ಕರ್ನಾಟಕ ರಾಜಕೀಯ ಸುತ್ತ ಸಿನಿಮಾ: ಆ ಒಬ್ಬ ನಿರ್ದೇಶಕನ ಕಡೆ ಜನರ ಒಲವು
ಕಳೆದ ಹತ್ತು ದಿನದಿಂದ ಕರ್ನಾಟಕ ರಾಜಕಾರಣ ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಯಲ್ಲಿದೆ. ಬಿಜೆಪಿ ಸರ್ಕಾರ ಎರಡು ವರ್ಷ ಪೂರ್ಣಗೊಳಿಸುತ್ತಿರುವ ಸಂಭ್ರಮದ ನಡುವೆ ಮುಖ್ಯಮಂತ್ರಿ ಬದಲಾವಣೆಯ ಸುಳಿವು ನೀಡಿದೆ. ಜುಲೈ 26ರ ನಂತರ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ನೂತನ ಸಿಎಂ ಆಗಿ ಬೇರೊಬ್ಬ ನಾಯಕ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ.
ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎನ್ನುತ್ತಿದ್ದಂತೆ ಬೆಂಬಲಿಗರು, ಮಠಾಧೀಶರು ಪ್ರತಿಭಟನೆಯ ಎಚ್ಚರಿಕೆ ಕೊಡ್ತಿದ್ದಾರೆ. ರಾಜೀನಾಮೆ ಕೊಡಬಾರದು ಎಂದು ಆಗ್ರಹಿಸುತ್ತಿದ್ದಾರೆ. ಈ ನಡುವೆ ತಮ್ಮದೇ ಪಕ್ಷದವರು ಕಪಟಕ್ಕೆ ಯಡಿಯೂರಪ್ಪ ಸ್ಥಾನ ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಅಭಿಪ್ರಾಯವೂ ಇದೆ. ಸಿಎಂ ಸ್ಥಾನ ನಮ್ಮ ಸಮುದಾಯಕ್ಕೆ ನೀಡಬೇಕು ಎಂದು ದಲಿತ ಮುಖಂಡರು, ಹಿಂದುಳಿದ ನಾಯಕರು, ಲಿಂಗಾಯತರು ಹೀಗೆ ಬೇಡಿಕೆ ಇಡುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ. ಇಂತಹ ಬೆಳವಣಿಗೆಗಳನ್ನು ಆಧರಿಸಿ ಕನ್ನಡದಲ್ಲೊಂದು ಸಿನಿಮಾ ಮಾಡಿದ್ರೆ ಯಾವ ನಿರ್ದೇಶಕ ಸೂಕ್ತ ಎನ್ನುವ ಪ್ರಶ್ನೆಯೊಂದನ್ನು ಫಿಲ್ಮಿಬೀಟ್ ಕನ್ನಡ ಓದುಗರ ಮುಂದಿಟ್ಟಿತ್ತು. ಆ ಪೋಲ್ನಲ್ಲಿ ಒಬ್ಬ ನಿರ್ದೇಶಕನ ಹೆಸರು ಹೆಚ್ಚು ಚರ್ಚೆಯಾಗಿದೆ. ಯಾರು ಡೈರೆಕ್ಟರ್? ಮುಂದೆ ಓದಿ...

ಉಪೇಂದ್ರ ಹೆಸರು ಹೆಚ್ಚು ಚರ್ಚೆ
ರಾಜಕೀಯ ಕುರಿತಾದ ಸಿನಿಮಾಗಳನ್ನು ಮಾಡಲು ಉಪೇಂದ್ರ ಅವರೇ ಸೂಕ್ತ ಎನ್ನುವ ಅಭಿಪ್ರಾಯ ಕನ್ನಡ ಇಂಡಸ್ಟ್ರಿಯಲ್ಲಿಯೂ ಇದೆ. ಇದೀಗ, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಆಧರಿಸಿ ಸಿನಿಮಾ ಮಾಡುವುದಾದರೆ ಉಪ್ಪಿ ಅವರೇ ಮಾಡಲಿ ಎಂಬ ಅಭಿಪ್ರಾಯವನ್ನು ಫಿಲ್ಮಿಬೀಟ್ ಓದುಗರ ಸಹ ವ್ಯಕ್ತಪಡಿಸುತ್ತಿದ್ದಾರೆ. 'ಆಪರೇಷನ್ ಅಂತ', 'ಸೂಪರ್' ಅಂತಹ ಚಿತ್ರಗಳಲ್ಲಿ ರಾಜಕೀಯ ವ್ಯವಸ್ಥೆ ಬಗ್ಗೆ ಉಪೇಂದ್ರ ತೋರಿಸಿದ್ದರು. ತಾವೇ ನಟಿಸಿದ್ದ ಓಂಕಾರ, ಟೋಪಿವಾಲ ಸಿನಿಮಾದಲ್ಲೂ ಇಂತಹ ದೃಶ್ಯಗಳು ಇದ್ದವು. ಈಗ ಪ್ರಜಾಕೀಯ ಪರಿಕಲ್ಪನೆ ಪ್ರತಿಪಾದಿಸುತ್ತಿದ್ದಾರೆ.

ಓಂ ಪ್ರಕಾಶ್ ರಾವ್ ಮಾಡಲಿ
ಲಾಕಪ್ ಡೆತ್, ಎಲೆಕ್ಷನ್, ಎಕೆ47, ಹುಚ್ಚ, ಕಲಾಸಿಪಾಳ್ಯ, ಮಂಡ್ಯ ಅಂತಹ ಹಿಟ್ ಚಿತ್ರಗಳನ್ನು ಮಾಡಿರುವ ಓಂ ಪ್ರಕಾಶ್ ಸಹ ಇಂದಿನ ರಾಜಕೀಯ ಸುತ್ತ ಸಿನಿಮಾ ಮಾಡಲು ಉತ್ತಮ ಆಯ್ಕೆ ಎಂಬ ಅಭಿಪ್ರಾಯವೂ ಇದೆ. ಉಪೇಂದ್ರ ಬಿಟ್ಟರೆ ಓಂ ಪ್ರಕಾಶ್ ರಾವ್ ಹೆಸರು ಹೆಚ್ಚು ಕಾಮೆಂಟ್ ಬಂದಿದೆ.

ರಾಜೇಂದ್ರಸಿಂಗ್ ಬಾಬು
ಕನ್ನಡದ ಹಿರಿಯ ಹಾಗೂ ಅನುಭವಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಹೆಸರು ಸಹ ಕಾಮೆಂಟ್ ಬಾಕ್ಸ್ನಲ್ಲಿ ಚರ್ಚೆಯಾಗಿದೆ. ಅಂಬರೀಶ್ ಅಭಿನಯಿಸಿದ್ದ ಅಂತ, ಬಂಧನ, ಮುತ್ತಿನಹಾರ ಅಂತಹ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಎಸ್ವಿ ಬಾಬು ಇಂದಿನ ರಾಜಕೀಯ ಪರಿಸ್ಥಿತಿ ಕುರಿತು ಸಿನಿಮಾ ಮಾಡಲು ಸೂಕ್ತ ಎಂದು ಹಲವರು ಹೇಳಿದ್ದಾರೆ.
Recommended Video

ಆರ್ಜಿವಿ ಹೆಸರು ಕೇಳಿಬಂದಿದೆ
ರಾಜಕೀಯ ಕುರಿತು ಬಹಳ ವಿಡಂಬನೆ ಮಾಡುವ ರಾಮ್ ಗೋಪಾಲ್ ವರ್ಮಾ ಅತ್ಯುತ್ತಮ ನಿರ್ದೇಶಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಂಧ್ರ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಎನ್ಟಿಆರ್, ಪವನ್ ಕಲ್ಯಾಣ್, ಜಗನ್ ಮೊಹನ್ ರೆಡ್ಡಿ ಅಂತಹ ಪಾತ್ರಗಳನ್ನು ಬಳಸಿಕೊಂಡು ಸಿನಿಮಾ ಮಾಡಿ ಯಶಸ್ಸು ಕಂಡಿದ್ದಾರೆ. ಬಹುಶಃ ಕರ್ನಾಟಕ ರಾಜಕಾರಣ ಕುರಿತು ಸಿನಿಮಾ ಮಾಡಿದರೂ ಆರ್ಜಿವಿ ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ಅಭಿಪ್ರಾಯ ಇದೆ.


Click it and Unblock the Notifications











