ವಿಷ್ಣು ಪಕ್ಕ ಅಂಬಿ ಸಮಾಧಿ ಮಾಡಿಲ್ಲ ಯಾಕೆ? ಪ್ರಮುಖ ಕಾರಣ ಇದಾಗಿರಬಹುದಾ.!
Recommended Video

ಡಾ ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ಸ್ನೇಹದ ಚಿತ್ರಜಗತ್ತಿಗೆ ಮಾದರಿ. ಬದುಕಿದ್ದಷ್ಟು ಕಾಲ 'ಕುಚಿಕುಗಳು' ಎಂದೇ ಗುರುತಿಸಿಕೊಂಡಿದ್ದರು. ಸಾವಿನಲ್ಲೂ ಈ ಜೋಡಿ ಒಂದಾಗಿರಲಿ ಎಂದುಕೊಂಡಿದ್ದವರೇ ಹೆಚ್ಚು. ಹಾಗಾಗಿ, ಅಂಬಿ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ಅವರ ಅಂತ್ಯಕ್ರಿಯೆ ಎಲ್ಲಿ ಆಗಬಹುದು ಎಂಬ ಚರ್ಚೆ ಆರಂಭವಾಗಿತ್ತು.
ರಾಜ್ಯದ ಬಹುತೇಕ ಜನರು, ಅಂಬರೀಶ್ ಅವರ ಅಂತ್ಯ ಸಂಸ್ಕಾರ ಅಭಿಮಾನ್ ಸ್ಟುಡಿಯೋದಲ್ಲೇ ಆಗುತ್ತೆ ಎಂಬ ನಿರೀಕ್ಷೆ ಮಾಡಿದ್ದರು. ಯಾಕಂದ್ರೆ, ವಿಷ್ಣು ಮತ್ತು ಅಂಬಿಯ ಸ್ನೇಹದ ಪ್ರತಿರೂಪವಾಗಿ ಈ ಕೆಲಸ ಮಾಡಲಾಗುತ್ತೆ ಎಂಬ ಬಯಕೆಯೂ ಮನದಲ್ಲಿತ್ತು.
ಆದ್ರೆ, ಈ ನಿರೀಕ್ಷೆ, ಬಯಕೆಗೆ ಸರ್ಕಾರ ಬ್ರೇಕ್ ಹಾಕಿತ್ತು. ಅಂಬಿಯ ಅಂತ್ಯಕ್ರಿಯೆಯನ್ನ ಡಾ ರಾಜ್ ಕುಮಾರ್ ಸ್ಮಾರಕದ ಪಕ್ಕದಲ್ಲಿರುವ ಜಾಗದಲ್ಲಿ ಮಾಡುವುದಾಗಿ ಘೋಷಣೆ ಮಾಡಿತು. ಇದು ಎಷ್ಟು ಜನರಿಗೆ ಖುಷಿ ಕೊಟ್ಟಿತ್ತೋ ಅಷ್ಟೇ ಜನಕ್ಕೂ ಬೇಸರವೂ ಮಾಡಿತ್ತು. ವಿಷ್ಣು ಪಕ್ಕ ಅಂಬಿ ಸಮಾಧಿ ಮಾಡಬಹುದಿತ್ತು ಅಲ್ವಾ ಎಂದು ಯೋಚಿಸುವರಿಗೆ ಅದು ಯಾಕೆ ಆಗಿಲ್ಲ ಎಂಬ ಅನುಮಾನವೂ ಕಾಡುತ್ತಿದೆ. ಅದಕ್ಕೆ ಉತ್ತರ ಮುಂದಿದೆ ಓದಿ....

ಸ್ಮಾರಕ ವಿವಾದವೇ ಇದಕ್ಕೆ ಅಡ್ಡಿ.?
ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ಸ್ನೇಹ ಎಂತಹದ್ದು ಎಂದು ಕುಟುಂಬಕ್ಕೆ ಮತ್ತು ಸರ್ಕಾರಕ್ಕೆ ಗೊತ್ತಿತ್ತು. ಅದರಲ್ಲೂ ಸಿಎಂ ಸ್ಥಾನದಲ್ಲಿದ್ದು ಕುಮಾರಸ್ವಾಮಿ. ಕುಮಾರಸ್ವಾಮಿಗೆ ಅಂಬಿ ಮತ್ತು ವಿಷ್ಣು ಇಬ್ಬರು ಆಪ್ತರಾಗಿದ್ದರು. ಹಾಗಾಗಿ, ಸಿಎಂಗೆ ಇವರಿಬ್ಬರ ಸ್ನೇಹದ ಬಗ್ಗೆ ಹೆಚ್ಚೇ ಗೊತ್ತಿತ್ತು ಎನ್ನಬಹುದು. ಆದ್ರೂ ಸಮಾಧಿ ಅಲ್ಲಿ ಮಾಡಲಿಲ್ಲ ಅಂತ ಯೋಚನೆ ಮಾಡಿದ್ರೆ, ಅದಕ್ಕೆ ಪ್ರಮುಖವಾಗಿ ಅಡ್ಡಿಯಾಗಿದ್ದೇ ಜಾಗದ ವಿವಾದ.

9 ವರ್ಷದಿಂದ ವಿಷ್ಣು ಸ್ಮಾರಕವೇ ಆಗಿಲ್ಲ
9 ವರ್ಷಗಳಿಂದ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಿಸಲು ಸಾಧ್ಯವಾಗಲಿಲ್ಲ. ಬಾಲಕೃಷ್ಣ ಕುಟುಂಬ, ಭಾರತಿ ವಿಷ್ಣುವರ್ಧನ್, ಹಾಗೂ ಅಭಿಮಾನಿಗಳ ನಡುವಿನ ಜಟಾಪಟಿಯಿಂದ ಸರ್ಕಾರಕ್ಕೂ ಇದು ಕಗ್ಗಂಟಾಗಿ ಉಳಿದುಕೊಂಡಿದೆ. ಹೀಗಿರುವಾಗ, ಅಂಬಿಯ ಸಮಾಧಿಯೂ ಅಲ್ಲೇ ಮಾಡಿದ್ರೆ, ಆಮೇಲೆ ಅಂಬಿ ಸ್ಮಾರಕವನ್ನ ಕೂಡ ವಿವಾದಕ್ಕೆ ಗುರಿಮಾಡಿದಂತಾಗುತ್ತೆ ಎಂಬ ಕಾರಣ ಇರಬಹುದು.

ಕುಟುಂಬದವರು ಒಪ್ಪಲಿಲ್ಲವಾ.?
ವಿಷ್ಣು ಪಕ್ಕ ಅಂಬಿ ಸಮಾಧಿಗೆ ಸರ್ಕಾರವೂ ಚಿಂತಿಸಿ, ಅದಕ್ಕೆ ಕುಟುಂಬದವರು ಒಪ್ಪಲಿಲ್ಲವಾ ಎಂಬ ಅನುಮಾನವೂ ಇದೆ. ಯಾಕಂದ್ರೆ, ಕುಟುಂಬದವರಿಗೂ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕದ ವಿವಾದದ ಬಗ್ಗೆ ಅರಿವಿದೆ. ಸುಮ್ಮನೇ ಯಾಕೆ ಗೊತ್ತಿದ್ದು ವಿವಾದಾತ್ಮಕ ಸ್ಥಳದಲ್ಲಿ ಅಂತ್ಯಕ್ರಿಯೆ ಮಾಡಬೇಕು ಎಂದು ಕುಟುಂಬದವರು ನಿರಾಕರಿಸಿರಬಹುದು.

ಸರ್ಕಾರದ ಒಲವು ಕಂಠೀರವ ಆಗಿತ್ತಾ.?
ಅಭಿಮಾನ್ ಸ್ಟುಡಿಯೋವನ್ನ ನೆನಪೇ ಮಾಡಿಕೊಳ್ಳದೇ, ನೇರವಾಗಿ ಕಂಠೀರವ ಸ್ಟುಡಿಯೋವೇ ಸರ್ಕಾರದ ಮೊದಲ ಆಯ್ಕೆಯಾಗಿರಬಹುದು. ಸದ್ಯಕ್ಕೆ ಚಿತ್ರರಂಗದ ದಿಗ್ಗಜರ ಪಾಲಿಗೆ ಅದೇ ಯೋಗ್ಯವಾದ ಸ್ಥಳ ಎಂದು ಯೋಚಿಸಿ, ಸರ್ಕಾರ ನೇರವಾಗಿ ಕಂಠೀರವ ಸ್ಟುಡಿಯೋವನ್ನ ಆಯ್ಕೆ ಮಾಡಿರಬಹುದು. ಇನ್ನೂ ಸರ್ಕಾರದ ಒಲವಿಗೆ ಕುಟುಂಬದವರು ಒಪ್ಪಿಗೆ ನೀಡಿರಬಹುದು.

ಅಂಬಿ ಸಮಾಧಿಯಿಂದ ವಿಷ್ಣು ಸ್ಮಾರಕ ವಿವಾದ ಬಗೆಹರಿಸಬಹುದಿತ್ತು.?
ಒಂದು ವೇಳೆ ಸರ್ಕಾರ ಹಾಗೂ ಅಂಬಿ ಕುಟುಂಬದವರು ಗಟ್ಟಿ ಮನಸ್ಸು ಮಾಡಿ ವಿಷ್ಣುವರ್ಧನ್ ಪಕ್ಕದಲ್ಲೇ ಅಂಬರೀಶ್ ಅಂತ್ಯಕ್ರಿಯೆ ಮಾಡಲು ನಿರ್ಧರಿಸಿದ್ದರೇ, ಬಹುಶಃ ವಿಷ್ಣು ಸ್ಮಾರಕವನ್ನ ಕೂಡ ಜೊತೆಯಲ್ಲಿಯೇ ನಿರ್ಮಿಸಬಹುದಾಗಿತ್ತು. ಯಾಕಂದ್ರೆ, ಇಬ್ಬರು ದಿಗ್ಗಜರು ಒಂದೇ ಕಡೆಯಾದ್ರೆ, ಇಲ್ಲಿಯವರೆಗೂ ಇದ್ದ ಮನಸ್ತಾಪ, ವಿವಾದ ಎಲ್ಲವನ್ನ ಅಭಿಮಾನಿಗಳು ಮರೆತು, ಇಬ್ಬರು ಸ್ನೇಹಿತರು ಒಂದೆಡೆ ಇರಲಿ ಎನ್ನುತ್ತಿದ್ದರು. ಸರ್ಕಾರ ಮನಸ್ಸು ಮಾಡಿದ್ರೆ ಇದು ಅಸಾಧ್ಯವಾಗುತ್ತಿರಲಿಲ್ಲ. ಇದಕ್ಕೆ ಬಾಲಕೃಷ್ಣ ಕುಟುಂಬವಾಗಲಿ, ಭಾರತಿ ವಿಷ್ಣುವರ್ಧನ್ ಆಗಲಿ, ಅಥವಾ ವಿಷ್ಣು ಅಭಿಮಾನಿಗಳಲ್ಲಿ ನಿರಾಕರಿಸುತ್ತಿರಲಿಲ್ಲ ಅನ್ಸುತ್ತೆ.

ಅಭಿಮಾನ್ ಸ್ಟುಡಿಯೋ ಸರ್ಕಾರದ ಅಧೀನದಲ್ಲಿದೆ
ನೆನಪಿರಲಿ, ಅಭಿಮಾನ್ ಸ್ಟುಡಿಯೋ ಈಗ ಸರ್ಕಾರದ ಅಧೀನದಲ್ಲಿದೆ. ಸರ್ಕಾರಕ್ಕೆ ಪೂರ್ಣ ಅಧಿಕಾರವಿದೆ. ಮೂಲತಃ ಬಾಲಕೃಷ್ಣ ಕುಟುಂಬಕ್ಕೆ ಸೇರಿದ್ದರೂ, ಈಗ ಸರ್ಕಾರದ ಹಿಡಿತದಲ್ಲೇ ಆ ಜಾಗವಿದೆ. ಸದ್ಯಕ್ಕೆ ವಿಷ್ಣು ಸ್ಮಾರಕಕ್ಕೆ ಅಡ್ಡಿಯಾಗುತ್ತಿರುವುದು ಬಾಲಕೃಷ್ಣ ಕುಟುಂಬ ಅಲ್ಲ, ಇದು ಅಭಿಮಾನಿಗಳು ಮತ್ತು ಭಾರತಿ ನಡುವಿನ ಅಭಿಮಾನದ ಹೋರಾಟ. ಸರ್ಕಾರ ಮೂವರನ್ನ ಸೇರಿಸಿ ಒಂದು ಸಭೆ ಮಾಡಿದ್ರೆ ವಿವಾದ ಅಂತ್ಯವಾಗೋದು ಪಕ್ಕಾ.

ಅಂಬಿಗೆ ಆಸೆ ಇತ್ತಂತೆ
ಅಂದ್ಹಾಗೆ, ಅಂಬರೀಶ್ ಅವರಿಗೆ ವಿಷ್ಣುವರ್ಧನ್ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡಬೇಕು ಎಂಬ ಆಸೆ ಇತ್ತು ಎಂದು ಹೇಳಲಾಗ್ತಿದೆ. ಆದ್ರೆ, ಸತ್ಯಕ್ಕೆ ಎಷ್ಟು ಹತ್ತಿರವಾದ ವಿಷ್ಯ ಎನ್ನುವುದು ಗೊತ್ತಿಲ್ಲ. ಬಟ್, ಅವರಿಬ್ಬರ ಸ್ನೇಹವನ್ನ ಹತ್ತಿರದಿಂದ ನೋಡಿದವರಿಗೆ ಇದು ನಿಜ ಇರಬಹುದು ಎನ್ನುತ್ತಿದ್ದಾರೆ.


Click it and Unblock the Notifications











