ಅಭಿಮಾನಿಯ ಮಹದಾಸೆ ಈಡೇರಿಸಿದ ನಟ ದರ್ಶನ್; ಅದಕ್ಕಿದೆ ಬಲವಾದ ಕಾರಣ
ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್. ಇನ್ನೂ ವೀರಾಭಿಮಾನಿಗಳ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. ಅಭಿಮಾನಿಗಳನ್ನು ದರ್ಶನ್ ಸೆಲೆಬ್ರೆಟಿಗಳು ಎಂದೇ ಸಂಬೋಧಿಸುತ್ತಾರೆ. ನೆಚ್ಚಿನ ನಟನನ್ನು ಅಭಿಮಾನಿಗಳು ಡಿ ಬಾಸ್ ಎಂದು ಮೆರೆಸುತ್ತಾರೆ.
ನನಗೆ ನನ್ನ ಸೆಲೆಬ್ರೆಟಿಗಳೇ ಮೊದಲು, ನನ್ನ ಚರ್ಮ ಸುಲಿದು ಚಪ್ಪಲಿ ಮಾಡಿಕೊಟ್ಟರೂ ಅಭಿಮಾನಿಗಳ ಋಣ ತೀರಿಸುವುದಕ್ಕೆ ಸಾಧ್ಯವಿಲ್ಲ ಎಂದು ದರ್ಶನ್ ಎಂದು ಹಲವು ವೇದಿಕೆಗಳಲ್ಲಿ ದರ್ಶನ್ ಹೇಳಿದ್ದಾರೆ. ಅಭಿಮಾನಿಗಳು ಕೂಡ ನೆಚ್ಚಿನ ನಟ ಹೇಳಿದ್ದನ್ನು ಪಾಲಿಸುತ್ತಾರೆ. ಇಬ್ಬರ ನಡುವೆ ಕೊಟ್ಟು ತೆಗೆದುಕೊಳ್ಳುವ ಬಾಂಧವ್ಯವಿದೆ.

ಇತ್ತೀಚೆಗೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಮನೆಗಳ ಮುಂದೆ, ಮನೆಗಳ ಮೇಲೆ ಪ್ರಾಣಿ, ಪಕ್ಷಿಗಳಿಗೆ ಕೊಂಚ ನೀರಿನ ವ್ಯವಸ್ಥೆ ಮಾಡಿ ಎಂದು ದರ್ಶನ್ ಮನವಿ ಮಾಡಿದ್ದರು. ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅಭಿಮಾನಿಗಳ ಈ ಪುಣ್ಯಕೆಲಸಕ್ಕೆ ದರ್ಶನ್ ಧನ್ಯವಾದ ತಿಳಿಸಿದ್ದರು. ತಮ್ಮ ಸಿನಿಮಾಗಳಿಗಿಂತ ಇಂತಹ ವಿಚಾರಗಳಿಂದಲೇ ಬಾಕ್ಸಾಫೀಸ್ ಸುಲ್ತಾನ್ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾಗಿದ್ದಾರೆ.
ಇದೀಗ ಅಭಿಮಾನಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಬಳಿ ತಮ್ಮ ಆಸೆ ವ್ಯಕ್ತಪಡಿಸಿದ್ದರು. ಆಸೆ ಈಡೇರಿಸಿದರೆ ಒಂದು ಒಳ್ಳೆಯ ಕೆಲಸ ಮಾಡುವುದಾಗಿಯೂ ಹೇಳಿದ್ದರು. ಆ ಪೋಸ್ಟ್ ದರ್ಶನ್ ಗಮನಕ್ಕೂ ಬಂದಿದೆ. ದರ್ಶನ್ ಪ್ರತಿಕ್ರಿಯಿಸಿದ್ದು ಇದೀಗ ಹೇಳಿದಂತೆ ಆ ಅಭಿಮಾನಿ ತಮ್ಮ ಮಾತು ಉಳಿಸಿಕೊಳ್ಳುತ್ತಿದ್ದಾರೆ.
ಬಳ್ಳಾರಿ ಮೂಲದ ದರ್ಶನ್ ಅಭಿಮಾನಿ ಮಂಜುನಾಥ್ ಬೆಳ್ಳಿಗಾರ್ ಎಂಬುವವರು ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಸೆಲ್ಫಿ ವೀಡಿಯೋ ಮಾಡಿ ತಮ್ಮ ಆಸೆ ವ್ಯಕ್ತಪಡಿಸಿದ್ದರು. "ನನ್ನ ನೆಚ್ಚಿನ ನಟ ದರ್ಶನ್ ಈ ಪೋಸ್ಟ್ಗೆ ಕಾಮೆಂಟ್ ಮಾಡಬೇಕು ಎನ್ನುವುದು ನನ್ನ ಆಸೆ. ಇದನ್ನು ಅವರು ಪೂರೈಸಿದರೆ ನಾನು 500 ಬಡ ಮಕ್ಕಳಿಗೆ ಅವರ ಹೆಸರಿನಲ್ಲಿ ಪುಸ್ತಕಗಳನ್ನು ನೀಡುತ್ತೇನೆ" ಎಂದಿದ್ದರು.
ವಾರದ ಹಿಂದೆ ನಟ ದರ್ಶನ್ ಈ ಪೋಸ್ಟ್ಗೆ ಕಾಮೆಂಟ್ ಮಾಡಿದ್ದಾರೆ. 'ಥ್ಯಾಂಕ್ಸ್ ಸರ್' ಎಂದು ಬರೆದಿದ್ದಾರೆ. ಇದರಿಂದ ಖುಷಿಯಾಗಿರುವ ಮಂಜುನಾಥ್ ಬೆಳ್ಳಿಗಾರ್ ಇದೀಗ ಹೇಳಿದಂತೆಯೇ ಮಕ್ಕಳಿಗೆ ಶಾಲಾ ಪುಸ್ತಕಗಳನ್ನು ನೀಡಲು ಮುಂದಾಗಿದ್ದಾರೆ. ಅದರ ತಯಾರಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.

ಇನ್ನು ನಟ ದರ್ಶನ್ 'ಡೆವಿಲ್' ಚಿತ್ರದಲ್ಲಿ ನಟಿಸಲು ಸಿದ್ಧತೆ ನಡೆಸಿದ್ದಾರೆ. ಇನ್ನೆರಡು ದಿನಗಳಲ್ಲಿ ಚಿತ್ರೀಕರಣ ಆರಂಭವಾಗುತ್ತಿದೆ. ನಗರದ ರಾಕ್ಲೈನ್ ಸ್ಟುಡಿಯೋದಲ್ಲಿ ಫಸ್ಟ್ ಶೆಡ್ಯೂಲ್ ಪ್ಲ್ಯಾನ್ ಮಾಡಲಾಗಿದೆ. ಪ್ರಕಾಶ್ ವೀರ್ ಈ ಆಕ್ಷನ್ ಎಂಟರ್ಟೈನರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ.
ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ 'ಡೆವಿಲ್' ಟೀಸರ್ ಹಿಟ್ ಆಗಿದೆ. ನೆಗೆಟಿವ್ ಶೇಡ್ ರೋಲ್ನಲ್ಲಿ ದರ್ಶನ್ ನಟಿಸುವ ಸುಳಿವು ಸಿಕ್ಕಿದೆ. ಇನ್ನು ಅಕ್ಟೋಬರ್ ವೇಳೆಗೆ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಬೆರಸಿ ಪ್ರಕಾಶ್ 'ಡೆವಿಲ್' ಸಿನಿಮಾ ಕಟ್ಟಿಕೊಡುತ್ತಿದ್ದಾರೆ.
ನಟ ದರ್ಶನ್ ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಪ್ರತಿದಿನ ಆರ್.ಆರ್ ನಗರದ ನಿವಾಸದ ಬಳಿ ನೆಚ್ಚಿನ ನಟನನ್ನು ಭೇಟಿ ಮಾಡಲು ಅಭಿಮಾನಿಗಳು ಧಾವಿಸುತ್ತಾರೆ. ಇತ್ತೀಚೆಗೆ ದರ್ಶನ್ ಪುತ್ರ ವಿನೀಶ್ ಜೊತೆ ಮೈಸೂರಿಗೆ ಭೇಟಿ ನೀಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ವೈರಲ್ ಆಗಿತ್ತು. ಹನುಮಂತು ಮೆಸ್ಗೆ ಭೇಟಿ ನೀಡಿ ಬಿರಿಯಾನಿ ಸವಿದಿದ್ದರು. ಆ ಫೋಟೊಗಳು ವೈರಲ್ ಆಗುತ್ತಿದೆ.


Click it and Unblock the Notifications











