Don't Miss!
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- News BJP Big Campaign: ಏಪ್ರಿಲ್ 20 ರಿಂದ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದಂಡು! ಯಾರ್ಯಾರು ಬರಲಿದ್ದಾರೆ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಸಿನಿ ಪ್ರೇಮಿಗಳು ಉತ್ತರಿಸಲೇಬೇಕಾದ ಪ್ರಶ್ನೆಗಳಿವು.!
ಕನ್ನಡ ಸಿನಿ ಪ್ರೇಮಿಗಳೇ....
ನಿಮಗೆ ಕನ್ನಡ ಮಾಧ್ಯಮ ಮತ್ತು ಪತ್ರಿಕೆಗಳ ಮೇಲೆ ಕೋಪ. ಕನ್ನಡ ಚಿತ್ರಗಳನ್ನ ಪಕ್ಕಕ್ಕಿಟ್ಟು ಪರಭಾಷೆಯ ಸಿನಿಮಾಗಳನ್ನೇ ಅಟ್ಟಕ್ಕೆ ಏರಿಸುತ್ತಿರುವ ಎಲ್ಲಾ ಮಾಧ್ಯಮಗಳ ಮೇಲೆ ಮುಖ ತಿರುಗಿಸುವಷ್ಟು ಸಿಟ್ಟು.
ಮೊನ್ನೆಯಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಇದೇ ವಿಚಾರವಾಗಿ ಗರಂ ಆಗಿದ್ರು. ''ಪರಭಾಷೆಯವರಿಗೆ ಮಾತ್ರ ಬೆಟ್ಟ ತೋರಿಸ್ತೀರಾ. ನಾವು ಸಿಕ್ತೀವಿ ಅಂತ ನಮ್ಮನ್ನ ಕೇವಲವಾಗಿ ನೋಡ್ತೀರಾ'' ಅಂತ ಮಾಧ್ಯಮ ವರದಿಗಾರರೊಬ್ಬರಿಗೆ ಬೆವರಿಳಿಸಿದ್ರು. [ಪತ್ರಿಕೆ-ಮಾಧ್ಯಮದವರು ದರ್ಶನ್ ನ ಕೀಳಾಗಿ ನೋಡ್ತಿದ್ದಾರಾ?]
ದರ್ಶನ್ ಹೇಳಿಕೆ ಸರಿ ಇದ್ಯೋ, ಇಲ್ವೋ..ಚರ್ಚೆ ಆಮೇಲೆ. ಆದ್ರೆ, ಪರಭಾಷೆ ಚಿತ್ರಗಳಿಗೆ ದೊಡ್ಡ ಮಾರ್ಕೆಟ್ ಇರುವ ನೆಲ ಕರ್ನಾಟಕದ್ದು ಅನ್ನೋದನ್ನ ನಾವು ಬಾಯಿ ಬಿಟ್ಟು ಹೇಳ್ಬೇಕಾ. ಸತ್ಯ ಸಂಗತಿ ನಿಮಗೆ ಗೊತ್ತಲ್ವಾ?
ಕನ್ನಡಿಗರು ವಿಶಾಲ ಹೃದಯಿಗಳು. ಸ್ನೇಹಜೀವಿಗಳು. ಸಹಾಯ ಹಸ್ತ ಚಾಚುವುದರಲ್ಲಿ ಸದಾ ಮುಂಚೂಣಿಯಲ್ಲಿರುವವರು. ಅನೇಕ ಭಾಷಾ ಪಂಡಿತರು. ಬೇರೆಯವರಿಗೆ ಕನ್ನಡ ಭಾಷೆ ಬಾರದಿದ್ದರೂ, ಅವರದ್ದೇ ಭಾಷೆಯಲ್ಲಿ ಮಾತನಾಡುವ ಪ್ರವೀಣರು. [ನಮ್ಮ ಪ್ರಶ್ನೆ ಉತ್ತರ ಕೊಡ್ತೀರಾ ಚಾಲೆಂಜಿಂಗ್ ಸ್ಟಾರ್?]
ಇಂತಹ ಕನ್ನಡ ನೆಲದಲ್ಲಿ ಬೇರೆ ಭಾಷೆ ಚಿತ್ರಗಳನ್ನ ಕನ್ನಡಿಗರೇ ಪೋಷಿಸುತ್ತಿರುವಾಗ ಮಾಧ್ಯಮಗಳ ಮೇಲೆ ಸುಖಾ ಸುಮ್ಮನೆ ಕೋಪವೇಕೆ.? ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳ ಮೇಲೆ ಬಾಯಿಗೆ ಬಂದಂತೆ ಮಾತನಾಡುತ್ತಿರುವ 'ಅಪ್ಪಟ ಕನ್ನಡ ಸಿನಿ ಪ್ರಿಯರ' ಮುಂದೆ ಕೆಲವೊಂದು ಪ್ರಶ್ನೆಗಳ ಇಡ್ತೀವಿ. ಮನಬಂದಂತೆ ಉತ್ತರ ಕೊಡುವ ಮುನ್ನ, ಸಾಧ್ಯವಾದರೆ ಒಮ್ಮೆ ಆಲೋಚಿಸಿ, ಅವಲೋಕಿಸಿ.....
ಮಾಧ್ಯಮಗಳು ಕನ್ನಡ ಚಿತ್ರಗಳಿಗೆ ಪ್ರಚಾರ ಕೊಟ್ಟೇ ಇಲ್ವಾ?
ಕನ್ನಡ ಮಾಧ್ಯಮಗಳು ಪರಭಾಷೆ ಸಿನಿಮಾಗಳ ಕುರಿತು ಕಾರ್ಯಕ್ರಮ ಮಾಡಿರಬಹುದು. ಆದ್ರೆ, ಕನ್ನಡ ಚಿತ್ರಗಳನ್ನ ಎಂದೂ ಮರೆತಿಲ್ಲ, ಮರೆಯೋದೂ ಇಲ್ಲ. ಸಿನಿಮಾ ರಿಲೀಸ್ ಗೂ ಮುನ್ನ, ರಿಲೀಸ್ ಆದ ನಂತರ ಎಲ್ಲಾ ಮಾಧ್ಯಮಗಳು ಕನ್ನಡ ಚಿತ್ರಗಳಿಗೆ ಪಬ್ಲಿಸಿಟಿ ನೀಡುತ್ತಲೇ ಬಂದಿದೆ. ಹೀಗಿರುವಾಗ, ಕನ್ನಡ ಮಾಧ್ಯಮಗಳ ಬಗ್ಗೆ ಕೀಳಾಗಿ ಮಾತನಾಡುವುದೇಕೆ?
ಕಮರ್ಶಿಯಲ್ ಬರುತ್ತಲ್ವಾ ಅಂತ ಕೇಳ್ಬಹುದು?
'ಕನ್ನಡ ಸಿನಿ ಪ್ರಿಯರು', ಮಾಧ್ಯಮದವರನ್ನ ಈ ಪ್ರಶ್ನೆ ಕೇಳುವ ಮುನ್ನ, ಸಿನಿಮಾದವರು ಯಾವಾಗ ಕಮರ್ಶಿಯಲ್ ಕೊಡ್ತಾರೆ ಅನ್ನೋದನ್ನ ಮೊದಲು ತಿಳ್ಕೋಬೇಕು. ಯಾವುದೇ ಸಿನಿಮಾ ಆಗ್ಲಿ, ಅದು ರಿಲೀಸ್ ಆಗುವ ಹೊತ್ತಿಗೆ ಮಾತ್ರ ಟಿವಿ ಚಾನೆಲ್ ಗಳಿಗೆ ಕಮರ್ಶಿಯಲ್ ಕೊಡೋದು. ಅದಕ್ಕೂ ಮುನ್ನ, ಸಿನಿಮಾ ಸೆಟ್ಟೇರಿದಾಗ...ಸಿನಿಮಾ ಶೂಟಿಂಗ್ ನಡೆಯುತ್ತಿರುವಾಗ...ಸಿನಿಮಾದ ಟ್ರೈಲರ್ ಬಿಡುಗಡೆ ಆದಾಗ...ಸಿನಿಮಾದ ಆಡಿಯೋ ರಿಲೀಸ್ ಆದಾಗ ಮಾಡುವ ಕಾರ್ಯಕ್ರಮಗಳಿಗೆ ಯಾರೂ ಕಮರ್ಶಿಯಲ್ ಕೊಡೋಲ್ಲ ಸ್ವಾಮಿ. ಇದನ್ನೆಲ್ಲಾ ಮಾಡೋದು ಕನ್ನಡ ಚಿತ್ರಗಳ ಮೇಲಿನ ಅಭಿಮಾನದಿಂದಲೇ.
ಪರಭಾಷೆಗೆ ಮಣೆ ಹಾಕುತ್ತಿರುವವರು ಯಾರು?
ಕರ್ನಾಟಕದಲ್ಲಿ ಪರಭಾಷೆ ಸಿನಿಮಾಗಳಿಗೆ ಇರುವ ಬೇಡಿಕೆ ಕನ್ನಡ ಚಿತ್ರಗಳಿಗೆ ಇಲ್ಲ ಅನ್ನೋದು ಕಠೋರ ಸತ್ಯ. ಇದಕ್ಕೆ ಕಾರಣ, ಅಂತಹ ಪರಭಾಷೆ ಸಿನಿಮಾಗಳನ್ನ ಗೆಲ್ಲಿಸಿ ಕೊಡುತ್ತಿರುವ ಇಲ್ಲಿನವರೇ ಅಲ್ಲವೇ..? ಪರಭಾಷೆ ಸಿನಿಮಾಗಳು ಇಲ್ಲಿ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡ್ತಿವೆ ಅಂದ್ರೆ ಅಂತಹ ಸಿನಿಮಾಗಳನ್ನು ನೋಡೋರು ಯಾರು? ನೀವೇ ಹೇಳಿ...
ಈ ವರ್ಷ ಎಷ್ಟು ಕನ್ನಡ ಚಿತ್ರಗಳು ಗೆದ್ದಿವೆ ಸ್ವಾಮಿ?
ಕನ್ನಡ ಮಾಧ್ಯಮಗಳ ವಿರುದ್ಧ ಕೆಂಡಕಾರುವ ಕನ್ನಡ ಸಿನಿ ಪ್ರಿಯರು ಈ ವರ್ಷ ಎಷ್ಟು ಕನ್ನಡ ಸಿನಿಮಾ ಗೆಲ್ಲಿಸಿಕೊಟ್ಟಿದ್ದೀರಾ? 'ಕೃಷ್ಣಲೀಲಾ' ಮತ್ತು 'ರಂಗಿತರಂಗ' 100 ಡೇಸ್ ಓಡಿವೆ. 'ಮೈತ್ರಿ', 'ನಾನು ಅವನಲ್ಲ..ಅವಳು' ಸದಭಿರುಚಿಯ ಸಿನಿಮಾಗಳು. ಈ ಚಿತ್ರಗಳ ಕಥೆ ಏನಾಯ್ತು.? ಸ್ಟಾರ್ ಸಿನಿಮಾಗಳಾದ 'ವಜ್ರಕಾಯ', 'ರನ್ನ', 'ಮಳೆ', 'ಬುಗುರಿ', 'ವಾಸ್ತು ಪ್ರಕಾರ', 'ಬುಲೆಟ್ ಬಸ್ಯ' ಎಷ್ಟು ದಿನ ಓಡಿದ್ವು? ಮಾತಿನ ಜೊತೆಗೆ ಕನ್ನಡ ಸಿನಿ ಪ್ರಿಯರು ಕನ್ನಡ ಚಿತ್ರಗಳನ್ನು ಬೆಳೆಸಬೇಕು ಅಲ್ಲವೇ? ಉತ್ತರ ಕೊಡಿ...
ಪರಭಾಷೆಗೆ ಸಿಗುವ ಓಪನಿಂಗ್ ಕನ್ನಡಕ್ಕಿಲ್ಲ.! ಯಾಕೆ?
ರಜನಿಕಾಂತ್ ಚಿತ್ರಗಳಿಗೆ ಸಿಗುವ ಓಪನ್ನಿಂಗ್ ಕನ್ನಡದ ಯಾವ ಸ್ಟಾರ್ ನಟನಿಗೂ ಸಿಗುವುದಿಲ್ಲ. ರಜನಿಕಾಂತ್ ಇಲ್ಲೇ ಬೆಳೆದಿರಬಹುದು. ಆದ್ರೆ, ಅವರ ತಮಿಳು ಸಿನಿಮಾಗಳಿಗೆ ಸಿಗುವ ಓಪನಿಂಗ್, ನಮ್ಮ ಕನ್ನಡ ಸ್ಟಾರ್ ಸಿನಿಮಾಗಳಿಗೆ ಯಾಕೆ ಸಿಗಲ್ಲ.? ಕನ್ನಡ ಸಿನಿ ಪ್ರಿಯರು ಅಂದು ಏನ್ಮಾಡ್ತಿರ್ತಾರೆ?
ಶಾರುಖ್, ಆಮೀರ್, ಸಲ್ಲು ಚಿತ್ರಗಳಿಗೂ ಇಲ್ಲೇ ಬೇಡಿಕೆ.!
ಶಾರುಖ್ ಖಾನ್, ಆಮೀರ್ ಖಾನ್, ಸಲ್ಮಾನ್ ಖಾನ್ ಸಿನಿಮಾಗಳು ತೆರೆಗೆ ಬಂದ್ರೆ, ಇಲ್ಲಿನ ಮಲ್ಟಿಪ್ಲೆಕ್ಸ್ ಗಳಲ್ಲಿ ಅವರದ್ದೇ ಅಬ್ಬರ. ಜನ ನೋಡ್ತಾರೆ ಅಂತ ತಾನೆ ಅಂತಹ ನಟರ ಸಿನಿಮಾಗಳಿಗೆ ಹೆಚ್ಚು ಥಿಯೇಟರ್ ಸಿಗುವುದು.?
ಟಿ.ಆರ್.ಪಿ ಕೂಡ ಅಷ್ಟೆ.!
'ಬಾಹುಬಲಿ', 'ಲಿಂಗ', 'ಭಜರಂಗಿ ಭಾಯ್ ಜಾನ್', 'ರುದ್ರಮದೇವಿ' ಚಿತ್ರಗಳ ಬಗ್ಗೆ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿದ್ದು ಅದಕ್ಕೆ ಸಿಕ್ಕ ರೆಸ್ಪಾನ್ಸ್ ನಿಂದಾಗಿ. ಕನ್ನಡ ಸಿನಿ ಪ್ರಿಯರು ಆ ಕಾರ್ಯಕ್ರಮಗಳನ್ನು ನೋಡದೇ ಇದ್ದಿದ್ರೆ, ಟಿ.ಆರ್.ಪಿ ಬರ್ತಾ ಇರ್ಲಿಲ್ಲ. ಜನ ನೋಡಲ್ಲ ಅಂತ ಪ್ರೋಗ್ರಾಂ ಪ್ಲಾನ್ ಆಗ್ತಾನೂ ಇರ್ಲಿಲ್ಲ ಅಲ್ವಾ?
ಮಾಹಿತಿಗೂ-ಪಬ್ಲಿಸಿಟಿಗೂ ವ್ಯತ್ಯಾಸ ಕಂಡುಕೊಳ್ಳಿ.!
ಕನ್ನಡ ಮಾಧ್ಯಮಗಳಾಗಲಿ ಅಥವಾ ಒನ್ ಇಂಡಿಯಾ ಕನ್ನಡ ಆಗಲಿ, ಪರಭಾಷೆಯ ಸಿನಿಮಾಗಳನ್ನ ನೋಡಲೇಬೇಕು. ಬೇರೆ ಭಾಷೆಯ ಚಿತ್ರಗಳೇ ಚೆನ್ನ ಅಂತ ಅಭಿಯಾನ ಮಾಡಿಲ್ಲ. ಪರಭಾಷೆಯ ಸಿನಿಮಾ ಬಗ್ಗೆ ಮಾಹಿತಿ ಕೊಟ್ವೇ ಹೊರತು, ಆ ಚಿತ್ರಗಳಿಗೆ ಪಬ್ಲಿಸಿಟಿ ನೀಡಿಲ್ಲ. 'ಬಾಹುಬಲಿ' ಮುಂತಾದ ಚಿತ್ರಗಳನ್ನ ನೋಡಲೇಬೇಕು ಅಂತ ಒತ್ತಾಯ ಮಾಡಿಲ್ಲ. ಮಾಹಿತಿ ನೀಡುವುದು ನಮ್ಮ ಕರ್ತವ್ಯ ಅಷ್ಟೆ. ಅದು ಯಾವ ಭಾಷೆಯ ಚಿತ್ರವಾದರೂ. ಮಾಹಿತಿಗೂ-ಪಬ್ಲಿಸಿಟಿಗೂ ವ್ಯತ್ಯಾಸ ಇದೆ ಅಲ್ವಾ?
ಇಷ್ಟವಿಲ್ಲದಿದ್ದರೆ ನೋಡಬೇಡಿ.!
ಮಾಧ್ಯಮಗಳು ಪದೇ ಪದೇ ಬೇರೆ ಭಾಷೆಯ ಸಿನಿಮಾಗಳನ್ನೇ ತೋರಿಸುತ್ತಿದ್ದರೆ ನೋಡ್ಬೇಡಿ. ನಿಮ್ಮನ್ನ ಯಾರೂ ಬಲವಂತ ಮಾಡುತ್ತಿಲ್ಲ. ಜನ ನೋಡುತ್ತಿಲ್ಲ, ಓದುತ್ತಿಲ್ಲ ಅಂತ ಗೊತ್ತಾದ್ರೆ, ಅಂತಹ ಸಿನಿಮಾಗಳ ಬಗ್ಗೆ ಮಾಧ್ಯಮದವರು ತಲೆಕೆಡಿಸಿಕೊಳ್ಳುವುದನ್ನ ನಿಲ್ಲಿಸ್ತಾರೆ. ಜನರ ಆಸಕ್ತಿ ಮೇಲೆ ಎಲ್ಲವೂ ನಿರ್ಧಾರವಾಗುವುದು ಅಲ್ಲವೇ.? 'ಪುಲಿ', 'ಬಾಹುಬಲಿ' ಚಿತ್ರಗಳ ಬಗ್ಗೆ ಹೆಚ್ಚು ವರದಿ ಮಾಡಲಾಗಿದೆ ಅಂತ ಬೊಬ್ಬೆ ಹೊಡೆಯುವವರು ಅದನ್ನ ಓದಿದ್ದಾರೆ, ನೋಡಿದ್ದಾರೆ ಅಂತರ್ಥ ಅಲ್ವಾ?
ಕನ್ನಡ ಚಿತ್ರಗಳ ಕಾರ್ಯಕ್ರಮಗಳನ್ನ ಕೇಳೋರೇ ಇಲ್ಲ ಯಾಕೆ?
'ಖುಷಿ ಖುಷಿಯಾಗಿ', 'ರಾಜ ರಾಜೇಂದ್ರ', 'ಡಿ.ಕೆ', 'ರುದ್ರತಾಂಡವ', 'ವಾಸ್ತು ಪ್ರಕಾರ', 'ರಣವಿಕ್ರಮ', 'ಬುಲೆಟ್ ಬಸ್ಯಾ' ಚಿತ್ರಗಳಿಗೆ ಸಿಕ್ಕಾಪಟ್ಟೆ ಪಬ್ಲಿಸಿಟಿ ನೀಡಲಾಗಿತ್ತು. ಎಲ್ಲಾ ವಾಹಿನಿಗಳಲ್ಲೂ ಭಿನ್ನವಿಭಿನ್ನ ಪ್ರೋಗ್ರಾಂ ಮಾಡಲಾಗಿತ್ತು. ಕನ್ನಡ ಚಿತ್ರಗಳಿಗಾಗಿ ಕಾಯುವವರು, ಇಂತಹ ಕನ್ನಡ ಚಿತ್ರಗಳ ಕಾರ್ಯಕ್ರಮಗಳನ್ನ ನೋಡ್ಲಿಲ್ಲ ಯಾಕೆ?
'ಉಪ್ಪಿ-2' ಚಿತ್ರಕ್ಕೆ ಮಾಡಿದ ಪಬ್ಲಿಸಿಟಿ ನೆನಪಿದ್ಯಾ?
ಒಂದೋ-ಎರಡೋ ಪೋಸ್ಟರ್ ಮತ್ತು ಒಂದು ಟೀಸರ್ ಬಿಟ್ಟರೆ 'ಉಪ್ಪಿ-2' ಚಿತ್ರತಂಡದಿಂದ ಏನೂ ಬಹಿರಂಗವಾಗಿರಲಿಲ್ಲ. ಹೀಗಿದ್ದರೂ, ಎಲ್ಲಾ ಚಾನೆಲ್ ನವರು ಗಂಟೆಗಟ್ಟಲೆ ಕಾರ್ಯಕ್ರಮ ಮಾಡಿ ಪ್ರಚಾರ ಮಾಡ್ಲಿಲ್ವಾ? ರಿಲೀಸ್ ಗೂ ಮುನ್ನ ಉಪೇಂದ್ರ ಯಾವ ವಾಹಿನಿಗೂ ಸಂದರ್ಶನ ನೀಡಲಿಲ್ಲ. ಕಮರ್ಶಿಯಲ್ ಬಂದಿದ್ದು ಆಮೇಲೆ. ಹೀಗಿದ್ದರೂ, ಮಾಧ್ಯಮದವರು 'ಉಪ್ಪಿ-2' ಚಿತ್ರವನ್ನ ಪಕ್ಕಕ್ಕೆ ಇಡಲಿಲ್ಲ. ಇದಕ್ಕೆ ನೀವು ಟಿ.ಆರ್.ಪಿ ಅಂತ ಅರ್ಥ ಕೊಟ್ಟರೆ, ನಾವು ಮಾಡಿದ್ದು ಕನ್ನಡ ಚಿತ್ರಗಳ ಮೇಲಿನ ಅಭಿಮಾನದಿಂದ, ಉಪ್ಪಿ ಮೇಲಿಟ್ಟಿರುವ ಪ್ರೀತಿಯಿಂದ.
'ನಾನು ಅವನಲ್ಲ...ಅವಳು' ಚಿತ್ರ ಏನಾಯ್ತು?
ಎರಡು ರಾಷ್ಟ್ರ ಪ್ರಶಸ್ತಿ ಪಡೆದ 'ನಾನು ಅವನಲ್ಲ...ಅವಳು' ಸಿನಿಮಾನ ಎಷ್ಟು ಜನ ನೋಡಿದ್ದಾರೆ? ಚಿತ್ರದಲ್ಲಿನ ಉತ್ತಮ ಪ್ರಯತ್ನ ಕಂಡು ಮಾಧ್ಯಮದವರು ವಿಶೇಷ ಕಾರ್ಯಕ್ರಮಗಳನ್ನ ಮಾಡಿದ್ರು. ಹೀಗಿದ್ದರೂ, 'ನಾನು ಅವನಲ್ಲ...ಅವಳು' ಚಿತ್ರವನ್ನ ಕನ್ನಡಿಗರು ಯಾಕೆ ಗೆಲ್ಲಿಸಲಿಲ್ಲ.?
ಕನ್ನಡ ಚಿತ್ರಕ್ಕೆ ಕನ್ನಡ ಚಿತ್ರವೇ ಕಂಟಕ.!
'Mr.ಐರಾವತ' ಅಬ್ಬರದಿಂದ 'ನಾನು ಅವನಲ್ಲ..ಅವಳು', 'ಚಂದ್ರಿಕಾ' ಸಿನಿಮಾಗಳು ಥಿಯೇಟರ್ ನಿಂದ ಕೊಚ್ಚಿಕೊಂಡು ಹೋದ್ವು. ದರ್ಶನ್ ಪರ ಬ್ಯಾಟಿಂಗ್ ಮಾಡುವವರು, ಇತರೆ ಕನ್ನಡ ಸಿನಿಮಾಗಳನ್ನೂ ನೋಡಬೇಕಲ್ವಾ? ಇಲ್ಲಾಂದ್ರೆ, ಕನ್ನಡ ಚಿತ್ರರಂಗ ಉದ್ಧಾರ ಆಗೋದು ಹೇಗೆ? (ದರ್ಶನ್ ರವರ ಮಾತಿನ ಅರ್ಥದಲ್ಲೇ)
ನಮಗೆ ಯಾರೂ ಕಮರ್ಶಿಯಲ್ ಕೊಟ್ಟಿಲ್ಲ ಸ್ವಾಮಿ.!
ಒನ್ ಇಂಡಿಯಾ ಕನ್ನಡದಲ್ಲಿ ಶೇ.80 ರಷ್ಟು ಸುದ್ದಿಗಳು ಸ್ಯಾಂಡಲ್ ವುಡ್ ನದ್ದೇ. ವರ್ಷಗಳಿಂದಲೂ, ಕನ್ನಡ ಚಿತ್ರರಂಗಕ್ಕೆ ಸಪೋರ್ಟ್ ಮಾಡುತ್ತಾ ಬಂದಿದೆ ಒನ್ ಇಂಡಿಯಾ ಕನ್ನಡ (ಫಿಲ್ಮಿಬೀಟ್ ಕನ್ನಡ). ಹೀಗಿದ್ದರೂ, ಕನ್ನಡ ಚಿತ್ರರಂಗದವರು ನಮಗೆ ಕಮರ್ಶಿಯಲ್ ನೀಡೋದಿಲ್ಲ..! ಆದರೂ, ನಾವು ಕನ್ನಡ ಚಿತ್ರಗಳ ಬಗ್ಗೆ ಸುದ್ದಿ ಮಾಡೋದನ್ನ ನಿಲ್ಲಿಸಿಲ್ಲ. ಕಡಿಮೆ ಕೂಡ ಮಾಡಿಲ್ಲ. ಅದಕ್ಕೆ ಕಾರಣ ನಮಗೆ ಇರುವ ಕನ್ನಡ ಚಿತ್ರಗಳ ಮೇಲೆ ಹಾಗು ಕನ್ನಡ ನಟರ ಮೇಲಿನ ಅಭಿಮಾನ.
ದರ್ಶನ್ ರನ್ನ ಯಾರೂ ಕೀಳಾಗಿ ನೋಡುತ್ತಿಲ್ಲ.!
ದರ್ಶನ್ ಬಗ್ಗೆ ಎಲ್ಲಾ ಮಾಧ್ಯಮದವರಿಗೂ ಕಾಳಜಿ ಇದೆ. ಅಭಿಮಾನ ಇದೆ. ಗೌರವ ಇದೆ. ಅವರನ್ನ ಯಾರೂ ಕೀಳಾಗಿ ಕಾಣೋದಿಲ್ಲ. ಕಮರ್ಶಿಯಲ್ ವಿಚಾರ ಬಿಡಿ. ದರ್ಶನ್ ಸಂದರ್ಶನ ನೀಡುತ್ತೇನೆ ಅಂದ್ರೆ ಮಾಧ್ಯಮದವರು ತಕ್ಷಣ ಟೈಮ್ ಫಿಕ್ಸ್ ಮಾಡ್ತಾರೆ. ಇದಕ್ಕೆ ಟಿ.ಆರ್.ಪಿ ಅಂತ ಒನ್ಸ್ ಅಗೇನ್ ನೀವು ಕರೆದರೆ, ಮಾಧ್ಯಮದವರಿಗೆ 'ಗೌರವ' ಮುಖ್ಯ.
ತಂಟೆಗೆ ಬಂದ್ರೆ ಯಾರ್ತಾನೆ ತರಾಟೆಗೆ ತೆಗೆದುಕೊಳ್ಳೋದಿಲ್ಲ?
ದರ್ಶನ್ ಅಭಿಮಾನಿಗಳಿಗೆ ಮಾಧ್ಯಮದವರನ್ನ ಕಂಡ್ರೆ ಆಗೋಲ್ಲ. ಯಾರಾದರೂ ಸುಖಾ ಸುಮ್ಮನೆ ನಿಮ್ಮ ತಂಟೆಗೆ ಬಂದ್ರೆ, ನೀವು ಸುಮ್ನೆ ಬಿಡ್ತೀರಾ. ಹಾಗೇ, ಮಾಧ್ಯಮದವರನ್ನ ದರ್ಶನ್ ಅಭಿಮಾನಿಗಳು (ಅಂತ ಹೇಳಿಕೊಳ್ಳುವವರು) ಕೆಣಕಿದರೆ ಸುಮ್ನೆ ಇರ್ತಾರಾ. ನೀವೇ ಹೇಳಿ....
ಬೇರೆ ಯಾರಿಗೂ ಪ್ರಾಬ್ಲಂ ಇಲ್ಲ.!
ಸ್ಟಾರ್ ಗಳನ್ನ ಬಿಟ್ಹಾಕಿ. ಶಿವಣ್ಣ, ಪುನೀತ್, ಸುದೀಪ್, ಯಶ್ ಅಭಿಮಾನಿಗಳಿಗೆ ಯಾಕೆ ಮಾಧ್ಯಮದವರ ಮೇಲೆ ಕೋಪವಿಲ್ಲ?
ರಾಜ್-ವಿಷ್ಣು ಕಾಲದಲ್ಲಿ ಪತ್ರಕರ್ತರಿಗೆ ಗೌರವ ಇತ್ತು.!
ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್ ಕಾಲದಲ್ಲಿ ಮಾಧ್ಯಮಗಳು ಇರ್ಲಿಲ್ಲ ಅಂತ ಕೆಲವರು ವಾದ ಮಾಡುತ್ತಾರೆ. ಆ ಕಾಲದಲ್ಲಿ ಟಿವಿ, ಇಂಟರ್ನೆಟ್ ಇರ್ಲಿಲ್ಲ. ಆದ್ರೆ, ಪತ್ರಿಕೆ ಇತ್ತಲ್ವೇ? ಪತ್ರಕರ್ತರನ್ನ ಡಾ.ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಗೌರವದಿಂದ ಕಾಣ್ತಿದ್ರು. ಆಪ್ತ ಸ್ನೇಹಿತರಂತೆ ಮಾತನಾಡುತ್ತಿದ್ದರು. ಈಗ ಪರಿಸ್ಥಿತಿ ಏನಾಗಿದೆ?
ಎಲ್ಲರನ್ನೂ ಒಂದೇ ತಕ್ಕಡಿಗೆ ಹಾಕುವುದು ಎಷ್ಟು ಸರಿ?
ಯಾರೋ ದುಡ್ಡು ತಿಂದು ಮಾಡಿದ ತಪ್ಪಿಗೆ, ಎಲ್ಲಾ ಮಾಧ್ಯಮದವರನ್ನು, ಪತ್ರಕರ್ತರನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗುವುದು ಎಷ್ಟರ ಮಟ್ಟಿಗೆ ಸರಿ?
ಕನ್ನಡ ಚಿತ್ರಗಳಿಗೆ ಎಲ್ಲರೂ ಸಪೋರ್ಟ್ ಮಾಡ್ಬೇಕು.!
ಪರಭಾಷೆ ಸಿನಿಮಾಗಳಿಗೆ ಜನರು ಮೊದಲು ಮಣೆ ಹಾಕುವುದನ್ನ ನಿಲ್ಲಿಸಿದರೆ, ಅಂತಹ ಚಿತ್ರಗಳ ಬಗ್ಗೆ ಮಾಧ್ಯಮಗಳು ಸುದ್ದಿ ಮಾಡುವುದನ್ನೂ ನಿಲ್ಲಿಸುತ್ತದೆ. ಪತ್ರಕರ್ತರಿಂದ ಯಾರೂ 'ಸ್ಟಾರ್' ಆಗಿಲ್ಲ ಅಂತ ಹೇಳುವ ಕನ್ನಡ ಸಿನಿ ಪ್ರಿಯರು ಎಲ್ಲಾ ಕನ್ನಡ ಚಿತ್ರಗಳಿಗೂ ಪ್ರೋತ್ಸಾಹ ನೀಡಬೇಕು.
ಅಭಿಪ್ರಾಯವಷ್ಟೆ.!
ಮಾಧ್ಯಮಗಳ ಮೇಲೆ ಸುಮ್ಮನೆ ರೊಚ್ಚಿಗೆದ್ದಿರುವ 'ಕನ್ನಡ ಸಿನಿ ಪ್ರಿಯ'ರನ್ನು ಉದ್ದೇಶಿಸಿ ಈ ಪ್ರಶ್ನೆಗಳನ್ನ ಇಡಲಾಗಿದ್ಯೇ ಹೊರತು, ಈ ಲೇಖನದಿಂದ ಯಾರಿಗೂ ಬೇಸರ ಮಾಡುವ ಉದ್ದೇಶ ನಮ್ಮದಲ್ಲ. ವಾಸ್ತವ ಸಂಗತಿಯನ್ನು ಇದ್ದ ಹಾಗೆ ನಿಮ್ಮ ಮುಂದೆ ಇಟ್ಟಿದ್ದೀವಿ. ಜನ ಮರುಳೋ, ಜಾತ್ರೆ ಮರುಳೋ ಅಂದ ಹಾಗೆ, ಪರಭಾಷೆ ಸಿನಿಮಾಗಳಿಗೆ ಕರ್ನಾಟಕದಲ್ಲಿ ಅಕ್ಷರಶಃ ಜಾತ್ರೆ ವಾತಾವರಣ. ಅದು ಬದಲಾಗಬೇಕು ಅಂದ್ರೆ ಎಲ್ಲರೂ ಕೈಜೋಡಿಸಬೇಕು. ಏನಂತೀರಾ..?