ಸಲಗ-ಕೋಟಿಗೊಬ್ಬ ದಸರಾ ಹಬ್ಬವನ್ನೇ ಟಾರ್ಗೆಟ್ ಮಾಡ್ತಿರೋದೇಕೆ?
ಅಕ್ಟೋಬರ್ 1 ರಿಂದ ಕರ್ನಾಟಕದಲ್ಲಿ ಚಿತ್ರಮಂದಿರಗಳಿಗೆ 100% ಅನುಮತಿ ಇದೆ. ಇಷ್ಟು ದಿನ 100% ಕೊಡಲಿ ಆಮೇಲೆ ರಿಲೀಸ್ ಮಾಡ್ತೇವೆ ಎಂದು ಕಾಯುತ್ತಿದ್ದ ಸ್ಟಾರ್ ನಟರ ಚಿತ್ರಗಳು ಈಗ ಏಕಾಏಕಿ ಬಿಡುಗಡೆ ದಿನಾಂಕ ಘೋಷಿಸಿವೆ. ದುನಿಯಾ ವಿಜಯ್ ನಿರ್ದೇಶಿಸಿರುವ 'ಸಲಗ' ಮತ್ತು ಸುದೀಪ್ ನಟನೆಯ 'ಕೊಟಿಗೊಬ್ಬ 3' ಚಿತ್ರಗಳು ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 14ಕ್ಕೆ ತೆರೆಗೆ ಬರ್ತಿದೆ.
ಶಿವರಾಜ್ ಕುಮಾರ್ ನಟನೆಯ 'ಭಜರಂಗಿ 2' ಸಿನಿಮಾ ಅಕ್ಟೋಬರ್ 29 ರಂದು ರಿಲೀಸ್ ಆಗುತ್ತಿದೆ. ಅದೇ ದಿನ ನೆನಪಿರಲಿ ಪ್ರೇಮ್ ನಟನೆಯ 'ಪ್ರೇಮಂ ಪೂಜ್ಯಂ' ಚಿತ್ರವೂ ಥಿಯೇಟರ್ಗೆ ಲಗ್ಗೆಯಿಡ್ತಿದೆ.
ಸಲಗ ಮತ್ತು ಕೋಟಿಗೊಬ್ಬ 3 ಚಿತ್ರಗಳು ಒಂದೇ ದಿನ ರಿಲೀಸ್ ಆಗುತ್ತಿರುವುದು ಗಾಂಧಿನಗರದ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ. ಎರಡು ದೊಡ್ಡ ಚಿತ್ರಗಳು ಒಂದೇ ದಿನ ಬರುವುದು ಬೇಡ ಎಂದು ಸಿನಿಪಂಡಿತರು ಹೇಳುತ್ತಿದ್ದಾರೆ. ಹಿರಿಯ ನಟ ಶಿವಣ್ಣ ಸಹ ಒಂದೇ ದಿನ ಬರುವುದು ಬೇಡ ಎಂದು ಸಲಹೆ ಕೊಟ್ಟಿದ್ದಾರೆ. ಆದರೂ ಇದ್ಯಾವುದಕ್ಕೂ ಕ್ಯಾರೇ ಎನ್ನದ ಇಬ್ಬರು ನಿರ್ಮಾಪಕರು 'ನಾವು ದಸರಾ ಹಬ್ಬಕ್ಕೆ ಬರ್ತೇವೆ' ಎಂದು ಹಠಕ್ಕೆ ಬಿದಿದ್ದಾರೆ. ಅಷ್ಟಕ್ಕೂ, ದಸರಾ ಹಬ್ಬವನ್ನೇ ಟಾರ್ಗೆಟ್ ಮಾಡ್ತಿರೋದು ಏಕೆ? ಮುಂದೆ ಓದಿ...

ದಸರಾ ರಜೆಯ ಲಾಭ
ಅಕ್ಟೋಬರ್ 14 ರಂದು ಸಿನಿಮಾ ರಿಲೀಸ್ ಮಾಡುವುದರಿಂದ ರಜೆಯ ಲಾಭ ಪಡೆಯಬಹುದು ಎನ್ನುವ ಲೆಕ್ಕಾಚಾರ ನಿರ್ಮಾಪಕರ ತಲೆಯಲ್ಲಿದೆ. ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ ಸತತವಾಗಿ ನಾಲ್ಕು ದಿನ ರಜೆ ಇರುತ್ತದೆ. ಈ ರಜೆಯ ಲಾಭ ಪಡೆಯಲು ಸಲಗ ಮತ್ತು ಕೋಟಿಗೊಬ್ಬ 3 ಚಿತ್ರಗಳು ಮುಂದಾಗಿದೆ. ಈ ದಿನಾಂಕ ಬಿಟ್ಟರೆ ಮತ್ತೆ ಇಂತಹ ಸನ್ನಿವೇಶ ಸಿಗುವುದು ಅಪರೂಪ. ದೀಪಾವಳಿ ಅಥವಾ ಸಂಕ್ರಾಂತಿ ಹಬ್ಬದವರೆಗೂ ಕಾಯಬೇಕು. ಹಾಗಾಗಿ, ದಸರಾ ಹಬ್ಬವನ್ನು ಟಾರ್ಗೆಟ್ ಮಾಡಿದ್ದಾರೆ.

ಕಾಯುವ ತಾಳ್ಮೆ ಇಲ್ಲ
ಸಲಗ, ಕೋಟಿಗೊಬ್ಬ 3 ಅಥವಾ ಇನ್ನು ಯಾವುದೇ ಸಿನಿಮಾಗಳು ಆಗಲಿ ಹೆಚ್ಚು ಕಾಯುವ ತಾಳ್ಮೆ ಹೊಂದಿಲ್ಲ. ಏಕಂದ್ರೆ ಕೋವಿಡ್ ಕಾರಣದಿಂದ ಬಹಳಷ್ಟು ದಿನ ಕಾದಿದ್ದಾರೆ. ಇಷ್ಟು ಕಾದಿರುವ ಪರಿಣಾಮ ಈಗ ಒಳ್ಳೆಯ ಸಂದರ್ಭ ಸಿಕ್ಕಾಗ ಬಿಟ್ಟು ಕೊಡಲು ಯಾರು ಮನಸ್ಸು ಮಾಡಲ್ಲ. ಇದೀಗ ಸಲಗ ಮತ್ತು ಕೋಟಿಗೊಬ್ಬ 3 ಚಿತ್ರಗಳ ವಿಚಾರದಲ್ಲಿ ಅದೇ ಪರಿಸ್ಥಿತಿ ಉಂಟಾಗಿದೆ. ನಾಲ್ಕು ದಿನದ ರಜೆಯ ಪರಿಣಾಮ ಒಳ್ಳೆಯ ಗಳಿಕೆ ಮಾಡಬಹುದು ಎಂಬ ನಿರೀಕ್ಷೆ. ಈ ನಾಲ್ಕು ದಿನದಲ್ಲೇ ಹೆಚ್ಚು ಕಡಿಮೆ ಸಿನಿಮಾದ ಲಾಭ-ಬಂಡವಾಳ ನಿರ್ಧಾರವಾಗಲಿದೆ. ಹಾಗಾಗಿ, ಇಬ್ಬರು ನಿರ್ಮಾಪಕರು ಕಾಂಪ್ರಮೈಸ್ ಆಗಲು ಸಿದ್ಧರಿಲ್ಲ.

ದೊಡ್ಡ ದೊಡ್ಡ ಚಿತ್ರಗಳು ಮುಂದಿವೆ
ದಸರಾ ಹಬ್ಬವನ್ನು ಬಿಟ್ಟು ಮುಂದಿನ ಹಬ್ಬಗಳಿಗೆ ಚಿತ್ರವನ್ನು ರಿಲೀಸ್ ಮಾಡಲು ನಿರ್ಧರಿಸಲು ನಿರ್ಮಾಪಕ ಧೈರ್ಯ ತೋರಲ್ಲ. ಏಕಂದ್ರೆ, ಮುಂದೆ ಹಲವು ಪ್ಯಾನ್ ಇಂಡಿಯಾ ಚಿತ್ರಗಳು ಸರದಿಯಲ್ಲಿವೆ. ದೀಪಾವಳಿ ಹಬ್ಬಕ್ಕೆ ರಜನಿಕಾಂತ್ ನಟನೆಯ ಅಣ್ಣಾತ್ತೆ, ಕ್ರಿಸ್ಮಸ್ ಹಬ್ಬಕ್ಕೆ ಪುಷ್ಪ ಹಾಗೂ ಆಚಾರ್ಯ, ಸಂಕ್ರಾಂತಿ ಹಬ್ಬಕ್ಕೆ ಆರ್ಆರ್ಆರ್, ರಾಧೆಶ್ಯಾಮ್, ಸರ್ಕಾರು ವಾರಿ ಪಾಟ, ಆಮೇಲೆ ಕೆಜಿಎಫ್ ಹೀಗೆ ದೊಡ್ಡ ಚಿತ್ರಗಳು ರಿಲೀಸ್ ದಿನಾಂಕ ಘೋಷಿಸಿ ಕಾಯುತ್ತಿವೆ.

ಸೂರಪ್ಪ ಬಾಬು ಏನಂದ್ರು?
ಏಕಕಾಲಕ್ಕೆ ಸಲಗ ಮತ್ತು ಕೋಟಿಗೊಬ್ಬ ಬಿಡುಗಡೆ ಕುರಿತು ಪ್ರತಿಕ್ರಿಯಿಸಿರುವ ನಿರ್ಮಾಪಕ ಸೂರಪ್ಪ ಬಾಬು, ''ಕಳೆದ ಬಾರಿಯೇ ನಮ್ಮ ಸಿನಿಮಾ ಬಿಡುಗಡೆ ಮಾಡಬಹುದಾಗಿತ್ತು. ಆದರೆ ನಾವು ಬೇರೆಯವರಿಗೆ ಅವಕಾಶ ಮಾಡಿಕೊಟ್ಟು ತಪ್ಪು ಮಾಡಿದೆವು. ಬೇರೆಯವರಿಗೆ ಬಿಟ್ಟುಕೊಟ್ಟಿದ್ದರಿಂದ ಎಂಟು ತಿಂಗಳು ಹೆಚ್ಚು ಕಾಯುವಂತಾಯಿತು. ಇನ್ನು ಮುಂದೆ ನನ್ನಿಂದ ಕಾಯಲು ಆಗುವುದಿಲ್ಲ. ಮತ್ತೆ-ಮತ್ತೆ ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಿಕೊಂಡು ಇರಲು ನನ್ನಿಂದಂತೂ ಸಾಧ್ಯವಿಲ್ಲ. ಈಗಾಗಲೇ ಬಹಳ ಕಷ್ಟ ಅನುಭವಿಸಿದ್ದೀನಿ. ಈ ವಿಷಯ ಶ್ರೀಕಾಂತ್ಗೂ ('ಸಲಗ' ನಿರ್ಮಾಪಕ) ಗೊತ್ತು. ನಾವು ಸಿನಿಮಾ ಬಿಡುಗಡೆ ಮಾಡಲಿರುವ ದಿನ ಬಹಳ ಒಳ್ಳೆಯ ದಿನ. ಅವರೂ ತಮ್ಮ ಸಿನಿಮಾ ಬಿಡುಗಡೆ ಮಾಡಲಿ ಬಿಡಿ, ನೋಡೋಣ'' ಎಂದಿದ್ದಾರೆ.

ಯಾರಾದರೂ ಒಬ್ಬರು ಬಿಡುಗಡೆ ಮಾಡಿ
ಎರಡು ನಿರೀಕ್ಷೆಯ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದನ್ನು ಹಿರಿಯ ನಟ ಶಿವರಾಜ್ ಕುಮಾರ್ ವಿರೋಧಿಸಿದ್ದಾರೆ. 'ಯಾವುದೇ ಸಿನಿಮಾ ರಿಲೀಸ್ ಆಗಬೇಕೆಂದರೂ ಹೊಂದಾಣಿಕೆ ಇರಬೇಕು. ಸಲಗ ಮತ್ತು ಕೋಟಿಗೊಬ್ಬ 3 ಎರಡೂ ಚಿತ್ರಕ್ಕೂ ಒಳ್ಳೆಯದಾಗಬೇಕು. ಒಂದೇ ದಿನ ಬಂದರೆ ತೊಂದರೆಯೇ. ನಿರ್ಮಾಪಕರು ಮಾತಾಡಿಕೊಂಡು, ಬಗೆಹರಿಸಿಕೊಳ್ಳಬೇಕು. ನನ್ನ ಪ್ರಕಾರ ಒಂದು ಸಿನಿಮಾ ಮಾತ್ರ ತೆರೆಗೆ ಬಂದರೆ ಒಳ್ಳೆಯದು. ಈಗ ಚಿತ್ರರಂಗದಲ್ಲಿ ಹೊಂದಾಣಿಕೆ ಮುಖ್ಯ'' ಎಂದು ಸಲಹೆ ಕೊಟ್ಟಿದ್ದಾರೆ.


Click it and Unblock the Notifications











