'ರಾಬರ್ಟ್' ಚಿತ್ರದಲ್ಲಿ ನನಗಿಷ್ಟವಾದ ಪಾತ್ರ ಕಿತ್ಕೊಂಡ್ರು ಅಂತ ಇವತ್ತಿಗೂ ಬೇಸರವಿದೆ": ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ 3 ವರ್ಷಗಳ ಹಿಂದೆ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ತರುಣ್ ಸುಧೀರ್ ನಿರ್ದೇಶನದ ಆಕ್ಷನ್ ಎಂಟರ್ಟೈನರ್ನಲ್ಲಿ ವಿಭಿನ್ನ ಶೇಡ್ಗಳಿರುವ ಪಾತ್ರದಲ್ಲಿ ದರ್ಶನ್ ನಟಿಸಿ ಗೆದ್ದಿದ್ದರು. ಉಮಾಪತಿ ಶ್ರೀನಿವಾಸ್ ಚಿತ್ರವನ್ನು ನಿರ್ಮಾಣ ಮಾಡಿದ್ದರು.
ರಾಬರ್ಟ್ ಹಾಗೂ ರಾಘವ ಆಗಿ ದರ್ಶನ್ ಅಭಿನಯ ಸಿನಿರಸಿಕರಿಗೆ ಇಷ್ಟವಾಗಿತ್ತು. ಮೊದಲ ದಿನವೇ 17 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ 'ರಾಬರ್ಟ್' ಸದ್ದು ಮಾಡಿತ್ತು. ಕೊರೊನಾ ಲಾಕ್ಡೌನ್ ಬಳಿಕ ಬಂದಿದ್ದ ಸಿನಿಮಾ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆದಿತ್ತು. 20 ದಿನಗಳಲ್ಲಿ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಆಗ ಸುದ್ದಿ ಆಗಿತ್ತು.

ಅರ್ಜುನ್ ಜನ್ಯಾ ಮ್ಯೂಸಿಕ್ನಲ್ಲಿ 'ರಾಬರ್ಟ್' ಆಲ್ಬಮ್ ಹಿಟ್ ಆಗಿ ಚಿತ್ರಕ್ಕೆ ಪ್ಲಸ್ ಆಗಿತ್ತು. ಚಿತ್ರದಲ್ಲಿ ವಿನೋದ್ ಪ್ರಭಾಕರ್, ಆರ್ಮುಗ ರವಿಶಂಕರ್, ಜಗಪತಿ ಬಾಬು, ದೇವರಾಜ್, ಅವಿನಾಶ್, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್ ಹೀಗೆ ದೊಡ್ಡ ತಾರಾಗಣವೇ ಇತ್ತು. ಫ್ಲ್ಯಾಶ್ಬ್ಯಾಕ್ ತಂತ್ರ ಬಳಸಿ ರಾಘವನ ಹಿಂದಿನ ಕಥೆಯನ್ನು ಹೇಳುವ ಪ್ರಯತ್ನ ಮಾಡಲಾಗಿತ್ತು. ಎಲ್ಲಾ ವಿಭಾಗಗಳಲ್ಲಿ ಫಸ್ಟ್ ಕ್ಲಾಸ್ ಎನಿಸಿಕೊಂಡಿದ್ದ 'ರಾಬರ್ಟ್' ಅಭಿಮಾನಿಗಳು ಮರೆಯುವುದಕ್ಕೆ ಸಾಧ್ಯವಿಲ್ಲ.
ನಟ ದರ್ಶನ್ 'ರಾಬರ್ಟ್' ಚಿತ್ರದಲ್ಲಿ ಎರಡು ಶೇಡ್ಗಳಿರುವ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದರು. ಅದರಲ್ಲೂ ರಾಘವನಾಗಿ ತಣ್ಣನೆಯ ಜ್ವಾಲಾಮುಖಿಯಂತೆ ಕಾಣಿಸುವ ಪಾತ್ರದಲ್ಲಿ ದರ್ಶನ್ ನಟನೆ ಇಷ್ಟವಾಗಿತ್ತು. ಆದರೆ ನಟ ದರ್ಶನ್ಗೆ ಮಾತ್ರ ತಮ್ಮ ಪಾತ್ರಕ್ಕಿಂತ ಮತ್ತೊಂದು ಪಾತ್ರ ಬಹಳ ಇಷ್ಟವಾಗಿತ್ತು. ಆ ಪಾತ್ರ ತನಗೆ ಸಿಕ್ಕಿಲ್ಲ ಎನ್ನುವ ಬೇಸರ ಇವತ್ತಿಗೂ ಇದೆ. ಈ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ.
ಸೂಪರ್ ಹಿಟ್ 'ರಾಬರ್ಟ್' ಚಿತ್ರದಲ್ಲಿ ನಟ ಶಿವರಾಜ್ ಕೆ.ಆರ್ ಪೇಟೆ ಮಂಗಳಮುಖಿಯಾಗಿ ಕಾಣಿಸಿಕೊಂಡಿದ್ದರು. ಮಂಗಳಮುಖಿಯರು ಕೂಡ ಸಮಾಜದಲ್ಲಿ ನಮ್ಮಂತೆ ಒಬ್ಬರು ಎಂಬುದನ್ನು ತೋರಿಸಲಾಗಿತ್ತು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾನಪದ ಅಕಾಡೆಮಿ ಅಧ್ಯಕ್ಷೆ ಹಾಗೂ ಮಂಗಳಮುಖಿ ಮಾತಾ ಬಿ. ಮಂಜಮ್ಮ ಜೋಗತಿ ಅವರು ಕೂಡ 'ರಾಬರ್ಟ್' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು.
ಚಿತ್ರದಲ್ಲಿ ಶಿವರಾಜ್ ಕೆ.ಆರ್ ಪೇಟೆ ಮಾಡಿದ್ದ ಬಾಬಿ ಪಾತ್ರ ನಟ ದರ್ಶನ್ಗೆ ಬಹಳ ಇಷ್ಟವಾಗಿತ್ತು. ಈ ವಿಚಾರವನ್ನು 'ಮ್ಯಾಟ್ನಿ' ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ದರ್ಶನ್ ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ. 'ಮ್ಯಾಟ್ನಿ' ಚಿತ್ರದಲ್ಲಿ ಶಿವರಾಜ್ ಕೆ.ಆರ್ ಪೇಟೆ ನಟಿಸಿದ್ದಾರೆ. ವೇದಿಕೆಯಲ್ಲಿ ಚಿತ್ರತಂಡದ ಬಗ್ಗೆ ಮಾತನಾಡುತ್ತಾ ನಟ ದರ್ಶನ್ 'ರಾಬರ್ಟ್' ಸಿನಿಮಾ ನೆನಪಿಸಿಕೊಂಡಿದ್ದಾರೆ.

ಶಿವರಾಜ್ ಕೆ. ಆರ್ ಪೇಟೆ ಅವರನ್ನು ಕರೆದು "ಕೆ. ಆರ್ ಪೇಟೆ ಮೇಲೆ ಯಾವಾಗಲೂ ಬೇಜಾರ್ ಇದೆ. ಯಾಕಂದರೆ 'ರಾಬರ್ಟ್' ಚಿತ್ರದಲ್ಲಿ ನನಗಿಷ್ಟವಾದ ಪಾತ್ರ ಕಿತ್ಕೊಂಡ್ರು ಎನ್ನುವ ಬೇಸರ ಇವತ್ತಿಗೂ ಇದೆ. ಆದರೆ ಖುಷಿ ಕೂಡ ಇದೆ. ಯಾಕಂದರೆ ಅಂತಹ ಪಾತ್ರಗಳನ್ನು ಮಾಡಿ ಸಿನಿಮಾ ಮಾಡ್ತಾ ಬರ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ" ಎಂದು ದರ್ಶನ್ ಹೇಳಿದ್ದಾರೆ.
ಇನ್ನು ದರ್ಶನ್ ಸದ್ಯ 'ಡೆವಿಲ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. 4 ದಿನಗಳಿಂದ ನಗರದ ಹೊರ ವಲಯದ ಮೋಹನ್ ಬಿ. ಕೆರೆ ಸ್ಟುಡಿಯೋದಲ್ಲಿ ಚಿತ್ರದ ಆಕ್ಷನ್ ಸನ್ನಿವೇಶಗಳ ಚಿತ್ರೀಕರಣ ನಡೆಯುತ್ತಿದೆ. ಪ್ರಕಾಶ್ ವೀರ್ 'ಡೆವಿಲ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ. 'ಡೆವಿಲ್' ಚಿತ್ರದಲ್ಲಿ ಬಹಳ ವಿಭಿನ್ನ ಪಾತ್ರಕ್ಕೆ ದರ್ಶನ್ ಬಣ್ಣ ಹಚ್ಚಿದ್ದಾರೆ. ಹೇರ್ಸ್ಟೈಲ್ ಬದಲಿಸಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಕ್ಷನ್ ಸನ್ನಿವೇಶದ ಜೊತೆಗೆ ಚಿತ್ರೀಕರಣ ಆರಂಭವಾಗಿದೆ. 'ಡೆವಿಲ್' ಪಕ್ಕಾ ಆಕ್ಷನ್ ಎಂಟರ್ಟೈನರ್ ಸಿನಿಮಾ ಆಗಿದೆ. ಈಗಾಗಲೇ ಟೀಸರ್ ರಿಲೀಸ್ ಆಗಿ ಸೂಪರ್ ಹಿಟ್ ಲಿಸ್ಟ್ ಸೇರಿದೆ.
ಅಕ್ಟೋಬರ್ ವೇಳೆಗೆ 'ಡೆವಿಲ್' ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಬಳಿಕ ಜೋಗಿ ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ನಟಿಸಲಿದ್ದಾರೆ. ಬಳಿಕ ಮತ್ತೆ ತರುಣ್ ಸುಧೀರ್ ನಿರ್ದೇಶನದ 'ಸಿಂಧೂರ ಲಕ್ಷ್ಮಣ' ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.


Click it and Unblock the Notifications











