ಹೊಂಬಾಳೆ ಫಿಲಂಸ್ ಮುಂದಿನ ಚಿತ್ರ: ಕನ್ನಡಿಗರಿಗೆ ಗೊಂದಲ, ಅನುಮಾನ!
ಕೆಜಿಎಫ್ ಚಾಪ್ಟರ್ 1 ಯಶಸ್ಸಿನ ಮೂಲಕ ನಿರ್ಮಾಪಕ ವಿಜಯ್ ಕಿರಗಂದೂರ್ ದೇಶವ್ಯಾಪಿ ದೊಡ್ಡ ಮಟ್ಟದ ಖ್ಯಾತಿ ಗಳಿಸಿಕೊಂಡರು. ಹೊಂಬಾಳೆ ಫಿಲಂಸ್ ಅಡಿಯಲ್ಲಿ ತಯಾರಾಗುವ ಚಿತ್ರಗಳಿಗೆ ಬೇಡಿಕೆ ಸಹ ಹೆಚ್ಚಾಯ್ತು. ಸದ್ಯ ಕೆಜಿಎಫ್ ಚಾಪ್ಟರ್ 2 ಮಾಡ್ತಿರುವ ನಿರ್ಮಾಪಕರು ತಮ್ಮ ಮುಂದಿನ ಚಿತ್ರವನ್ನು ಡಿಸೆಂಬರ್ 2 ರಂದು ಘೋಷಣೆ ಮಾಡಲಿದ್ದಾರೆ.
Recommended Video
ಈ ಕುರಿತು ಹೊಂಬಾಳೆ ಫಿಲಂಸ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ''ತಮ್ಮ ಮುಂದಿನ ಭಾರತೀಯ ಚಿತ್ರದ ಬಗ್ಗೆ ಡಿಸೆಂಬರ್ 2 ರಂದು ಹೇಳಲಿದ್ದೇವೆ'' ಎಂದಿದ್ದಾರೆ. ಈ ಸುದ್ದಿಯಿಂದ ಕನ್ನಡ ಚಲನಚಿತ್ರ ಪ್ರೇಮಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಆದ್ರೆ, ಕೆಲವರು ಈ ಪ್ರಾಜೆಕ್ಟ್ ಬಗ್ಗೆ ಬೇರೆನೇ ಲೆಕ್ಕಾಚಾರದಲ್ಲಿದ್ದಾರೆ. ಏನದು? ಮುಂದೆ ಓದಿ...

ಕನ್ನಡ ನಟ ನಾಯಕ ಆಗ್ತಾನಾ?
ಕೆಜಿಎಫ್ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಟ್ರೆಂಡ್ ಫಾಲೋ ಮಾಡ್ತಿರುವ ಹೊಂಬಾಳೆ ಫಿಲಂಸ್ ತಮ್ಮ ಮುಂದಿನ ಚಿತ್ರವನ್ನು ಪ್ಯಾನ್ ಇಂಡಿಯಾ ಆಗಿರಲಿದೆ ಎಂದು ಸುಳಿವು ನೀಡಿದೆ. ಆದ್ರೆ, ಈ ಚಿತ್ರಕ್ಕೆ ಕನ್ನಡದವರೇ ನಾಯಕ ಆಗ್ತಾರಾ ಅಥವಾ ಪರಭಾಷೆಯಲ್ಲಿ ಸಿನಿಮಾ ಮಾಡ್ತಾರಾ ಎಂಬ ಚರ್ಚೆ ಶುರುವಾಗಿದೆ.

ಪರಭಾಷೆ ಹೀರೋ ಜೊತೆ ಪ್ರಾಜೆಕ್ಟ್ ಆಗುತ್ತಾ?
ಹೊಂಬಾಳೆ ಅವರ ಮುಂದಿನ ಚಿತ್ರದಲ್ಲಿ ಕನ್ನಡದವರೇ ನಾಯಕರಾಗಿ ಇರಲಿ ಎಂಬ ಕೂಗು ಬಲವಾಗಿ ಕಾಡುತ್ತಿದೆ. ಏಕಂದ್ರೆ, ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಸುಳಿವು ನೀಡಿದ್ದು ಬೇರೆ ಭಾಷೆಯ ಹೀರೋ ಜೊತೆ ಮುಂದಿನ ಸಿನಿಮಾ ಮಾಡ್ತಿರಬಹುದಾ ಎಂಬ ಕುತೂಹಲ ಇದೆ. ಹಾಗಾಗಿ, ಕನ್ನಡದವರೇ ಇದ್ದರೆ ಖುಷಿ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯವೂ ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.

ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಅಪ್ಪು ಫ್ಯಾನ್ಸ್
ರಾಜಕುಮಾರ, ಯುವರತ್ನ ಸಿನಿಮಾಗಳ ನಂತರ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಬಹುದು. ಆ ಚಿತ್ರಕ್ಕೆ ಹೊಂಬಾಳೆ ಫಿಲಂಸ್ ಬಂಡವಾಳ ಹೂಡಬಹುದು ಎಂಬ ಸುದ್ದಿಯೂ ವರದಿಯಾಗಿತ್ತು. ಹಾಗಾಗಿ, ಹ್ಯಾಟ್ರಿಕ್ ಆಗಬಹುದಾ ಎಂಬ ನಿರೀಕ್ಷೆ ಅಪ್ಪು ಅಭಿಮಾನಿಗಳನ್ನು ಕಾಡ್ತಿದೆ.

ಪ್ರಭಾಸ್, ಎನ್ಟಿಆರ್ ಹೆಸರು
ಕನ್ನಡದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿರುವ ಹೊಂಬಾಳೆ ಫಿಲಂಸ್ ಪರಭಾಷೆಯಲ್ಲಿ ಸಿನಿಮಾ ಮಾಡಲು ಮುಂದಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆ ಹಿನ್ನೆಲೆಯಲ್ಲಿ ತಮ್ಮ ಮುಂದಿನ ಚಿತ್ರಕ್ಕೆ ಪ್ರಭಾಸ್, ಎನ್ ಟಿ ಆರ್ ಹೆಸರು ಸಹ ಚರ್ಚೆಯಲ್ಲಿದೆ. ಕೆಜಿಎಫ್ ಬಳಿಕ ಮತ್ತೆ ಯಶ್ ಜೊತೆಯೇ ಸಿನಿಮಾ ಆಗಬಹುದು ಎಂಬ ನಿರೀಕ್ಷೆಯೂ ಇದೆ. ಈ ಎಲ್ಲದಕ್ಕೂ ಸ್ಪಷ್ಟ ಉತ್ತರ ನಾಳೆ ಮಧ್ಯಾಹ್ನದ ವೇಳೆಗೆ ಸಿಗಲಿದೆ.


Click it and Unblock the Notifications











