ವಿಜಯಲಕ್ಷ್ಮಿಗೆ 'ಚಪ್ಪಲಿ' ವಿಜಿ ಅಂದಿದ್ಯಾರು.? ವರ್ಷಗಳ ಬಳಿಕ ವಿವಾದದ ಸತ್ಯ ಅನಾವರಣ..
Recommended Video

ಸಾಹಸ ಸಿಂಹ ಡಾ.ವಿಷ್ಣುವರ್ಧನ್, ಕ್ರೇಜಿ ಸ್ಟಾರ್ ರವಿಚಂದ್ರನ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಪ್ರಕಾಶ್ ರೈ, ರಾಘವೇಂದ್ರ ರಾಜ್ ಕುಮಾರ್... ಕನ್ನಡ ಚಿತ್ರರಂಗದ ಇಂತಹ ಘಟಾನುಘಟಿ ನಟರ ಜೊತೆಗೆ ಅಭಿನಯಿಸಿ ಸೈ ಎನಿಸಿಕೊಂಡವರು ಬೆಂಗಳೂರು ಬೆಡಗಿ ನಟಿ ವಿಜಯಲಕ್ಷ್ಮಿ.
ಕನ್ನಡ ಚಿತ್ರರಂಗದಲ್ಲಿ ನಟಿ ವಿಜಯಲಕ್ಷ್ಮಿ ಅವರಿಗೆ ಬಹು ಬೇಡಿಕೆ ಇರುವಾಗಲೇ, ಒಂದು ವಿವಾದದ ಹುತ್ತ ಅವರ ಸುತ್ತ ಹುಟ್ಟಿಕೊಂಡಿತು. ''ಕನ್ನಡದ ಬಹುದೊಡ್ಡ ನಟರೊಬ್ಬರಿಗೆ ನಟಿ ವಿಜಯಲಕ್ಷ್ಮಿ ಚಪ್ಪಲಿಯಿಂದ ಹೊಡೆದಿದ್ದಾರೆ'' ಎಂಬ ಸುದ್ದಿ ಅಂದಿನ ಪತ್ರಿಕೆಗಳಲ್ಲಿ ಹೆಡ್ ಲೈನ್ಸ್ ಆಗಿತ್ತು. ಈ ವಿವಾದದ ಬಗ್ಗೆ ಸ್ಪಷ್ಟನೆ ಕೊಡಲು ಆಗ ಇಂದಿನ ಹಾಗೆ ಮೀಡಿಯಾ, ನ್ಯೂಸ್ ಚಾನೆಲ್ ಗಳು ಇರಲಿಲ್ಲ.
ಸತ್ಯ ಹೇಳಬೇಕು ಅಂತ ವಿಜಯಲಕ್ಷ್ಮಿ ಎಷ್ಟೇ ಪ್ರಯತ್ನ ಪಟ್ಟರೂ, ಅವರ ಬಾಯಿ ಮುಚ್ಚಿಸಲಾಗಿತ್ತಂತೆ. ಅಲ್ಲಿಯವರೆಗೂ 'ನಾಗಮಂಡಲ'ದ ವಿಜಯಲಕ್ಷ್ಮಿ ಅಂತ ಕರೆಯುತ್ತಿದ್ದವರು ಈ ವಿವಾದದಿಂದಾಗಿ 'ಚಪ್ಪಲಿ ವಿಜಿ' ಅಂತ ಕರೆಯಲಾರಂಭಿಸಿದರಂತೆ. ಇದನ್ನೆಲ್ಲ ನೋಡಿ ಅಕ್ಷರಶಃ ಕಂಗಾಲಾದ ವಿಜಯಲಕ್ಷ್ಮಿ ಕನ್ನಡ ಚಿತ್ರರಂಗ ಬಿಟ್ಟು ಕಾಲಿವುಡ್ ಕಡೆ ಮುಖ ಮಾಡಿದ್ರಂತೆ.
ಅಷ್ಟಕ್ಕೂ, ನಟಿ ವಿಜಯಲಕ್ಷ್ಮಿ ಕನ್ನಡದ ದೊಡ್ಡ ನಟರೊಬ್ಬರಿಗೆ ಚಪ್ಪಲಿ ಸೇವೆ ಮಾಡಿದ್ದು ನಿಜವೇ.? ವರ್ಷಗಳ ಬಳಿಕ ಈ ವಿವಾದದ ಬಗ್ಗೆ ನಟಿ ವಿಜಯಲಕ್ಷ್ಮಿ ಸುವರ್ಣ ನ್ಯೂಸ್ 24*7 ವಾಹಿನಿಯಲ್ಲಿ ಸತ್ಯ ಬಾಯ್ಬಿಟ್ಟಿದ್ದಾರೆ. ಮುಂದೆ ಓದಿರಿ...
[ಕೃಪೆ: ಸುವರ್ಣ ನ್ಯೂಸ್ 24*7]

ಅರಿವಿಲ್ಲದೆ ವಿವಾದದಲ್ಲಿ ಸಿಲುಕಿದ ವಿಜಯಲಕ್ಷ್ಮಿ
'ನಾಗಮಂಡಲ' ಚಿತ್ರದ ಚಿತ್ರೀಕರಣದಲ್ಲಿ ವಿಜಯಲಕ್ಷ್ಮಿ ಭಾಗವಹಿಸಿದಾಗ, ಆಕೆ ಇನ್ನೂ ಹತ್ತನೇ ಕ್ಲಾಸ್ ಓದುತ್ತಿದ್ದರಂತೆ. ನಿರ್ದೇಶಕರ ನಟಿ ಆಗಿದ್ದ ವಿಜಯಲಕ್ಷ್ಮಿ ತಮಗೆ ಅರಿವಿಲ್ಲದೆ ವಿವಾದಗಳ ಸುಳಿಯಲ್ಲಿ ಸಿಲುಕಿದರು.

ಬಹುದೊಡ್ಡ ವಿವಾದ
''ನಾನು ಒಬ್ಬರಿಗೆ ಚಪ್ಪಲಿಯಲ್ಲಿ ಹೊಡೆದೆ ಅಂತ ವಿವಾದ ಮಾಡಿದರು. ಆ ವಿವಾದ ಆದ್ಮೇಲೆ ನನ್ನ ಕೆರಿಯರ್ ಬಿದ್ದು ಹೋಯ್ತು. ವೃತ್ತಿ ಜೀವನ ಹಾಳಾಗಿ ಹೋಯ್ತು. ಕನ್ನಡ ಇಂಡಸ್ಟ್ರಿಯನ್ನ ಯಾಕೆ ಬಿಟ್ಟು ಹೋದ್ರಿ ಅಂತ ಎಲ್ಲರೂ ಕೇಳ್ತಾರೆ. ಆದ್ರೆ, ಆ ವಿವಾದ ಆದ್ಮೇಲೆ ನನಗೆ ಭಯ ಬಂದುಬಿಡ್ತು. ವಿವಾದಗಳನ್ನ ಮಾಡಿ ಮಾಡಿ ನನ್ನನ್ನ ಬಹಳ ದೂರ ಇಟ್ಟುಬಿಟ್ಟರು'' ಎಂದು ಸುವರ್ಣ ನ್ಯೂಸ್ 24*7 ವಾಹಿನಿಯಲ್ಲಿ ತಮ್ಮ ನೋವನ್ನ ತೋಡಿಕೊಂಡರು ನಟಿ ವಿಜಯಲಕ್ಷ್ಮಿ.

ಅಂಥದ್ದೇನೂ ಆಗಿರಲಿಲ್ಲ.!
''ದೊಡ್ಡ ನಟನಿಗೆ ಚಪ್ಪಲಿಯಲ್ಲಿ ಹೊಡೆದೆ ಎಂಬ ಸುದ್ದಿ ಹೇಗೆ ಬಂತು ಅಂತ ನನಗೆ ಇನ್ನೂ ಅರ್ಥ ಆಗಿಲ್ಲ. ಜಗ್ಗೇಶ್ ಸರ್ ಜೊತೆಗೆ 'ಮಾತಿನ ಮಲ್ಲ' ಹಾಗೂ 'ರಂಗಣ್ಣ' ಸಿನಿಮಾ ಮುಗಿಸಿದ್ದೆ. ಜಗ್ಗೇಶ್ ಸರ್ ಹತ್ತಿರ ನಾನು ಆಶೀರ್ವಾದ ತೆಗೆದುಕೊಂಡು ಬಂದಿದ್ದೆ. ಆದ್ರೆ, ಬೆಳಗ್ಗೆ ಎದ್ದು ನೋಡಿದರೆ, ನ್ಯೂಸ್ ಪೇಪರ್ ನಲ್ಲಿ ವಿವಾದದ ಸುದ್ದಿ ಬಂದಿದೆ. ನಾನು ಆ ತರಹ ಮಾಡಿಲ್ಲ ಅಂತ ಪ್ರತಿಯೊಬ್ಬರ ಬಳಿಯೂ ಹೋಗಿ ಹೇಳಿದ್ದೇನೆ. ನಾನು ಆಗಿನ್ನೂ ಚಿಕ್ಕವಳು. ಈ ತರಹ ವಿವಾದ ಆದಾಗ, ನನಗೆ ತುಂಬಾ ಭಯ ಆಯ್ತು. ನನ್ನ ಮೇಲೆ ನನಗೆ ವಿಶ್ವಾಸ ಹೋಯ್ತು. ಮಾತನಾಡಲು ಯಾರೂ ನನಗೆ ಅವಕಾಶ ಕೊಡಲಿಲ್ಲ. ನಾನು ಹೊಡೆದಿಲ್ಲ ಅಂದರೂ ನಾನು ಕ್ಷಮೆ ಕೇಳಿದೆ'' - ನಟಿ ವಿಜಯಲಕ್ಷ್ಮಿ

ಚಪ್ಪಲಿ ವಿಜಿ
''ಆ ವಿವಾದ ಆದ್ಮೇಲೆ, 'ನಾಗಮಂಡಲ' ವಿಜಯಲಕ್ಷ್ಮಿ ಅಂತ ಹೋಗಿ 'ಚಪ್ಪಲಿ' ವಿಜಿ ಅಂತ ಕರೆಯಲು ಆರಂಭಿಸಿದರು'' - ನಟಿ ವಿಜಯಲಕ್ಷ್ಮಿ

ಸುಳ್ಳು ಹೇಳಲು ಬರಲ್ಲ
''ವಿಜಯಲಕ್ಷ್ಮಿಗೆ ಕೋಪ ಬರುತ್ತೆ, ಅವರು ಹಾಗೆ ಮಾಡುತ್ತಾರೆ, ಹೀಗೆ ಮಾಡುತ್ತಾರೆ ಅಂತ ಎಲ್ಲರೂ ಮಾತನಾಡಿಕೊಳ್ತಾರೆ. ಆದ್ರೆ, ಇಪ್ಪತ್ತು ವರ್ಷದಿಂದ ನಾನು ಕಣ್ಣೀರು ಹಾಕಿದ್ದೇನೆ. ಅದು ಯಾರಿಗೂ ಗೊತ್ತಿಲ್ಲ. ನನಗೆ ಸುಳ್ಳು ಹೇಳಲು ಬರಲ್ಲ'' - ನಟಿ ವಿಜಯಲಕ್ಷ್ಮಿ

ಬಾಯಿ ಮುಚ್ಚಿಸಿದ್ದರು.!
''ಆಗ ನನಗೆ ವಿವಾದಗಳು ಎದುರಾದಾಗ, ಈಗಿನ ತರಹ ಪ್ರೆಸ್-ಮೀಡಿಯಾ ಇರಲಿಲ್ಲ. ''ನೀನು ಮಾತನಾಡಬೇಡ, ದೂರ ಇದ್ದು ಬಿಡು'' ಅಂತ ಹೇಳಿ ಆಗ ನನ್ನ ಬಾಯಿ ಮುಚ್ಚಿಸಿಬಿಟ್ಟರು. ಈ ತರಹ ನಾನು ದೂರ ಇದ್ದು ಇದ್ದು, ನಾನು ಮಾತನಾಡದೆ ನನ್ನ ಫ್ಯಾಮಿಲಿ ಈಗ ಸಂಕಷ್ಟದಲ್ಲಿ ಇದೆ. ಅವತ್ತು ವಿವಾದ ಬಗೆ ಹರಿದಿದ್ದರೆ ತಮಿಳು ಇಂಡಸ್ಟ್ರಿಗೆ ಹೋಗುವ ಅವಶ್ಯಕತೆ ನನಗೆ ಇರಲಿಲ್ಲ'' ಎಂದು ಕಣ್ಣೀರಿಡುತ್ತಾರೆ ನಟಿ ವಿಜಯಲಕ್ಷ್ಮಿ

ದಯವಿಟ್ಟು ಮರೆತುಬಿಡಿ
''ನನಗೆ ಶಕ್ತಿ ಇಲ್ಲ. ಇನ್ನೊಬ್ಬರ ಮಾತನ್ನು ಕೇಳಿ ದಯವಿಟ್ಟು ನನ್ನನ್ನ ದೂರ ಮಾಡಬೇಡಿ. ಶಿವಣ್ಣ, ರಾಘಣ್ಣ, ಪುನೀತ್, ಜಗ್ಗೇಶ್ ಸೇರಿದಂತೆ ಎಲ್ಲರನ್ನೂ ನಾನು ಕೇಳಿಕೊಳ್ಳುತ್ತೇನೆ. ದಯವಿಟ್ಟು ಎಲ್ಲವನ್ನೂ ಮರೆತು ನೀವು ನನ್ನನ್ನ ಸ್ವೀಕರಿಸಿದರೆ, ನಾನು ಎಲ್ಲೂ ಹೋಗುವ ಅವಶ್ಯಕತೆಯೇ ಇರಲ್ಲ'' ಎಂದು ಕೈಮುಗಿಯುತ್ತಾರೆ ನಟಿ ವಿಜಯಲಕ್ಷ್ಮಿ

ಅಣ್ಣಾವ್ರು ಇದ್ದಿದ್ರೆ...
''ಡಾ.ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಇದ್ದಿದ್ರೆ, ನನಗೆ ಇಷ್ಟು ಸಮಸ್ಯೆ ಆಗುತ್ತಿರಲಿಲ್ಲ. ವಿಷ್ಣುವರ್ಧನ್, ಶಿವಣ್ಣ, ಜಗ್ಗೇಶ್ ಜೊತೆಗೆ ಕೆಲಸ ಮಾಡಿದ್ದು ನನ್ನ ಪುಣ್ಯ'' ಎನ್ನುತ್ತಾರೆ ನಟಿ ವಿಜಯಲಕ್ಷ್ಮಿ


Click it and Unblock the Notifications











