ಯಶ್-ಸುದೀಪ್-ದರ್ಶನ್ ಪ್ರಚಾರ ಮಾಡಿದವರ ಕಥೆ ಏನಾಯ್ತು.?
Recommended Video

ಸಿನಿಮಾ ನಟರು ಬಂದು ಪ್ರಚಾರ ಮಾಡಿದ್ರೆ ಗೆದ್ದು ಬಿಡ್ತಾರ....? ಫಲಿತಾಂಶವನ್ನ ಬದಲಾಯಿಸಿ ಬಿಡ್ತಾರ....? ಸಿನಿಮಾ ಸ್ಟಾರ್ ಗಳನ್ನ ನೋಡೋಕೆ ಜನ ಬರ್ತಾರೆ ಅಷ್ಟೇ. ಆದ್ರೆ, ಯಾರೂ ಅವರನ್ನ ನೋಡಿ ವೋಟ್ ಹಾಕಲ್ಲ ಎನ್ನುವುದು ರಾಜಕೀಯದಲ್ಲಿ ಕೇಳಿ ಬರುವ ಮಾತು.
ಹೀಗಿದ್ದರೂ, ಸ್ಯಾಂಡಲ್ ವುಡ್ ನ ಕೆಲವು ಸೂಪರ್ ಸ್ಟಾರ್ ನಟರು ಕೆಲವು ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದರು. ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ಪಕ್ಷಗಳನ್ನ ಮರೆತು ಅಭ್ಯರ್ಥಿಗಳಿಗಾಗಿ ಬೀದಿಗಿಳಿದು ರೋಡ್ ಶೋ ಮಾಡಿದ್ರು. ಈ ನಟರು ಹೋದಲ್ಲಿ, ಬಂದಲ್ಲೆಲ್ಲ ಜನಸಾಗರ ಹರಿದುಬಂದಿತ್ತು. ಇದನ್ನ ನೋಡಿದವರೆಲ್ಲ ಇವರು ಗೆದ್ದೇ ಬಿಡ್ತಾರೆ ಎನ್ನುತ್ತಿದ್ದರು.
ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ
ಇದೀಗ, ಕರ್ನಾಟಕ ಚುನಾವಣೆ ಮುಗಿದು, ಫಲಿತಾಂಶವೂ ಹೊರಬಿದ್ದಿದೆ. ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೇ ಅಸಲಿ ರಾಜಕೀಯ ಆರಂಭವಾಗಿದೆ. ಈ ಮಧ್ಯೆ, ಸ್ಟಾರ್ ನಟರು ಪ್ರಚಾರ ಮಾಡಿದ ಅಭ್ಯರ್ಥಿಗಳ ಹಣೆ ಬರಹ ಏನಾಯ್ತು ಎಂಬುದು ಸಾಮಾನ್ಯರಿಗೆ ಕುತೂಹಲ ಮೂಡಿಸಿತ್ತು. ಇದಕ್ಕೆ ಉತ್ತರ ಇಲ್ಲಿದೆ ನೋಡಿ. ದರ್ಶನ್, ಯಶ್, ಸುದೀಪ್ ಪ್ರಚಾರ ಮಾಡಿದ ಅಭ್ಯರ್ಥಿಗಳಲ್ಲಿ ಯಾರಿಗೆ ಬೆಲ್ಲ, ಯಾರಿಗೆ ಬೇವು.? ಮುಂದೆ ಓದಿ....

ಕೆ.ಆರ್ ನಗರ ಕ್ಷೇತ್ರದಿಂದ ಪ್ರಚಾರ ಆರಂಭಿಸಿದ್ದ ಯಶ್
ಮೈಸೂರಿನ ಕೆ.ಆರ್ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಾರಾ ಮಹೇಶ್ ಅವರ ಪರವಾಗಿ ಪ್ರಚಾರ ಮಾಡುವುದರ ಮೂಲಕ ಚುನಾವಣೆ ಮತಭೇಟೆ ಆರಂಭಿಸಿದ್ದರು ರಾಕಿಂಗ್ ಸ್ಟಾರ್ ಯಶ್. ಸಾರಾ ಮಹೇಶ್ ಪರವಾಗಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ದರು. ಫಲಿತಾಂಶದಲ್ಲಿ ದೊಡ್ಡ ಅಂತರದಿಂದಲೇ ಸಾರಾ ಮಹೇಶ್ ಗೆಲುವು ಸಾಧಿಸಿದ್ದಾರೆ.

ರಾಮದಾಸ್ ಗೆ 'ರಾಕಿಂಗ್' ಗೆಲುವು
ಮೈಸೂರಿನ ಮತ್ತೊಂದು ಅಭ್ಯರ್ಥಿ ಪರ ಯಶ್ ಪತಯಾಚನೆ ಮಾಡಿದ್ದರು. ಕೆ.ಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮದಾಸ್ ಪರವಾಗಿ ಯಶ್ ರೋಡ್ ಶೋ ಮಾಡಿದ್ದರು. ಈಗ ರಾಮದಾಸ್ ಅವರು ಕೂಡ ಗೆಲುವು ಕಂಡಿದ್ದಾರೆ.

ಜ್ಯೋತಿ ಗಣೇಶ್ ಗೆಲುವು
ತುಮಕೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಮತ್ತು ಶಿರಸಿಯ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗೆಡೆ ಕಾಗೇರಿ ಪರ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ಮಾಡಿದ್ದರು. ಯಶ್ ಪ್ರಚಾರ ಮಾಡಿದ ಇವರಿಬ್ಬರು ಭರ್ಜರಿ ಗೆಲುವು ಕಂಡಿದ್ದಾರೆ.

ಬೊಮ್ಮನಹಳ್ಳಿ ಸತೀಶ್ ರೆಡ್ಡಿ ಗೆಲುವು
ಬೆಂಗಳೂರಿನ ಬೊಮ್ಮನಹಳ್ಳಿಯ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಅವರ ಪರವಾಗಿಯೂ ರಾಕಿಂಗ್ ಸ್ಟಾರ್ ರೋಡ್ ಶೋ ನಡೆಸಿದ್ದರು. ಗಾರ್ಮೆಂಟ್ಸ್ ಗಳಿಗೂ ತೆರಳಿ ಮತಯಾಚನೆ ಮಾಡಿದ್ದರು. ಅದರಂತೆ ಸತೀಶ್ ರೆಡ್ಡಿ ಕೂಡ ಭಾರಿ ಅಂತರದ ಮತಗಳಿಂದ ಭರ್ಜರಿಗಳಿಸಿದ್ದಾರೆ.

ಶ್ರೀರಾಮುಲು ಪರ ಸುದೀಪ್-ಯಶ್
ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ನಡೆಸಿದ್ದರು. ಅದಾದ ಬಳಿಕ ಕಿಚ್ಚ ಸುದೀಪ್ ಕೂಡ ಶ್ರೀರಾಮುಲು ಪರವಾಗಿ ರೋಡ್ ಶೋ ನಡೆಸಿ ವೋಟ್ ಕೇಳಿದ್ದರು. ಈ ಇಬ್ಬರು ಪ್ರಚಾರ ಮಾಡಿದ್ದ ಶ್ರೀರಾಮುಲು ಮೊಳಕಾಲ್ಮೂರಿನಲ್ಲಿ ಗೆಲುವು ಕಂಡಿದ್ದಾರೆ.

ಸುರಪುರ ಬಿಜೆಪಿ ಅಭ್ಯರ್ಥಿ ರಾಜುಗೌಡ
ಬಳ್ಳಾರಿಯ ಸುರಪುರದ ಬಿಜೆಪಿ ಅಭ್ಯರ್ಥಿ ರಾಜುಗೌಡ (ನರಸಿಂಹ ನಾಯ್ಕ) ಅವರ ಪರವಾಗಿ ಕಿಚ್ಚ ಸುದೀಪ್ ಮತಯಾಚನೆ ಮಾಡಿದ್ದರು. ಇಲ್ಲಿ ರಾಜುಗೌಡ ಅವರು ಕೂಡ ಭರ್ಜರಿ ಗೆಲುವು ಸಾಧಿಸಿದ್ದಾರೆ.

ದಾಸನ ಪ್ರಚಾರ ಫಲ ಕೊಡಲಿಲ್ಲ
ಇನ್ನು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಮಾಡಿದ್ದರು. ದುರದೃಷ್ಟವಶಾತ್ ಸಿದ್ದರಾಮಯ್ಯ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿಲ್ಲ. ಜೆಡಿಎಸ್ ಅಭ್ಯರ್ಥಿ ಜಿ.ಟಿ ದೇವೇಗೌಡ ಈ ಕ್ಷೇತ್ರದಲ್ಲಿ ಜಯ ಕಂಡಿದ್ದಾರೆ.

ಸಾರಾ ಮಹೇಶ್ ಗೂ ದರ್ಶನ್ ಪ್ರಚಾರ
ಕೆ.ಆರ್ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಾರಾ ಮಹೇಶ್ ಪರವಾಗಿ ಯಶ್ ಮಾತ್ರವಲ್ಲದೇ ದರ್ಶನ್ ಕೂಡ ಪ್ರಚಾರ ಮಾಡಿದ್ದರು. ಇಬ್ಬರು ಸ್ಟಾರ್ ನಟರು ಮತಯಾಚನೆ ಮಾಡಿದ್ದರು.


Click it and Unblock the Notifications











