ಕೇಳಿದಷ್ಟು ಸಂಭಾವನೆ ಕೊಟ್ರು ರಾಜ್ ಬಿ ಶೆಟ್ಟಿ 'ಪೆದ್ದಿ' ಚಿತ್ರ ಕೈಬಿಟ್ಟಿದ್ದೇಕೆ?
ಕನ್ನಡ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ತಮ್ಮ ಅದ್ಭುತ ಪಾತ್ರಗಳಿಂದ ಪರಭಾಷಾ ಫಿಲ್ಮ್ ಮೇಕರ್ಸ್ ಗಮನ ಸೆಳೆದಿದ್ದಾರೆ. 'ಗರುಡ ಗಮನ ವೃಷಭ ವಾಹನ' ಸಿನಿಮಾ ನೋಡಿ ಅನುರಾಗ್ ಕಶ್ಯಪ್ ಹಾಗೂ ಸಂದೀಪ್ ರೆಡ್ಡಿ ವಂಗಾ ರೀತಿಯ ಸ್ಟಾರ್ ನಿರ್ದೇಶಕರು ಶಾಕ್ ಆಗಿದ್ದರು. ಈಗಾಗಲೇ ಮಲಯಾಳಂ ಚಿತ್ರದಲ್ಲಿ ರಾಜ್ ನಟಿಸಿ ಬಂದಿದ್ದಾರೆ.
'ಟರ್ಬೋ' ಚಿತ್ರದಲ್ಲಿ ಮಮ್ಮುಟ್ಟಿ ಎದುರು ಅಬ್ಬರಿಸಿ ಬಂದಿದ್ದರು. ಅಚ್ಚರಿಯ ಸಂಗತಿ ಅಂದರೆ ರಾಮ್ಚರಣ್ ನಟನೆಯ 'ಪೆದ್ದಿ' ಚಿತ್ರದಲ್ಲಿ ನಟಿಸುವಂತೆ ಬುಲಾವ್ ಬಂದಿತ್ತಂತೆ. ಆದರೆ ನಯವಾಗಿಯೇ ಆ ಅವಕಾಶವನ್ನು ರಾಜ್ ನಿರಾಕರಿಸಿದ್ದಾರೆ. ಕೇಳಿದ್ದಷ್ಟು ಸಂಭಾವನೆ ಕೊಡಲು ಸಿದ್ಧ ಎಂದರೂ ಒಪ್ಪಲಿಲ್ಲವಂತೆ. ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಕೂಡ ಜಬರ್ದಸ್ತ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಸುಕುಮಾರ್ ಶಿಷ್ಯ ಬುಚ್ಚಿಬಾಬು ಈಗಾಗಲೇ 'ಉಪ್ಪೆನ' ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದಾರೆ. ಅವರ 2ನೇ ಸಿನಿಮಾ 'ಪೆದ್ದಿ'. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ರಾಮನವಮಿ ಸಂಭ್ರಮದಲ್ಲಿ ಬಂದಿದ್ದ 'ಪೆದ್ದಿ' ಫಸ್ಟ್ ಶಾಟ್ ಟೀಸರ್ ಸೂಪರ್ ಹಿಟ್ ಆಗಿದೆ. ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಚಿತ್ರದಲ್ಲಿ 90ರ ದಶಕದ ಕಥೆ ಹೇಳಲಾಗುತ್ತಿದೆ.
'ಪೆದ್ದಿ' ಚಿತ್ರದ ಪ್ರಮುಖ ಪಾತ್ರಕ್ಕೆ ರಾಜ್ ಬಿ ಶೆಟ್ಟಿ ಅವರನ್ನು ನಿರ್ದೇಶಕರು ಸಂಪರ್ಕಿಸಿದ್ದರಂತೆ. ಬರೋಬ್ಬರಿ 100 ದಿನಗಳ ಕಾಲ್ಶೀಟ್ ಕೇಳಿದ್ದರಂತೆ. ಆದರೆ ಕನ್ನಡದಲ್ಲೇ ವಿಭಿನ್ನ ಸಿನಿಮಾಗಳನ್ನು ಮಾಡುತ್ತಿರುವ ರಾಜ್ ಬಿ ಶೆಟ್ಟಿಗೆ ಯಾಕೋ ಪಾತ್ರ ಇಷ್ಟವಾಗಲಿಲ್ಲ ಅನ್ನಿಸುತ್ತದೆ. ಅದಕ್ಕೆ ನಟಿಸೋಕೆ ಒಲ್ಲೆ ಎಂದಿದ್ದಾರೆ. ಕನ್ನಡದಲ್ಲೇ ಒಳ್ಳೆ ಒಳ್ಳೆ ಸಿನಿಮಾಗಳನ್ನು ರಾಜ್ ಮಾಡುತ್ತಿದ್ದಾರೆ. ತಮ್ಮ ಬ್ಯಾನರ್ನಲ್ಲಿ ವಿಭಿನ್ನ ಪ್ರಯತ್ನಗಳಿಗೆ ಕೈ ಹಾಕಿದ್ದಾರೆ. ಅದನ್ನೆಲ್ಲಾ ಬಿಟ್ಟು 'ಪೆದ್ದಿ' ಚಿತ್ರದಲ್ಲಿ ನಟಿಸೋಕೆ ಯಾಕೋ ಮನಸ್ಸು ಮಾಡಲಿಲ್ಲ.
ದೊಡ್ಡ ಬಜೆಟ್, ಬಿಗ್ ಸ್ಟಾರ್ ಕಾಸ್ಟ್ ಅಂದಮಾತ್ರಕ್ಕೆ ನಟಿಸೋಕೆ ಒಪ್ಪಿಕೊಳ್ಳಲು ಆಗುವುದಿಲ್ಲ. ತಮ್ಮ ಪಾತ್ರಕ್ಕೆ ತೂಕ ಇರಬೇಕು ಎನ್ನುವುದು ರಾಜ್ ಬಿ ಶೆಟ್ಟಿ ಲೆಕ್ಕಾಚಾರ. ಅದೇ ಕಾರಣಕ್ಕೋ ಏನೋ 'ಪೆದ್ದಿ' ಚಿತ್ರದಿಂದ ಹೊರಗುಳಿಯುವ ನಿರ್ಧಾರ ಮಾಡಿದ್ರು ಅನ್ನಿಸುತ್ತದೆ.

ರಾಜ್ ಬಿ ಶೆಟ್ಟಿ ತಮ್ಮದೇ ಲಾಫ್ಟರ್ ಬುದ್ಧ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ 'ಸು ಫ್ರಂ ಸೋ' ಎಂಬ ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಜೆಪಿ ತುಮ್ಮಿನಾಡು ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಮಂಗಳೂರಿನಲ್ಲಿ ಸಿನಿಮಾ ಪ್ರೀಮಿಯರ್ ಶೋ ನಡೆದು ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಈ ವಾರ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರ್ತಿದೆ. ಇನ್ನುಳಿದ '45' ಚಿತ್ರದಲ್ಲಿ ರಾಜ್ ನಟಿಸಿದ್ದಾರೆ. ಆಗಸ್ಟ್ ಕೊನೆ ವಾರದಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.
ವೃದ್ದಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ 'ಪೆದ್ದಿ' ಸಿನಿಮಾ ನಿರ್ಮಾಣವಾಗುತ್ತಿದೆ. ಜಾನ್ವಿ ಕಪೂರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಎ. ಆರ್ ರಹಮಾನ್ ಸಂಗೀತ ಚಿತ್ರಕ್ಕಿದೆ. ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಮುಂದಿನ ವರ್ಷ ಮಾರ್ಚ್ 27ಕ್ಕೆ ರಾಮ್ಚರಣ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











