'ಡಿ ಬಾಸ್' ಒಬ್ಬರೇ ಯಾಕೆ ಸಿಎಂಗೆ ಟಾರ್ಗೆಟ್, ಅದರ ಹಿಂದಿರುವ ಕಾರಣಗಳೇ ಬೇರೆ.!
Recommended Video

ಮಂಡ್ಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ನಟಿ ಸುಮಲತಾ ಅಂಬರೀಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ನಿಂತಿದ್ದಾರೆ. ಇದು ಸಹಜವಾಗಿ ಸಿಎಂ ಕುಮಾರಸ್ವಾಮಿ ಅವರಿಗೆ ನಿದ್ದೆ ಕೆಡಿಸಿದೆ.
ಮಗ ನಿಖಿಲ್ ಕುಮಾರ್ ಅವರನ್ನ ಹೇಗಾದರೂ ಮಾಡಿ ಗೆಲ್ಲಿಸಬೇಕು ಎಂಬ ಹಠಕ್ಕೆ ಬಿದ್ದಿರುವ ಸಿಎಂಗೆ ಈ ಜೋಡೆತ್ತುಗಳು ಅಡ್ಡಿಯಾಗಬಹುದು ಎಂಬ ಆತಂಕವೂ ಇದೆ.
ಅದರಲ್ಲೂ ಡಿ ಬಾಸ್ ಖ್ಯಾತಿಯ ದರ್ಶನ್ ಅವರ ಮೇಲೆ ಸಿಎಂಗೆ ಸ್ವಲ್ಪ ಕೋಪ ಹೆಚ್ಚಾಗಿಯೇ ಇರಬಹುದು. ಅದಕ್ಕೆ ಅನ್ಸುತ್ತೆ, ಯಶ್, ದರ್ಶನ್ ಇಬ್ಬರು ಮಂಡ್ಯ ಅಖಾಡಕ್ಕೆ ಧುಮುಕಿದ್ದರೂ, ದರ್ಶನ್ ಅವರ ಮೇಲೆ ಹೆಚ್ಚು ಕೆಂಡಕಾರುತ್ತಿದ್ದಾರೆ. ಇದನ್ನೆಲ್ಲಾ ನೋಡಿದ್ರೆ ವೈಯಕ್ತಿಕವಾಗಿ ದಾಸನ ಮೇಲೆ ಸಿಎಂ ಮುನಿಸುಕೊಂಡಿದ್ದಾರೆ ಎಂಬುದು ನಿಜಾ. ಇದಕ್ಕೆ ಕಾರಣವೇನು ಎಂಬುದನ್ನ ಹುಡುಕಿ ಹೊರಟಾಗ ಅದರ ಹಿಂದೆ 10 ವರ್ಷದ ಇತಿಹಾಸವಿದೆ. ಏನದು? ಮುಂದೆ ಓದಿ.....

ಅಂದು ಅಂಬಿ ಪರ, ಜೆಡಿಎಸ್ ವಿರುದ್ಧ ಪ್ರಚಾರ
2009ರ ಲೋಕಸಭೆ ಚುನಾವಣೆಯಲ್ಲಿ ನಟ ರೆಬೆಲ್ ಸ್ಟಾರ್ ಅಂಬರೀಶ್ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಜೆಡಿಎಸ್ ನಿಂದ ಚೆಲುವರಾಯಸ್ವಾಮಿ ಸ್ಪರ್ಧಿಸಿದ್ದರು. ಅಂದು ಅಂಬರೀಶ್ ಪರ ಪ್ರಚಾರ ಮಾಡಿದ್ದ ದರ್ಶನ್, ಆಗಲೂ ಜೆಡಿಎಸ್ ವಿರುದ್ಧ ನಿಂತಿದ್ದರು. ಈ ಚುನಾವಣೆಯಲ್ಲಿ ಅಂಬರೀಶ್ ಗೆ ಸೋಲಾಯಿತು.

ಸಿದ್ದರಾಮಯ್ಯಗೆ ಪ್ರಚಾರ ಮಾಡಿದ್ದ ದಾಸ
ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತಿದ್ದ ಸಿದ್ದರಾಮಯ್ಯ ಅವರ ಪರ ನಟ ದರ್ಶನ್ ಪ್ರಚಾರ ಮಾಡಿದ್ದರು. ಕಾಂಗ್ರೆಸ್ ಮತಯಾಚನೆ ಮಾಡಿದ್ದ ದರ್ಶನ್, ಆಗಲೂ ಜೆಡಿಎಸ್ ಗೆ ವಿರುದ್ಧವಾಗಿಯೇ ನಿಂತಿದ್ದರು. ಈ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಸೋಲಾಯಿತು.

ಈಗ ಸುಮಲತಾ ಪರ ಪ್ರಚಾರ
ಈಗಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ದರ್ಶನ್ ಪ್ರಚಾರ ಮಾಡುತ್ತಿದ್ದಾರೆ. ಈಗಲೂ ಜೆಡಿಎಸ್ ವಿರುದ್ಧ ದಾಸ ನಿಂತಿರುವುದು ಸಿಎಂ ಕುಮಾರಸ್ವಾಮಿಗೆ ಸಹಜವಾಗಿ ಕೋಪ ತರಿಸಿದೆ ಎನ್ನಬಹುದು.

ಕುರುಕ್ಷೇತ್ರ ಕದನವೂ ಆಗಿದೆ.!
ಈ ಮಧ್ಯೆ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್ ಜೊತೆ ನಿಖಿಲ್ ಕುಮಾರ್ ಅಭಿನಯಿಸಿದ್ದಾರೆ. ಇದು ದರ್ಶನ್ ಅವರ 50ನೇ ಸಿನಿಮಾ ಎನ್ನಲಾಗಿದೆ. ಹಾಗಿದ್ದರೂ, ಸಿಎಂ ಪುತ್ರ ಎಂಬ ಕಾರಣಕ್ಕೆ ನಿಖಿಲ್ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಷ್ಯದಲ್ಲಿ ನಿಖಿಲ್ ಮತ್ತು ದರ್ಶನ್ ನಡುವೆ ಭಿನ್ನಾಭಿಪ್ರಾಯವೂ ಮೂಡಿತ್ತು ಎಂಬ ಮಾತಿತ್ತು. ಅಲ್ಲಿಯೂ ದರ್ಶನ್ ಮೇಲೆ ಮುನಿಸು ಬಂದಿರಬಹುದು.

ಯಶ್ ಟಾರ್ಗೆಟ್ ಮಾಡ್ತಿಲ್ಲ.!
ಹಾಗ್ನೋಡಿದ್ರೆ, ಜೆಡಿಎಸ್ ನಾಯಕರು ಹಾಗೂ ಸಿಎಂ ಕುಮಾರಸ್ವಾಮಿ ಅವರು ದರ್ಶನ್ ಅವರನ್ನ ಹೆಚ್ಚು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಯಾಕಂದ್ರೆ, ಈ ಹಿಂದಿನ ಚುನಾವಣೆಯಲ್ಲಿ ಯಶ್ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಹಾಗಾಗಿ, ಯಶ್ ಅವರ ಮೇಲೆ ಮೃದು ಧೋರಣೆ ತೋರುತ್ತಿರುವ ಸಿಎಂ, ಡಿ ಬಾಸ್ ಅವರ ಮೇಲೆ ಕೆಂಡಕಾರುತ್ತಿದ್ದಾರೆ ಎನ್ನಲಾಗಿದೆ.


Click it and Unblock the Notifications











