರ ಈ ನಡೆಯ ಹಿಂದಿನ ಮರ್ಮ ಏನಿರಬಹುದು? ಭಾಷೆಯ ವಿಚಾರದಲ್ಲಿ ಹೀಗೆ ಸುಮ್ಮನೆ ಇರುವುದು ಸರಿಯಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ವಿಚಾರದಲ್ಲಿ ಪರ ಮತ್ತು ವಿರೋಧ ಅಭಿಪ್ರಾಯಗಳು ಕೂಡ ವ್ಯಕ್ತ ಆಗಿವೆ. ಕೆಲವರು ಕೇವಲ ಟ್ವೀಟ್ ಮಾಡಿದರೆ ಏನೂ ಆಗುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಸ್ಟಾರ್ ನಟರ ಪರನಿಂತ ಅಭಿಮಾನಿಗಳು!
ಹೀಗೆ ಸಾಮಾಜಿಕ ಜಾಲತಾಣದಲ್ಲಿ ಯಶ್, ಸುದೀಪ್ ಅವರಿಗೆ ಪ್ರಶ್ನೆಗಳು ಕೇಳಿ ಬರುತ್ತಿದ್ದ ಹಾಗೆ. ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಪರವಾಗಿ ನಿಂತಿದ್ದಾರೆ. ಕೇವಲ ಟ್ವೀಟ್ ಮಾಡುವುದು ಅಥವಾ ಅಭಿಮಾನ ತೋರುವುದರಿಂದ ಏನೂ ಬದಲಾವಣೆ ಆಗದು, ಇದು ರಾಜಕೀಯ ಹುನ್ನಾರ, ಈ ಬಗ್ಗೆ ರಾಜಕಾರಣಿಗಳು ಕ್ರಮ ತೆಗೆದುಕೊಳ್ಳಲಿ, ಟ್ವಿಟ್ಟರ್ನಲ್ಲಿ ಬೆಂಬಲಿಸಿದರೆ ಮಾತ್ರ ಅದು ಬೆಂಬಲ ಅಲ್ಲ, ಈಗಾಗಲೇ ಸಾಕಷ್ಟು ಜನ ಟ್ವೀಟ್ ಮಾಡಿದ್ದಾರೆ. ಸಮಸ್ಯೆ ಹಾಗೆ ಇದೆಯಲ್ಲಾ ಎನ್ನುವಂತಹ ಕಮೆಂಟ್ಗಳು ಅವರ ಅಭಿಮಾನಿಗಳಿಂದ ಬಂದಿವೆ.

ಡಿಸೆಂಬರ್ 31ರಂದು ಬಂದ್ಗೆ ಬರೆ: ಚಿತ್ರರಂಗದಿಂದ ಬೆಂಬಲ!
ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ, ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಅಟ್ಟಹಾಸ, ಕೊಲ್ಲಾಪುರದಲ್ಲಿ ಕರ್ನಾಟಕ ಧ್ವಜ ಸುಟ್ಟ ಘಟನೆ ಖಂಡಿಸಿ, ರಾಜ್ಯದಲ್ಲಿ ಎಂಇಎಸ್ ನಿಷೇಧಿಸಬೇಕು ಎಂದು ಒತ್ತಾಯಿಸಿ ಡಿಸೆಂಬರ್ 31ಕ್ಕೆ ಕನ್ನಡ ಪರ ಸಂಘಟನೆಗಳು ರಾಜ್ಯ ಬಂದ್ಗೆ ಕರೆ ನೀಡಲಾಗಿದ್ದು, ಇದಕ್ಕೆ ಚಿತ್ರರಂಗವೂ ಬೆಂಬಲ ಸೂಚಿಸಿದೆ. ಡಿಸೆಂಬರ್ 31 ರಂದು ಚಿತ್ರೀಕರಣ ಸೇರಿದಂತೆ ಚಿತ್ರರಂಗದ ಎಲ್ಲ ಚಟುವಟಿಕೆಗಳು ಬಂದ್ ಆಗಿರಲಿವೆ ಎಂದು ನಿರ್ಮಾಪಕ, ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಸಾ.ರಾ.ಗೋವಿಂದು ಹೇಳಿದ್ದಾರೆ.


Click it and Unblock the Notifications











