ದ್ವಿಭಾಷಾ ನೀತಿ ಅಭಿಯಾನಕ್ಕೆ ಚಿತ್ರರಂಗದಿಂದ ಬೆಂಬಲ ಕೊಟ್ಟಿದ್ದು ಮೂವರೇ, ಮಿಕ್ಕವರು ಎಲ್ಲಿ?
ಕನ್ನಡ ನಾಡು, ಭಾಷೆ, ಜಲ ವಿಚಾರಕ್ಕೆ ಸಂಬಂಧಪಟ್ಟಂತೆ ಹೋರಾಟ, ಅಭಿಯಾನಗಳು ನಡೆದ ಸಂದರ್ಭದಲ್ಲಿ ಚಿತ್ರರಂಗದವರ ಬೆಂಬಲ ನಿರೀಕ್ಷಿಸುವುದು ಸಹಜ. ನಿರೀಕ್ಷೆಯಂತೆ ಸಿನಿಮಾ ಇಂಡಸ್ಟ್ರಿಯವರು ಸಹ ಕನ್ನಡ ಪರ ಹೋರಾಟಗಳಿಗೆ ಕೈ ಜೋಡಿಸಿ ಪ್ರತಿಭಟನೆ ಮಾಡಿರುವ ಉದಾಹರಣೆಗಳು ಹೆಚ್ಚಿವೆ.
Recommended Video
ಪ್ರಸ್ತುತ, ತ್ರಿಭಾಷಾ ನೀತಿ ವಿರೋಧಿಸಿ, ದ್ವಿಭಾಷಾ ನೀತಿ ಜಾರಿ ಮಾಡಲಿ ಎಂದು ಟ್ವಿಟ್ಟರ್ನಲ್ಲಿ ದೊಡ್ಡ ಮಟ್ಟದ ಅಭಿಯಾನ ನಡೆಯುತ್ತಿದೆ. ಆದರೆ, ಈ ಅಭಿಯಾನದಲ್ಲಿ ಕನ್ನಡ ಚಿತ್ರರಂಗದಿಂದ ಕೇವಲ ಮೂವರು ನಟರನ್ನು ಬಿಟ್ಟರೆ ಬೇರೆ ಯಾರೂ ಬೆಂಬಲ ನೀಡಿಲ್ಲ.
ಬಲವಂತದ ಹಿಂದಿ ಬೇಡ, ದ್ವಿಭಾಷಾ ನೀತಿ ಸಾಕು: ಕನ್ನಡಿಗರ ಆಂದೋಲನ
ಈ ನಡೆಯನ್ನು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಕನ್ನಡ ಪರ ಅಭಿಯಾನಕ್ಕೆ ಬೆಂಬಲ ನೀಡಲು ಸಿನಿಮಾ ಇಂಡಸ್ಟ್ರಿಯಲ್ಲಿ ಇರೋದು ಮೂವರೇ, ಹಾಗಾದ್ರೆ ಮಿಕ್ಕವರು ಎಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ. ಮುಂದೆ ಓದಿ....

ನಿಖಿಲ್, ವಸಿಷ್ಠ, ಚೇತನ್
ತ್ರಿಭಾಷಾ ನೀತಿ ಖಂಡಿಸಿ ದ್ವಿಭಾಷಾ ನೀತಿಯನ್ನು ಜಾರಿಗೊಳಿಸುವಂತೆ ಬುಧವಾರ ಟ್ವಿಟ್ಟರ್ನಲ್ಲಿ #WeWantTwoLanguagePolicy ಎಂಬ ಹ್ಯಾಷ್ಟ್ಯಾಗ್ನಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಸಾವಿರಾರು ಕನ್ನಡಿಗರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಚಿತ್ರರಂಗದ ಪರವಾಗಿ ನಟ ನಿಖಿಲ್ ಕುಮಾರ್, ವಸಿಷ್ಠ ಸಿಂಹ ಹಾಗೂ ಆ ದಿನಗಳ ಖ್ಯಾತಿಯ ಚೇತನ್ ಬೆಂಬಲ ನೀಡಿದ್ದರು.

ಮಿಕ್ಕವರು ಎಲ್ಲಿ?
ದ್ವಿಭಾಷಾ ನೀತಿ ಆಂದೋಲನಕ್ಕೆ ಚಿತ್ರರಂಗದಿಂದ ಕೇವಲ ಮೂವರು ನಟರು ಮಾತ್ರ ಬೆಂಬಲ ನೀಡಿದ್ದಾರೆ. ಹಾಗಾದ್ರೆ, ಮಿಕ್ಕವರು ಎಲ್ಲಿ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಹಣ, ಹೆಸರು ಮಾಡಲು ಮಾತ್ರವೇ ಕನ್ನಡ ಬೇಕೇ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಗೋಕಾಕ್ ಹೋರಾಟದ ನೆನಪು
ಅಂದು ಕನ್ನಡ ಭಾಷೆಗೆ ವಿರೋಧವಾಗಿ ಹಿಂದಿ ಹೇರಿಕೆ ಮಾಡಲು ಸರ್ಕಾರ ಮುಂದಾಗಿತ್ತು. ಆ ಸಮಯದಲ್ಲಿ ಗೋಕಾಕ್ ವರದಿ ಜಾರಿ ಮಾಡುವಂತೆ ಆಗ್ರಹಿಸಿ ಇಡೀ ಚಿತ್ರರಂಗ ರಸ್ತೆಗೆ ಬಂದು ಪ್ರತಿಭಟನೆ ಮಾಡಿತ್ತು ಎಂದು ಹಳೆಯ ನೆನಪು ಹಂಚಿಕೊಳ್ಳುವ ಮೂಲಕ ಇಂದಿನ ಇಂಡಸ್ಟ್ರಿಯಲ್ಲಿ ಅಂತಹ ಹೋರಾಟಗಾರರು ಎಲ್ಲಿದ್ದಾರೆ ಎಂದು ಟೀಕಿಸಿದ್ದಾರೆ.

ಅಭಿಯಾನದ ಕುರಿತು ತಾರೆಯರು ಗಮನಿಸಿಲ್ಲವೇ?
ಈ ಮೊದಲೇ ಹೇಳಿದಂತೆ ನಾಡು, ಭಾಷೆ, ಜಲದ ವಿಚಾರದಲ್ಲಿ ನಡೆದ ಅನೇಕ ಪ್ರತಿಭಟನೆ, ಹೋರಾಟಗಳಲ್ಲಿ ಕನ್ನಡ ಚಿತ್ರರಂಗ ಭಾಗಿಯಾಗಿದೆ. ಆದರೆ, ಬುಧವಾರ ನಡೆದ #WeWantTwoLanguagePolicy ಅಭಿಯಾನ ಸಿನಿಮಾ ತಾರೆಯರ ಗಮನಕ್ಕೆ ಬಂದಿಲ್ವಾ ಎಂಬ ಪ್ರಶ್ನೆ ಕಾಡುತ್ತಿದೆ. ಅಥವಾ ಗಮನಕ್ಕೆ ಬಂದಿದ್ದರೂ ಈ ಬಗ್ಗೆ ಯೋಚನೆ ಮಾಡಲಿಲ್ಲವೇ?


Click it and Unblock the Notifications











