ಅನಂತ್ ನಾಗ್ ಅವರಿಗೆ ಏಕಿಲ್ಲ ಅತ್ಯುನ್ನತ ಗೌರವ? ಕೇಂದ್ರದ ಪ್ರಶಸ್ತಿ ಬಾಲಿವುಡ್ಗೆ ಮಾತ್ರನಾ?
ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಇತ್ತೀಚಿಗಷ್ಟೆ ಕೇಂದ್ರ ಸರ್ಕಾರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ. ಭಾರತೀಯ ಚಿತ್ರರಂಗಕ್ಕೆ ರಜನಿಕಾಂತ್ ನೀಡಿರುವ ಕೊಡುಗೆ ಗೌರವಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ತಲೈವಾಗೆ ದಾದಾ ಸಾಹೇಬ್ ಪ್ರಶಸ್ತಿ ಘೋಷಣೆ ಆದ ಬಳಿಕ ಕನ್ನಡ ಹಿರಿಯ ನಟ ಅನಂತ್ ನಾಗ್ ಹೆಸರು ಟ್ವಿಟ್ಟರ್ನಲ್ಲಿ ಚರ್ಚೆಯಲ್ಲಿದೆ.
ಐದು ದಶಕಗಳಿಂದ ಚಿತ್ರರಂಗದಲ್ಲಿದ್ದು, ತಮ್ಮ ಅಸಾಮಾನ್ಯ ಪ್ರತಿಭೆಯಿಂದ ಚಿತ್ರಪ್ರೇಮಿಗಳನ್ನು ರಂಜಿಸುತ್ತಾ ಬಂದಿದ್ದಾರೆ. ನಾಯಕ ನಟ, ಪೋಷಕ ನಟನಾಗಿ 300ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲೇ 200ಕ್ಕೂ ಹೆಚ್ಚು ಸಿನಿಮಾಗಳು. ತಮಿಳು, ತೆಲುಗು, ಹಿಂದಿ, ಮಲಯಾಳಂ, ಮರಾಠಿ ಚಿತ್ರಗಳಲ್ಲೂ ಅನಂತ್ ನಾಗ್ ನಟಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲೂ ತೊಡಗಿಕೊಂಡಿದ್ದ ಅನಂತ್ ನಾಗ್ ಎಂಎಲ್ಸಿ ಆಗಿ, ಸಚಿವನಾಗಿ ಕಾರ್ಯನಿರ್ವಹಿಸಿದ್ದರು. 72ನೇ ವಯಸ್ಸಿನಲ್ಲಿಯೂ ಸಕ್ರಿಯರಾಗಿರುವ ದಿಗ್ಗಜ ನಟ ಅದ್ಭುತ ಪಾತ್ರಗಳ ಮೂಲಕ ಈಗಲೂ ಜನರನ್ನು ರಂಜಿಸುತ್ತಿದ್ದಾರೆ.
ಯಾವುದೇ ಬಿರುದು, ಪ್ರಶಸ್ತಿ, ಗೌರವಗಳನ್ನು ನಿರೀಕ್ಷೆ ಮಾಡದೇ ಕಲಾಸೇವೆ ಮಾಡುತ್ತಿರುವ ಅನಂತ್ ನಾಗ್ ಅವರಿಗೆ ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಯಾವುದೇ ಪ್ರಶಸ್ತಿ ನೀಡದಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಟ್ವಿಟ್ಟರ್ನಲ್ಲಿ ಚರ್ಚೆಯಾಗುತ್ತಿದೆ. ನೆಟ್ಟಿಗರು ಕೆಲವು ಕಾಮೆಂಟ್ಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ಮುಂದೆ ಓದಿ...

ಅನಂತ್ ನಾಗ್ ಅವರಿಗೆ ಏಕಿಲ್ಲ ಪದ್ಮ ಪ್ರಶಸ್ತಿ?
''ಅನಂತ್ ನಾಗ್ ಅವರೂ ಪದ್ಮಶ್ರಿ ಪ್ರಶಸ್ತಿಗೂ ಅರ್ಹರಿಲ್ಲವೇ? ಇದು ನಿಜಕ್ಕೂ ದುರಂತ. ಇವರು ನಟಿಸಲ್ಲ. ಆ ಪಾತ್ರದಲ್ಲಿ ಜೀವಿಸುತ್ತಾರೆ. ಈ ವ್ಯಕ್ತಿ ಎಲ್ಲ ಪ್ರಶಸ್ತಿಗಳಿಗೂ ಅರ್ಹ.'' ಎಂದು ಅಭಿಮಾನಿಯೊಬ್ಬ ಪೋಸ್ಟ್ ಹಾಕುವ ಮೂಲಕ ಚರ್ಚೆಗೆ ಕಾರಣವಾಗಿದ್ದಾರೆ. ಈ ಪೋಸ್ಟ್ಗೆ ಸಾವಿರಾರು ಜನರು ಕಾಮೆಂಟ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮೆಲ್ಲರ ಈ ಅಭಿಮಾನವೇ ದೊಡ್ಡ ಸನ್ಮಾನ
''ಕಣ್ಣಿನಿಂದಲೆ ಎಲ್ಲಾ ಭಾವಗಳನ್ನು ಪ್ರಕಟಿಸಬಲ್ಲ ಅನಂತನಾಗ್ ಅವರಿಗೆ ಯಾವ ಪ್ರಶಸ್ತಿ ಕೊಟ್ಟರೂ ಅದು ಆ ಪ್ರಶಸ್ತಿಗೆ ಒಂದು ಕಳೆ ಹೊರತು ಅದು ಅನಂತ ನಾಗ್ ಅವರ ಕಲೆಗೆ ಬೆಲೆ ಕೊಟ್ಟಂತೆ ಆಗುತ್ತದೆ. ದುಡ್ಡು ಕೊಟ್ಟೊ ಅಥವಾ ಶಿಫಾರಸು ಮಾಡಿ ಪ್ರಶಸ್ತಿ ಗಳಿಸುವ ಈ ಕಾಲದಲ್ಲಿ ನಮ್ಮೆಲ್ಲರ ಈ ಅಭಿಮಾನವೇ ಕಲಾವಿದನಿಗೆ ಕೊಡುವ ದೊಡ್ಡ ಸನ್ಮಾನ'' ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಪ್ರಶಸ್ತಿಗಳಿಗೆ ಕಾಣೋದು ಹಿಂದಿ ಮಾತ್ರ
''ಪ್ರಶಸ್ತಿಗಳಿಗೆ ಕಾಣೋದು ಹಿಂದಿ ಮಾತ್ರ. ಪ್ರತಿಭೆಗೆ ಕೊನೆಯ ಮಣೆ. ಅದರಲ್ಲೂ ಕನ್ನಡ ಕಟ್ಟಕಡೆಯ ಜಾಗದಲ್ಲಿ. ರಾಜ್ಯ ಸರ್ಕಾರಕ್ಕೆ ಪಾಪ ಪುರುಸೊತ್ತಿಲ್ಲ ಬಿಡಿ, ಅನಂತ್ ನಾಗ್ ಸರ್, ನಮ್ಮ ಗೌರವ ನಿಮಗೆ ಸದಾಕಾಲವೂ ಇರುತ್ತದೆ'' ಎಂದು ಮತ್ತೊಬ್ಬ ನೆಟ್ಟಿಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಲ್ಲವನ್ನ ಮೀರಿದ ಕಲೆ ಇವರದ್ದು
''ಆ ಸ್ಟಾರ್ ಈ ಸ್ಟಾರ್ ಅಂತ ಯಾರಾದ್ರೂ ಹೇಳ್ಳೀಕ್ಕೆ ಆಗತ್ತಾ ಇವ್ರಿಗೆ? ಈ ಮನುಷ್ಯನಿಗೆ ಇದುವರೆಗೆ ಯಾರಿಗೂ ಒಂದು ಬಿರುದು ಹಚ್ಚಲಿಕ್ಕೆ ಆಗಿಲ್ಲ, ಪ್ರಶಸ್ತಿಗೆ ಹೋದ್ರಿ ನೀವು... ಅದೆಲ್ಲವನ್ನ ಮೀರಿದ ಕಲೆ, ನಟನೆ, ವ್ಯಕ್ತಿತ್ವ, ಜ್ಞಾನ ಅವರದ್ದು. ಆರೋಗ್ಯ, ಆಯುಸ್ಸು ಹೆಚ್ಚಲಿ'' ಎಂದು ಬೇಸರ ತೋರಿದ್ದಾರೆ.

ಬಾಲಿವುಡ್ ಸ್ಟಾರ್ಗಳಿಗೆ ಪದ್ಮಶ್ರೀ?
''ಅನಂತ್ ನಾಗ್ ಓರ್ವ ಅದ್ಭುತ ಕಲಾವಿದ. ಇವರೊಬ್ಬ ಮಾಸ್ಟರ್. ಐಶ್ವರ್ಯ ರೈ, ಸೈಫ್ ಅಲಿ ಖಾನ್, ಏಕ್ತಾ ಕಪೂರ್ ಅಂತವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಕೊಡುತ್ತೆ. ಆದರೆ, ಅನಂತ್ ನಾಗ್ ಅಂತಹ ದಿಗ್ಗಜ ಕಲಾವಿದನನ್ನು ನಿರ್ಲಕ್ಷ್ಯಿಸಿರುವುದು ಏಕೆಂದು ತಿಳಿದಿಲ್ಲ'' ಎಂದು ನೆಟ್ಟಿಗ ಪ್ರಶ್ನಿಸಿದ್ದಾರೆ.

ಅನಂತ್ ನಾಗ್ ಪದ್ಮಶ್ರೀಗೆ ಅರ್ಹ ವ್ಯಕ್ತಿ
''ಪದ್ಮಶ್ರೀ ಪ್ರಶಸ್ತಿಗೆ ಅನಂತ್ ನಾಗ್ ಅವರು ಅರ್ಹ ವ್ಯಕ್ತಿ. ಬಹಳ ಹಿಂದೆಯೇ ಇವರಿಗೆ ಪ್ರಶಸ್ತಿ ಕೊಡಬೇಕಿತ್ತು. ಇಂತಹ ಕಲಾವಿದನಿಗೆ ಪದ್ಮಶ್ರೀ ಕೊಡಲೇಬೇಕು'' ಎಂದು ಮತ್ತೊಬ್ಬ ವ್ಯಕ್ತಿ ಆಗ್ರಹಿಸಿದ್ದಾರೆ.
Recommended Video

ರಾಷ್ಟ್ರ ಪ್ರಶಸ್ತಿ ನೀಡಬೇಕಾದ ನಟನೆ ಇವರದ್ದು
''ಅನಂತ್ ನಾಗ್ ಅಭಿನಯಿಸಿದ್ದ ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ನೀಡಬೇಕಿತ್ತು. ಹಾಗ್ನೋಡಿದ್ರೆ, ಪದ್ಮಶ್ರೀ ಯಾವಾಗಲೋ ಕೊಡಬೇಕಿತ್ತು. ಅನಂತ್ ನಾಗ್, ರಮೇಶ್ ಅರವಿಂದ್ ಅಂತಹ ಮೇರು ಕಲಾವಿದರಿಗೆ ಈ ಪ್ರಶಸ್ತಿಗಳೆಲ್ಲವೂ ಬಹಳ ಹಿಂದೆಯೇ ಬರಬೇಕಿತ್ತು'' ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Click it and Unblock the Notifications











