"ಸಂಜಯ್ ದತ್ ಬಗ್ಗೆ ಏನೆಲ್ಲ ಬರೆದ್ರು, ಒಂದು ಸಿನಿಮಾ ಏನು ಮಾಡ್ತು?" 'ಕಾಟೇರ'ದಲ್ಲಿ ಖಳ್ನಾಯಕ್ ಬಂದಿದ್ದೇಕೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಕಾಟೇರ' ಹವಾ ಶುರುವಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಈ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಮಧ್ಯರಾತ್ರಿಯಿಂದಲೇ 'ಕಾಟೇರ' ಅಬ್ಬರಿಸೋಕೆ ಶುರು ಮಾಡುತ್ತಾನೆ. ದರ್ಶನ್ ಫ್ಯಾನ್ಸ್ ಕೂಡ 'ಕಾಟೇರ'ನನ್ನು ಕಣ್ತುಂಬಿ ಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
ಇನ್ನೇನು ಸಿನಿಮಾ ರಿಲೀಸ್ ಆಗ್ಬೇಕು ಅನ್ನುವಾಗಲೇ ದರ್ಶನ್ ಸಂದರ್ಶನವೊಂದು ವೈರಲ್ ಆಗುತ್ತಿದೆ. ಅದಕ್ಕೆ ಕಾರಣನೂ ಇದೆ. ದರ್ಶನ್ ಬಾಲಿವುಡ್ ನಟ ಸಂಜಯ್ ದತ್ ಬಗ್ಗೆ ಪ್ರಮುಖವಾದ ಅಂಶವನ್ನು ಆ ಸಂದರ್ಶನದಲ್ಲಿ ಮಾತಾಡಿದ್ದಾರೆ. ಅದೇನು ಅನ್ನೋದನ್ನು ತಿಳಿಯಲು ಮುಂದೆ ಓದಿ.

ದರ್ಶನ್ ಹಾಗೆಲ್ಲ ಮತ್ತೊಬ್ಬ ನಟರ ಬಗ್ಗೆ ಮಾತಾಡೋಕೆ ಹೋಗುವುದಿಲ್ಲ. ಒಂದ್ವೇಳೆ ಮಾತಾಡಿದ್ದಾರೆ ಅಂದರೆ, ಅಲ್ಲೇನೋ ವಿಷಯ ಇದೆ ಅಂತಾಲೇ ಅರ್ಥ. ಸಂಜಯ್ ದತ್ ಬಗ್ಗೆ ಮಾತಾಡುವುದಕ್ಕೂ ಒಂದು ಕಾರಣವಿದೆ. ಅಂದ್ಹಾಗೆ ಸಿನಿಮಾ ಎಕ್ಸ್ಪ್ರೆಸ್ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ದರ್ಶನ್ ಬಾಲಿವುಡ್ 'ಖಳ್ನಾಯಕ್' ಸಂಜಯ್ ದತ್ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.
ಸಂದರ್ಶನದ ವೇಳೆ ಸಮಾಜದಲ್ಲಿ ಸಮಸ್ಯೆಯನ್ನು ಸಿನಿಮಾದಲ್ಲಿ ತೋರಿಸಿದರೆ ಬದಲಾಗುತ್ತಾ? ಅದು ಜನರ ಮೇಲೆ ಪ್ರಭಾವ ಬೀರುತ್ತಾ? ಅನ್ನೋದು ಪ್ರಶ್ನೆಯಾಗಿತ್ತು. ಕಾವೇರಿ ವಿವಾದ, ರೈತರ ಸಮಸ್ಯೆ ಇಂತಹ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಆ ವೇಳೆ ದರ್ಶನ್ ಕಾವೇರಿ ವಿವಾದಕ್ಕೆ ಯಾವಾಗ ನ್ಯಾಯ ಸಿಗಬಹುದು ಅನ್ನೋದನ್ನು ತಾರ್ಕಿಕವಾಗಿ ಉತ್ತರ ಕೊಟ್ಟಿದ್ದಾರೆ.

"ಯಾವತ್ತು ಒಬ್ಬ ರಾಜಕಾರಣಿ, 5 ಪೈಸೆ ಖರ್ಚು ಇಲ್ಲದಂತೆ ಎಲೆಕ್ಷನ್ ಗೆಲ್ಲುತ್ತಾನೆ. ಅವತ್ತು ಇದು ಅನುಷ್ಠಾನಕ್ಕೆ ಬರುತ್ತೆ. ಹಾಗೇ ಒಬ್ಬ ಮತ ಹಾಕೋನು 5 ರೂಪಾಯಿ ಅನ್ನೂ ತೆಗೆದುಕೊಳ್ಳದೆ, ನಿಯತ್ತಾಗಿ ಹೋಗಿ ವೋಟು ಹಾಕುತ್ತಾನೋ ಅವತ್ತು ನ್ಯಾಯ ಸಿಗುತ್ತೆ." ಅನ್ನೋದನ್ನು ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ.
ಇದೇ ವೇಳೆ ಸಿನಿಮಾ ಜನರ ಮೇಲೆ ಪರಿಣಾಮ ಬೀರಬಹುದೇ? ಸಮಸ್ಯೆ ವಿರುದ್ಧ ಎಚ್ಚೆತ್ತುಕೊಳ್ಳುವಂತೆ ಮಾಡಬಹುದೇ? ಅನ್ನೋ ಪ್ರಶ್ನೆಗೆ ಸಂಜಯ್ ದತ್ ಹೆಸರನ್ನು ತೆಗೆದುಕೊಂಡಿದ್ದಾರೆ. "ಸಂಜಯ್ ದತ್ ಬಗ್ಗೆ ಅಷ್ಟೆಲ್ಲ ಬರೆದರು. ಟಾಡಾ ಕಾಯ್ದೆ, ಇನ್ನೊಂದು ಮತ್ತೊಂದು, ತುಂಬಾ ಅಫೇರ್ಸ್ ಇದೆಯಂತೆ ಅದು, ಇದು ಎಲ್ಲಾ ಹೇಳಿದ್ರು. ಬರೀ ಒಂದು ಸಂಜು ಅವರ ಲೈಫ್ ಅನ್ನೇ ಬದಲಾಯಿಸಿಬಿಡ್ತು. ಹೌದಲ್ಲ, ಅವರು ಏನು ಹೇಳುತ್ತಿದ್ದಾರೋ ಅದು ನಿಜ ಅಲ್ವಾ? ಅನಿಸಿತ್ತು. ಯಾಕೆ ಒಂದು ಸಿನಿಮಾದಿಂದ ಬದಲಾಗೋದಿಲ್ಲ." ಎಂದು ಸಿನಿಮಾ ಎಕ್ಸ್ಪ್ರೆಸ್ಗೆ ಹೇಳಿದ್ದಾರೆ.
ಇಷ್ಟೇ ಅಲ್ಲದೆ, ಸಂಜಯ್ ದತ್ ಮೇಲೆ ಅಷ್ಟೆಲ್ಲ ದ್ವೇಷ ಇಟ್ಟುಕೊಂಡಿದ್ದವರು, ಸಂಜಯ್ ದತ್ ಕೆಟ್ಟವರು ಎಂದವರು. ಹೇಗೆ ಬರೀ ಒಂದು ಸಂಜು ಸಿನಿಮಾದಿಂದ ಬದಲಾದರು. ಸಿನಿಮಾ ಎರಡೂವರೆ ಗಂಟೆಯಲ್ಲಿ ನೋಡುವುದು ಸುಲಭ ಅಲ್ವಾ? ತುಂಬಾ ಬೇಗ ಅರ್ಥ ಆಗುತ್ತೆ ಅಂತ ಇದೇ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications











