ಬಾಡಿಗೆ ಮನೆ ಯಾಕೆ? ದರ್ಶನ್ ಮನೆ ಕೊಡಿಸಿಲ್ವಾ?; ವದಂತಿ ಬಗ್ಗೆ ಮೌನ ಮುರಿದ ದಿನಕರ್
ದಿನಕರ್ ತೂಗುದೀಪ ನಿರ್ದೇಶನದ 'ರಾಯಲ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವಿರಾಟ್ ಹಾಗೂ ಸಂಜನಾ ನಟನೆಯ ರೊಮ್ಯಾಂಟಿಕ್ ಎಂಟರ್ಟೈನರ್ ಸಿನಿಮಾ ಜನವರಿ 22ಕ್ಕೆ ತೆರೆಗೆ ಬರಲಿದೆ. ಮತ್ತೊಂದು ಕಡೆ ರೇಣುಕಾಸ್ವಾಮಿ ಪ್ರಕರಣದಲ್ಲಿ ದಿನಕರ್ ಸಹೋದರ ನಟ ದರ್ಶನ್ ಜೈಲಿಗೆ ಹೋಗಿ ಬಂದಿರುವುದು ಬಹಳ ಸುದ್ದಿಯಾಗ್ತಿದೆ.
ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ದಿನಕರ್ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಪುನೀತ್ ರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಸಿನಿಮಾ ಮಾಡಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಬಳಿಕ 'ರಾಯಲ್' ಸಿನಿಮಾ ಶುರುವಾಯಿತು. ಸದ್ಯ ಚಿತ್ರದ ಸಾಂಗ್ಸ್ ಹಿಟ್ ಆಗಿದೆ. ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ.

ನಟ ದರ್ಶನ್ ಜೈಲಿಗೆ ಹೋಗುತ್ತಿದ್ದಂತೆ ದಿನಕರ್ ಬಗ್ಗೆ ಒಂದಷ್ಟು ಸುದ್ದಿ ಹರಿದಾಡಿತ್ತು. ಮುಖ್ಯವಾಗಿ ದಿನಕರ್ ಇನ್ನು ಬಾಡಿಗೆ ಮನೆಯಲ್ಲಿದ್ದಾರೆ. ದರ್ಶನ್ ಅಷ್ಟು ಸಂಪಾದಿಸಿದರೂ ಸ್ವಂತ ತಮ್ಮ ಇನ್ನು ಬಾಡಿಗೆ ಮನೆಯಲ್ಲೇ ಇದ್ದಾರೆ ಎನ್ನುವ ಸುದ್ದಿ ಭಾರೀ ವೈರಲ್ ಆಗಿತ್ತು. ಈ ಬಗ್ಗೆ ಸ್ವತಃ ದಿನಕರ್ ತೂಗುದೀಪ ಈಗ ಪ್ರತಿಕ್ರಿಯಿಸಿದ್ದಾರೆ. ಕನ್ನಡಪ್ರಭ ಪತ್ರಿಕೆ ನೀಡಿರುವ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.
"ಸುಳ್ಳು ವದಂತಿಗಳಿಗೆ ಉತ್ತರ ಕೊಡುತ್ತಾ ಕೂರಲು ಆಗುತ್ತಾ? ಈವರೆಗೆ ನಮ್ಮ ಬಗ್ಗೆ ಬಂದಿರುವ ಸುದ್ದಿಗಳಲ್ಲಿ ಎಷ್ಟು ನಿಜ ಇತ್ತು? ಮಾತಾನಾಡುವವರು ಮಾತನಾಡಲಿ. ಸತ್ಯ ಮುಂದೆ ಗೊತ್ತಾಗುತ್ತದೆ. ನಾನು ನಿರ್ಮಿಸಿದ 3 ಚಿತ್ರಗಳು ಬ್ಲಾಕ್ಬಸ್ಟರ್. 10 ವರ್ಷದ ಹಿಂದೆ ಫಾರ್ಚ್ಯೂನರ್ ಕಾರ್ ತಗೊಂಡಿದ್ದೆ. ನನಗೆ ಸ್ವಂತ ಮನೆ ಮಾಡಿಕೊಳ್ಳುವುದು ಕಷ್ಟನಾ? ದರ್ಶನ್ ಮನೆ ಮಾಡಿಕೊಟ್ಟಿಲ್ಲ ಎನ್ನುವವರಿಗೆ ಹೇಳ್ತೀನಿ, ನಾನು ಕೇಳಿದರೆ ಪ್ರಾಪರ್ಟಿ ಕೊಡಿಸಲು ದರ್ಶನ್ 5 ನಿಮಿಷ ಯೋಚಿಸಲ್ಲ" ಎಂದು ದಿನಕರ್ ಹೇಳಿದ್ದಾರೆ.
ಮಾತು ಮುಂದುವರೆಸಿರುವ ನಿರ್ದೇಶಕ ದಿನಕರ್ ತೂಗುದೀಪ್ "ನಾನು ತುಂಬಾ ಸ್ವಾಭಿಮಾನಿ. ಯಾರ ಮುಂದೆ ಕೈ ಚಾಚಲ್ಲ. ದರ್ಶನ್ ಸೆಲ್ಫ್ ಮೇಡ್. ನನ್ನದು ಅದೇ ರಕ್ತ. ನನ್ನ ದುಡಿಮೆಯಲ್ಲಿ ಬದುಕಬೇಕು. ನಾನೇ ದರ್ಶನ್ಗೆ ಸಂಭಾವನೆ ಕೊಟ್ಟು ಸಿನಿಮಾ ಮಾಡುವಷ್ಟು ಶಕ್ತಿ ಇರುವಾಗ ದರ್ಶನ್ ಯಾಕೆ ನನಗೆ ಆಸ್ತಿ ಕೊಡಿಸಬೇಕು?" ಎಂದು ದಿನಕರ್ ಪ್ರಶ್ನಿಸಿದ್ದಾರೆ.
ಸಾರಥಿ ಬಳಿಕ ದರ್ಶನ್ ಹಾಗೂ ದಿನಕರ್ ಕಾಂಬಿನೇಷನ್ನಲ್ಲಿ ಸಿನಿಮಾ ಬಂದಿಲ್ಲ. ಅಭಿಮಾನಿಗಳು 'ನವಗ್ರಹ'-2 ಸಿನಿಮಾ ಮಾಡುವಂತೆ ಕೇಳುತ್ತಲೇ ಇದ್ದಾರೆ. ಹಿಂದೆ 'ಸರ್ವಾಂತರ್ಯಾಮಿ' ಟೈಟಲ್ನಲ್ಲಿ ಚಿತ್ರ ಕನ್ಫರ್ಮ್ ಎನ್ನಲಾಗಿತ್ತು. ಆದರೆ ಯಾಕೋ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಕೇಳಿದ ಪ್ರಶ್ನೆಗೆ ದಿನಕರ್ "ಖಂಡಿತ ನಮ್ಮಿಬ್ಬರ ಕಾಂಬಿನೇಷನ್ನಲ್ಲಿ ಸಿನಿಮಾ ಬರುತ್ತೆ. ದರ್ಶನ್ಗಾಗಿ ಬೇರೆಯದ್ದೇ ಕಥೆ ಮಾಡಿದ್ದೇನೆ. 2026ಕ್ಕೆ ದರ್ಶನ್ ಜೊತೆ ಸಿನಿಮಾ ಮಾಡ್ತೀನಿ" ಎಂದು ತಿಳಿಸಿದ್ದಾರೆ.
ಒಂದೂವರೆ ತಿಂಗಳ ಕಾಲ ದರ್ಶನ್ ಚಿಕಿತ್ಸೆ ನಡೆಯಲಿದೆ ಎಂದು ದಿನಕರ್ ಮಾಹಿತಿ ನೀಡಿದ್ದಾರೆ. ಹಾಗಾಗಿ ಫೆಬ್ರವರಿ ನಂತರವೇ ಸಿನಿಮಾ ದರ್ಶನ್ ಚಿತ್ರೀಕರಣಕ್ಕೆ ಮರಳುವ ಸಾಧ್ಯತೆಯಿದೆ. ಸದ್ಯ ದರ್ಶನ್ ಮೈಸೂರಿನ ತಮ್ಮ ಫಾರ್ಮ್ಹೌಸ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದರು. ಬಳಿಕ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ರೆಗ್ಯುಲರ್ ಜಾಮೀನು ಸಹ ಸಿಕ್ಕಿತ್ತು. ಬಳಿಕ ಬಿಜಿಎಸ್ ಆಸ್ಪತ್ರೆಯಿಂದಲೂ ಡಿಸ್ಚಾರ್ಜ್ ಆಗಿ ಹೊರ ಬಂದಿದ್ದಾರೆ.


Click it and Unblock the Notifications











